
ಲಖನೌ: ಐಪಿಎಲ್ ಟೂರ್ನಿಯು ನಿರ್ಣಾಯಕ ಘಟ್ಟ ತಲುಪಿರುವಂತೆಯೇ ಇತ್ತ ನಿನ್ನೆ ನಡೆದ LSG vs SRH ನಡುವಿನ ಪಂದ್ಯದಲ್ಲಿ ಉಭಯ ತಂಡದ ಆಟಗಾರರ ನಡುವೆ ಮೈದಾನದಲ್ಲೇ ಜಗಳವಾದ ಘಟನೆ ನಡೆದಿದೆ.
ಲಕ್ನೋನ ಏಕಾನ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ನ 61ನೇ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು 6 ವಿಕೆಟ್ ಗಳ ಅಂತರದಲ್ಲಿ ಮಣಿಸಿತು. ಮೊದಲು ಬ್ಯಾಟಿಂಗ್ ಮಾಡಿದ್ದ ಲಕ್ನೋ ತಂಡ ನಿಗಧಿತ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 205 ರನ್ ಕಲೆಹಾಕಿತು.
ಈ ಮೊತ್ತವನ್ನು ಬೆನ್ನು ಹತ್ತಿದ ಸನ್ ರೈಸರ್ಸ್ ಹೈದರಾಬಾದ್ ತಂಡ ಅಭಿಷೇಕ್ ಶರ್ಮಾ ಅರ್ಧಶತಕದ ನೆರವನಿಂದ 18.2 ಓವರ್ ನಲ್ಲೇ ಕೇವಲ 4 ವಿಕೆಟ್ ಕಳೆದುಕೊಂಡು 206 ರನ್ ಗಳಿಸಿ ಗುರಿ ಮುಟ್ಟಿತು.
ಆ ಮೂಲಕ ಸನ್ ರೈಸರ್ಸ್ ಹೈದರಾಬಾದ್ ಈ ಪಂದ್ಯವನ್ನು ಗೆದ್ದರೂ ಹಾಲಿ ಟೂರ್ನಿಯ ಪ್ಲೇ ಆಫ್ ರೇಸ್ ನಿಂದ ಹೊರ ಬಿದ್ದಿತು. ತಾನು ಮಾತ್ರವಲ್ಲದೇ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನೂ ಕೂಡ ರೇಸ್ ನಿಂದ ಹೊರದಬ್ಬಿತು.
ಮೈದಾನದಲ್ಲೇ Abhishek Sharma-Digvesh Rathi ಜಗಳ
ಇನ್ನು ಈ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡದ ಅಭಿಷೇಕ್ ಶರ್ಮಾ ಮತ್ತು ಲಕ್ನೋ ಸೂಪರ್ ಜೈಂಟ್ಸ್ ತಂಡದ ದಿಗ್ವೇಶ್ ರಥಿ ನಡುವೆ ಮೈದಾನದಲ್ಲೇ ಜಗಳ ಏರ್ಪಟ್ಟಿತು. ಸನ್ ರೈಸರ್ಸ್ ಹೈದರಾಬಾದ್ ಬ್ಯಾಟಿಂಗ್ ವೇಳೆ ಈ ಘಟನೆಯಾಗಿದ್ದು, ಬೃಹತ್ ಮೊತ್ತವನ್ನು ಬೆನ್ನು ಹತ್ತಿದ್ದ ಸನ್ ರೈಸರ್ಸ್ ಹೈದರಾಬಾದ್ ಪರ ಆರಂಭಿಕರಾದ ಅಭಿಷೇಕ್ ಶರ್ಮಾ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿದ್ದರು.
ಆರಂಭಿಕ ಆಘಾತದ ಹೊರತಾಗಿಯೂ ಅಭಿಷೇಕ್ ಶರ್ಮಾ ಇಶಾನ್ ಕಿಶನ್ ಜೊತೆಗೂಡಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದರು. 2ನೇ ವಿಕೆಟ್ ಗೆ ಈ ಜೋಡಿ 82 ರನ್ ಗಳ ಅಮೋಘ ಜೊತೆಯಾಟ ಆಡಿತು. ಈ ಜೋಡಿಯನ್ನು ಬೇರ್ಪಡಿಸಲು ಲಕ್ನೋ ಸೂಪರ್ ಜೈಂಟ್ಸ್ ಬೌಲರ್ ಗಳು ಹೈರಾಣಾದರು. ಕೊನೆಗೂ ದಿಗ್ವೇಶ್ ರಥಿ ಅಭಿಷೇಕ್ ಶರ್ಮಾರನ್ನು ಔಟ್ ಮಾಡುವಲ್ಲಿ ಕೊನೆಗೂ ಯಶಸ್ವಿಯಾದರು. ಇದೇ ಸಂದರ್ಭದಲ್ಲೇ ಅಭಿಷೇಕ್ ಶರ್ಮಾ ಮತ್ತು ದಿಗ್ವೇಶ್ ರಥಿ ನಡುವೆ ವಾಕ್ಸಮರ ನಡೆಯಿತು.
ಇಷ್ಟಕ್ಕೂ ಆಗಿದ್ದೇನು?
ಅಭಿಷೇಕ್ ಶರ್ಮಾ ಔಟಾಗುತ್ತಿದ್ದಂತೆಯೇ ದಿಗ್ವೇಶ್ ರಥಿ ಆಕ್ರೋಶ ಭರಿತ ಸಂಭ್ರಮಾಚರಣೆ ಮಾಡಿದರು. ಎಂದಿನ ತಮ್ಮ ಸಿಗ್ನೇಚರ್ ಸಂಭ್ರಮಾಚರಣೆ ಮಾಡುತ್ತವೇ ಅಭಿಷೇಕ್ ಶರ್ಮಾರನ್ನು ದಿಟ್ಟಿಸಿ ನೀನು ಹೊರಗೆ ಹೋಗು ಎನ್ನುವಂತೆ ಹೇಳಿದರು. ಇದರಿಂದ ಕೋಪಗೊಂಡ ಅಭಿಷೇಕ್ ಶರ್ಮಾ ದಿಗ್ವೇಶ್ ಜೊತೆ ವಾಕ್ಸಮರಕ್ಕೆ ಇಳಿದರು. ಇಬ್ಬರ ನಡುವಣ ಮಾತಿನ ಚಕಮಕಿ ತಾರಕ್ಕೇರುತ್ತಿದ್ದಂತೆ ಅಂಪೈರ್ ಹಾಗೂ ಸಹ ಆಟಗಾರರು ಮಧ್ಯ ಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು.
ನಿನ್ ಜುಟ್ಟು ಹಿಡಿದು ಬಾರಿಸ್ತೀನಿ
ಅಭಿಶೇಕ್ ಶರ್ಮಾ ಮತ್ತು ದಿಗ್ವೇಶ್ ರಥಿ ಜಗಳ ಅಲ್ಲಿಗೇ ನಿಂತಿಲ್ಲ.. ಪಂದ್ಯ ಮುಕ್ತಾಯದ ಬಳಿಕವೂ ಮುಂದುವರೆಯಿತು. ಪಂದ್ಯ ಮುಕ್ತಾಯದ ಬಳಿಕ ಉಭಯ ತಂಡದ ಆಟಗಾರರು ಪರಸ್ಪರ ಹಸ್ತಲಾಘುವ ಮಾಡುವೆ ವೇಳೆ ಸರತಿ ಸಾಲಲ್ಲಿ ಬಂದ ದಿಗ್ವೇಶ್ ರಥಿಯನ್ನು ಕಂಡ ಅಭಿಷೇಕ್ ಶರ್ಮಾ ನಿನ್ ಜುಟ್ಟು ಹಿಡಿದು ಭಾರಿಸ್ತೀನಿ ಎಂದು ಹೇಳಿದರು. ಈ ವೇಳೆ ದಿಗ್ವೇಶ್ ರಥಿ ಸಮಜಾಯಿಷಿ ನೀಡಲು ಮುಂದಾದರೂ ಅಲ್ಲಿಯೇ ಪಕ್ಕದಲ್ಲಿದ್ದ ಲಕ್ನೋ ಸೂಪರ್ ಜೈಂಟ್ಸ್ ತಂಡದ ಸಹಾಯಕ ಕೋಚ್ ವಿಜಯ್ ದಹಿಯಾ ಇಬ್ಬರನ್ನು ಸಮಾಧಾನ ಮಾಡಿ ಮುಂದಕ್ಕೆ ಹೋಗುವಂತೆ ಹೇಳಿದರು. ಆಗ ಇಬ್ಬರೂ ಪರಸ್ಪರ ಹಸ್ತಲಾಘವ ಮಾಡಿ ಮುಂದಕ್ಕೆ ಹೋದರು.
ಅಭಿಷೇಕ್ ಶರ್ಮಾ ಹೇಳಿದ್ದೇನು?
ಇನ್ನು ಇದೇ ವಿಚಾರವಾಗಿ ಪಂದ್ಯ ಮುಕ್ತಾಯದ ಬಳಿಕ ಪ್ರಶಸ್ತಿ ಪ್ರದಾನ ವೇಳೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅಭಿಶೇಕ್ ಶರ್ಮಾ, 'ಪಂದ್ಯದ ನಂತರ ನಾನು ಅವನೊಂದಿಗೆ ಮಾತನಾಡಿದೆ. ಈಗ ಎಲ್ಲವೂ ಚೆನ್ನಾಗಿದೆ. ನಾವು ಮೊದಲು ಬ್ಯಾಟಿಂಗ್ ಮಾಡಿದ್ದರೆ, ನನಗೆ ಬೇರೆ ಯೋಜನೆಗಳಿತ್ತು. ಆದರೆ ಅಂತಹ ಮೊತ್ತವನ್ನು ಬೆನ್ನಟ್ಟಲು ನಮಗೆ ಸ್ಪಷ್ಟ ಯೋಜನೆ ಬೇಕಿತ್ತು. ತಂಡಕ್ಕಾಗಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ, 200 ಕ್ಕಿಂತ ಹೆಚ್ಚು ರನ್ಗಳನ್ನು ಬೆನ್ನಟ್ಟುತ್ತಿರುವ ಯಾವುದೇ ಆಟಗಾರನನ್ನು ನೀವು ಕೇಳಿದರೆ, ನೀವು ಪವರ್ಪ್ಲೇ ಗೆದ್ದರೆ ಗೆಲುವು ಸಾಧ್ಯವಾಗುತ್ತದೆ ಎಂದು ಹೇಳಿದರು.
Advertisement