
ನವದೆಹಲಿ: ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ನಿವೃತ್ತಿಯ ನಂತರ ಭಯಪಡುವ ಅಗತ್ಯವಿಲ್ಲ. 'ಫ್ಯಾಬ್ ಫೋರ್' (ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್, ವಿವಿಎಸ್ ಲಕ್ಷ್ಮಣ್ ಮತ್ತು ಸೌರವ್ ಗಂಗೂಲಿ) ಟೆಸ್ಟ್ ಕ್ರಿಕೆಟ್ನಿಂದ ನಿವೃತ್ತರಾದ ನಂತರ ಭಾರತೀಯ ಕ್ರಿಕೆಟ್ ಹೇಗೆ ಯಶಸ್ವಿಯಾಗಿ ಹೊಂದಿಕೊಂಡಿತು ಮತ್ತು ಮುಂದುವರೆದಿದೆ ಎಂಬುದನ್ನು ನೋಡಬಹುದು ಎಂದು ಮಾಜಿ ಕ್ರಿಕೆಟಿಗ ಸಂಜಯ್ ಮಂಜ್ರೇಕರ್ ಹೇಳಿದ್ದಾರೆ.
ಒಂದು ವಾರದ ಅಂತರದಲ್ಲಿ ಟೆಸ್ಟ್ ಕ್ರಿಕೆಟ್ಗೆ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ವಿದಾಯ ಹೇಳಿದ್ದು, ಭಾರತದ ರೆಡ್ ಬಾಲ್ ಭವಿಷ್ಯದ ಬಗ್ಗೆ ಕಳವಳ ಮೂಡಿಸಿದೆ.
ಭಾರತೀಯ ಕ್ರಿಕೆಟ್ನಲ್ಲಿ ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್, ವಿವಿಎಸ್ ಲಕ್ಷ್ಮಣ್ ಮತ್ತು ಸೌರವ್ ಗಂಗೂಲಿ ಅವರನ್ನೊಳಗೊಂಡ 'ಫ್ಯಾಬ್ ಫೋರ್' ತಂಡ ನಿರ್ಗಮಿಸಿದ ನಂತರವೂ ಭಾರತೀಯ ಕ್ರಿಕೆಟ್ ಮತ್ತೆ ಪುಟಿದೆದ್ದಿದೆ ಎಂದು ಮಂಜ್ರೇಕರ್ ಹೋಲಿಸಿದ್ದಾರೆ.
'ಕೆಲವು ಅಭಿಮಾನಿಗಳು ಚಿಂತಿತರಾಗುತ್ತಾರೆಂದು ನನಗೆ ತಿಳಿದಿದೆ. ಈ ನಾಲ್ವರು ಒಂದೇ ಬಾರಿಗೆ ತಂಡವನ್ನು ತೊರೆದಾಗ ಭಯಭೀತರಾಗಿದ್ದರು. ಆದರೆ, ಏನಾಯಿತೆಂದು ಊಹಿಸಬಹುದೇ? ಒಂದೆರಡು ವರ್ಷಗಳ ನಂತರ, ಭಾರತ ವಿಶ್ವದ ನಂಬರ್ ಒನ್ ಟೆಸ್ಟ್ ತಂಡವಾಗಿತ್ತು' ಎಂದು ಮಂಜ್ರೇಕರ್ ಅವರು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ ವಿಡಿಯೋದಲ್ಲಿ ತಿಳಿಸಿದ್ದಾರೆ.
ಆ ಹಂತದ ನಂತರ ಭಾರತ ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲಿ ಅಗ್ರಸ್ಥಾನಕ್ಕೆ ಏರಿತ್ತು.
'ಆದ್ದರಿಂದ, ಭಾರತದಲ್ಲಿ ಕ್ರೀಡೆ ಜನಪ್ರಿಯವಾಗಿರುವವರೆಗೆ ಮತ್ತು ಭಾರತಕ್ಕಾಗಿ ಆಡಲು ಹತಾಶರಾಗಿರುವ ಸಾಕಷ್ಟು ಯುವ ಆಟಗಾರರು, ಯುವಕರು ಇರುವವರೆಗೆ ಯಾವುದೇ ಸಮಸ್ಯೆ ಆಗುವುದಿಲ್ಲ ಎಂದು ನಾನು ಬಲವಾಗಿ ನಂಬುತ್ತೇನೆ. ಭಾರತದಲ್ಲಿ ಸಾವಿರಾರು ಜನರಿದ್ದಾರೆ. ಆದರೆ, ಗುಣಮಟ್ಟದ ಪ್ರತಿಭೆಯಾಗಿರಬೇಕು' ಎಂದು ಮಂಜ್ರೇಕರ್ ಹೇಳಿದರು.
'ಇದು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ಆದರೆ, ನಾವು ಭಯಪಡಬಾರದು. ಫ್ಯಾಬ್ ಫೋರ್ ನಿವೃತ್ತಿಯ ನಂತರ ಏನಾಯಿತು ಎಂಬುದನ್ನು ನೆನಪಿಡಿ, ಭಾರತೀಯ ಬೌಲಿಂಗ್ ಗುಣಮಟ್ಟ ಸುಧಾರಿಸಿತು. ಈಗಲೂ ಅದೇ ಆಗಬಹುದು. ನೀವು ಹೊಸ ತಾರೆಗಳು ಮತ್ತು ಹೊಸ ಬೌಲರ್ಗಳನ್ನು ಕಂಡುಕೊಳ್ಳುವಿರಿ ಮತ್ತು ಭಾರತವು ವಿಶ್ವದ ಅಗ್ರ ತಂಡಗಳಲ್ಲಿ ಒಂದಾಗಿ ಮುಂದುವರಿಯುತ್ತದೆ' ಎಂದಿದ್ದಾರೆ.
ಇದಕ್ಕೂ ಮುನ್ನ ಅನುಭವಿ ಆಫ್ ಸ್ಪಿನ್ನರ್ ಆರ್ ಅಶ್ವಿನ್ ಕೂಡ ಕಳೆದ ವರ್ಷ ಈ ಮಾದರಿಯಿಂದ ನಿವೃತ್ತರಾದ ಕಾರಣ, ಮುಂದಿನ ತಿಂಗಳು ಇಂಗ್ಲೆಂಡ್ನಲ್ಲಿ ಪ್ರಾರಂಭವಾಗುವ ಐದು ಪಂದ್ಯಗಳ ಟೆಸ್ಟ್ ಸರಣಿಗೆ ಭಾರತವು ತನ್ನ ಮೂವರು ಅತ್ಯಂತ ಅನುಭವಿ ಆಟಗಾರರಿಲ್ಲದೆ ಇರುತ್ತದೆ.
'ನಿಮಗೆ ಸ್ವಲ್ಪ ಸಮಯ ಬೇಕು. ಏಕೆಂದರೆ ವಿದೇಶಿ ಪರಿಸ್ಥಿತಿಗಳಲ್ಲಿ, ಬ್ಯಾಟಿಂಗ್ ಬಹಳ ಮುಖ್ಯ ಮತ್ತು ನಮ್ಮ ಸದ್ಯದ ದುರ್ಬಲತೆ ಇರುವುದು ಅಲ್ಲಿಯೇ. ಆದರೆ, ಈಗಿನ ಭಾರತೀಯ ತಂಡವನ್ನು ನೋಡಲು ಇನ್ನೊಂದು ಮಾರ್ಗವಿದೆ. ರೋಹಿತ್ ಮತ್ತು ವಿರಾಟ್ ಕೊಹ್ಲಿ ಭಾರತೀಯ ತಂಡದ ಭಾಗವಾಗಿದ್ದರು. ಭಾರತವು ನ್ಯೂಜಿಲೆಂಡ್ ವಿರುದ್ಧ ತವರಿನಲ್ಲಿ 3-0 ಅಂತರದಲ್ಲಿ ಸೋತಿತು ಮತ್ತು ಆಸ್ಟ್ರೇಲಿಯಾದಲ್ಲಿಯೂ ಕಳಪೆಯಾಗಿ, ಕೆಟ್ಟದಾಗಿ ಸೋತಿತು. ಹೀಗಾಗಿ, ಈಗ ನಾವು ಕಳೆದುಕೊಳ್ಳಲು ಏನೂ ಇಲ್ಲ. ಹೊಸ ಭಾರತಕ್ಕೆ ಶುಭ ಹಾರೈಸುತ್ತೇನೆ' ಎಂದು ಮಂಜ್ರೇಕರ್ ಹೇಳಿದರು.
Advertisement