

ನವದೆಹಲಿ: ಗಾಲೆಯಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಸ್ಪಿನ್ನರ್ ಕುಲ್ದೀಪ್ ಯಾದವ್ಗೆ ಕಡಿಮೆ ಓವರ್ಗಳನ್ನು ನೀಡಿರುವುದರ ಹಿನ್ನೆಲೆಯಲ್ಲಿ ಮಾಜಿ ಕ್ರಿಕೆಟಿಗ ಮೊಹಮ್ಮದ್ ಕೈಫ್, ನಾಯಕ ಶುಭಮನ್ ಗಿಲ್ ವಿರುದ್ಧ ಕಿಡಿಕಾರಿದ್ದಾರೆ.
ಕುಲ್ದೀಪ್ ಒಬ್ಬ "ಅಪರೂಪದ ಪ್ರತಿಭೆ" (unique gift) ಎಂದು ಬಣ್ಣಿಸಿರುವ ಕೈಫ್, ಗಾಲೆ ಟೆಸ್ಟ್ ನಲ್ಲಿ ಇಂತಹ ರಿಸ್ಟ್-ಸ್ಪಿನ್ನರ್ ಗೆ ಗಿಲ್ ಹೆಚ್ಚಿನ ಬೌಲಿಂಗ್ ಅವಕಾಶ ನೀಡದಿರುವುದು ಅವರ ಮೇಲೆ ನಂಬಿಕೆಯಿಲ್ಲದಿರುವುದನ್ನು ತೋರಿಸುತ್ತದೆ ಎಂದಿದ್ದಾರೆ.
ಮೊದಲ ಟೆಸ್ಟ್ ಪಂದ್ಯದಲ್ಲಿ ಸ್ಪಿನ್ ಬೌಲಿಂಗ್ಗೆ ಪೂರಕವಾದ ಪರಿಸ್ಥಿತಿಯಿದ್ದರೂ ಮಾನವ್ ಸುತಾರ್ ಹತ್ತು ವಿಕೆಟ್ಗಳನ್ನು ಕಬಳಿಸಿದರೆ, ಅನುಭವಿ ರವೀಂದ್ರ ಜಡೇಜಾ ಅಮೂಲ್ಯ ವಿಕೆಟ್ಗಳನ್ನು ಪಡೆದಿದ್ದರು. ಕುಲ್ದೀಪ್ ಯಾದವ್ ಕೇವಲ ಒಂದು ವಿಕೆಟ್ ಪಡೆದಿದ್ದರು.
ಸುತಾರ್ ಮತ್ತು ಜಡೇಜಾ ತಲಾ ಸುಮಾರು 44 ಓವರ್ಗಳನ್ನು ಬೌಲ್ ಮಾಡಿದರೆ, ಕುಲ್ದೀಪ್ಗೆ ಕೇವಲ 25 ಓವರ್ಗಳನ್ನು ಬೌಲ್ ಮಾಡುವ ಅವಕಾಶ ಸಿಕ್ಕಿತು. ಭಾರತ 165 ರನ್ ಗಳಿಂದ ಗೆಲುವು ಸಾಧಿಸಿತ್ತು.
ಪಂದ್ಯದ ಕುರಿತು ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಮಾತನಾಡಿದ ಕೈಫ್, ಅವರನ್ನು ಬಳಸಿಕೊಂಡ ರೀತಿಯನ್ನು ನೋಡಿದರೆ, ಶುಭಮನ್ ಗಿಲ್ಗೆ ಕುಲ್ದೀಪ್ ಯಾದವ್ ಮೇಲೆ ಸಾಕಷ್ಟು ನಂಬಿಕೆಯಿಲ್ಲ ಎಂಬುದು ಸ್ಪಷ್ಟವಾಗುತ್ತದೆ.
ನನ್ನ ದೃಷ್ಟಿಯಲ್ಲಿ ಕುಲ್ದೀಪ್ನಂತಹ ವಿಶಿಷ್ಟ ಬೌಲರ್ ಆಗಾಗ ಸಿಗುವುದಿಲ್ಲ. ಅಂತವರು ಇತಿಹಾಸದಲ್ಲಿ ಒಮ್ಮೆ ಅಥವಾ ಎರಡು ಬಾರಿ ಮಾತ್ರ ಬರುತ್ತಾರೆ. ಭವಿಷ್ಯದಲ್ಲಿ ರವೀಂದ್ರ ಜಡೇಜಾಗೆ ಪರ್ಯಾಯವಾಗಿ ಸುತಾರ್ ಸಿಗಬಹುದು, ಅಥವಾ ಅಶ್ವಿನ್ ನಂತರ ವಾಷಿಂಗ್ಟನ್ ಸುಂದರ್ ಬಂದಂತೆ ಯಾರಾದರೂ ಬರಬಹುದು, ಆದರೆ ಕುಲ್ದೀಪ್ ಒಬ್ಬ ಅಪರೂಪದ ಪ್ರತಿಭೆ ಎಂದರು.
ರಿಸ್ಟ್-ಸ್ಪಿನ್ನರ್ಗಳಿಗೆ ಹೆಚ್ಚಿನ ಓವರ್ ಮಾಡಲು ಅವಕಾಶ ನೀಡಬೇಕು ಆಗ ಮಾತ್ರ ಅವರು ಲಯವನ್ನು (rhythm) ಕಾಯ್ದುಕೊಳ್ಳಲು ಮತ್ತು ತಮ್ಮ ತಪ್ಪುಗಳನ್ನು ತಿದ್ದಿಕೊಳ್ಳಲು ಸಾಧ್ಯವಾಗುತ್ತದೆ. ಆ ವಿಷಯದಲ್ಲಿಅವರಿಗೆ ಶುಭಮನ್ ಗಿಲ್ ಅವರಿಂದ ಸೂಕ್ತ ಬೆಂಬಲ ಸಿಗಲಿಲ್ಲ ಎಂದು ಅವರು ಕಿಡಿಕಾರಿದ್ದಾರೆ.