
ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ತಂಡವನ್ನು ಕಳೆದ ಆವೃತ್ತಿಯಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪ್ರಶಸ್ತಿಗೆ ಮುನ್ನಡೆಸಿದ ಶ್ರೇಯಸ್ ಅಯ್ಯರ್ ಅವರಿಗೆ ಸಾಕಷ್ಟು ಮನ್ನಣೆ ಸಿಗಲಿಲ್ಲ ಎಂದು ಭಾರತದ ದಂತಕಥೆ ಸುನೀಲ್ ಗವಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ. ಕೆಕೆಆರ್ ತಂಡವನ್ನು ಮೂರನೇ ಐಪಿಎಲ್ ಪ್ರಶಸ್ತಿಗೆ ಮುನ್ನಡೆಸಿದರೂ, ಐಪಿಎಲ್ 2025ರ ಮೆಗಾ ಹರಾಜಿಗೂ ಮುನ್ನ ಶ್ರೇಯಸ್ ಅವರನ್ನು ಕೆಕೆಆರ್ ಕೈಬಿಟ್ಟಿತು. ಬಳಿಕ ಅವರನ್ನು ಪಂಜಾಬ್ ಕಿಂಗ್ಸ್ (ಪಿಬಿಕೆಎಸ್) ತಂಡ ಖರೀದಿಸಿತು.
ಕೆಕೆಆರ್ನ ಯಶಸ್ಸಿಗೆ ಹೆಚ್ಚಾಗಿ ಮೆಂಟರ್ ಆಗಿದ್ದ ಗೌತಮ್ ಗಂಭೀರ್ ಕಾರಣ ಎಂದು ಹೇಳಲಾಗುತ್ತದೆ. ಆದರೆ, ಡಗೌಟ್ನಲ್ಲಿ ಕುಳಿತಿರುವ ವ್ಯಕ್ತಿಗೆ ಹೆಚ್ಚಿನ ಕ್ರೆಡಿಟ್ ನೀಡುವ ಬದಲು ತಂಡದ ನಾಯಕನಿಗೆ ಸಲ್ಲಬೇಕು ಎಂದು ಸುನೀಲ್ ಗವಾಸ್ಕರ್ ತಿಳಿಸಿದ್ದಾರೆ. ತಮ್ಮ ನಾಯಕತ್ವದ ಹೊರತಾಗಿ, ಶ್ರೇಯಸ್ ಅಯ್ಯರ್ 14 ಇನಿಂಗ್ಸ್ಗಳಿಂದ 39 ಸರಾಸರಿಯಲ್ಲಿ ಎರಡು ಅರ್ಧಶತಕಗಳೊಂದಿಗೆ 351 ರನ್ ಗಳಿಸಿದ್ದಾರೆ.
'ಕಳೆದ ಆವೃತ್ತಿಯ ಐಪಿಎಲ್ ಪ್ರಶಸ್ತಿ ಗೆದ್ದ ಕ್ರೆಡಿಟ್ ಶ್ರೇಯಸ್ ಅಯ್ಯರ್ ಅವರಿಗೆ ಸಿಗಲಿಲ್ಲ. ಎಲ್ಲ ಪ್ರಶಂಸೆಗಳನ್ನು ಬೇರೆಯವರಿಗೆ ನೀಡಲಾಯಿತು. ಪಂದ್ಯದ ಮಧ್ಯದಲ್ಲಿ ಏನು ನಡೆಯುತ್ತಿದೆ ಎಂಬುದರಲ್ಲಿ ನಾಯಕ ಪ್ರಮುಖ ಪಾತ್ರ ವಹಿಸುತ್ತಾನೆ. ಡಗೌಟ್ನಲ್ಲಿ ಕುಳಿತಿರುವ ವ್ಯಕ್ತಿಯಿಂದಲ್ಲ' ಎಂದು ಗವಾಸ್ಕರ್ ಸ್ಟಾರ್ ಸ್ಪೋರ್ಟ್ಸ್ನಲ್ಲಿ ಹೇಳಿದರು.
ಈ ವರ್ಷ, ಶ್ರೇಯಸ್ ಅಯ್ಯರ್ ನಾಯಕತ್ವದಲ್ಲಿ ಪಿಬಿಕೆಎಸ್ ಪ್ಲೇಆಫ್ಗೆ ಅರ್ಹತೆ ಪಡೆದಿದೆ. ತಂಡವು ಕೊನೆಯ ಬಾರಿಗೆ 2014 ರಲ್ಲಿ ಅಗ್ರ ನಾಲ್ಕರಲ್ಲಿ ಸ್ಥಾನ ಪಡೆದಿತ್ತು. ಫೈನಲ್ನಲ್ಲಿ ಕೆಕೆಆರ್ ವಿರುದ್ಧ ಸೋಲು ಕಂಡಿತ್ತು.
ಈ ಆವೃತ್ತಿಯಲ್ಲಿ ಪಂಜಾಬ್ ತಂಡದ ಯಶಸ್ಸಿಗೆ ಪಿಬಿಕೆಎಸ್ ಮುಖ್ಯ ಕೋಚ್ ರಿಕಿ ಪಾಂಟಿಂಗ್ ಅವರಿಗೆ ಕ್ರೆಡಿಟ್ ನೀಡುವ ಬದಲಿಗೆ ಶ್ರೇಯಸ್ ಅವರನ್ನು ಪ್ರಶಂಸೆ ವ್ಯಕ್ತಪಡಿಸುತ್ತಿರುವುದಕ್ಕೆ ಗವಾಸ್ಕರ್, 'ನೋಡಿ, ಈ ವರ್ಷ ಅವರಿಗೆ ನ್ಯಾಯಯುತ ಕ್ರೆಡಿಟ್ ಸಿಗುತ್ತಿದೆ. ಯಾರೂ ರಿಕಿ ಪಾಂಟಿಂಗ್ಗೆ ಎಲ್ಲ ಕ್ರೆಡಿಟ್ ನೀಡುತ್ತಿಲ್ಲ' ಎಂದರು.
ಕಳೆದ ವರ್ಷದ ಮೆಗಾ ಹರಾಜಿನಲ್ಲಿ ಶ್ರೇಯಸ್ ಅವರನ್ನು ಪಿಬಿಕೆಎಸ್ 26.75 ಕೋಟಿ ರೂ.ಗಳಿಗೆ ಖರೀದಿಸಿತು. ಇಲ್ಲಿಯವರೆಗೆ, ಅಯ್ಯರ್ ಅವರನ್ನು ಖರೀದಿಸಲು ದುಬಾರಿ ಮೊತ್ತ ತೆತ್ತ ಪಂಜಾಬ್ ತಂಡದ ಕ್ರಮಕ್ಕೆ ತಕ್ಕ ಫಲ ದೊರಕಿದೆ. ಬಲಗೈ ಬ್ಯಾಟ್ಸ್ಮನ್ 11 ಪಂದ್ಯಗಳಲ್ಲಿ 50.63 ಸರಾಸರಿಯಲ್ಲಿ 405 ರನ್ ಗಳಿಸಿದ್ದಾರೆ. ಇದರಲ್ಲಿ ನಾಲ್ಕು ಅರ್ಧಶತಕಗಳು ಸೇರಿವೆ.
ಅಯ್ಯರ್ ಮತ್ತು ಕೋಚ್ ಪಾಂಟಿಂಗ್ ಈ ಹಿಂದೆ ಡೆಲ್ಲಿ ಕ್ಯಾಪಿಟಲ್ಸ್ನಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು. ಅಲ್ಲಿ ಅವರು 2019ರ ಆವೃತ್ತಿಯಲ್ಲಿ ಪ್ಲೇಆಫ್ಗೆ ಪ್ರವೇಶಿಸುವಲ್ಲಿ ಯಶಸ್ವಿಯಾದರು. 2020ರ ಆವೃತ್ತಿಯಲ್ಲಿ ರನ್ನರ್-ಅಪ್ ಆದರು. ಈಗ ಪಿಬಿಕೆಎಸ್ನಲ್ಲಿ ಮತ್ತೆ ಒಂದಾಗಿರುವ ಅಯ್ಯರ್-ಪಾಂಟಿಂಗ್ ತಂಡವನ್ನು ಯಶಸ್ಸಿನತ್ತ ಕೊಂಡೊಯ್ಯುತ್ತಿದ್ದಾರೆ.
Advertisement