Ranji Trophy: ಕರ್ನಾಟಕದ ಪರ ರಣಜಿಯಲ್ಲಿ ಆಡಲು ಕನ್ನಡಿಗ ಕೆಎಲ್ ರಾಹುಲ್‌ ಸಜ್ಜು

ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಯ ಎಲ್ಲ ಐದು ಟೆಸ್ಟ್‌ಗಳಲ್ಲಿ ಆಡಿದ್ದ ವಿಕೆಟ್‌ಕೀಪರ್ ಬ್ಯಾಟರ್ ಕೆಎಲ್ ರಾಹುಲ್ ಅವರ ಮೊಣಕೈಗೆ ಗಾಯವಾಗಿತ್ತು.
ಕೆಎಲ್ ರಾಹುಲ್
ಕೆಎಲ್ ರಾಹುಲ್
Updated on

ಬೆಂಗಳೂರು: ಗಾಯದಿಂದ ಚೇತರಿಸಿಕೊಂಡಿರುವ ಭಾರತದ ಅನುಭವಿ ಬ್ಯಾಟರ್‌ ಕೆಎಲ್ ರಾಹುಲ್ ಹರಿಯಾಣ ವಿರುದ್ಧದ ಕೊನೆಯ ಲೀಗ್‌ ಪಂದ್ಯದಲ್ಲಿ ಕರ್ನಾಟಕದ ಪರ ಆಡಲು ಸಜ್ಜಾಗಿದ್ದಾರೆ. ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಜನವರಿ 30ರಂದು ಪಂದ್ಯ ಆರಂಭವಾಗಲಿದೆ.

ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಯ ಎಲ್ಲ ಐದು ಟೆಸ್ಟ್‌ಗಳಲ್ಲಿ ಆಡಿದ್ದ ವಿಕೆಟ್‌ಕೀಪರ್ ಬ್ಯಾಟರ್ ಕೆಎಲ್ ರಾಹುಲ್ ಅವರ ಮೊಣಕೈಗೆ ಗಾಯವಾಗಿತ್ತು. ರಾಹುಲ್ ಅವರಿಗೆ ಬಿಸಿಸಿಐ ವೈದ್ಯಕೀಯ ತಂಡವು ಚಿಕಿತ್ಸೆ ನೀಡಿದೆ. ಗಾಯದಿಂದಾಗಿ ರಾಹುಲ್ ಅವರನ್ನು ಜನವರಿ 23ರಿಂದ ಆರಂಭವಾಗಿದ್ದ ಪಂಜಾಬ್‌ ವಿರುದ್ಧದ ಎಲೈಟ್‌ ‘ಸಿ’ ಗುಂಪಿನ ಪಂದ್ಯದಿಂದ ಹೊರಗಿಡಲಾಗಿತ್ತು.

ಶನಿವಾರ (ಜ.25) ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ರಣಜಿ ಟ್ರೋಫಿ ಪಂದ್ಯದಲ್ಲಿ ಪಂಜಾಬ್ ವಿರುದ್ಧ ಕರ್ನಾಟಕ ತಂಡ ಭರ್ಜರಿ ಗೆಲುವು ಸಾಧಿಸಿದೆ. ಪಂಜಾಬ್ ನಾಯಕ ಶುಭಮನ್ ಗಿಲ್ (102) ಶತಕ ಬಾರಿಸಿದರೂ, ಕರ್ನಾಟಕ ವಿರುದ್ಧ ಗೆಲ್ಲಲು ಸಾಧ್ಯವಾಗಲಿಲ್ಲ. ಕರ್ನಾಟಕ ತಂಡವು ಇನಿಂಗ್ಸ್ ಮತ್ತು 207 ರನ್‌ಗಳ ಅಭೂತಪೂರ್ವ ಗೆಲುವು ಸಾಧಿಸಿದೆ.

2020ರಲ್ಲಿ ಕೋಲ್ಕತ್ತಾದಲ್ಲಿ ಬಂಗಾಳ ವಿರುದ್ಧ ಕಾಣಿಸಿಕೊಂಡ ನಂತರ ರಾಹುಲ್ ಅವರು ಕಾಣಿಸಿಕೊಳ್ಳುತ್ತಿರುವ ಮೊದಲ ರಣಜಿ ಟ್ರೋಫಿ ಪಂದ್ಯ ಇದಾಗಿದ್ದು, ಕೊನೆಯ ಲೀಗ್ ಪಂದ್ಯದಲ್ಲಿ ಕರ್ನಾಟಕದ ಪರವಾಗಿ ಆಡಲಿದ್ದಾರೆ ಎಂದು ಜನವರಿ 21 ರಂದು ಸುದ್ದಿಸಂಸ್ಥೆ ಪಿಟಿಐ ವರದಿ ಮಾಡಿತ್ತು.

ಮಂಗಳವಾರದಿಂದ ಮಯಾಂಕ್ ಅಗರ್ವಾಲ್ ನೇತೃತ್ವದ ಕರ್ನಾಟಕ ತಂಡದೊಂದಿಗೆ ರಾಹುಲ್ ಅಭ್ಯಾಸ ಆರಂಭಿಸುವ ನಿರೀಕ್ಷೆಯಿದೆ.

ಗಾಯದ ಕಾರಣದಿಂದಾಗಿ ರಣಜಿ ಪಂದ್ಯದಿಂದ ಹೊರಗುಳಿದಿದ್ದ ವಿದ್ವತ್ ಕಾವೇರಪ್ಪ ಇದೀಗ ತಂಡಕ್ಕೆ ಮರಳುತ್ತಿದ್ದು, ಕರ್ನಾಟಕ ತಂಡವು ತಮ್ಮ ವೇಗದ ಬೌಲಿಂಗ್ ವಿಭಾಗದಲ್ಲಿ ಬಲ ಸಾಧಿಸಿದೆ.

ಕರ್ನಾಟಕವು ಸಿ ಗುಂಪಿನಲ್ಲಿ 19 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಹರಿಯಾಣ 26 ಅಂಕಗಳೊಂದಿಗೆ ಮೊದಲ ಸ್ಥಾನ ಮತ್ತು ಕೇರಳ 21 ಅಂಕಗಳನ್ನು ಪಡೆದು ಎರಡನೇ ಸ್ಥಾನದಲ್ಲಿದೆ. ನಾಕೌಟ್ ಆಸೆಯನ್ನು ಜೀವಂತವಾಗಿರಿಸಿಕೊಳ್ಳಲು ಕರ್ನಾಟಕವು ಬೋನಸ್ ಅಂಕದೊಂದಿಗೆ ಈ ಪಂದ್ಯವನ್ನು ಗೆಲ್ಲಲೇ ಬೇಕಿರುವ ಅನಿವಾರ್ಯತೆಗೆ ಸಿಲುಕಿದೆ.

ಕೆಎಲ್ ರಾಹುಲ್
ಪಂಜಾಬ್ ವಿರುದ್ಧದ ರಣಜಿ ಪಂದ್ಯಕ್ಕೆ ಕೆಎಲ್ ರಾಹುಲ್ ಗೈರು

ಹರಿಯಾಣದ ವಿರುದ್ಧ ಕರ್ನಾಟಕದ ತಂಡ

ಮಯಾಂಕ್ ಅಗರ್ವಾಲ್ (ನಾಯಕ), ಕೆಎಲ್ ರಾಹುಲ್, ಶ್ರೇಯಸ್ ಗೋಪಾಲ್ (ಉಪನಾಯಕ), ದೇವದತ್ ಪಡಿಕ್ಕಲ್, ಕೆವಿ ಅನೀಶ್, ಆರ್ ಸ್ಮರಣ್, ಕೆಎಲ್ ಶ್ರೀಜಿತ್ (ವಿಕೆಟ್ ಕೀಪರ್), ಅಭಿನವ್ ಮನೋಹರ್, ಹಾರ್ದಿಕ್ ರಾಜ್, ಪ್ರಸಿದ್ಧ್ ಕೃಷ್ಣ, ವಿದ್ವತ್ ಕಾವೇರಪ್ಪ, ವಾಸುಕಿ ಕೌಶಿಕ್, ಅಭಿಲಾಷ್ ಶೆಟ್ಟಿ, ಯಶೋವರ್ಧನ್ ಪರಂತಪ್, ನಿಕಿನ್ ಜೋಸ್, ಸುಜಯ್ ಸಾತೇರಿ (ವಿಕೆಟ್ ಕೀಪರ್), ಮೊಹ್ಸಿನ್ ಖಾನ್.

ರಣಜಿಯಲ್ಲಿ ಸ್ಟಾರ್ ಆಟಗಾರರು

ನ್ಯೂಜಿಲೆಂಡ್ ವಿರುದ್ಧದ ವೈಟ್‌ವಾಷ್ ಮತ್ತು ಆಸ್ಟ್ರೇಲಿಯಾ ವಿರುದ್ಧದ ಸರಣಿ ಸೋಲಿನ ಬಳಿಕ ಬಿಸಿಸಿಐ ಸೂಚನೆ ಮೇರೆಗೆ ಟೀಂ ಇಂಡಿಯಾ ಆಟಗಾರರು ರಣಜಿ ಪಂದ್ಯ ಆಟಲು ಸಜ್ಜಾಗಿದ್ದಾರೆ. ನಾಯಕ ರೋಹಿತ್ ಶರ್ಮಾ ಮುಂಬೈ ಪರ ಈಗಾಗಲೇ ರಣಜಿ ಪಂದ್ಯ ಆಡಿದ್ದಾರೆ. ವಿರಾಟ್ ಕೊಹ್ಲಿ 13 ವರ್ಷಗಳ ನಂತರ ದಿಲ್ಲಿ ಪರವಾಗಿ ದೇಶೀಯ ಕ್ರಿಕೆಟ್‌ಗೆ ಮರಳಲಿದ್ದಾರೆ.

ವೇಗಿ ಮೊಹಮ್ಮದ್ ಸಿರಾಜ್ ಹೈದರಾಬಾದ್‌ ಪರ ಕಣಕ್ಕಿಳಿಯಲಿದ್ದಾರೆ. ಸೌರಾಷ್ಟ್ರ ಪರ ಆಲ್‌ರೌಂಡರ್ ರವೀಂದ್ರ ಜಡೇಜಾ ಈಗಾಗಲೇ ಆಡಿದ್ದಾರೆ. ರಿಷಬ್ ಪಂತ್, ಯಶಸ್ವಿ ಜೈಸ್ವಾಲ್ ಈಗಾಗಲೇ ದೇಶೀಯ ತಂಡಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಕೆಎಲ್ ರಾಹುಲ್
Ranji trophy, Karnataka vs Punjab: ಶುಭಮನ್ ಗಿಲ್ 102 ರನ್ ವ್ಯರ್ಥ; ಪಂಜಾಬ್ ವಿರುದ್ಧ ಕರ್ನಾಟಕಕ್ಕೆ ಇನಿಂಗ್ಸ್ ಗೆಲುವು

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com