'ಈಗ ಮಗು, 18 ವರ್ಷ ತುಂಬಿದ ಬಳಿಕ ಯುವತಿಯರು ಆಕರ್ಷಿತರಾಗಬಹುದು': ವೈಭವ್ ಸೂರ್ಯವಂಶಿಗೆ ಮಾಜಿ ಆಟಗಾರ ಎಚ್ಚರಿಕೆ!

ದಿಗ್ಗಜ ಸಚಿನ್ ತೆಂಡೂಲ್ಕರ್ ಅವರಿಗೆ ಹೋಲಿಸಿದರೆ, 'ವೈಭವ್ ಸೂರ್ಯವಂಶಿ ವೈಟ್-ಬಾಲ್ ಕ್ರಿಕೆಟ್‌ನಲ್ಲಿ ಹೆಚ್ಚು ದೊಡ್ಡ ಪ್ರಭಾವ ಬೀರಬಲ್ಲರು ಎಂದು ಭಾರತದ ಮಾಜಿ ಆಟಗಾರ ರಾಬಿನ್ ಉತ್ತಪ್ಪ ಅಭಿಪ್ರಾಯಪಟ್ಟಿದ್ದಾರೆ.
Vaibhav Sooryavanshi
ವೈಭವ್ ಸೂರ್ಯವಂಶಿ
Updated on

ವೈಭವ್ ಸೂರ್ಯವಂಶಿ ಕೇವಲ 15 ವರ್ಷ ವಯಸ್ಸಿನವರಾಗಿದ್ದರೂ, ಅವರ ಬ್ಯಾಟಿಂಗ್ ವೈಖರಿ ಈಗಾಗಲೇ ಎಲ್ಲರ ಮೆಚ್ಚುಗೆಗೂ ಪಾತ್ರವಾಗಿದೆ. ಇಂಡಿಯನ್ ಪ್ರೀಮಿಯರ್ ಲೀಗ್‌ನ ಕೇವಲ ಎರಡು ಆವೃತ್ತಿಗಳು ಮತ್ತು ಇತ್ತೀಚೆಗೆ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪರಿಚಯವಾದ ಈ ಸೌತ್‌ಪಾವ್ ಈಗಾಗಲೇ ಕೆಲವು ಉನ್ನತ ಅಂತರರಾಷ್ಟ್ರೀಯ ಬೌಲರ್‌ಗಳ ಬೆವರಿಳಿಸಿದ್ದಾರೆ. ಪ್ಯಾಟ್ ಕಮ್ಮಿನ್ಸ್ ಅಥವಾ ಜಸ್ಪ್ರೀತ್ ಬುಮ್ರಾ ಅವರಂತಹ ಅತ್ಯುನ್ನತ ಬೌಲರ್‌ಗಳ ವಿರುದ್ಧವೂ ಸೂರ್ಯವಂಶಿ ಬೌಂಡರಿಗಳನ್ನು ಗಳಿಸಿದ್ದಾರೆ. ಇಂಗ್ಲೆಂಡ್‌ನಲ್ಲಿ ಮೂರು ಕಳಪೆ ಇನಿಂಗ್ಸ್‌ಗಳೊಂದಿಗೆ ಟಿ20ಐ ಆರಂಭ ಅಷ್ಟೇನು ಉತ್ತಮವಾಗಿಲ್ಲದಿದ್ದರೂ, ಜಿಂಬಾಬ್ವೆ ವಿರುದ್ಧದ ಸರಣಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದರು. ಮೂರು ಪಂದ್ಯಗಳಲ್ಲಿ ಅವರು 151 ರನ್ ಗಳಿಸಿದರು. ಮೂರನೇ ಮತ್ತು ಅಂತಿಮ ಟಿ20ಐನಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಹಾಗೂ ಸರಣಿಶ್ರೇಷ್ಠ ಗೌರವ ಪಡೆದರು.

ದಿಗ್ಗಜ ಸಚಿನ್ ತೆಂಡೂಲ್ಕರ್ ಅವರಿಗೆ ಹೋಲಿಸಿದರೆ, 'ವೈಭವ್ ಸೂರ್ಯವಂಶಿ ವೈಟ್-ಬಾಲ್ ಕ್ರಿಕೆಟ್‌ನಲ್ಲಿ ಹೆಚ್ಚು ದೊಡ್ಡ ಪ್ರಭಾವ ಬೀರಬಲ್ಲರು ಎಂದು ಭಾರತದ ಮಾಜಿ ಆಟಗಾರ ರಾಬಿನ್ ಉತ್ತಪ್ಪ ಅಭಿಪ್ರಾಯಪಟ್ಟಿದ್ದಾರೆ.

'ವೈಭವ್ ಸೂರ್ಯವಂಶಿ ಅವರು 'ಪಾಜಿ' (ತೆಂಡೂಲ್ಕರ್) ಅವರಿಗಿಂತಲೂ ಹೆಚ್ಚು ವೈಟ್-ಬಾಲ್ ಕ್ರಿಕೆಟ್‌ನಲ್ಲಿ ಪ್ರಭಾವ ಬೀರಬಲ್ಲರೇ? ಹೌದು, ಬಹುಶಃ ಸಾಧ್ಯವಿರಬಹುದು. ಆದರೆ ಅವರನ್ನು ಹೇಗೆ ನಿರ್ವಹಿಸಲಾಗುತ್ತದೆ ಎಂಬುದು ಮುಖ್ಯವಾಗುತ್ತದೆ' ಎಂದು ಉತ್ತಪ್ಪ 'ಕಾಮ್‌ಬಾಕ್ಸ್ ಟಿವಿ'ಯಲ್ಲಿ (CommBoxTV) ಹೇಳಿದರು.

'ಭಾರತೀಯ ಕ್ರಿಕೆಟ್‌ನಲ್ಲಿ ಪ್ರತಿಭಾವಂತ ಆಟಗಾರರು ಹಂತ ಹಂತವಾಗಿ ಮೇಲೆ ಬರುವುದನ್ನು ನಾವು ಈ ಹಿಂದೆಯೂ ನೋಡಿದ್ದೇವೆ. ವಿನೋದ್ ಕಾಂಬ್ಳಿ ಮತ್ತು ಪೃಥ್ವಿ ಶಾ ಅವರಂತಹ ಆಟಗಾರರನ್ನು ನಾವು ಕಂಡಿದ್ದೇವೆ; ಅವರು 17-18 ವರ್ಷದವರಾಗಿದ್ದಾಗ, 'ಮುಂದೆ ಇವರು ಏನಾಗಲಿದ್ದಾರೆ?' ಎಂಬ ಕುತೂಹಲ ಎಲ್ಲರಲ್ಲೂ ಮೂಡಿತ್ತು. ಆದರೆ, ಇದ್ದಕ್ಕಿದ್ದಂತೆ ಅವರು ತಮ್ಮ ಲಯವನ್ನು ಕಳೆದುಕೊಂಡು ಮರೆಯಾದರು' ಎಂದsರು.

Vaibhav Sooryavanshi
'ಸ್ಫೋಟಕ ಬ್ಯಾಟರ್‌ಗೆ ನೀರು ಕೊಡುವ ಕೆಲಸ ಹೇಳಿದಿರಿ': ವೈಭವ್ ಸೂರ್ಯವಂಶಿ ಪದಾರ್ಪಣೆ ವಿಳಂಬ ಕುರಿತು ಮೊಹಮ್ಮದ್ ಕೈಫ್ ಕಿಡಿ!

'ಅದು ವೈಭವ್‌ಗೆ ಒಂದು ರೀತಿಯಲ್ಲಿ ಮೊದಲ ಪರೀಕ್ಷೆಯಾಗಲಿದೆ. ಮುಂದಿನ ಐದು ವರ್ಷಗಳ ಕಾಲ ಆಟದ ವಿಷಯದಲ್ಲಿ ಆತ ತನ್ನ ಸಹಜತೆಯನ್ನು ಮತ್ತು ಏಕಾಗ್ರತೆಯನ್ನು ಕಾಯ್ದುಕೊಳ್ಳಬಲ್ಲನೇ? ಅವನಿಗೆ ಈಗ 15 ವರ್ಷ, ಹಾಗಾಗಿ 20 ವರ್ಷ ವಯಸ್ಸಾಗುವವರೆಗೂ ಆತ ಅದೇ ರೀತಿ ಮುಂದುವರಿಯಬಲ್ಲನೇ? ಆತನನ್ನು ನೋಡಿಕೊಳ್ಳಲು ಸಾಕಷ್ಟು ಜನರಿದ್ದಾರೆ, ಆದ್ದರಿಂದ ಆತ ಕೇವಲ ಆಟದತ್ತಲೇ ಗಮನಹರಿಸಬೇಕು. ಆತ ಮಾತನಾಡುವುದನ್ನು ಗಮನಿಸಿದರೆ, ಆತನಲ್ಲಿ ಎಷ್ಟೊಂದು ಮುಗ್ಧತೆ ಎದ್ದು ಕಾಣುತ್ತದೆ. ತನಗೆ ಸಿಗುತ್ತಿರುವ ಪ್ರತಿಯೊಂದು ಜಾಹೀರಾತು ಮತ್ತು ಒಪ್ಪಂದವನ್ನೂ ತಿರಸ್ಕರಿಸಿ, ಕೇವಲ ಕ್ರಿಕೆಟ್‌ನತ್ತ ಮಾತ್ರ ಗಮನಹರಿಸುತ್ತಿರುವ ಆತನ ನಿರ್ಧಾರ ನನಗೆ ತುಂಬಾ ಇಷ್ಟವಾಗಿದೆ. ಸದ್ಯಕ್ಕೆ ಅವನನ್ನು ಒಂದು ಮಗುವಿನಂತೆಯೇ ನೋಡಲಾಗುತ್ತಿದೆ. ಆದರೆ 18 ವರ್ಷ ವಯಸ್ಸಾದಾಗ ಆತನನ್ನು ಒಬ್ಬ ಯುವಕನಾಗಿ ನೋಡಲಾಗುತ್ತದೆ ಮತ್ತು ಆಗ ಯುವತಿಯರ ಗಮನ ಅವನತ್ತ ಹರಿಯಬಹುದು. ಅಂತಹ ವಿಷಯಗಳು ವ್ಯಕ್ತಿಯ ಗಮನವನ್ನು ಬೇರೆಡೆಗೆ ಸೆಳೆಯುವ ಸಾಧ್ಯತೆಯೂ ಇರುತ್ತದೆ' ಎಂದು ಅವರು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com