'ಮಾನಸಿಕ- ದೈಹಿಕವಾಗಿ ಸಿದ್ಧವಾಗಿರಿ': ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಗೂ ಮುನ್ನ 'ಗಂಭೀರ' ಸಂದೇಶ ರವಾನಿಸಿದ ಹೆಡ್ ಕೋಚ್!

ಎದುರಾಗುವ ಯಾವುದೇ ಸವಾಲು ಅಥವಾ ಪ್ರಶ್ನೆಗೆ ಸೂಕ್ತ ಉತ್ತರ ನೀಡಲು ನಾವು ಸಂಪೂರ್ಣ ಸಿದ್ಧರಿದ್ದೇವೆ. ಹಾಗಾಗಿ, ಇಂದಿನಿಂದಲೇ ನಾವು ಎಲ್ಲ ಅಗತ್ಯ ಸಿದ್ಧತೆಗಳನ್ನು ಮತ್ತು ಮಾನದಂಡಗಳನ್ನು ಪೂರೈಸುವುದನ್ನು ಖಚಿತಪಡಿಸಿಕೊಳ್ಳೋಣ ಎಂದಿದ್ದಾರೆ.
Gautam Gambhir
ಗೌತಮ್ ಗಂಭೀರ್
Updated on

ಆಗಸ್ಟ್ 15 ರಂದು ಗಾಲೆಯಲ್ಲಿ ಪ್ರಾರಂಭವಾಗಲಿರುವ ಶ್ರೀಲಂಕಾ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ, ಆರಂಭಿಕ ದಿನದಿಂದಲೇ ಯಾವುದೇ ಸವಾಲನ್ನು ಎದುರಿಸಲು ಮಾನಸಿಕವಾಗಿ ಮತ್ತು ದೈಹಿಕವಾಗಿ ಸಿದ್ಧರಾಗಿರುವಂತೆ ಭಾರತದ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರು ಶುಭಮನ್ ಗಿಲ್ ನೇತೃತ್ವದ ತಂಡಕ್ಕೆ ಕರೆ ನೀಡಿದ್ದಾರೆ. ಭಾರತೀಯ ತಂಡವು ಬುಧವಾರ ಬೆಳಿಗ್ಗೆ ಕೊಲಂಬೋದ ಎನ್‌ಸಿಸಿ (NCC) ಮೈದಾನದಲ್ಲಿ ತನ್ನ ಅಭ್ಯಾಸ ಅವಧಿಯನ್ನು ಪ್ರಾರಂಭಿಸಿತು ಮತ್ತು ಇದೇ ಸ್ಥಳದಲ್ಲಿ ಆಗಸ್ಟ್ 7 ರಿಂದ 9 ರವರೆಗೆ ಮೂರು ದಿನಗಳ ಅಭ್ಯಾಸ ಪಂದ್ಯ ಆಡಲಿದೆ. ಇದರ ನಂತರ, ಪ್ರವಾಸಿ ತಂಡವು ಆಗಸ್ಟ್ 15 ರಂದು ನಡೆಯಲಿರುವ ಸರಣಿಯ ಮೊದಲ ಪಂದ್ಯಕ್ಕಾಗಿ ಗಾಲೆಗೆ ತೆರಳಲಿದೆ. ಎರಡನೇ ಹಾಗೂ ಅಂತಿಮ ಟೆಸ್ಟ್ ಪಂದ್ಯವು ಆಗಸ್ಟ್ 23 ರಿಂದ 27 ರವರೆಗೆ ಐತಿಹಾಸಿಕ ಸಿಂಹಳೀಸ್ ಸ್ಪೋರ್ಟ್ಸ್ ಕ್ಲಬ್ (SSC) ಮೈದಾನದಲ್ಲಿ ನಡೆಯಲಿದೆ.

'ಸ್ನೇಹಿತರೇ, ನಮ್ಮ ಮುಂದಿರುವ ಸವಾಲು ನಮಗೆ ತಿಳಿದಿದೆ. ನಾವು ಯಾವುದಕ್ಕಾಗಿ ಆಡುತ್ತಿದ್ದೇವೆ ಎಂಬುದು ನಮಗೆ ಗೊತ್ತು. ನಾವು ಅಗತ್ಯವಿರುವಷ್ಟು ಶ್ರಮ ಹಾಕಬಲ್ಲೆವು, ನಮ್ಮ ಸಾಮರ್ಥ್ಯದ ಮಿತಿಗಳನ್ನು ಮೀರಿ ಆಡಬಲ್ಲೆವು ಮತ್ತು ಎಲ್ಲ ಅಗತ್ಯ ಮಾನದಂಡಗಳನ್ನು ಪೂರೈಸಬಲ್ಲೆವು. 15ನೇ ತಾರೀಖಿನ ಬೆಳಿಗ್ಗೆ ನಾವು ಮೊದಲು ಬ್ಯಾಟಿಂಗ್ ಮಾಡಲಿ ಅಥವಾ ಬೌಲಿಂಗ್ ಮಾಡಲಿ, ಎದುರಾಗುವ ಯಾವುದೇ ಸವಾಲು ಅಥವಾ ಪ್ರಶ್ನೆಗೆ ಸೂಕ್ತ ಉತ್ತರ ನೀಡಲು ನಾವು ಸಂಪೂರ್ಣ ಸಿದ್ಧರಿದ್ದೇವೆ. ಹಾಗಾಗಿ, ಇಂದಿನಿಂದಲೇ ನಾವು ಎಲ್ಲ ಅಗತ್ಯ ಸಿದ್ಧತೆಗಳನ್ನು ಮತ್ತು ಮಾನದಂಡಗಳನ್ನು ಪೂರೈಸುವುದನ್ನು ಖಚಿತಪಡಿಸಿಕೊಳ್ಳೋಣ' ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಗುರುವಾರ ತನ್ನ ಅಧಿಕೃತ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ಗಂಭೀರ್ ಹೇಳಿದರು.

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC)ನಲ್ಲಿ ಭಾರತವು 48.150 ಅಂಕಗಳ ಶೇಕಡಾವಾರು (PCT) ಪ್ರಮಾಣದೊಂದಿಗೆ ಐದನೇ ಸ್ಥಾನದಲ್ಲಿದ್ದರೆ, ಶ್ರೀಲಂಕಾ 41.67 PCTಯೊಂದಿಗೆ ಆರನೇ ಸ್ಥಾನದಲ್ಲಿದೆ. ಇದೇ ವೇಳೆ, ಟೆಸ್ಟ್ ತಂಡಕ್ಕೆ ಹೊಸದಾಗಿ ಸೇರ್ಪಡೆಗೊಂಡಿರುವ ಆಫ್-ಸ್ಪಿನ್ ಆಲ್‌ರೌಂಡರ್ ಸಾರಂಶ್ ಜೈನ್ ಮತ್ತು ವೇಗದ ಬೌಲರ್ ಔಕಿಬ್ ನಬಿ ಹಾಗೂ ನೂತನ ಫೀಲ್ಡಿಂಗ್ ಕೋಚ್ ಸುಭದೀಪ್ ಘೋಷ್ ಅವರನ್ನು ಅಧಿಕೃತವಾಗಿ ಸ್ವಾಗತಿಸುವ ಅವಕಾಶವನ್ನೂ ಗಂಭೀರ್ ಬಳಸಿಕೊಂಡರು.

Gautam Gambhir
ಯಾರು ಈ ಶುಭದೀಪ್ ಘೋಷ್?: ಭಾರತದ ಹೊಸ ಫೀಲ್ಡಿಂಗ್ ಕೋಚ್ ಆಗಿ ಜವಾಬ್ದಾರಿ!

ಎಲ್ಲರಿಗೂ ಸ್ವಾಗತ. ನಮ್ಮ ತಂಡಕ್ಕೆ ಹೊಸಬರು ಸೇರ್ಪಡೆಗೊಂಡಿದ್ದಾರೆ. ಮೊದಲಿಗೆ ಸಾರಂಶ್, ನಿಮಗೆ ಅಭಿನಂದನೆಗಳು; ಇಲ್ಲಿಗೆ ತಲುಪಲು ನೀವು ಅಪಾರ ಶ್ರಮಪಟ್ಟಿದ್ದೀರಿ. ಅವಕಾಶ ಸಿಕ್ಕಾಗಲೆಲ್ಲ ನಿಮ್ಮ ಕುಟುಂಬ ಮತ್ತು ದೇಶಕ್ಕೆ ಹೆಮ್ಮೆ ತರುವಂತೆ ನಡೆದುಕೊಳ್ಳಿ ಎಂದಿದ್ದಾರೆ.

'ಎರಡನೆಯದಾಗಿ, ನಾನು ಔಕಿಬ್ ಅವರನ್ನು ಅಭಿನಂದಿಸಲು ಬಯಸುತ್ತೇನೆ; ಕಳೆದ ಸೀಸನ್‌ನಲ್ಲಿ ನೀವು ಅದ್ಭುತ ಪ್ರದರ್ಶನ ನೀಡಿದ್ದೀರಿ ಮತ್ತು ಜಮ್ಮು-ಕಾಶ್ಮೀರ ತಂಡವು ರಣಜಿ ಟ್ರೋಫಿ ಗೆಲ್ಲುವಂತೆ ಮಾಡಿದ್ದೀರಿ, ಇದು ನಿಜಕ್ಕೂ ದೊಡ್ಡ ಸಾಧನೆ. ಮತ್ತೊಮ್ಮೆ ಅಭಿನಂದನೆಗಳು. ಕೊನೆಯದಾಗಿ, ನಾನು ಜಾಯ್ ಅವರನ್ನು ಕೂಡ ಸ್ವಾಗತಿಸಲು ಬಯಸುತ್ತೇನೆ' ಎಂದರು.

'ಅವರು ಹಲವು ವರ್ಷಗಳಿಂದ ಅನೇಕ ತಂಡಗಳೊಂದಿಗೆ ಕೆಲಸ ಮಾಡಿದ್ದಾರೆ. ಅವರ ಉತ್ಸಾಹ ಮತ್ತು ಬದ್ಧತೆಯು ಈ ತಂಡವನ್ನು ಮುನ್ನಡೆಸುತ್ತದೆ ಎಂಬ ವಿಶ್ವಾಸ ನನಗಿದೆ; ಅಲ್ಲದೆ, ಅವರ ಚೈತನ್ಯವು ನಾವೆಲ್ಲರೂ ನಮ್ಮ ಗುರಿಯನ್ನು ತಲುಪಲು ಸಹಾಯ ಮಾಡುತ್ತದೆ' ಎಂದು ಗಂಭೀರ್ ಹೇಳಿದರು.

Gautam Gambhir
ಜಸ್ಪ್ರೀತ್ ಬುಮ್ರಾ ಬದಲಿಗೆ ಔಕಿಬ್ ನಬಿ ಆಯ್ಕೆ: ಮೊಹಮ್ಮದ್ ಶಮಿಗೆ ಸ್ಪಷ್ಟ ಸಂದೇಶ ರವಾನಿಸಿದ ಅಜಿತ್ ಅಗರ್ಕರ್!

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com