ಭಾರತ-ಪಾಕಿಸ್ತಾನ ಉದ್ವಿಗ್ನತೆ; ಭಾರತ ತೊರೆಯುತ್ತಿರುವ ವಿದೇಶಿ ಐಪಿಎಲ್ ಆಟಗಾರರಿಗೆ BCCI ಖಡಕ್ ಸಂದೇಶ
ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಗುರುವಾರ ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದ ಪಂಜಾಬ್ ಕಿಂಗ್ಸ್ ಮತ್ತು ದೆಹಲಿ ಕ್ಯಾಪಿಟಲ್ಸ್ ನಡುವಿನ ಪಂದ್ಯವನ್ನು ಭದ್ರತಾ ಕಾರಣಗಳಿಂದಾಗಿ ಅರ್ಧಕ್ಕೆ ರದ್ದುಗೊಳಿಸಲಾಯಿತು. ಅದರ ಮರುದಿನ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಐಪಿಎಲ್ 2025ನ್ನು ಒಂದು ವಾರಕ್ಕೆ ಸ್ಥಗಿತಗೊಳಿಸಲಾಗಿದ್ದು, ಪುನರಾರಂಭದ ಬಗ್ಗೆ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ.
ಧರ್ಮಶಾಲಾದಿಂದ 200 ಕಿಮೀ ದೂರದಲ್ಲಿರುವ ಜಮ್ಮುವಿನಲ್ಲಿ ಪಾಕಿಸ್ತಾನ ಕ್ಷಿಪಣಿ ದಾಳಿ ನಡೆಸಿದ ನಂತರ ಪಂದ್ಯವನ್ನು ಅರ್ಧಕ್ಕೆ ಮೊಟಕುಗೊಳಿಸಲಾಯಿತು. ಇದರ ಪರಿಣಾಮವಾಗಿ, ಪಂದ್ಯದ ಸ್ಥಳದಲ್ಲಿ ಫ್ಲಡ್ಲೈಟ್ಗಳನ್ನು ಆಫ್ ಮಾಡಲಾಯಿತು ಮತ್ತು ನೆರೆದಿದ್ದವರನ್ನು ಸ್ಥಳಾಂತರಿಸಲಾಯಿತು. ಪ್ರಸಾರ ಸಿಬ್ಬಂದಿ ಸೇರಿದಂತೆ ಪಿಬಿಕೆಎಸ್ ಮತ್ತು ಡಿಸಿ ಆಟಗಾರರನ್ನು ಧರ್ಮಶಾಲಾದಿಂದ ಹೊರಗೆ ಸ್ಥಳಾಂತರಿಸಲು ಬಿಸಿಸಿಐ ವಿಶೇಷ ವ್ಯವಸ್ಥೆಗಳನ್ನು ಮಾಡಬೇಕಾಯಿತು.
ಹಲವಾರು ವರದಿಗಳ ಪ್ರಕಾರ, ಸದ್ಯ ನಡೆಯುತ್ತಿರುವ ಪರಿಸ್ಥಿತಿಯನ್ನು ವಿಶ್ಲೇಷಿಸಿದ ನಂತರವೇ ಐಪಿಎಲ್ ಆರಂಭದ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎನ್ನಲಾಗಿದೆ.
ಇತ್ತ ಎಲ್ಲ 10 ಫ್ರಾಂಚೈಸಿಗಳ ವಿದೇಶಿ ಆಟಗಾರರು ತಮ್ಮ ತಮ್ಮ ತವರು ರಾಷ್ಟ್ರಕ್ಕೆ ಮರಳುತ್ತಿದ್ದಾರೆ ಎಂದು ವರದಿಯಾಗಿದ್ದು, ಇದು ಪಂದ್ಯಾವಳಿಗೆ ದೊಡ್ಡ ಹೊಡೆತ ನೀಡಿದೆ ಎಂದು ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ. ಈಮಧ್ಯೆ, ಬಿಸಿಸಿಐ ಎಲ್ಲ 10 ಐಪಿಎಲ್ ಫ್ರಾಂಚೈಸಿಗಳಿಗೆ ತಮ್ಮ ಆಟಗಾರರು ಮತ್ತು ಸಹಾಯಕ ಸಿಬ್ಬಂದಿಗೆ ಒಂದು ವಾರದೊಳಗೆ ಪುನರಾರಂಭಕ್ಕೆ ಸಿದ್ಧರಾಗಿರುವಂತೆ ತಿಳಿಸಲು ಸೂಚಿಸಿದೆ ಎಂದು ಅದು ಹೇಳಿದೆ.
ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ 2021 ರಲ್ಲಿಯೂ ಐಪಿಎಲ್ ಅನ್ನು ಮುಂದೂಡಲಾಗಿತ್ತು. ಅದಾದ ಸುಮಾರು ನಾಲ್ಕು ತಿಂಗಳ ನಂತರ ಯುನೈಟೆಡ್ ಅರಬ್ ಎಮಿರೇಟ್ಸ್ನಲ್ಲಿ ಆ ಆವೃತ್ತಿಯನ್ನು ಪುನರಾರಂಭಿಸಲಾಗಿತ್ತು.
ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆ ಹೆಚ್ಚಾದ ಹಿನ್ನೆಲೆಯಲ್ಲಿ ಐಪಿಎಲ್ 2025ನ್ನು ಮಾತ್ರ ಸ್ಥಗಿತಗೊಳಿಸಿಲ್ಲ. ನೆರೆಯ ದೇಶದ ಪಾಕಿಸ್ತಾನ ಸೂಪರ್ ಲೀಗ್ 2025 ಅನ್ನು ಸಹ ಮುಂದೂಡಲಾಗಿದೆ. ಆರಂಭದಲ್ಲಿ ಯುಎಇಗೆ ಸ್ಥಳಾಂತರಿಸಲಾಗಿದೆ ಎಂದು ತಿಳಿಸಿದ್ದರೂ, ಯುಎಇ ಇದಕ್ಕೆ ನಿರಾಕರಿಸಿದೆ ಎನ್ನಲಾಗಿದೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ