ಐಪಿಎಲ್ 2026ರಲ್ಲಿ ರಾಜಸ್ಥಾನ್ ರಾಯಲ್ಸ್ (RR) ವಿರುದ್ಧದ ಪಂದ್ಯದಲ್ಲಿ ತಮ್ಮ ತಂಡ ಸೋತ ನಂತರವೂ ಲಕ್ನೋ ಸೂಪರ್ ಜೈಂಟ್ಸ್ (LSG) ತಂಡದ ಮಾಲೀಕ ಸಂಜೀವ್ ಗೋಯೆಂಕಾ ನಾಯಕ ರಿಷಭ್ ಪಂತ್ ಅವರೊಂದಿಗೆ ನಡೆದುಕೊಂಡ ರೀತಿ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಎಲ್ಎಸ್ಜಿ ತಂಡವು ಆರ್ಆರ್ ವಿರುದ್ಧ 40 ರನ್ಗಳಿಂದ ಸೋತಿದ್ದು, ಐಪಿಎಲ್ 2026ರಲ್ಲಿ ಸತತ ನಾಲ್ಕನೇ ಬಾರಿ ಸೋಲು ಕಂಡಿದೆ. ಫ್ರಾಂಚೈಸಿ ಸದ್ಯ ಅಂಕ ಪಟ್ಟಿಯಲ್ಲಿ ಒಂಬತ್ತನೇ ಸ್ಥಾನದಲ್ಲಿದೆ. ತಂಡ ಪ್ಲೇಆಫ್ ತಲುಪುವ ಸಾಧ್ಯತೆಗಳು ಕಡಿಮೆಯಾಗುತ್ತಿದೆ.
ಈ ಸೋಲಿನ ನಂತರ, ಸಂಜೀವ್ ಗೋಯೆಂಕಾ ಪಂತ್ ಅವರೊಂದಿಗೆ ದೀರ್ಘ ಸಂಭಾಷಣೆ ನಡೆಸುತ್ತಿರುವುದು ಕಂಡುಬಂತು ಮತ್ತು ಅವರು ಎಲ್ಎಸ್ಜಿ ನಾಯಕನನ್ನು ಅಪ್ಪಿಕೊಂಡರು. ತಂಡದ ಹೋರಾಟದ ನಡುವೆ ಈ ಕ್ಷಣ ಸಾಮಾಜಿಕ ಮಾಧ್ಯಮ ಬಳಕೆದಾರರ ಹೃದಯಗಳನ್ನು ಗೆದ್ದಿತು. ಬಿಕ್ಕಟ್ಟಿನ ಸಂದರ್ಭದಲ್ಲಿಯೂ ಸಂಜೀವ್ ಗೋಯೆಂಕಾ ತಂಡಕ್ಕೆ ನೀಡಿರುವ ಬೆಂಬಲದ ಕುರಿತು ವ್ಯಾಪಕ ಮೆಚ್ಚುಗೆ ವ್ಯಕ್ತವಾಯಿತು.
ಲಕ್ನೋದಲ್ಲಿ ಬುಧವಾರ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2026 ರಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ 40 ರನ್ಗಳ ಸೋಲನ್ನು ಅನುಭವಿಸಿದ ನಂತರ, ಬ್ಯಾಟಿಂಗ್ ಘಟಕವು ವಿಫಲವಾಗುತ್ತಿದೆ ಎಂದು ಪಂತ್ ಒಪ್ಪಿಕೊಂಡರು ಮತ್ತು ತಂಡದೊಳಗೆ ಪರಿಹಾರಗಳನ್ನು ಕಂಡುಕೊಳ್ಳುವುದು ಇಂದಿನ ಅಗತ್ಯವಾಗಿದೆ ಎಂದು ಹೇಳಿದರು.
ಮೊಹಮ್ಮದ್ ಶಮಿ, ಮೊಹ್ಸಿನ್ ಖಾನ್ ಮತ್ತು ಪ್ರಿನ್ಸ್ ಯಾದವ್ ಅವರ ತೀಕ್ಷ್ಣ ಸ್ಪೆಲ್ಗಳಿಂದ ಪಡೆದ ಪ್ರಯೋಜನವನ್ನು ಎಲ್ಎಸ್ಜಿ ವ್ಯರ್ಥ ಮಾಡಿತು. ಆರ್ಆರ್ ನೀಡಿದ 160 ರನ್ಗಳನ್ನು ಬೆನ್ನಟ್ಟಿದ ಎಲ್ಎಸ್ಜಿ 18 ಓವರ್ಗಳಲ್ಲಿ 119 ರನ್ಗಳಿಗೆ ಆಲೌಟ್ ಆಯಿತು. ಮಿಚೆಲ್ ಮಾರ್ಷ್ 55 ರನ್ ಗಳಿಸಿದರೂ, ಆತಿಥೇಯರು ತವರಿನಲ್ಲಿ ಮತ್ತೊಂದು ಸೋಲು ಅನುಭವಿಸುವಂತಾಯಿತು.
'ಇದನ್ನು ವಿವರಿಸುವುದು ಕಷ್ಟ. ನಮ್ಮ ಬ್ಯಾಟಿಂಗ್ ಖಂಡಿತವಾಗಿಯೂ ನಮ್ಮನ್ನು ನಿರಾಸೆಗೊಳಿಸುತ್ತಿದೆ. ಆದರೆ ಅದೇ ಸಮಯದಲ್ಲಿ, ನಾವು ಒಂದು ತಂಡವಾಗಿ, ಒಂದು ಗುಂಪಾಗಿ ನಿರಾಶೆಗೊಂಡಿದ್ದೇವೆ. ಈಗ ಮಾರ್ಗಗಳನ್ನು ಕಂಡುಕೊಳ್ಳಬೇಕಿದೆ. ನೀವು ಉತ್ತರಗಳನ್ನು ಹೊರಗೆ ಅಲ್ಲ, ಒಳಗೆ ಹುಡುಕಬೇಕು' ಎಂದು ಪಂದ್ಯ ಮುಗಿದ ನಂತರ ಪಂತ್ ಹೇಳಿದರು.
'ನನ್ನನ್ನೂ ಸೇರಿದಂತೆ ಖಂಡಿತವಾಗಿಯೂ ನಾವು ಬ್ಯಾಟಿಂಗ್ ಮಾಡುವಾಗ ಸ್ವಲ್ಪ ಸಮಯ ತೆಗೆದುಕೊಳ್ಳಬಹುದಿತ್ತು. ನಾವು ಅದನ್ನು ಸ್ವಲ್ಪ ಆಳವಾಗಿ ತೆಗೆದುಕೊಳ್ಳಬಹುದಿತ್ತು. ಏಕೆಂದರೆ, ಬೌಲರ್ಗಳು ಅದ್ಭುತ ಕೆಲಸ ಮಾಡಿದ್ದರು. ಬ್ಯಾಟಿಂಗ್ ಘಟಕವಾಗಿ ನಾವು ಉತ್ತಮ ಪ್ರದರ್ಶನ ನೀಡಿಲ್ಲ. ಬೌಲರ್ಗಳು ಮಾಡಿ ಕೆಲಸವನ್ನು ನಾವು ಮುಗಿಸಲು ಪ್ರಯತ್ನಿಸಬೇಕಿತ್ತು' ಎಂದು ಅವರು ಹೇಳಿದರು.
Advertisement