

ಕರಾಚಿ: ಪಿಎಸ್ಎಲ್ನಲ್ಲಿ ಲಾಹೋರ್ ಖಲಂದರ್ಸ್ ವಿರುದ್ಧದ ಪಂದ್ಯದಲ್ಲಿ ಚೆಂಡು ವಿರೂಪಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನದ ಬ್ಯಾಟ್ಸ್ಮನ್ ಫಖರ್ ಜಮಾನ್ ಗೆ ನಿಷೇಧ ಹೇರಲಾಗಿದೆ.
ಪಾಕಿಸ್ತಾನ ಸೂಪರ್ ಲೀಗ್ನಲ್ಲಿ ಕರಾಚಿ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಚೆಂಡು ವಿರೂಪಗೊಳಿಸಿದ ಆರೋಪದ ಮೇಲೆ ಲಾಹೋರ್ ಖಲಂದರ್ಸ್ ಆಟಗಾರ ಫಖರ್ ಜಮಾನ್ಗೆ ಪಿಸಿಬಿ ಎರಡು ಪಂದ್ಯಗಳಿಗೆ ನಿಷೇಧ ಹೇರಿದೆ.
ಪಂದ್ಯದಲ್ಲಿ ಕರಾಚಿ ಗೆಲುವಿಗೆ ಕೊನೆ ಓವರ್ನಲ್ಲಿ 14 ರನ್ ಬೇಕಿದ್ದಾಗ ಲಾಹೋರ್ ನಾಯಕ ಶಾಹೀನ್ ಅಫ್ರಿದಿ, ಜಮಾನ್ ಮತ್ತು ಹ್ಯಾರಿಸ್ ರೌಫ್ ಚರ್ಚೆ ನಡೆಸುತ್ತಿದ್ದರು. ಆಗ ಜಮಾನ್ ಚೆಂಡನ್ನು ಕೈಯಿಂದ ಬಲವಾಗಿ ಒತ್ತುವುದು ಕಂಡುಬಂದಿತ್ತು.
ಕೂಡಲೇ ಅಂಪೈರ್ಗಳು ಪರಿಶೀಲನೆ ನಡೆಸಿ, ಚೆಂಡು ವಿರೂಪಗೊಳಿಸಿದ್ದು ಪತ್ತೆ ಹಚ್ಚಿದ್ದರು. ಹೀಗಾಗಿ ಕರಾಚಿಗೆ 5 ರನ್ ಪೆನಾಲ್ಟಿ ನೀಡಿ, ಚೆಂಡನ್ನು ಬದಲಾಯಿಸಿದ್ದರು. ಪಂದ್ಯದ ಬಳಿಕ ಜಮಾನ್ರನ್ನು ವಿಚಾರಣೆ ನಡೆಸಿದಾಗ ಅವರು ತಮ್ಮ ಮೇಲಿನ ಆರೋಪ ನಿರಾಕರಿಸಿದ್ದರು. ಮಂಗಳವಾರ ಮತ್ತೊಂದು ಸುತ್ತಿನ ವಿಚಾರಣೆಯಲ್ಲಿ ಅವರು ತಪ್ಪಿತಸ್ಥ ಎಂಬುದು ಸಾಬೀತಾಗಿದೆ. ಹೀಗಾಗಿ, 2 ಪಂದ್ಯಗಳ ನಿಷೇಧ ಹೇರಲಾಗಿದೆ. ಅದರಂತೆ ಏ.3 ಹಾಗೂ ಏ.9ರ ಪಂದ್ಯಗಳಿಗೆ ಜಮಾನ್ ಲಭ್ಯವಿರುವುದಿಲ್ಲ ಎನ್ನಲಾಗಿದೆ.
ಶಾಹೀನ್ ಅಫ್ರಿದಿಗೆ 10 ಲಕ್ಷ ರೂ ದಂಡ
ಇದೇ ವೇಳೆ, ಭದ್ರತಾ ನಿಯಮ ಉಲ್ಲಂಘಿಸಿದ್ದಕ್ಕಾಗಿ ತಂಡದ ನಾಯಕ ಶಾಹೀನ್ ಅಫ್ರಿದಿಗೆ 10 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ. ಭದ್ರತಾ ನಿಯಮ ಉಲ್ಲಂಘಿಸಿ, ಸಿಕಂದರ್ ರಝಾ ಅವರ ನಾಲ್ವರು ಸಂಬಂಧಿಕರನ್ನು ಹೋಟೆಲ್ ಕೋಣೆಗೆ ಕರೆಸಿಕೊಂಡಿದ್ದಕ್ಕೆ ಲಾಹೋರ್ ತಂಡದ ನಾಯಕ ಶಾಹೀನ್ ಅಫ್ರಿದಿಗೆ ಫ್ರಾಂಚೈಸಿಯು 10 ಲಕ್ಷ ರು. ದಂಡ ವಿಧಿಸಿದೆ. ಆದರೆ ಸಿಕಂದರ್ ಮೇಲೆ ಯಾವುದೆ ದಂಡ ಹೇರಲಾಗಿಲ್ಲ.
ಪಿಸಿಬಿ ಮಾಹಿತಿ
ಈ ಕುರಿತು ಮಾಹಿತಿ ನೀಡಿರುವ ಪಿಸಿಬಿ ಮೂಲಗಳು, 'ಕರಾಚಿ ಕಿಂಗ್ಸ್ ಆಡಳಿತ ಮಂಡಳಿಯು ನಾಲ್ಕನೇ ಅಂಪೈರ್ ಮತ್ತು ನಂತರ ಮ್ಯಾಚ್ ರೆಫರಿಯ ಗಮನಕ್ಕೆ ತಂದಿದ್ದು, ಫಖರ್ ಜಮಾನ್ ಚೆಂಡಿಗೆ ಏನಾದರೂ ಮಾಡುತ್ತಿದ್ದಾರೆಂದು ಅವರು ಶಂಕಿಸಿದ್ದಾರೆ. ಲಾಹೋರ್ ಖಲಂದರ್ಸ್ ತಂಡದ ಮೇಲೆ, ವಿಶೇಷವಾಗಿ ಜಮಾನ್ ಮೇಲೆ ನಿಗಾ ಇಡಲು ರೆಫರಿ ಮೈದಾನದಲ್ಲಿರುವ ಅಂಪೈರ್ಗಳನ್ನು ಕೇಳಿಕೊಂಡಿದ್ದಾರೆ ಎಂದು ಮೂಲಗಳು ಹೇಳಿವೆ.
"ಕೊನೆಯ ಓವರ್ಗೂ ಮುನ್ನ, ಅಂಪೈರ್ ಫೈಸಲ್ ಅಫ್ರಿದಿ ಈಗಾಗಲೇ ಹತ್ತಿರದಿಂದ ಗಮನಿಸುತ್ತಿದ್ದರು. ಅವರು ಚೆಂಡನ್ನು ಕೇಳಿದರು ಮತ್ತು ಅದನ್ನು ಪರಿಶೀಲಿಸಿದಾಗ ಅದು ವಿದೇಶಿ ವಸ್ತುವಿನಿಂದ ವಿರೂಪಗೊಂಡಿದೆ ಎಂದು ಅನುಮಾನಿಸಲಾಯಿತು. ಅದಕ್ಕಾಗಿಯೇ ಚೆಂಡನ್ನು ಬದಲಾಯಿಸುವ ಮತ್ತು ಪೆನಾಲ್ಟಿ ರನ್ ನೀಡುವ ನಿರ್ಧಾರವನ್ನು ನೀಡಲಾಯಿತು" ಎಂದು ಅವರು ಹೇಳಿದರು.
ತೀರ್ಪು ಎತ್ತಿಹಿಡಿದ ಪಿಸಿಬಿ
ನಿಷೇಧಕ್ಕೊಳಗಾದ ನಂತರ ಜಮಾನ್ ಪಿಎಸ್ಎಲ್ನ ತಾಂತ್ರಿಕ ಸಮಿತಿಗೆ ರೆಫರಿಯ ನಿರ್ಧಾರವನ್ನು ರದ್ದುಗೊಳಿಸುವಂತೆ ಮನವಿ ಮಾಡಿದ್ದರು. ಆದರೆ ಜಮಾನ್ ವಿರುದ್ಧ ಕ್ರಮ ಕೈಗೊಳ್ಳಲು ಅಂಪೈರ್ಗಳು ಮತ್ತು ಮ್ಯಾಚ್ ರೆಫರಿಗೆ ಸಾಕಷ್ಟು ಸಾಂದರ್ಭಿಕ ಪುರಾವೆಗಳು ಲಭ್ಯವಿದ್ದವು ಎಂಬ ಕಾರಣಕ್ಕೆ ಅವರು ಅವರ ನಿಷೇಧವನ್ನು ತಿರಸ್ಕರಿಸಿದರು.
ನಿಷೇಧದ ಕಾರಣದಿಂದಾಗಿ ಪಾಕಿಸ್ತಾನದ ಬ್ಯಾಟ್ಸ್ಮನ್ ಶುಕ್ರವಾರ ರಾತ್ರಿ ಮುಲ್ತಾನ್ ಸುಲ್ತಾನ್ಸ್ ವಿರುದ್ಧದ ಲಾಹೋರ್ ಪಂದ್ಯಕ್ಕೆ ಹೊರಗುಳಿಯಬೇಕಾಯಿತು. ಪಿಎಸ್ಎಲ್ ನೀತಿ ಸಂಹಿತೆಯ ಅಡಿಯಲ್ಲಿ ಮೊದಲ ಬಾರಿಗೆ ಲೆವೆಲ್ ತ್ರೀ ಅಪರಾಧಕ್ಕಾಗಿ ಆಟಗಾರನನ್ನು ಕನಿಷ್ಠ ಒಂದು ಪಂದ್ಯ ಅಥವಾ ಗರಿಷ್ಠ ಎರಡು ಪಂದ್ಯಗಳಿಗೆ ಅಮಾನತುಗೊಳಿಸಲಾಗುತ್ತದೆ.
ಚೆಂಡಿನ ಸ್ಥಿತಿಯನ್ನು ಬದಲಾಯಿಸಿದ್ದಕ್ಕಾಗಿ ಮ್ಯಾಚ್ ರೆಫರಿ ರೋಷನ್ ಮಹಾನಾಮ ಅವರು ವಿಧಿಸಿದ್ದ ಎರಡು ಪಂದ್ಯಗಳ ನಿಷೇಧವನ್ನು ಪಿಎಸ್ಎಲ್ ತಾಂತ್ರಿಕ ಸಮಿತಿಯು ಎತ್ತಿಹಿಡಿದಿತ್ತು.
"ಪ್ರೊಫೆಸರ್ ಜಾವೇದ್ ಮಲಿಕ್, ಡಾ. ಮುಮ್ರೈಜ್ ನಕ್ಷ್ಬಂದ್ ಮತ್ತು ಶ್ರೀ ಸೈಯದ್ ಅಲಿ ನಕಿ ಅವರನ್ನೊಳಗೊಂಡ ಪಿಎಸ್ಎಲ್ ತಾಂತ್ರಿಕ ಸಮಿತಿಯು ಇಂದು ಮೇಲ್ಮನವಿಯನ್ನು ವಿಚಾರಣೆ ನಡೆಸಿತು. ಹೊಸ ವಿಚಾರಣೆ ನಡೆಸಿ, ಎಲ್ಲಾ ಪುರಾವೆಗಳನ್ನು ಪರಿಶೀಲಿಸಿ, ಮತ್ತು ಸಂಬಂಧಿತ ವ್ಯಕ್ತಿಗಳಿಂದ ಸಲ್ಲಿಕೆಗಳನ್ನು ಆಲಿಸಿದ ನಂತರ, ಸಮಿತಿಯು ಮೇಲ್ಮನವಿಯನ್ನು ವಜಾಗೊಳಿಸಿದೆ ಮತ್ತು ಪಂದ್ಯದ ರೆಫರಿ ರೋಷನ್ ಮಹಾನಾಮ ಅವರು ವಿಧಿಸಿದ ಎರಡು ಪಂದ್ಯಗಳ ನಿಷೇಧವನ್ನು ಎತ್ತಿಹಿಡಿದಿದೆ" ಎಂದು ಪಿಸಿಬಿ ಹೇಳಿಕೆಯಲ್ಲಿ ತಿಳಿಸಿದೆ.
Advertisement