
ಬೆಂಗಳೂರು: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಳೆದ ಬುಧವಾರ ನಡೆದ ಕಾಲ್ತುಳಿತ ಘಟನೆ ನಂತರ KSCA ಗೆ ದೊಡ್ಡ ಪೆಟ್ಟು ಬಿದ್ದಿದೆ. ಬೆಂಗಳೂರಿನ ಕ್ರಿಕೆಟ್ ಆತಿಥ್ಯಕ್ಕೆ ಭಾರಿ ಹೊಡೆತ ಬಿದ್ದಿದ್ದು ಬೆಂಗಳೂರಿನಲ್ಲಿ ನಡೆಯಬೇಕಿದ್ದ ಪಂದ್ಯಗಳನ್ನು BCCI ಸ್ಥಳಾಂತರಿಸಿದೆ.
ನವೆಂಬರ್ 13 ರಿಂದ 19ರವರೆಗೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಬೇಕಿದ್ದ ಭಾರತ 'ಎ' ಮತ್ತು ದಕ್ಷಿಣ ಆಫ್ರಿಕಾ 'ಎ' ನಡುವಿನ ಏಕದಿನ ಸರಣಿಯ ಮೂರು ಪಂದ್ಯಗಳನ್ನು ಬಿಸಿಸಿಐ ಸ್ಥಳಾಂತರಿಸಿದೆ. ಯಾವುದೇ ನಿರ್ದಿಷ್ಟ ಕಾರಣ ನೀಡದೇ, ಬಿಸಿಸಿಐ ಪತ್ರಿಕಾ ಪ್ರಕಟಣೆಯನ್ನು ಬಿಡುಗಡೆ ಮಾಡಿದೆ. ಬೆಂಗಳೂರು ಪಂದ್ಯಗಳನ್ನು ರಾಜ್ಕೋಟ್ಗೆ ಸ್ಥಳಾಂತರಿಸಲಾಗಿದೆ ಎಂದು ತಿಳಿಸಿದೆ. ಕೆಎಸ್ಸಿಎ ಅಧ್ಯಕ್ಷರು ಕಾರಣಗಳ ಬಗ್ಗೆ ಮಾತನಾಡಲಿಲ್ಲ. ಆದರೆ ಕಾಲ್ತುಳಿತ ಮತ್ತು ಸ್ಥಳಗಳ ಬದಲಾವಣೆಗೆ ಸಂಬಂಧವಿಲ್ಲ ಎಂದು ಸಮರ್ಥಿಸಿಕೊಂಡರು. ಗುರುವಾರ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಕೆಎಸ್ಸಿಎಗೆ ತಿಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಮೂಲಗಳ ಪ್ರಕಾರ, ಬಿಸಿಸಿಐ ಮತ್ತು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಸೆಪ್ಟೆಂಬರ್ ಮತ್ತು ನವೆಂಬರ್ ನಡುವೆ ಬೆಂಗಳೂರಿನಲ್ಲಿ ನಡೆಯಲಿರುವ ಐಸಿಸಿ ಮಹಿಳಾ ವಿಶ್ವಕಪ್ ಪಂದ್ಯಗಳ ಮೇಲೂ ಪರಿಣಾಮ ಬೀರಿಸುವ ಸಾಧ್ಯೆ ಇದೆ.
ಚಿನ್ನಸ್ವಾಮಿ ಕ್ರೀಡಾಂಗಣವು ಭಾರತದ ಐದು ಕ್ರೀಡಾಂಗಣದಲ್ಲಿ ಒಂದಾಗಿದೆ. ಇಲ್ಲಿ ಭಾರತ (ಸೆಪ್ಟೆಂಬರ್ 30 ರಂದು) ಭಾಗವಹಿಸುವ ಉದ್ಘಾಟನಾ ಪಂದ್ಯ, ಒಂದು ಸೆಮಿಫೈನಲ್ (ಅಕ್ಟೋಬರ್ 30) ಮತ್ತು ಪಾಕಿಸ್ತಾನ ಅರ್ಹತೆ ಪಡೆಯದಿದ್ದರೆ ಫೈನಲ್ (ನವೆಂಬರ್ 2) ಪಂದ್ಯಗಳಿಗೆ ಬೆಂಗಳೂರಿನ ಕ್ರೀಡಾಂಗಣವನ್ನು ಮೀಸಲಿಡಲಾಗಿದೆ. ಒಂದು ವೇಳೆ ಪಾಕ್ ಫೈನಲ್ ಗೆ ಬಂದರೆ ಈ ಪಂದ್ಯವನ್ನು ಕೊಲಂಬೊಗೆ ಸ್ಥಳಾಂತರಿಸಲಾಗುತ್ತದೆ.
50 ವರ್ಷಗಳಿಂದ ಅಭಿಮಾನಿಗಳಿಗೆ ಸಂತೋಷವನ್ನು ಉಣಬಡಿಸುತ್ತಿರುವ ಕ್ರೀಡಾಂಗಣದಲ್ಲಿ ನಡೆದ ದುರಂತವನ್ನು ನಾನು ಇನ್ನೂ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಮಹಿಳಾ ವಿಶ್ವಕಪ್ ಪಂದ್ಯಗಳನ್ನು ಬೆಂಗಳೂರಿನಿಂದ ಹೊರಗೆ ಸ್ಥಳಾಂತರಿಸಿದರೆ, ಅದು ರಾಜ್ಯದಲ್ಲಿ ಕ್ರಿಕೆಟ್ಗೆ ದೊಡ್ಡ ಹೊಡೆತವಾಗುತ್ತದೆ. ಮಹಿಳಾ ಕ್ರಿಕೆಟ್ಗೆ ಸಂಬಂಧಿಸಿದಂತೆ, ಕಳೆದ ಎರಡೂವರೆ ವರ್ಷಗಳಲ್ಲಿ ನಾವು ಹೆಚ್ಚಿನ ಬೆಳವಣಿಗೆಯನ್ನು ಕಂಡಿಲ್ಲ. ಇದು ನಮ್ಮನ್ನು ಮತ್ತಷ್ಟು ಹಿನ್ನಡೆಗೆ ತಳ್ಳುತ್ತದೆ ಎಂದು ಭಾರತದ ಮಾಜಿ ನಾಯಕಿ ಶಾಂತಾ ರಂಗಸ್ವಾಮಿ ಹೇಳಿದರು.
ಮೂಲಗಳ ಪ್ರಕಾರ, ಕೆಎಸ್ಸಿಎ ಸ್ವಲ್ಪ ಸಮಯದವರೆಗೆ ಪ್ರಮುಖ ಕ್ರಿಕೆಟ್ ಪಂದ್ಯವನ್ನು ಆಯೋಜಿಸುವ ಸಾಧ್ಯತೆಯಿಲ್ಲ. ಮೊದಲಿಗೆ, ಕ್ರೀಡಾಂಗಣವನ್ನು ನವೀಕರಿಸಬೇಕಾಗಿದೆ. ಕಾಲ್ತುಳಿತದ ದಿನ ಅಭಿಮಾನಿಗಳ ಗದ್ದಲದ ಪರಿಣಾಮವಾಗಿ ಕಾಂಪೌಂಡ್ ಗೋಡೆಗಳು, ರೇಲಿಂಗ್ಗಳು, ಮೆಟ್ಟಿಲುಗಳು ಮತ್ತು ನೈರ್ಮಲ್ಯ ಸೇರಿದಂತೆ ರಚನೆಗೆ ಗಮನಾರ್ಹ ಹಾನಿಯಾಗಿದೆ.
Advertisement