

ಕ್ರಿಮಿನಲ್ ಕೇಸ್ ನಲ್ಲಿ ಸಿಲುಕಿಕೊಂಡಿದ್ದ ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರನೊಬ್ಬನನ್ನು ಪಟಿಯಾಲ ಕೋರ್ಟ್ ಪ್ರಕರಣದಿಂದ ಖುಲಾಸೆಗೊಳಿಸಿದೆ.
22 ವರ್ಷದ ಹಳೆಯ ಕ್ರಿಮಿನಲ್ ಕೇಸ್ ಇದಾಗಿದ್ದು, 2004 ರಲ್ಲಿ ಮಾಜಿ ಕ್ರಿಕೆಟಿಗನ ವಿರುದ್ಧ ಐಪಿಸಿ ಸೆಕ್ಷನ್ 420, 468, 471, and 120B ಅಡಿ ಹಾಗೂ ಪಾಸ್ ಪೋರ್ಟ್ ಕಾಯ್ದೆ ಸೆಕ್ಷನ್ 12 ರ ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿತ್ತು.
ವಡೋದರಾ ನಿವಾಸಿಯಾಗಿರುವ ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಜಾಕೋಬ್ ಮಾರ್ಟೀನ್ ವಿರುದ್ಧ ಬ್ರಿಟನ್ ವಲಸೆ ಸ್ಟ್ಯಾಂಪ್ (Immigration Stamp) ಪ್ರಯಾಣ ವಿವರಗಳನ್ನು ನಕಲು ಮಾಡಿದ ಆರೋಪ ಕೇಳಿಬಂದಿತ್ತು. ಈ ಆರೋಪಗಳು ಹಾಗೂ ಇದಕ್ಕೆ ಸಂಬಂಧಿಸಿದ ಆರ್ಥಿಕ ವಹಿವಾಟುಗಳು ಸಾಬೀತಾಗದ ಹಿನ್ನೆಲೆಯಲ್ಲಿ ಪಟಿಯಾಲ ಕೋರ್ಟ್ ಜಾಕೋಬ್ ಅವರನ್ನು ಪ್ರಕರಣದಿಂದ ಖುಲಾಸೆಗೊಳಿಸಿದೆ.
ಹಣಕಾಸಿನ ವಹಿವಾಟುಗಳ ಬಗ್ಗೆ ಅಥವಾ ಆರೋಪಕ್ಕೆ ತಳುಕುಹಾಕಿಕೊಂಡಿದ್ದ ಅಜ್ವಾ ಸ್ಪೋರ್ಟ್ಸ್ ಕ್ಲಬ್ನ ಅವರ ಮಾಲೀಕತ್ವ ಅಥವಾ ನಿಯಂತ್ರಣದ ಬಗ್ಗೆ ಯಾವುದೇ ವಿಶ್ವಾಸಾರ್ಹ ಪುರಾವೆಗಳಿಲ್ಲ ಎಂದು ನ್ಯಾಯಾಲಯ ಗಮನಿಸಿದೆ. ಹಲವಾರು ಸಾಕ್ಷಿಗಳು ಆರೋಪಗಳನ್ನು ಸಾಬೀತುಪಡಿಸುವಲ್ಲಿ ವಿಫಲರಾಗಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಮಾರ್ಟಿನ್, 2004 ರ ತಮ್ಮ ತಂಡದ ಸದಸ್ಯರೊಬ್ಬರು ತಮ್ಮ ಯುಕೆ ವೀಸಾ ಅವಧಿ ಮುಗಿದ ನಂತರವೂ ಅಲ್ಲಿಯೇ ಉಳಿದು ನಕಲಿ ವಲಸೆ ಸ್ಟ್ಯಾಂಪ್ ಪಡೆದು ಭಾರತಕ್ಕೆ ಮರಳಿದಾಗ ಈ ಪ್ರಕರಣ ದಾಖಲಾಗಿತ್ತು ಎಂದು ಹೇಳಿದರು. ಮೂಲ ಎಫ್ಐಆರ್ನಲ್ಲಿ ಅವರ ಹೆಸರನ್ನು ಉಲ್ಲೇಖಿಸದಿದ್ದರೂ, ನಂತರ ತನಿಖೆಯ ಸಮಯದಲ್ಲಿ ಸೇರಿಸಲಾಗಿತ್ತು ಇದು ಅವರ ಅಂತರರಾಷ್ಟ್ರೀಯ ಕ್ರಿಕೆಟ್ ಪ್ರೊಫೈಲ್ ಮೇಲೆ ನಕಾರಾತ್ಮಕ ಪರಿಣಾಮ ಬೀರಿತ್ತು.
22 ವರ್ಷಗಳ ಹಿಂದಿನ ಪ್ರಕರಣ ಅವರಿಗೆ ಗಮನಾರ್ಹ ಒತ್ತಡವನ್ನುಂಟುಮಾಡಿದೆ. ಈ ಪ್ರಕರಣದಲ್ಲಿ ಸಿಲುಕಿದ್ದರಿಂದ ಅವರು ರೈಲ್ವೆ ಉದ್ಯೋಗವನ್ನೂ ಕಳೆದುಕೊಳ್ಳಬೇಕಾಯಿತು. ಈಗ ಪ್ರಕರಣದಿಂದ ಖುಲಾಸೆಗೊಂಡಿರುವುದು ಜೀವನದಲ್ಲಿ ಒಂದು ಮಹತ್ವದ ತಿರುವು ಎಂದು ಜಾಕೋಬ್ ಮಾರ್ಟೀನ್ ಹೇಳಿದ್ದಾರೆ.
"2004 ರಲ್ಲಿ ನನ್ನ ಒಂದು ತಂಡ ಯುಕೆಗೆ ಆಟವಾಡಲು ಹೋಗಿತ್ತು. 2004 ರಲ್ಲಿ ಇಂಗ್ಲೆಂಡ್ಗೆ ಆಡಲು ಹೋದ ಆ ತಂಡದಲ್ಲಿದ್ದ ಎಲ್ಲರೂ ಭಾರತಕ್ಕೆ ಮರಳಿದ್ದರೂ, ಓರ್ವ ಯುವಕ ಮಾತ್ರ ಅಲ್ಲೆ ಉಳಿದಿದ್ದ. ವೀಸಾ 6 ತಿಂಗಳ ಮಾನ್ಯತೆಯನ್ನು ಹೊಂದಿದ್ದರಿಂದ, ಅವನು 6 ತಿಂಗಳ ಕಾಲ ಉಳಿಯಬಹುದಿತ್ತು, ಆದರೆ ಅವನು 6 ತಿಂಗಳಿಗಿಂತ ಹೆಚ್ಚು ಕಾಲ ಅಲ್ಲಿಯೇ ಇದ್ದ. ಪರಿಣಾಮಗಳಿಂದ ತಪ್ಪಿಸಿಕೊಳ್ಳಲು ಆತ ಸ್ಥಳೀಯರೊಬ್ಬರ ಮೂಲಕ ಅಲ್ಲಿ ನಕಲಿ ಸ್ಟ್ಯಾಂಪಿಂಗ್ ಮಾಡಿಸಿಕೊಂಡಿದ್ದ. ನಕಲಿ ಸ್ಟ್ಯಾಂಪಿಂಗ್ ಮಾಡಿದ ನಂತರ, ಅವನು ಭಾರತಕ್ಕೆ ಹಿಂತಿರುಗಿದಾಗ, ಅವನನ್ನು ಯುಕೆಯಿಂದ ಗಡೀಪಾರು ಮಾಡಲಾಗಿತ್ತು, ಆದ್ದರಿಂದ ಆತನನ್ನು ಐಜಿಐ ವಿಮಾನ ನಿಲ್ದಾಣದಲ್ಲಿ ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿತ್ತು ಎಂದು ಮಾರ್ಟಿನ್ ಪ್ರಕರಣದ ಬಗ್ಗೆ ವಿವರಿಸಿದ್ದಾರೆ.
"ನನ್ನ ಹೆಸರು ಎಫ್ಐಆರ್ನಲ್ಲಿಯೂ ಇರಲಿಲ್ಲ, ಆದರೆ ತನಿಖೆ ನಡೆದಾಗ, ಖ್ಯಾತನಾಮನಾಗಿದ್ದರಿಂದ ನನ್ನ ಹೆಸರನ್ನು ಸೇರಿಸಲಾಯಿತು ಮತ್ತು ನಾನು ಅಂತರರಾಷ್ಟ್ರೀಯ ಕ್ರಿಕೆಟಿಗನಾಗಿದ್ದರಿಂದ ನಾನು ಈ ಪ್ರಕರಣದಲ್ಲಿ ಭಾಗಿ ಮಾಡಲಾಗಿತ್ತು. ಪ್ರಕರಣ 22 ವರ್ಷಗಳ ಬಳಿಕ ಮುಗಿದಿದ್ದು ನಿರಾಳನಾಗಿದ್ದೇನೆ. ನನಗೆ ಈ ಅವಧಿಯಲ್ಲಿ ಬಿಸಿಸಿಐನಿಂದಲೂ ಯಾವುದೇ ಉತ್ತರಗಳು ಸಿಗುತ್ತಿರಲಿಲ್ಲ; ನಾನು ರೈಲ್ವೆಯಲ್ಲಿ ನನ್ನ ಕೆಲಸವನ್ನು ಕಳೆದುಕೊಂಡೆ. ಹಾಗಾಗಿ ಇದರಿಂದ ನನಗೆ ತುಂಬಾ ಒತ್ತಡವಿತ್ತು, ಆದರೆ ಈಗ ಬಂದಿರುವ ಈ ತೀರ್ಪಿನಿಂದ ನನಗೆ ಕ್ಲೀನ್ ಚಿಟ್ ಸಿಕ್ಕಿದೆ. ಇದರಿಂದ ನನ್ನ ಜೀವನಕ್ಕೆ ದೊಡ್ಡ ತಿರುವು ಸಿಗಲಿದೆ ಎಂದು ಅವರು ಹೇಳಿದ್ದಾರೆ.
ಬಲಗೈ ಬ್ಯಾಟ್ಸ್ಮನ್ ಜಾಕೋಬ್ ಮಾರ್ಟಿನ್, ಭಾರತದ ಪರ 10 ಏಕದಿನ ಪಂದ್ಯಗಳನ್ನು ಆಡಿದ್ದಾರೆ, 22.57 ಸರಾಸರಿಯಲ್ಲಿ 158 ರನ್ ಗಳಿಸಿದ್ದಾರೆ.