
ಮುಂಬೈ: ಬಿಸಿಸಿಐ ಸೂಚನೆ ಮೇರೆಗೆ ರೋಹಿತ್ ಶರ್ಮಾ, ರಿಷಭ್ ಪಂತ್, ರವೀಂದ್ರ ಜಡೇಜಾ ಮತ್ತು ಯಶಸ್ವಿ ಜೈಸ್ವಾಲ್ ಸೇರಿದಂತೆ ಭಾರತದ ಹಲವಾರು ಸ್ಟಾರ್ ಆಟಗಾರರು ರಣಜಿಯಲ್ಲಿ ಆಡಿದ್ದರು. ಆದರೆ, ಗುರುವಾರದಿಂದ ಆರಂಭವಾಗಲಿರುವ ಮೇಘಾಲಯ ವಿರುದ್ಧದ ರಣಜಿ ಟ್ರೋಫಿಯ ಕೊನೆಯ ಲೀಗ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ತಂಡದ ಪರವಾಗಿ ರೋಹಿತ್ ಶರ್ಮಾ, ಯಶಸ್ವಿ ಜೈಸ್ವಾಲ್ ಮತ್ತು ಶ್ರೇಯಸ್ ಅಯ್ಯರ್ ಆಡುತ್ತಿಲ್ಲ ಎಂದು ವರದಿಯಾಗಿದೆ.
ಈ ಮೂರು ಆಟಗಾರರು ಮುಂಬೈನ ಶರದ್ ಪವಾರ್ ಕ್ರಿಕೆಟ್ ಅಕಾಡೆಮಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಜಮ್ಮು ಮತ್ತು ಕಾಶ್ಮೀರ ವಿರುದ್ಧದ ಪಂದ್ಯದಲ್ಲಿ ಮುಂಬೈ ಪರವಾಗಿ ಆಡಿದ್ದರು. ಜಮ್ಮು ಮತ್ತು ಕಾಶ್ಮೀರ ಮುಂಬೈ ವಿರುದ್ಧ 5 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿದೆ. ರಣಜಿ ಟ್ರೋಫಿ ಪಂದ್ಯಾವಳಿಯಲ್ಲಿ ಆಡಿ ಫಾರ್ಮ್ಗೆ ಮರಳುವ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾರ ಕನಸು ಭಗ್ನವಾಗಿದೆ.
42 ಬಾರಿ ರಣಜಿ ಟ್ರೋಫಿ ಗೆದ್ದು ಇತಿಹಾಸ ಬರೆದಿರುವ ಮುಂಬೈ ತಂಡದಲ್ಲಿ ಈ ಬಾರಿ ಕೂಡ ಸ್ಟಾರ್ ಆಟಗಾರರೇ ಇದ್ದರು. ಆದರೂ, ಶಾರ್ದೂಲ್ ಠಾಕೂರ್ ಹೊರತುಪಡಿಸಿ ಅಜಿಂಕ್ಯ ರಹಾನೆ, ರೋಹಿತ್ ಶರ್ಮಾ, ಯಶಸ್ವಿ ಜೈಸ್ವಾಲ್, ಶಿವಂ ದುಬೆಯಂತಹ ಬಲಿಷ್ಠ ಆಟಗಾರರು ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲರಾದರು.
ಮುಂಬೈ ವಿರುದ್ಧದ ಭರ್ಜರಿ ಗೆಲುವಿನ ಬಳಿಕ ಜಮ್ಮು ಮತ್ತು ಕಾಶ್ಮೀರ 29 ಅಂಕಗಳೊಂದಿಗೆ ಎ ಗುಂಪಿನಲ್ಲಿ ಅಗ್ರಸ್ಥಾನಕ್ಕೇರಿದೆ. ಅಜಿಂಕ್ಯ ರಹಾನೆ ನೇತೃತ್ವದ ಮುಂಬೈ ತಂಡದ ಕ್ವಾರ್ಟರ್ ಫೈನಲ್ ಕನಸಿಗೆ ತೀವ್ರ ಹೊಡೆತ ಬಿದ್ದಿದೆ. ಮುಂಬೈ ತಂಡ ಇದೀಗ ಮೇಘಾಲಯವನ್ನು ದೊಡ್ಡ ಅಂತರದಿಂದ ಸೋಲಿಸಬೇಕಾಗಿದೆ ಮತ್ತು ಕ್ವಾರ್ಟರ್-ಫೈನಲ್ ಆಸೆಯನ್ನು ಜೀವಂತವಾಗಿರಿಸಲು ಇತರ ಪಂದ್ಯಗಳಲ್ಲಿ ಉತ್ತಮ ಫಲಿತಾಂಶ ಸಿಗಬೇಕಿದೆ.
ರೋಹಿತ್, ಜೈಸ್ವಾಲ್ ಮತ್ತು ಅಯ್ಯರ್ ಎಲ್ಲರೂ ಇಂಗ್ಲೆಂಡ್ ವಿರುದ್ಧದ ಸರಣಿಗಾಗಿ ಭಾರತ ODI ತಂಡದ ಭಾಗವಾಗಿದ್ದು, ಫೆಬ್ರುವರಿ 6, 9 ಮತ್ತು 12 ರಂದು ಪಂದ್ಯ ನಡೆಯಲಿದೆ. ನಂತರ ಚಾಂಪಿಯನ್ಸ್ ಟ್ರೋಫಿ ಆರಂಭವಾಗಲಿದೆ.
ಮುಂಬೈ ಕ್ರಿಕೆಟ್ ಸಂಸ್ಥೆಯ ಮೂಲವೊಂದು ಅಯ್ಯರ್ ಸೇರಿದಂತೆ ಮೂವರು ಆಟಗಾರರ ಅಲಭ್ಯತೆಯನ್ನು ಖಚಿತಪಡಿಸಿದೆ. ಅವರು ಭಾರತ ತಂಡವನ್ನು ಸೇರಿಕೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಭಾರತ ತಂಡವು ಸದ್ಯ ಐದು ಪಂದ್ಯಗಳ T20I ಸರಣಿಯಲ್ಲಿ ತೊಡಗಿಸಿಕೊಂಡಿದೆ. ಸದ್ಯ 2-0 ಮುನ್ನಡೆ ಸಾಧಿಸಿದೆ ಮತ್ತು ಮುಂಬರುವ ODIಗಳಿಗೆ ತಯಾರಿ ನಡೆಸಲು ಅಯ್ಯರ್ ತಮ್ಮ ಸಹ ಆಟಗಾರರೊಂದಿಗೆ ಸೇರಿಕೊಳ್ಳಲಿದ್ದಾರೆ.
Advertisement