

ಕೊಲಂಬೋ: ಶ್ರೀಲಂಕಾ ವಿರುದ್ಧದ 2ನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಭರ್ಜರಿ ಬ್ಯಾಟಿಂಗ್ ನಡೆಸಿದ ಭಾರತ ತಂಡ 503/9ಕ್ಕೆ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿದೆ.
ಕೊಲಂಬೋದ ಸಿಂಹಳೀಸ್ ಕ್ರಿಕೆಟ್ ಕ್ಲಬ್ ಮೈದಾನದಲ್ಲಿ ನಡೆಯುತ್ತಿರುವ 2ನೇ ಟೆಸ್ಟ್ ಪಂದ್ಯದ 2ನೇ ದಿನದಾಟದಲ್ಲಿ ಭಾರತ 9 ವಿಕೆಟ್ ಕಳೆದುಕೊಂಡು 503 ರನ್ ಗಳಿಸಿದ್ದಾಗ ತನ್ನ ಮೊದಲ ಇನ್ನಿಂಗ್ಸ್ ಅನ್ನು ಡಿಕ್ಲೇರ್ ಮಾಡಿಕೊಂಡಿತು.
2ನೇ ಟೆಸ್ಟ್ ಪಂದ್ಯದ 2ನೇ ದಿನವೂ ಭಾರತ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದ್ದು, ಇದರೊಂದಿಗೆ ಪಂದ್ಯದಲ್ಲಿ ಭಾರತ ಬಿಗಿ ಹಿಡಿತ ಸಾಧಿಸಿದೆ.
ಮೊದಲ ದಿನದ ಅಂತ್ಯಕ್ಕೆ 5 ವಿಕೆಟ್ಗೆ 300 ರನ್ ಗಳಿಸಿದ್ದ ಭಾರತ, ಎರಡನೇ ದಿನ ಮತ್ತೆ ಬ್ಯಾಟಿಂಗ್ ಮುಂದುವರಿಸಿ 203 ರನ್ ಸೇರಿಸಿತು. ದಿನದ ಪ್ರಮುಖ ಆಕರ್ಷಣೆಯಾಗಿದ್ದು ವಿಕೆಟ್ಕೀಪರ್-ಬ್ಯಾಟರ್ ಧ್ರುವ್ ಜುರೇಲ್ ಅವರ ಶತಕ.
ಜುರೆಲ್ ಶತಕ
ಜುರೇಲ್ ಅತ್ಯಂತ ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಿ 177 ಎಸೆತಗಳಲ್ಲಿ ಅಜೇಯ 115 ರನ್ ಗಳಿಸಿದರು. ಅವರ ಇನ್ನಿಂಗ್ಸ್ನಲ್ಲಿ 9 ಬೌಂಡರಿ ಹಾಗೂ ಒಂದು ಸಿಕ್ಸರ್ ಸೇರಿತ್ತು. ಇದು ಟೆಸ್ಟ್ ಕ್ರಿಕೆಟ್ನಲ್ಲಿ ಜುರೇಲ್ ಅವರ ಎರಡನೇ ಶತಕವಾಗಿದೆ.
ಮೊದಲ ದಿನ ಗಾಯಗೊಂಡು ರಿಟೈರ್ಡ್ ಹರ್ಟ್ ಆಗಿದ್ದ ರಿಷಭ್ ಪಂತ್, ಎರಡನೇ ದಿನ ಮತ್ತೆ ಕ್ರೀಸ್ಗೆ ಮರಳಿದರು. ಪಂತ್ ಆಕ್ರಮಣಕಾರಿ ಬ್ಯಾಟಿಂಗ್ ನಡೆಸಿ 63 ರನ್ ಗಳಿಸಿದರು. ಪಂತ್ ಮತ್ತು ಜುರೇಲ್ ನಡುವೆ 112 ರನ್ಗಳ ಮಹತ್ವದ ಜೊತೆಯಾಟ ಮೂಡಿಬಂದಿತು.
ಪಂತ್ ಔಟಾದ ಬಳಿಕವೂ ಜುರೇಲ್ ಇನ್ನಿಂಗ್ಸ್ಗೆ ವೇಗ ನೀಡುತ್ತಾ ತಂಡದ ಮೊತ್ತವನ್ನು 500ರ ಗಡಿ ದಾಟಿಸಿದರು. ಕೆಳ ಕ್ರಮಾಂಕದ ಬ್ಯಾಟರ್ಗಳಿಂದಲೂ ಅವರಿಗೆ ಉತ್ತಮ ಬೆಂಬಲ ದೊರೆಯಿತು.
ಶ್ರೀಲಂಕಾ ಪರ ಅಸಿತ ಫೆರ್ನಾಂಡೊ 4 ವಿಕೆಟ್ ಪಡೆದು ಭಾರತದ ಬ್ಯಾಟರ್ಗಳಿಗೆ ಸವಾಲು ಒಡ್ಡಿದರು. ಪ್ರವಾತ್ ಜಯಸೂರ್ಯ 2 ವಿಕೆಟ್ ಕಬಳಿಸಿದರು.
ಲಂಕಾ ಇನ್ನಿಂಗ್ಸ್ ಗೆ ಮಳೆ ಅಡ್ಡಿ
ಇನ್ನು 503/9ಕ್ಕೆ ಡಿಕ್ಲೇರ್ ಮಾಡಿಕೊಂಡ ಬಳಿಕ ಭಾರತಕ್ಕೆ ಶ್ರೀಲಂಕಾದ ಆರಂಭಿಕ ವಿಕೆಟ್ಗಳನ್ನು ಪಡೆಯಲು ಹೆಚ್ಚಿನ ಅವಕಾಶ ಸಿಗಲಿಲ್ಲ. ಶ್ರೀಲಂಕಾ ತನ್ನ ಮೊದಲ ಇನ್ನಿಂಗ್ಸ್ ಆರಂಭಿಸಿದ ಕೆಲವೇ ಕ್ಷಣಗಳಲ್ಲಿ ಮಳೆ ಹಾಗೂ ಮಂದ ಬೆಳಕಿನಿಂದಾಗಿ ಆಟ ಸ್ಥಗಿತಗೊಂಡಿತು.
ಬಳಿಕ ಆಟ ಆರಂಭವಾಯಿತಾದರೂ ಲಂಕಾಗೆ ಟೀಂ ಇಂಡಿಯಾ ವೇಗಿಗಳಾದ ಪ್ರಸಿದ್ಧ್ ಕೃಷ್ಣ ಮತ್ತು ಮಾನವ್ ಸುತಾರ್ ತಲಾ ಒಂದೊಂದು ವಿಕೆಟ್ ಪಡೆಯುವ ಮೂಲಕ ಮರ್ಮಾಘಾತ ನೀಡಿದರು.
ಲಂಕಾ ಆರಂಭಿಕರಾದ ಲಾಹಿರು ಉದಾರ 1 ರನ್ ಗಳಿಸಿ ಪ್ರಸಿದ್ಧ್ ಕೃಷ್ಣಾಗೆ ವಿಕೆಟ್ ಒಪ್ಪಿಸಿದರೆ, ಪ್ರಭಾತ್ ಜಯಸೂರ್ಯ ಕೇವಲ 2 ರನ್ ಗಳಿಸಿದ್ದ ವೇಳೆ ಮಾನವ್ ಸುತಾರ್ ಬೌಲಿಂಗ್ ನಲ್ಲಿ ಎಲ್ ಬಿ ಬಲೆಗೆ ಬಿದ್ದರು.
ಅಂತಿಮವಾಗಿ ದಿನದ ಅಂತ್ಯಕ್ಕೆ ಶ್ರೀಲಂಕಾ 2 ವಿಕೆಟ್ ನಷ್ಟಕ್ಕೆ 8 ರನ್ ಗಳಿಸಿದ್ದು, ಇನ್ನೂ 495 ಹಿನ್ನಡೆಯಲ್ಲಿದೆ. ಲಂಕಾ ಪರ ಕಮಿಲ್ ಮಿಶಾರಾ ಮೂರನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ.