

ನವದೆಹಲಿ: ಐಪಿಎಲ್ ಟೂರ್ನಿಯ ಇಂದಿನ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ದಾಖಲೆ ಗರಿಷ್ಠ ಸ್ಕೋರ್ ಹೊರತಾಗಿಯೂ ಡೆಲ್ಲಿ ತಂಡ ಹೀನಾಯ ಸೋಲು ಕಂಡಿದ್ದು ಇದಕ್ಕೆ ತಂಡದ ಕಳಪೆ ಫೀಲ್ಡಿಂಗ್ ಕಾರಣ ಎಂದು ಡೆಲ್ಲಿ ತಂಡದ ನಾಯಕ ಅಕ್ಷರ್ ಪಟೇಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ಇಂದು ನಡೆದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ ನಿಗಧಿತ 20 ಓವರ್ ನಲ್ಲಿ ಕೇವಲ 2 ವಿಕೆಟ್ ಕಳೆದುಕೊಂಡು ಬರೊಬ್ಬರಿ 264 ರನ್ ಗಳನ್ನು ಕಲೆಹಾಕಿತು. ಡೆಲ್ಲಿ ಪರ ಕೆಎಲ್ ರಾಹುಲ್ ದಾಖಲೆಯ ಅಜೇಯ 152 ರನ್ ಕಲೆಹಾಕಿದರೆ, ಅವರಿಗೆ ಅತ್ಯುತ್ತಮ ಸಾಥ್ ನೀಡಿದ ನಿತೀಶ್ ರಾಣಾ 91 ರನ್ ಕಲೆಹಾಕಿ ತಂಡದ ಗರಿಷ್ಠ ಸ್ಕೋರ್ ಗೆ ಕಾರಣರಾದರು.
ಇತ್ತ ಈ ಮೊತ್ತವನ್ನು ಬೆನ್ನು ಹತ್ತಿದ ಪಂಜಾಬ್ ತಂಡ 18.5 ಓವರ್ ನಲ್ಲೇ 4 ವಿಕೆಟ್ ಕಳೆದುಕೊಂಡು 265 ಬಾರಿಸಿ ಇನ್ನೂ 1.1 ಓವರ್ ಬಾಕಿ ಇರುವಂತೆಯೇ 6 ವಿಕೆಟ್ ಅಂತರದಲ್ಲಿ ಜಯಭೇರಿ ಭಾರಿಸಿತು. ಪಂಜಾಬ್ ಪರ ಪ್ರಿಯಾಂಶ್ ಆರ್ಯ 43 ರನ್, ಪ್ರಭ್ ಸಿಮ್ರನ್ ಸಿಂಗ್ 76 ರನ್, ಶ್ರೇಯಸ್ ಅಯ್ಯರ್ ಅಜೇಯ 71, ನೇಹಲ್ ವಧೇರಾ 25 ರನ್ ಗಳಿಸಿ ಪಂಜಾಬ್ ತಂಡಕ್ಕೆ ದಾಖಲೆಯ ಜಯ ತಂದಿತ್ತರು.
ಕ್ಯಾಚ್ ಡ್ರಾಪ್, ಮ್ಯಾಚ್ ಡ್ರಾಪ್
ಅಂತೆಯೇ ಇಂದಿನ ಡೆಲ್ಲಿ ತಂಡದ ಸೋಲಿಗೆ ತಂಡದ ಆಟಗಾರರು ಬಿಟ್ಟ ಪ್ರಮುಖ ಕ್ಯಾಚ್ ಗಳು ಪಂದ್ಯದ ಫಲಿತಾಂಶದ ಮೇಲೆ ಗಂಭೀರ ಪರಿಣಾಮ ಬೀರಿತು. ಡೆಲ್ಲಿ ತಂಡ ಇಂದು ಕನಿಷ್ಠ ಎರಡು ಪ್ರಮುಖ ಕ್ಯಾಚ್ಗಳನ್ನು ಡ್ರಾಪ್ ಮಾಡಿದರೆ, ಪಂಜಾಬ್ ಕೂಡ ಒಂದು ಕ್ಯಾಚ್ ಡ್ರಾಪ್ ಮಾಡಿತು.
ಡೆಲ್ಲಿ ಬ್ಯಾಟಿಂಗ್ ವೇಳೆ ಪಂಜಾಬ್ ನ ಅರ್ಶ್ದೀಪ್ ಸಿಂಗ್ ಅವರ ಬೌಲಿಂಗ್ನಲ್ಲಿ 3ನೇ ಓವರ್ನಲ್ಲಿ ಡೀಪ್ ಸ್ಕ್ವೇರ್ ಲೆಗ್ನಲ್ಲಿ ಕೆ.ಎಲ್. ರಾಹುಲ್ ಅವರ ಸುಲಭ ಕ್ಯಾಚ್ ಅನ್ನು ಶಶಾಂಕ್ ಸಿಂಗ್ ಕೈಬಿಟ್ಟರು. ರಾಹುಲ್ ಆಗ ಕೇವಲ 12 ರನ್ ಗಳಿಸಿದ್ದರು. ಆದರೆ ಬಳಿಕ ತಮಗೆ ಸಿಕ್ಕ ಜೀವದಾನಲನ್ನು ಅತ್ಯುತ್ತಮವಾಗಿ ಬಳಸಿಕೊಂಡ ರಾಹುಲ್ ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿ ಅಜೇಯ 152 ರನ್ ಬಾರಿಸಿ ತಂಡದ ಬೃಹತ್ ಮೊತ್ತಕ್ಕೆ ಕಾರಣರಾದರು.
ಅಂತೆಯೇ ಡೆಲ್ಲಿ ತಂಡ ಕೂಡ 2 ಪ್ರಮುಖ ಕ್ಯಾಚ್ ಗಳನ್ನು ಬಿಟ್ಟಿತು. ಬೃಹತ್ ಮೊತ್ತದ ಚೇಸಿಂಗ್ ವೇಳೆ ಪಂಜಾಬ್ ನಾಯಕ ಶ್ರೇಯಸ್ ಅಯ್ಯರ್ ನೀಡಿದ ಎರಡು ಕ್ಯಾಚ್ಗಳನ್ನು ಸತತ ಓವರ್ಗಳಲ್ಲಿ ಡೆಲ್ಲಿ ತಂಡದ ಆಟಗಾರರು ಕೈಬಿಟ್ಟರು. ಮೊದಲನೆಯದು 15ನೇ ಓವರ್ನ ಕೊನೆಯ ಎಸೆತದಲ್ಲಿ (ಲಾಂಗ್-ಆಫ್) ಮತ್ತು ಎರಡನೆಯದು 16ನೇ ಓವರ್ನ ಎರಡನೇ ಎಸೆತದಲ್ಲಿ (ಲಾಂಗ್-ಆನ್). ಈ ಜೀವದಾನಗಳ ಲಾಭ ಪಡೆದ ಶ್ರೇಯಸ್ ಅಯ್ಯರ್ ಅಜೇಯ 71 ರನ್ ಗಳಿಸಿ, ಟಿ20 ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ಯಶಸ್ವಿ ರನ್ ಚೇಸ್ ಮಾಡಲು ಪಂಜಾಬ್ ಕಿಂಗ್ಸ್ಗೆ ನೆರವಾದರು.
ಇದಲ್ಲದೆ, ಮಾರ್ಕಸ್ ಸ್ಟೊಯಿನಿಸ್ ಮತ್ತು ನಿತೀಶ್ ರಾಣಾ ನಡುವೆ ಬೌಂಡರಿ ಲೈನ್ನಲ್ಲಿ ಒಂದು ವಿವಾದಾತ್ಮಕ ಕ್ಯಾಚ್ ನಡೆಯಿತು. ಸ್ಟೊಯಿನಿಸ್ ಕ್ಯಾಚ್ ಹಿಡಿದರೂ ಜಾರುವಾಗ ಬೌಂಡರಿ ಹಗ್ಗವನ್ನು ಟಚ್ ಮಾಡಿದ ಹಿನ್ನಲೆಯಲ್ಲಿ ಅದನ್ನು ಸಿಕ್ಸ್ ಎಂದು ಘೋಷಿಸಲಾಯಿತು.
ಮೈದಾನದಲ್ಲೇ ಅಕ್ಷರ್ ಪಟೇಲ್- ಕರುಣ್ ನಾಯರ್ ಜಟಾಪಟಿ
ಇನ್ನು ಕ್ಯಾಚ್ ಡ್ರಾಪ್ ವಿಚಾರವಾಗಿ ಡೆಲ್ಲಿ ತಂಡದ ನಾಯಕ ಅಕ್ಷರ್ ಪಟೇಲ್ ಮತ್ತು ಕನ್ನಡಿಗ ಕರುಣ್ ನಾಯರ್ ಮೈದಾನದಲ್ಲೇ ಜಟಾಪಟಿ ನಡೆಸಿದ ಘಟನೆ ಕೂಡ ನಡೆಯಿತು. ಕರುಣ್ ನಾಯರ್ ಎರಡು ಪ್ರಮುಖ ಕ್ಯಾಚ್ಗಳನ್ನು ಕೈಬಿಟ್ಟಿದ್ದು ಅಕ್ಷರ್ ಪಟೇಲ್ ಆಕ್ರೋಶಕ್ಕೆ ಕಾರಣವಾಗಿತ್ತು.
ಬದಲಿ ಆಟಗಾರನಾಗಿ ಫೀಲ್ಡಿಂಗ್ ಮಾಡುತ್ತಿದ್ದ ಕರುಣ್ ನಾಯರ್, ಪಂಜಾಬ್ ಕಿಂಗ್ಸ್ ನಾಯಕ ಶ್ರೇಯಸ್ ಅಯ್ಯರ್ ನೀಡಿದ ಎರಡು ಕ್ಯಾಚ್ಗಳನ್ನು ಕೇವಲ ಮೂರು ಎಸೆತಗಳ ಅಂತರದಲ್ಲಿ ಕೈಬಿಟ್ಟರು. ಯುವ ಬೌಲರ್ ವಿಪ್ರಜ್ ನಿಗಮ್ ಅವರ ಓವರ್ನಲ್ಲಿ ಈ ಕ್ಯಾಚ್ಗಳು ಮಿಸ್ ಆದಾಗ, ಡೆಲ್ಲಿ ಕ್ಯಾಪಿಟಲ್ಸ್ ನಾಯಕ ಅಕ್ಷರ್ ಪಟೇಲ್ ಮೈದಾನದಲ್ಲೇ ಕರುಣ್ ನಾಯರ್ ಮೇಲೆ ತೀವ್ರವಾಗಿ ಕಿರುಚಾಡಿ ತಮ್ಮ ಕೋಪ ವ್ಯಕ್ತಪಡಿಸಿದರು.
ದಾಖಲೆಯ ಸ್ಕೋರ್ ಇದ್ರೇನು..? ಹಿಂಗ್ ಆಡಿದ್ರೆ ಸೋಲೇ ಗತಿ
ಅಷ್ಟಕ್ಕೇ ಸುಮ್ಮನಾಗದ ಅಕ್ಷರ್ ಪಟೇಲ್ ಪಂದ್ಯದ ಬಳಿಕ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲೂ ತಂಡದ ಕಳಪೆ ಫೀಲ್ಡಿಂಗ್ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಈ ಕ್ಯಾಚ್ ಡ್ರಾಪ್ ಗಳೇ ಪಂದ್ಯದ "ಟರ್ನಿಂಗ್ ಪಾಯಿಂಟ್" ಆಗಿದ್ದವು ಎಂದು ಬೇಸರ ವ್ಯಕ್ತಪಡಿಸಿದರು. "ನೀವು ಬೌಲರ್ಗಳಿಗೆ ಬೆಂಬಲ ನೀಡದಿದ್ದರೆ, ಸೋಲಿಗೆ ನೀವೇ ಅರ್ಹರು" ಎಂದು ಅವರು ನೇರವಾಗಿಯೇ ಹೆಸರು ಹೇಳದೇ ಕರುಣ್ ನಾಯರ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
'ನಾವು ಪದೇ ಪದೇ ಅದೇ ತಪ್ಪುಗಳನ್ನು ಮಾಡುತ್ತಿದ್ದೇವೆ. ಪಿಚ್ ತುಂಬಾ ಫ್ಲ್ಯಾಟ್ ಆಗಿರುವುದರಿಂದ, ನಿಮ್ಮ ಬೌಲರ್ಗಳನ್ನು ಬೆಂಬಲಿಸಲು ಸಾಧ್ಯವಾಗದಿದ್ದರೆ ನಾವು ಸೋಲಲು ಅರ್ಹರು ಎಂದು ನಾನು ಭಾವಿಸುತ್ತೇನೆ. ಈ ರೀತಿಯ ಪಿಚ್ ನಲ್ಲಿ ನಿಮ್ಮ ಬೌಲರ್ಗಳನ್ನು ನೀವು ಬೆಂಬಲಿಸದಿದ್ದರೆ, ನೀವು ಸೋಲಲು ಅರ್ಹರು. ಅದೇ ಸಮಯದಲ್ಲಿ, ನಮ್ಮ ಬೌಲಿಂಗ್ ಘಟಕವು ಪವರ್ಪ್ಲೇನಲ್ಲಿ ಅವರು ಬೌಲಿಂಗ್ ಮಾಡಿದ ರೀತಿಯಲ್ಲಿ ತಮ್ಮನ್ನು ತಾವು ನೋಡಿಕೊಳ್ಳಬೇಕು. ನಮ್ಮ ವೇಗದ ಬೌಲರ್ಗಳು ಪವರ್ಪ್ಲೇನಲ್ಲಿ ಉತ್ತಮವಾಗಿ ಬೌಲಿಂಗ್ ಮಾಡಲಿಲ್ಲ ಮತ್ತು ಅದಕ್ಕೆ ನಮ್ಮ ಫೀಲ್ಡಿಂಗ್ ಕೂಡ ತಮ್ಮ ಪಾತ್ರ ಸೇರಿಸಿದರು, ಇದು ನಾವು ಪಂದ್ಯ ಕಳೆದುಕೊಳ್ಳಲು ಕಾರಣವಾಯಿತು. ಈ ವಿಕೆಟ್ನಲ್ಲಿ 264 ನಿಜವಾಗಿಯೂ ಉತ್ತಮ ಸ್ಕೋರ್ ಎಂದು ನಾನು ಭಾವಿಸಿದೆ ಎಂದು ಅಕ್ಷರ್ ಪಟೇಲ್ ಹೇಳಿದರು.
Advertisement