![Gautam Gambhir](http://media.assettype.com/kannadaprabha%2F2024-11-11%2Fze1xp8qd%2Fagml50pp.bmp?w=480&auto=format%2Ccompress&fit=max)
ಟೀಂ ಇಂಡಿಯಾ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಮಾಜಿ ಬ್ಯಾಟರ್ ಮನೋಜ್ ತಿವಾರಿ ಇದೀಗ ಭಾರತ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ತಿವಾರಿ ಮತ್ತು ಗಂಭೀರ್ ಈ ಹಿಂದೆ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ (IPL) ಮಾತ್ರವಲ್ಲದೆ ದೆಹಲಿ ತಂಡದಲ್ಲೂ ಸಹ ಆಟಗಾರರಾಗಿದ್ದರು. ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ಗಳಲ್ಲಿ ಟೀಂ ಇಂಡಿಯಾ ಉತ್ತಮ ಪ್ರದರ್ಶನ ನೀಡಿಲ್ಲದ ಕಾರಣ, ಗಂಭೀರ್ ಟೀಕೆಗಳನ್ನು ಎದುರಿಸುತ್ತಿರುವಾಗ, ತಿವಾರಿ ಅವರನ್ನು 'ಕಪಟಿ' ಎಂದು ಕರೆದಿದ್ದಾರೆ.
ಇತ್ತೀಚೆಗೆ ನಡೆದ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಟೆಸ್ಟ್ಗೆ ಪದಾರ್ಪಣೆ ಮಾಡಿದ ಭಾರತೀಯ ವೇಗಿ ಹರ್ಷಿತ್ ರಾಣಾ, ಗಂಭೀರ್ ಅವರನ್ನು ಸಮರ್ಥಿಸಿಕೊಂಡಿದ್ದಾರೆ. ಆದರೆ, ರಾಣಾ ಅವರು ಗಂಭೀರ್ ಅವರನ್ನು ಸಮರ್ಥಿಸಿಕೊಂಡಿರುವುದು ನನಗೆ ಆಶ್ಚರ್ಯವಾಗಲಿಲ್ಲ ಎಂದಿದ್ದಾರೆ.
'ಉದಾಹರಣೆಗೆ, ಹರ್ಷಿತ್ ರಾಣಾ ಗೌತಮ್ ಗಂಭೀರ್ ಅವರನ್ನು ಏಕೆ ಬೆಂಬಲಿಸಿದರು? ಆಕಾಶ್ ದೀಪ್ ಬದಲಿಗೆ ಹರ್ಷಿತ್ ರಾಣಾ ಅವರು ಪರ್ತ್ನಲ್ಲಿ ಆಡಿದರು. ಅದು ಹೇಗೆ ಸಾಧ್ಯವಾಯಿತು? ಆಕಾಶ್ ದೀಪ್ ಏನು ತಪ್ಪು ಮಾಡಿದ್ದರು? ಅವರು ಬಾಂಗ್ಲಾದೇಶ ಮತ್ತು ನ್ಯೂಜಿಲೆಂಡ್ ವಿರುದ್ಧ ಅದ್ಬುತ ಸ್ಪೆಲ್ಗಳನ್ನು ಬೌಲ್ ಮಾಡಿದ್ದರು. ಒಬ್ಬ ವೇಗದ ಬೌಲರ್ ಆಗಿ, ಉತ್ತಮ ಪರಿಸ್ಥಿತಿಯಲ್ಲಿ ಬೌಲಿಂಗ್ ಮಾಡುವ ಕನಸು ಕಾಣುತ್ತೀರಿ. ಆದರೆ, ನೀವು ಅವರನ್ನು ಕೈಬಿಟ್ಟು, ಅಷ್ಟೊಂದು ಅನುಭವವಿಲ್ಲದ ಹರ್ಷಿತ್ ಅವರನ್ನು ಆಯ್ಕೆ ಮಾಡಿದಿರಿ. ಆಕಾಶ್ ದೀಪ್ ಅದ್ಭುತ ದಾಖಲೆಗಳನ್ನು ಹೊಂದಿದ್ದಾರೆ. ಅದು ಸಂಪೂರ್ಣವಾಗಿ ಪಕ್ಷಪಾತದ ಆಯ್ಕೆಯಾಗಿದೆ. ಅದಕ್ಕಾಗಿಯೇ ಆಟಗಾರರು ಹೊರಗೆ ಬಂದು ಅವರನ್ನು ಸಮರ್ಥಿಸಿಕೊಳ್ಳುತ್ತಾರೆ' ಎಂದಿದ್ದಾರೆ ಮನೋಜ್ ತಿವಾರಿ.
'ತಾವು ಯಾವುದನ್ನೂ ತಪ್ಪಾಗಿ ಅಥವಾ ವಿವಾದಾತ್ಮಕವಾಗಿ ಹೇಳಿಲ್ಲ. ಬದಲಾಗಿ, ಅದು ಹೇಗೆ ಸಂಭವಿಸಿತು ಎಂಬುದರ ಕುರಿತು ಚರ್ಚಿಸುತ್ತಿದ್ದೇನೆ. ಇದು ಸಾರ್ವಜನಿಕರ ಗ್ರಹಿಕೆಗೆ ಬಂದಿದೆ. ಈ ಹಿಂದೆ, ಯಾರಾದರೂ ಸತ್ಯವನ್ನು ಹೇಳಿದಾಗ, ಜನರು ಆ ವ್ಯಕ್ತಿಯನ್ನು ಸಮರ್ಥಿಸಿಕೊಳ್ಳುತ್ತಿದ್ದರು. ಆದರೆ, ಈಗ ಅವರಿಗೆ ನನ್ನ ಬಗ್ಗೆ ತಿಳಿದಿಲ್ಲ. ನಾನು ಸತ್ಯಗಳ ಬಗ್ಗೆ ಮಾತ್ರ ಮಾತನಾಡುತ್ತೇನೆ' ಎಂದಿದ್ದಾರೆ.
ಗಂಭೀರ್ ಅವರೊಂದಿಗಿನ ಸಂಬಂಧದ ಕೆಲವು ಹಳೆಯ ಅಧ್ಯಾಯಗಳನ್ನು ಸಹ ತಿವಾರಿ ತೆರೆದಿದ್ದಾರೆ. ಗೌತಮ್ ಗಂಭೀರ್ ಅವರು ತಮ್ಮ ಕುಟುಂಬವನ್ನು ನಿಂದಿಸಿದ್ದಾರೆ ಮತ್ತು ಭಾರತದ ಮಾಜಿ ನಾಯಕ ಸೌರವ್ ಗಂಗೂಲಿ ಬಗ್ಗೆ ಕೆಟ್ಟ ಮಾತುಗಳನ್ನು ಹೇಳಿದ್ದಾರೆ ಎಂದು ತಿಳಿಸಿದ್ದಾರೆ.
'ದೆಹಲಿಯಲ್ಲಿ ನಡೆದ ರಣಜಿ ಪಂದ್ಯದ ವೇಳೆ ನನ್ನೊಂದಿಗೆ ಜಗಳವಾಡಿದಾಗ ಗೌತಮ್ ಗಂಭೀರ್ ಅವರ ಬಾಯಿಂದ ಬಂದ ಪ್ರತಿ ಮಾತನ್ನು ಎಲ್ಲರೂ ಕೇಳುತ್ತಿದ್ದರು. ಅವರು ಸೌರವ್ ಗಂಗೂಲಿ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಿರಲಿ ಅಥವಾ ನನ್ನ ಕುಟುಂಬವನ್ನು ನಿಂದಿಸುತ್ತಿರಲಿ, ಆಗಲೂ ಅವರನ್ನು ಕೆಲವು ವ್ಯಕ್ತಿಗಳು ಸಮರ್ಥಿಸಿಕೊಂಡಿದ್ದಾರೆ. ಇದರ ಬಗ್ಗೆಯೇ ನಾನು ಮಾತನಾಡುತ್ತಿರುವುದು. ಆಟಗಾರರ ಆಯ್ಕೆ ಪ್ರಕ್ರಿಯೆ ಮತ್ತು ಪ್ಲೇಯಿಂಗ್ ಇಲೆವೆನ್ಗೆ ಆಯ್ಕೆ ಮಾಡುವುದು ಸರಿಯಾಗಿ ನಡೆಯುತ್ತಿಲ್ಲ. ಹರ್ಷಿತ್ ರಾಣಾಗಾಗಿಯೇ ಆಕಾಶ್ ದೀಪ್ ಅವರನ್ನು ಕೈಬಿಡಲಾಯಿತು. ಹರ್ಷಿತ್ ತುಂಬಾ ಉತ್ತಮವಾಗಿ ಆಡುತ್ತಾರೆ ಎಂದು ನೀವು ಭಾವಿಸಿದ್ದರೆ, ಉಳಿದ ಸರಣಿಗಳಿಗೆ ಏಕೆ ಅವರನ್ನು ಮುಂದುವರಿಸಲಿಲ್ಲ? ಆಕಾಶ್ ದೀಪ್ ಗೆ ಧ್ವನಿ ಇಲ್ಲ' ಎಂದು ತಿವಾರಿ ಹೇಳಿದರು.
ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಗಂಭೀರ್ ಅವರ ನಿರ್ಧಾರಗಳ ಬಗ್ಗೆ ಸಂಶಯ ವ್ಯಕ್ತಪಡಿಸಿದ ತಿವಾರಿ, ಅನುಭವವುಳ್ಳ ಪ್ರಥಮ ದರ್ಜೆ ಕ್ರಿಕೆಟ್ ಆಟಗಾರರನ್ನು ಬದಿಗೆ ತಳ್ಳಿ, ಹರ್ಷಿತ್ ರಾಣಾ ಮತ್ತು ದೇವದತ್ ಪಡಿಕ್ಕಲ್ ಅವರಂತಹ ಆಟಗಾರರನ್ನು ಆಯ್ಕೆ ಮಾಡಿದ್ದು ಹೇಗೆಂದು ಪ್ರಶ್ನಿಸಿದರು.
'ದೇವದತ್ ಪಡಿಕ್ಕಲ್ ಅವರನ್ನು ಟೆಸ್ಟ್ ತಂಡಕ್ಕೆ ಹೇಗೆ ಸೇರಿಸಿಕೊಳ್ಳಲಾಯಿತು, ಅವರು ಆ ಸಮೀಕರಣದಿಂದಲೇ ಹೊರಗಿದ್ದರು. ಅಭಿಮನ್ಯು ಈಶ್ವರನ್ ಇದ್ದಾಗ ಪಡಿಕ್ಕಲ್ ಹೇಗೆ ಆಯ್ಕೆ ಪ್ರಕ್ರಿಯೆಯಲ್ಲಿ ಬಂದರು. ಅಭಿಮನ್ಯು ಏಕೆ ಆಯ್ಕೆಯಾಗಲಿಲ್ಲ ಮತ್ತು ಏಕೆ ನಂಬರ್ 3 ರಲ್ಲಿ ಆಡಲಿಲ್ಲ. ಅಲ್ಲಿ ಸಾಕಷ್ಟು ವಿಚಾರಗಳು ನಡೆದಿವೆ ಮತ್ತು ಇದರ ಪರಿಣಾಮವಾಗಿಯೇ ಬಂದ ಫಲಿತಾಂಶವನ್ನು ಎಲ್ಲರೂ ನೋಡಿದ್ದಾರೆ' ಎಂದು ದೂರಿದರು.
Advertisement