'Unfortunate': 'Rohit Sharma ಡುಮ್ಮ..' ಎಂದ ಕಾಂಗ್ರೆಸ್ ನಾಯಕಿ ಹೇಳಿಕೆಗೆ BCCI ತಿರುಗೇಟು!
ನವದೆಹಲಿ: ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ಡುಮ್ಮ.. ಅವರ ದೇಹ ದಪ್ಪ ಹಾಗೂ ಫಿಟ್ ನೆಸ್ ಇಲ್ಲ ಎಂದು ಟೀಕಿಸಿದ್ದ ಕಾಂಗ್ರೆಸ್ ನಾಯಕಿ ಶಮಾ ಮೊಹಮದ್ ಗೆ BCCI ತಿರುಗೇಟು ನೀಡಿದೆ.
ಹೌದು.. ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ಅವರ ದೇಹದ ಕುರಿತು ಆಕ್ಷೇಪಾರ್ಹ ಟೀಕೆ ಮಾಡಿದ್ದ ಕಾಂಗ್ರೆಸ್ ವಕ್ತಾರೆ ಶಮಾ ಮೊಹಮ್ಮದ್ ಅವರ ಹೇಳಿಕೆ ವಿವಾದವಾಗಿದ್ದು, ಅವರ ಹೇಳಿಕೆಗೆ ಎಲ್ಲಡೆ ವ್ಯಾಪಕ ಟೀಕೆಗಳು ಬರುತ್ತಿವೆ. ಇದೀಗ ಇದೇ ವಿಚಾರವಾಗಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದು, ಅವರ ಹೇಳಿಕೆ 'ದುರದೃಷ್ಟಕರ' ಎಂದು ಟೀಕಿಸಿದೆ.
ಖಾಸಗಿ ವಾಹಿನಿಗೆ ಈ ಕುರಿತು ಪ್ರತಿಕ್ರಿಯೆ ನೀಡಿರುವ ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ, 'ಶಮಾ ಮಹಮದ್ ಅವರ ಹೇಳಿಕೆ ನಿಜಕ್ಕೂ ದುರದೃಷ್ಟಕರ.. ಭಾರತ ತಂಡವು ಇಂತಹ ನಿರ್ಣಾಯಕ ಐಸಿಸಿ ಟೂರ್ನಮೆಂಟ್ನ ಮಧ್ಯದಲ್ಲಿರುವಾಗ ಜವಾಬ್ದಾರಿಯುತ ವ್ಯಕ್ತಿಯೊಬ್ಬರು ಇಂತಹ ಕ್ಷುಲ್ಲಕ ಹೇಳಿಕೆ ನೀಡುವುದು ತುಂಬಾ ದುರದೃಷ್ಟಕರ. ಇದು ಒಬ್ಬ ವ್ಯಕ್ತಿ ಅಥವಾ ತಂಡದ ಮೇಲೆ ನೈತಿಕತೆಯನ್ನು ಕುಗ್ಗಿಸುವ ಪರಿಣಾಮವನ್ನು ಬೀರಬಹುದು. ಎಲ್ಲಾ ಆಟಗಾರರು ತಮ್ಮ ಅತ್ಯುನ್ನತ ಸಾಮರ್ಥ್ಯಕ್ಕೆ ತಕ್ಕಂತೆ ಪ್ರದರ್ಶನ ನೀಡುತ್ತಿದ್ದಾರೆ ಮತ್ತು ಅದರ ಫಲಿತಾಂಶಗಳು ಗೋಚರಿಸುತ್ತಿವೆ. ವೈಯಕ್ತಿಕ ಪ್ರಚಾರಕ್ಕಾಗಿ ವ್ಯಕ್ತಿಗಳು ಇಂತಹ ಅವಹೇಳನಕಾರಿ ಹೇಳಿಕೆಗಳನ್ನು ನೀಡುವುದನ್ನು ನಿಲ್ಲಿಸುತ್ತಾರೆ ಎಂದು ನಾನು ಭಾವಿಸುತ್ತೇನೆ" ಎಂದು ಕಿಡಿಕಾರಿದ್ದಾರೆ.
ಕಾಂಗ್ರೆಸ್ ನಾಯಕಿ ಏನು ಹೇಳಿದ್ದರು?
ಸಂಜೆ ವೇಳೆ ಟ್ವೀಟ್ ಮಾಡಿದ್ದ ಶಮಾ ಮಹಮದ್, 'ಕ್ರೀಡಾಪಟುವಾಗಿ ರೋಹಿತ್ ಶರ್ಮಾ ದಪ್ಪಗಿದ್ದಾರೆ, ತೂಕ ಇಳಿಸಿಕೊಳ್ಳಬೇಕು. ಮತ್ತು ಖಂಡಿತವಾಗಿಯೂ, ಭಾರತ ಕಂಡ ಅತ್ಯಂತ ಕಳಪೆ ನಾಯಕ ಇವರೇ ಎಂದು ಮೊಹಮ್ಮದ್ ಪೋಸ್ಟ್ ಮಾಡಿದ್ದಾರೆ. ಮತ್ತೊಂದು ಪೋಸ್ಟ್ನಲ್ಲಿ, “ಗಂಗೂಲಿ, ತೆಂಡೂಲ್ಕರ್, ದ್ರಾವಿಡ್, ಧೋನಿ, ಕೊಹ್ಲಿ, ಕಪಿಲ್ ದೇವ್, ಶಾಸ್ತ್ರಿ ಮತ್ತು ಉಳಿದವರಿಗೆ ಹೋಲಿಸಿದರೆ ಅವರಲ್ಲಿ ಜಗತ್ತಿಗೆ ಮಾದರಿಯಾಗುವಂತಹದ್ದೇನಿದೆ? ಅವರು ಸಾಧಾರಣ ಆಟಗಾರರಾಗಿದ್ದು, ಭಾರತದ ನಾಯಕರಾಗಲು ಅದೃಷ್ಟವಿತ್ತು ಅಷ್ಟೇ” ಎಂದು ಹೇಳಿದ್ದಾರೆ.
ವ್ಯಾಪಕ ಆಕ್ರೋಶ
ಶಮಾ ಮಹಮದ್ ಹೇಳಿಕೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದ್ದು, ಈ ಕುರಿತು ಟೀಕೆ ಮಾಡಿರುವ ಬಿಜೆಪಿ ವಕ್ತಾರ ಪ್ರದೀಪ್ ಭಂಡಾರಿ, ‘ಕಾಂಗ್ರೆಸ್ಗೆ ಇದು ಅವಮಾನದ ಸಂಗತಿಯಾಗಿದೆ. ಎಲ್ಲವನ್ನೂ ಬಿಟ್ಟು ಈಗ ಭಾರತೀಯ ಕ್ರಿಕೆಟ್ ತಂಡದ ನಾಯಕನ ಬಗ್ಗೆ ಮಾತನಾಡುತ್ತಿದ್ದಾರೆ. ಹಾಗಾದರೆ ರಾಜಕೀಯದಲ್ಲಿ ವಿಫಲವಾದ ನಂತರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಈಗ ಕ್ರಿಕೆಟ್ ಆಡುತ್ತಾರೆ ಎಂದು ಅವರು ನಿರೀಕ್ಷಿಸುತ್ತಾರೆಯೇ?’ ಎಂದು ಪ್ರಶ್ನಿಸಿದ್ದಾರೆ. ಬಿಜೆಪಿಯ ಶೆಹಜಾದ್ ಪೂನಾವಾಲಾ ಕೂಡ ಇದನ್ನು ಟೀಕಿಸಿದ್ದು, 'ರಾಹುಲ್ ಗಾಂಧಿ ಅವರ ನಾಯಕತ್ವದಲ್ಲಿ 90 ಚುನಾವಣೆಗಳನ್ನು ಸೋತವರು ರೋಹಿತ್ ಶರ್ಮಾ ಅವರ ನಾಯಕತ್ವವನ್ನು ಕಳಪೆ ಎಂದು ಕರೆಯುತ್ತಿದ್ದಾರೆ! ಎಂದು ಹೇಳಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ