ಭಾರತ-ಪಾಕಿಸ್ತಾನ ಉದ್ವಿಗ್ನತೆ: ವಿದೇಶಿ ಆಟಗಾರರ ಕಳವಳ; PSL ಅನ್ನು ಯುಎಇಗೆ ಸ್ಥಳಾಂತರಿಸಿದ ಪಾಕಿಸ್ತಾನ

ವಿದೇಶಿ ಆಟಗಾರರಲ್ಲಿ ಹೆಚ್ಚುತ್ತಿರುವ ಕಳವಳಗಳು ಮತ್ತು ಅವರ ಸುರಕ್ಷತೆಗೆ ಆದ್ಯತೆ ನೀಡುವ ಅಗತ್ಯವನ್ನು ಉಲ್ಲೇಖಿಸಿ ಪಿಸಿಬಿ ಶುಕ್ರವಾರದ ಆರಂಭದಲ್ಲಿ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ಪಿಎಸ್ಎಲ್ ಅನ್ನು ಸ್ಥಳಾಂತರಿಸುವ ಬಗ್ಗೆ ದೃಢಪಡಿಸಿದೆ.
ಪಾಕಿಸ್ತಾನ ಸೂಪರ್ ಲೀಗ್
ಪಾಕಿಸ್ತಾನ ಸೂಪರ್ ಲೀಗ್
Updated on

ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆ ಹೆಚ್ಚಾದ ನಂತರ ಪಾಕಿಸ್ತಾನ ಸೂಪರ್ ಲೀಗ್ (ಪಿಎಸ್ಎಲ್) ಅನ್ನು ಯುನೈಟೆಡ್ ಅರಬ್ ಎಮಿರೇಟ್ಸ್‌ಗೆ ಸ್ಥಳಾಂತರಿಸಲಾಗಿದೆ. ವಿದೇಶಿ ಆಟಗಾರರು ಪಾಕ್‌ನಲ್ಲಿ ಆಡುವುದನ್ನು ಮುಂದುವರಿಸುವ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ವರದಿಯಾಗಿದೆ.

ಸುದ್ದಿಸಂಸ್ಥೆ ಪಿಟಿಐ ಪ್ರಕಾರ, ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಶುಕ್ರವಾರ ಈ ನಿರ್ಧಾರವನ್ನು ಪ್ರಕಟಿಸಿದ್ದು, ಪಂದ್ಯಾವಳಿಯಲ್ಲಿ ಉಳಿದ ಎಂಟು ಪಂದ್ಯಗಳನ್ನು ರಾವಲ್ಪಿಂಡಿ, ಮುಲ್ತಾನ್ ಮತ್ತು ಲಾಹೋರ್ ಬದಲಿಗೆ ಯುಎಇಯಲ್ಲಿ ಆಯೋಜಿಸಲಾಗುವುದು ಎಂದಿದೆ.

ವಿದೇಶಿ ಆಟಗಾರರಲ್ಲಿ ಹೆಚ್ಚುತ್ತಿರುವ ಕಳವಳಗಳು ಮತ್ತು ಅವರ ಸುರಕ್ಷತೆಗೆ ಆದ್ಯತೆ ನೀಡುವ ಅಗತ್ಯವನ್ನು ಉಲ್ಲೇಖಿಸಿ ಪಿಸಿಬಿ ಶುಕ್ರವಾರದ ಆರಂಭದಲ್ಲಿ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ಪಿಎಸ್ಎಲ್ ಅನ್ನು ಸ್ಥಳಾಂತರಿಸುವ ಬಗ್ಗೆ ದೃಢಪಡಿಸಿದೆ. ಆಟಗಾರರು ಸುರಕ್ಷಿತವಾಗಿ ಅಲ್ಲಿಗೆ ತೆರಳಿದ ನಂತರ, ಪರಿಷ್ಕೃತ ದಿನಾಂಕಗಳು ಮತ್ತು ಸ್ಥಳ ಸೇರಿದಂತೆ ಅಂತಿಮ ವೇಳಾಪಟ್ಟಿಯನ್ನು ಮುಂದಿನ ದಿನಗಳಲ್ಲಿ ಘೋಷಿಸಲಾಗುವುದು ಎಂದು ತಿಳಿಸಿದೆ.

ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ ತಮ್ಮ ಹೇಳಿಕೆಯಲ್ಲಿ, ಭಾರತವು ರಾವಲ್ಪಿಂಡಿ ಕ್ರಿಕೆಟ್ ಕ್ರೀಡಾಂಗಣವನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದೆ. ಈ ಕೃತ್ಯವು ಬೇಜವಾಬ್ದಾರಿಯಾಗಿದ್ದು, ಈಗ ನಡೆಯುತ್ತಿರುವ ಪಿಎಸ್ಎಲ್ ಅನ್ನು ಅಡ್ಡಿಪಡಿಸುವ ಪ್ರಯತ್ನವಾಗಿದೆ ಎಂದು ಆರೋಪಿಸಿದ್ದಾರೆ.

ಆದಾಗ್ಯೂ, ಬುಧವಾರ ರಾತ್ರಿ ಉತ್ತರ ಮತ್ತು ಪಶ್ಚಿಮ ಭಾರತದಾದ್ಯಂತ 15 ಸ್ಥಳಗಳ ಮೇಲೆ ದಾಳಿ ನಡೆಸಲು ಪಾಕಿಸ್ತಾನ ಮಾಡಿದ ಪ್ರಯತ್ನಕ್ಕೆ ಪ್ರತಿಕ್ರಿಯೆಯಾಗಿ, ತನ್ನ ಕಾರ್ಯಾಚರಣೆಯು ಪಾಕಿಸ್ತಾನದ ಮಿಲಿಟರಿ ಸ್ವತ್ತುಗಳನ್ನು ನಿರ್ದಿಷ್ಟವಾಗಿ ವಾಯು ರಕ್ಷಣಾ ವ್ಯವಸ್ಥೆಗಳನ್ನು ಗುರಿಯಾಗಿಸಿಕೊಂಡಿದ್ದಕ್ಕೆ ಸೀಮಿತವಾಗಿದೆ ಎಂದು ಭಾರತೀಯ ರಕ್ಷಣಾ ಸಚಿವಾಲಯ ಸ್ಪಷ್ಟಪಡಿಸಿದೆ.

ಪಾಕಿಸ್ತಾನ ಸೂಪರ್ ಲೀಗ್
IPL 2025: 'ಈಗಿನ ಪರಿಸ್ಥಿತಿ...'; ಟಿ20 ಟೂರ್ನಮೆಂಟ್ ರದ್ದಾಗುವ ಬಗ್ಗೆ ಮೌನ ಮುರಿದ ಐಪಿಎಲ್ ಚೇರ್‌ಮನ್

'ರಾವಲ್ಪಿಂಡಿ ಕ್ರಿಕೆಟ್ ಕ್ರೀಡಾಂಗಣವನ್ನು ಗುರಿಯಾಗಿಸಿಕೊಂಡು ಭಾರತ ನಡೆಸಿದ ಅತ್ಯಂತ ಬೇಜವಾಬ್ದಾರಿ ಮತ್ತು ಅಪಾಯಕಾರಿ ಕೃತ್ಯ ನಡೆಸಿದ್ದು, ಇದು ಪಾಕಿಸ್ತಾನ ಸೂಪರ್ ಲೀಗ್ ಅನ್ನು ಅಡ್ಡಿಪಡಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸ್ಪಷ್ಟವಾಗಿ ಕಂಡುಬಂದಿದೆ. ಆದ್ದರಿಂದ ಉಳಿದ ಪಂದ್ಯಗಳನ್ನು ಯುಎಇಗೆ ಸ್ಥಳಾಂತರಿಸಲು ಪಿಸಿಬಿ ನಿರ್ಧರಿಸಿದೆ' ಎಂದು ನಖ್ವಿ ಹೇಳಿದರು.

ಅಸ್ಥಿರ ಭದ್ರತಾ ಪರಿಸ್ಥಿತಿಯ ನಡುವೆಯೂ ದೇಶೀಯ ಮತ್ತು ಅಂತರರಾಷ್ಟ್ರೀಯ ಆಟಗಾರರ ಕಳವಳಗಳನ್ನು ಪರಿಹರಿಸುವುದು ಮಂಡಳಿಯ ಆದ್ಯತೆಯಾಗಿದೆ. ಪದೇ ಪದೆ ಪ್ರತಿಕೂಲ ಪರಿಸ್ಥಿತಿಗಳನ್ನು ನಿವಾರಿಸಿ ಕ್ರಿಕೆಟ್ ಆಟವು ಪ್ರವರ್ಧಮಾನಕ್ಕೆ ಬರುವಂತೆ ನೋಡಿಕೊಳ್ಳುವ ಜವಾಬ್ದಾರಿಯುತ ಸಂಸ್ಥೆಯಾಗಿ, ಪಿಎಸ್‌ಎಲ್‌ನಲ್ಲಿ ಭಾಗವಹಿಸುವ ಎಲ್ಲ ಆಟಗಾರರ ಮಾನಸಿಕ ಯೋಗಕ್ಷೇಮವನ್ನು ಖಚಿತಪಡಿಸಿಕೊಳ್ಳುವುದು ನಮಗೆ ಮುಖ್ಯವಾಗಿತ್ತು' ಎಂದು ನಖ್ವಿ ಹೇಳಿದರು.

ಹೆಚ್ಚುತ್ತಿರುವ ಸಂಘರ್ಷದ ಪರಿಣಾಮಗಳು ಈಗಾಗಲೇ ಲೀಗ್ ಮೇಲೆ ಪರಿಣಾಮ ಬೀರಿವೆ. ಗುರುವಾರ ರಾವಲ್ಪಿಂಡಿಯಲ್ಲಿ ನಡೆಯಬೇಕಿದ್ದ ಪೇಶಾವರ್ ಝಲ್ಮಿ ಮತ್ತು ಕರಾಚಿ ಕಿಂಗ್ಸ್ ನಡುವಿನ ಪಂದ್ಯವನ್ನು ರದ್ದುಗೊಳಿಸಲಾಯಿತು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com