

ಬುಧವಾರ ನಡೆದ ಐಪಿಎಲ್ 2026 ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ (LSG) ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ಆರಾಮದಾಯಕ ಗೆಲುವು ಸಾಧಿಸಿದ್ದು, ನಾಲ್ಕು ವಿಕೆಟ್ಗಳನ್ನು ಕಬಳಿಸುವ ಮೂಲಕ ವೇಗದ ಬೌಲರ್ ರಸಿಕ್ ಸಲಾಂ ದಾರ್ ಎಲ್ಲರ ಗಮನ ಸೆಳೆದರು. ಐಪಿಎಲ್ 2025ರ ಹರಾಜಿನಲ್ಲಿ ಆರ್ಸಿಬಿ ಜಮ್ಮು ಮತ್ತು ಕಾಶ್ಮೀರದ ವೇಗಿಗಳನ್ನು ₹6 ಕೋಟಿಗೆ ಖರೀದಿಸಿತ್ತು. ಅಭಿನಂದನ್ ಸಿಂಗ್ ಉತ್ತಮ ಪ್ರದರ್ಶನ ನೀಡದ ಹಿನ್ನೆಲೆಯಲ್ಲಿ ಅವರನ್ನು ಕೂರಿಸಿ ಮೂರು ಪಂದ್ಯಗಳ ನಂತರ ಮುಂಬೈ ಇಂಡಿಯನ್ಸ್ ವಿರುದ್ಧ ರಸಿಕ್ ಸಲಾಂ ದಾರ್ ಅವರಿಗೆ ಅವಕಾಶ ನೀಡಲಾಯಿತು. ಇದೀಗ ಎಲ್ಎಸ್ಜಿ ವಿರುದ್ಧ ಅದ್ಭುತ ಪ್ರದರ್ಶನ ನೀಡುವ ಮೂಲಕ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ.
ಒತ್ತಡದ ಪರಿಸ್ಥಿತಿಯಲ್ಲೂ ವೇಗಿ ಅಗಾಧ ನಿಯಂತ್ರಣ ಸಾಧಿಸಿ ಐಡೆನ್ ಮಾರ್ಕ್ರಮ್ ಮತ್ತು ಆಯುಷ್ ಬದೋನಿ ವಿಕೆಟ್ ಕಬಳಿಸಿ ಎಲ್ಎಸ್ಜಿ ತಂಡವನ್ನು ಆರಂಭದಲ್ಲಿಯೇ ಸಂಕಷ್ಟಕ್ಕೆ ಸಿಲುಕಿಸಿದರು. ಕಳೆದ ಪಂದ್ಯದಲ್ಲಿ ಎಲ್ಎಸ್ಜಿ ಪಾಲಿನ ಹೀರೋ ಮುಕುಲ್ ಚೌಧರಿ ಅಪಾಯಕಾರಿ ಎಂದು ತೋರುತ್ತಿದ್ದಾಗ ಅವರು ಮತ್ತೆ ಅವರ ವಿಕೆಟ್ ಕಿತ್ತರು ಮತ್ತು ಆವೇಶ್ ಖಾನ್ ಅವರನ್ನು ಕ್ಲೀನ್ ಬೌಲ್ಡ್ ಮಾಡಿದರು.
ಜಮ್ಮು ಮತ್ತು ಕಾಶ್ಮೀರದ ಕುಲ್ಗಾಂ ಜಿಲ್ಲೆಯ ಅಶ್ಮುಜಿಯಿಂದ ಬಂದ ಕ್ರಿಕೆಟಿಗನಿಗೆ ಇದು ಒಂದು ದೊಡ್ಡ ಕ್ಷಣವಾಗಿತ್ತು. ಅವರ ಪ್ರಯಾಣವು ಸರಳವಾಗಿರಲಿಲ್ಲ. ರಸಿಕ್ ಅವರು ದಕ್ಷಿಣ ಕಾಶ್ಮೀರದ ಶಾಲಾ ಶಿಕ್ಷಕರ ಮನೆಯಲ್ಲಿ ಬೆಳೆದರು.
'ರಸೀಕ್ ಕಷ್ಟದ ಸಮಯಗಳನ್ನು ಕಂಡಿದ್ದಾರೆ. ಆದರೆ, ನಾನು ಏನು ಮಾಡಲು ಸಾಧ್ಯವಾಗಲಿಲ್ಲ. ನಾನು ಅವರಿಗೆ ಯಾವುದೇ ಕಾರಣವನ್ನು ನೀಡಿಲ್ಲ ಮತ್ತು ನನ್ನ ಮಕ್ಕಳು ಸಹ ನನ್ನನ್ನು ಹೆಚ್ಚು ಕೇಳಿಲ್ಲ. ಹಲವು ಜನರು ಸಹಾಯ ಮಾಡಿದ್ದಾರೆ. ಈ ಹಿಂದೆ ಆಯ್ಕೆ ಟ್ರಯಲ್ಸ್ನಲ್ಲಿ ಅವರನ್ನು ತಿರಸ್ಕರಿಸಲಾಗಿತ್ತು. ಆದರೆ, ಒಂದು ದಿನ ಅವರು ಖಂಡಿತವಾಗಿಯೂ ಆಡುತ್ತಾರೆ ಎಂಬ ನಂಬಿಕೆ ನನಗಿತ್ತು' ಎಂದು ಅವರ ತಂದೆ ಅಬ್ದುಲ್ ಸಲಾಮ್ ಹೇಳುತ್ತಾರೆ ದಿ ಇಂಡಿಯನ್ ಎಕ್ಸ್ಪ್ರೆಸ್ಗೆ ತಿಳಿಸಿದರು.
ಒಂದು ಹಂತದಲ್ಲಿ ರಸಿಕ್ ತನ್ನ ಕನಸನ್ನು ತ್ಯಜಿಸುವ ಬಗ್ಗೆಯೂ ಯೋಚಿಸಿದ್ದರು. ಆದರೆ, ಅವರ ಕುಟುಂಬವು ಜಮ್ಮು ಮತ್ತು ಕಾಶ್ಮೀರದ U-19 ಆಯ್ಕೆ ಟ್ರಯಲ್ಸ್ಗೆ ಹಾಜರಾಗಲು ಒತ್ತಾಯಿಸಿತು. ಅಲ್ಲಿ ಭಾರತದ ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ಅವರ ಪ್ರತಿಭೆಯನ್ನು ಗುರುತಿಸಿದರು. ಬಳಿಕ ಹಿರಿಯರ ತಂಡಕ್ಕೂ ಸೇರಿಸಲಾಯಿತು ಮತ್ತು ಅವರು ಎಲ್ಲ ಶಿಬಿರಗಳು ಮತ್ತು ಅಭ್ಯಾಸ ಪಂದ್ಯಗಳಿಗೆ ಹಾಜರಾದರು.
ಅವರನ್ನು 2019ರಲ್ಲಿ ಮುಂಬೈ ಇಂಡಿಯನ್ಸ್ ಆಯ್ಕೆ ಮಾಡಿತು ಮತ್ತು ಅವರು ಚಿಕ್ಕ ವಯಸ್ಸಿನಲ್ಲಿಯೇ ಐಪಿಎಲ್ಗೆ ಪದಾರ್ಪಣೆ ಮಾಡಿದರು. ಆದಾಗ್ಯೂ, ದೋಷಯುಕ್ತ ಜನನ ಪ್ರಮಾಣಪತ್ರವನ್ನು ಸಲ್ಲಿಸಿದ್ದಕ್ಕಾಗಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು ಅವರನ್ನು ಎರಡು ವರ್ಷಗಳ ಕಾಲ ನಿಷೇಧಿಸಿತು.
ಅವರು 2022ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ಗೆ ಸೇರಿದರು. ಆದರೆ, ಗಾಯಗಳು ಮತ್ತು ಕೆಟ್ಟ ಫಾರ್ಮ್ ಅವರು ಪಂದ್ಯಾವಳಿಯಲ್ಲಿ ಕೇವಲ ಎರಡು ಪಂದ್ಯಗಳನ್ನು ಆಡುವಂತೆ ಮಾಡಿತು. ಹೋರಾಟ ಮುಂದುವರೆಯಿತು. ಆದರೆ, ಆರ್ಸಿಬಿ ಅವರಲ್ಲಿ ಭರವಸೆಯನ್ನು ಇಟ್ಟಿತು ಮತ್ತು ಬುಧವಾರ ಅವರ ಪ್ರದರ್ಶನವು ಅವರ ನಂಬಿಕೆಯನ್ನು ದೃಢಪಡಿಸಿತು.
Advertisement