
ಗುರುವಾರ ಮುಲ್ಲನ್ಪುರದಲ್ಲಿ ನಡೆದ ಕ್ವಾಲಿಫೈಯರ್ 1 ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ಇನ್ನೂ 60 ಎಸೆತಗಳು ಬಾಕಿ ಇರುವಾಗಲೇ ಗುರಿ ಮುಟ್ಟಿದ್ದು, ಪಂಜಾಬ್ ಕಿಂಗ್ಸ್ ತಂಡವು ಐಪಿಎಲ್ ಪ್ಲೇಆಫ್ ಇತಿಹಾಸದಲ್ಲಿ ಅತ್ಯಂತ ಕೆಟ್ಟ ಸೋಲನ್ನು ಕಂಡಿದೆ. ಐಪಿಎಲ್ 2025ನೇ ಆವೃತ್ತಿಯಲ್ಲಿ ಶ್ರೇಯಸ್ ಅಯ್ಯರ್ ನೇತೃತ್ವದಲ್ಲಿ, ಪಂಜಾಬ್ ತಂಡವು ಆರಂಭದಿಂದಲೂ ಉತ್ತಮ ಪ್ರದರ್ಶನ ನೀಡುತ್ತಾ ಸಾಗಿದೆ. ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಕೇವಲ 111 ರನ್ ಗಳಿಸಲು ಸಾಧ್ಯವಾದರೂ, ಅದನ್ನು ಡಿಫೆಂಡ್ ಮಾಡಿಕೊಂಡಿದ್ದರು. ಆದರೆ, ಆರ್ಸಿಬಿ ವಿರುದ್ಧ ಹೀನಾಯ ಸೋಲು ಕಂಡ ನಂತರ ಶ್ರೇಯಸ್ ಅಭಿಮಾನಿಗಳಿಗೆ ಒಂದು ಸಂದೇಶ ನೀಡಿದ್ದಾರೆ. ನಾವು ಹೋರಾಟದಲ್ಲಿ ಎಡವಿದ್ದೇವೆ, ಆದರೆ ಯುದ್ಧವನ್ನು ಸೋತಿಲ್ಲ ಎಂದಿದ್ದಾರೆ.
'ಇದು ಮರೆಯುವಂತಹ ದಿನವಲ್ಲ. ನಾವು ಹಿನ್ನಡೆ ಸಾಧಿಸಿದ್ದೇವೆ. ಮೊದಲ ಇನಿಂಗ್ಸ್ನಲ್ಲಿ ನಾವು ಬಹಳಷ್ಟು ವಿಕೆಟ್ಗಳನ್ನು ಕಳೆದುಕೊಂಡಿದ್ದೇವೆ. ನಮ್ಮ ತಪ್ಪುಗಳನ್ನು ತಿದ್ದಿಕೊಳ್ಳಲು ಬಹಳಷ್ಟು ಇದೆ. ಪ್ರಾಮಾಣಿಕವಾಗಿ ಹೇಳಬೇಕೆಂದರೆ, ನನ್ನ ನಿರ್ಧಾರಗಳನ್ನು ನಾನು ಅನುಮಾನಿಸುತ್ತಿಲ್ಲ. ಮೈದಾನದ ಹೊರಗೆ, ಯೋಜನೆಯ ವಿಷಯದಲ್ಲಿ ನಾವು ಏನೇ ಮಾಡಿದರೂ, ಅದು ಸರಿಯಾಗಿದೆ ಎಂದು ನಾನು ಭಾವಿಸುತ್ತೇನೆ. ಮೈದಾನದಲ್ಲಿ ಅದನ್ನು ಕಾರ್ಯಗತಗೊಳಿಸಲು ನಮಗೆ ಸಾಧ್ಯವಾಗಲಿಲ್ಲ. ಬೌಲರ್ಗಳನ್ನು ದೂಷಿಸಲು ಸಹ ಸಾಧ್ಯವಿಲ್ಲ. ಏಕೆಂದರೆ, ಅದು ಡಿಫೆಂಡ್ ಮಾಡಿಕೊಳ್ಳಲು ಕಡಿಮೆ ಮೊತ್ತವಾಗಿತ್ತು. ದಿನದ ಕೊನೆಯಲ್ಲಿ, ಮತ್ತು ನಾವು ಪರಿಸ್ಥಿತಿಗೆ ಅನುಗುಣವಾಗಿ ಬ್ಯಾಟಿಂಗ್ ಮಾಡಬೇಕು. ಸದ್ಯ ನಾವು ಹೋರಾಟ ನೀಡುವಲ್ಲಿ ಸೋತಿದ್ದೇವೆ, ಆದರೆ ಯುದ್ಧವನ್ನಲ್ಲ' ಎಂದು ಶ್ರೇಯಸ್ ಅಯ್ಯರ್ ಪಂದ್ಯದ ನಂತರ ಹೇಳಿದರು.
ಪಂಜಾಬ್ ಕಿಂಗ್ಸ್ ತಂಡವು ಜೂನ್ 1 ರಂದು ಅಹಮದಾಬಾದ್ನಲ್ಲಿ ನಡೆಯಲಿರುವ ಕ್ವಾಲಿಫೈಯರ್ 2 ರಲ್ಲಿ ಜಿಟಿ vs ಎಂಐ ಪಂದ್ಯದ ವಿಜೇತ ತಂಡವನ್ನು ಎದುರಿಸಲಿದೆ. ಈ ಆವೃತ್ತಿಯಲ್ಲಿ ಪಿಬಿಕೆಎಸ್ ಈಗಾಗಲೇ ಎರಡೂ ತಂಡಗಳನ್ನು ಅವರ ತವರು ನೆಲದಲ್ಲಿ ಸೋಲಿಸಿದೆ. ಐಪಿಎಲ್ 2025ರ ಅಭಿಯಾನವನ್ನು ಅಹಮದಾಬಾದ್ನಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ 11 ರನ್ಗಳ ಗೆಲುವಿನೊಂದಿಗೆ ಪ್ರಾರಂಭಿಸಿತು ಮತ್ತು ಮುಂಬೈನಲ್ಲಿ ಮುಂಬೈ ಇಂಡಿಯನ್ಸ್ ಅನ್ನು 7 ವಿಕೆಟ್ಗಳಿಂದ ಸೋಲಿಸಿತು.
ಎಲಿಮಿನೇಟರ್ ವಿಜೇತ ತಂಡವನ್ನು ಸೋಲಿಸಿ ಫೈನಲ್ ತಲುಪಲು ಪಿಬಿಕೆಎಸ್ ತವಕಿಸುತ್ತಿದೆ. ಪಂಜಾಬ್ ತಂಡವು 14 ಪಂದ್ಯಗಳಲ್ಲಿ ಒಂಬತ್ತು ಜಯಗಳೊಂದಿಗೆ ಪಾಯಿಂಟ್ಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಲೀಗ್ ಹಂತವನ್ನು ಮುಗಿಸಿತು. ಪಿಬಿಕೆಎಸ್ 2014ರ ನಂತರ ಮೊದಲ ಬಾರಿಗೆ ಎರಡನೇ ಬಾರಿಗೆ ಫೈನಲ್ ತಲುಪುವ ವಿಶ್ವಾಸದಲ್ಲಿದೆ.
Advertisement