'ಭಾರತೀಯ ಸೇನೆ ನಾಲಾಯಕ್' ಎಂದು ಕರೆದ ಪಾಕ್ ಮಾಜಿ ನಾಯಕ ಶಾಹಿದ್ ಆಫ್ರಿದಿ; ಶಿಖರ್ ಧವನ್ ತಿರುಗೇಟು

ಪಹಲ್ಗಾಮ್ ಭಯೋತ್ಪಾದಕ ದಾಳಿಯನ್ನು ತಡೆಯುವಲ್ಲಿ ವಿಫಲವಾದ ಭಾರತೀಯ ಸೇನೆಯನ್ನು 'ನಾಲಾಯಕ್, ನಿಕಮ್ಮ' (ಅಸಮರ್ಥ ಮತ್ತು ನಿಷ್ಪ್ರಯೋಜಕ) ಎಂದು ಅಫ್ರಿದಿ ಈ ಹಿಂದೆ ಕರೆದಿದ್ದರು.
ಶಿಖರ್ ಧವನ್ - ಶಾಹಿದ್ ಆಫ್ರಿದಿ
ಶಿಖರ್ ಧವನ್ - ಶಾಹಿದ್ ಆಫ್ರಿದಿ
Updated on

ಏಪ್ರಿಲ್ 22ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಜನರು ಸಾವಿಗೀಡಾದ ವಿಚಾರಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನದ ಮಾಜಿ ನಾಯಕ ಶಾಹಿದ್ ಅಫ್ರಿದಿ ಭಾರತೀಯ ಸೇನೆ ಬಗ್ಗೆ ಅಹಿತಕರ ಹೇಳಿಕೆ ನೀಡಿದ್ದು, ಟೀಂ ಇಂಡಿಯಾದ ಮಾಜಿ ಆಟಗಾರ ಶಿಖರ್ ಧವನ್ ತೀವ್ರವಾಗಿ ತಿರುಗೇಟು ನೀಡಿದ್ದಾರೆ. ಉಗ್ರ ದಾಳಿಯ ಕೆಲವು ದಿನಗಳ ನಂತರ ಪ್ರತಿಕ್ರಿಯಿಸಿರುವ ಅಫ್ರಿದಿ, ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬಗ್ಗೆ ಭಾರತೀಯ ಸೇನೆ ಮತ್ತು ಮಾಧ್ಯಮಗಳ ನಿಲುವನ್ನು ಅಣಕಿಸಿದ್ದಾರೆ. ಆಫ್ರಿದಿ 27 ಟೆಸ್ಟ್, 398 ಏಕದಿನ ಮತ್ತು 99 ಟಿ20 ಪಂದ್ಯಗಳನ್ನು ಆಡಿದ್ದಾರೆ.

ಆಫ್ರಿದಿಗೆ ತಿರುಗೇಟು ನೀಡಿರುವ ಧವನ್, 'ನಾವು ನಿಮ್ಮನ್ನು ಕಾರ್ಗಿಲ್‌ನಲ್ಲಿ ಸೋಲಿಸಿದ್ದೇವೆ. ನೀವು ಈಗಾಗಲೇ ತುಂಬಾ ಕೆಳಮಟ್ಟಕ್ಕೆ ಇಳಿದಿದ್ದೀರಿ. ಇನ್ನಷ್ಟು ಕೆಳಗಿಳಿಯಲು ಹೇಗೆ ಸಾಧ್ಯ? ನಮ್ಮ ದೇಶದ ಸೇನೆ ಬಗ್ಗೆ ಕಾಮೆಂಟ್‌ಗಳನ್ನು ಮಾಡುವ ಬದಲು, ನಿಮ್ಮ ದೇಶದ ಸ್ಥಿತಿಯನ್ನು ಸುಧಾರಿಸುವತ್ತ ಗಮನಹರಿಸಿ. ನಮಗೆ ಭಾರತೀಯ ಸೇನೆಯ ಬಗ್ಗೆ ಹೆಮ್ಮೆ ಇದೆ' ಎಂದು ಎಕ್ಸ್ ಪೋಸ್ಟ್‌ನಲ್ಲಿ ಹೇಳಿದ್ದಾರೆ.

ಪಹಲ್ಗಾಮ್ ಭಯೋತ್ಪಾದಕ ದಾಳಿಯನ್ನು ತಡೆಯುವಲ್ಲಿ ವಿಫಲವಾದ ಭಾರತೀಯ ಸೇನೆಯನ್ನು 'ನಾಲಾಯಕ್, ನಿಕಮ್ಮ' (ಅಸಮರ್ಥ ಮತ್ತು ನಿಷ್ಪ್ರಯೋಜಕ) ಎಂದು ಅಫ್ರಿದಿ ಈ ಹಿಂದೆ ಕರೆದಿದ್ದರು.

'ಕಾಶ್ಮೀರದಲ್ಲಿ 8,00,000 ಸೈನಿಕರು ಇದ್ದಾರೆ. ಹೀಗಿದ್ದರೂ, ಇದು (ಉಗ್ರ ದಾಳಿ) ಸಂಭವಿಸಿದೆ. ಜನರಿಗೆ ಭದ್ರತೆ ಒದಗಿಸಲು ಸಾಧ್ಯವಾಗದಿದ್ದರೆ ನೀವು ಅಸಮರ್ಥರು ಮತ್ತು ನಿಷ್ಪ್ರಯೋಜಕರು ಎಂದರ್ಥ' ಎಂದು ಅಫ್ರಿದಿ ಟಿವಿ ಕಾರ್ಯಕ್ರಮವೊಂದರಲ್ಲಿ ಹೇಳಿದರು.

'ದಾಳಿ ನಡೆದ ಕೇವಲ ಒಂದು ಗಂಟೆಯೊಳಗೆ ಅವರ ಮಾಧ್ಯಮಗಳು ಇದನ್ನು ಸಿನಿಮಾದಂತೆ ಪರಿಗಣಿಸಲು ಪ್ರಾರಂಭಿಸಿದ್ದು ಆಶ್ಚರ್ಯಕರ. ದಯವಿಟ್ಟು, ಎಲ್ಲವನ್ನೂ ಬಾಲಿವುಡ್‌ನಂತೆ ನಾಯಕೀಯವಾಗಿ ತೋರಿಸಬೇಡಿ. ನನಗೆ ಆಶ್ಚರ್ಯವಾಯಿತು. ಆದರೆ, ಅವರು ಮಾತನಾಡುತ್ತಿದ್ದ ರೀತಿ ನನಗೆ ಖುಷಿ ನೀಡುತ್ತಿತ್ತು. ಅವರ ಆಲೋಚನೆಯನ್ನು ನೋಡಿ, ಅವರು ತಮ್ಮನ್ನು ತಾವು ವಿದ್ಯಾವಂತ ಜನರು ಎಂದು ಕರೆದುಕೊಳ್ಳುತ್ತಾರೆ ಎಂದು ನಾನು ಹೇಳುತ್ತಿದ್ದೆ' ಎಂದಿದ್ದಾರೆ.

ಬೈಸರನ್ ಕಣಿವೆಯಲ್ಲಿ ಸಂಭವಿಸಿದ ಭೀಕರ ಉಗ್ರ ದಾಳಿಯ ನಂತರ ಭಾರತ ಸರ್ಕಾರವು ಪಾಕಿಸ್ತಾನದ ವಿರುದ್ಧ ಮಿಲಿಟರಿಯೇತರ ಕ್ರಮಗಳನ್ನು ಕೈಗೊಂಡಿದ್ದು, ಇದಕ್ಕೆ ವಿರೋಧ ಪಕ್ಷದಿಂದಲೂ ಬಲವಾದ ಬೆಂಬಲ ದೊರೆತಿದೆ. ಸಿಂಧೂ ಜಲ ಒಪ್ಪಂದವನ್ನು ಅನಿರ್ದಿಷ್ಟಾವಧಿಗೆ ತಡೆಹಿಡಿಯಲಾಗಿದೆ. ಅಟ್ಟಾರಿ ಗಡಿಯನ್ನು ಮುಚ್ಚಲಾಗಿದೆ ಮತ್ತು ಭಾರತದಲ್ಲಿರುವ ಎಲ್ಲ ಪಾಕಿಸ್ತಾನಿ ಪ್ರಜೆಗಳ ವೀಸಾಗಳನ್ನು ರದ್ದುಗೊಳಿಸಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com