

ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ನೆನ್ನೆ ವಡೋದರಾದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ನಡೆದ ಫೈನಲ್ ಪಂದ್ಯಗಳಲ್ಲಿ ಗೆದ್ದು ಬೀಗುವ ಮೂಲಕ ಎರಡನೇ ಬಾರಿಗೆ ಡಬ್ಲ್ಯುಪಿಎಲ್ ಟ್ರೋಫಿಯನ್ನು ಗೆದ್ದಿದೆ. ತಂಡದ ಗೆಲುವಿನಲ್ಲಿ ನಾಯಕಿ ಸ್ಮೃತಿ ಮಂಧಾನ ಅವರ ಅದ್ಭುತ ಇನಿಂಗ್ಸ್ ಮರೆಯುವಂತಿರಲಿಲ್ಲ. ಜ್ವರದಿಂದ ಬಳಲುತ್ತಿದ್ದರೂ 41 ಎಸೆತಗಳಲ್ಲಿ 87 ರನ್ ಗಳಿಸುವ ಮೂಲಕ 204 ರನ್ಗಳ ಗುರಿಯನ್ನು ಬೆನ್ನಟ್ಟುವಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡಕ್ಕೆ ಕೊಡುಗೆ ನೀಡಿದರು.
ಪಂದ್ಯದ ಬಳಿಕ ಮಾತನಾಡಿರುವ ಆರ್ಸಿಬಿ ಮುಖ್ಯ ಕೋಚ್ ಮಲೋಲನ್ ರಂಗರಾಜನ್, 'ಸ್ಮೃತಿ ತೀವ್ರ ಜ್ವರದಿಂದ ಬಳಲುತ್ತಿದ್ದರು. ಆದರೆ, ಅವರು ಅದನ್ನು ತೋರಿಸಿಕೊಳ್ಳಲು ಸಹ ಬಯಸಲಿಲ್ಲ. ಈ ಬಗ್ಗೆ ತಂಡದಲ್ಲಿ ಯಾರಿಗೂ ತಿಳಿದಿರಲಿಲ್ಲ... ಒಂದೇ ಒಂದು ಕ್ಷಣವೂ ಅವರು ಅದನ್ನು ತೋರಿಸಲಿಲ್ಲ. ಅದು ಸ್ಮೃತಿ. ನಾನು ಇಂದು ಮಧ್ಯಾಹ್ನ ಅವರೊಂದಿಗೆ ಮಾತನಾಡಿದಾಗ, ಅವರು, 'ನಹಿ, ಮಾಲೋ, ಕೊಯಿ ಸಮಸ್ಯೆ ನಹಿ (ಯಾವುದೇ ಸಮಸ್ಯೆ ಇಲ್ಲ), ನಾನು ಮೈದಾನದಲ್ಲಿ ಇರುತ್ತೇನೆ' ಎಂದು ಹೇಳಿದ್ದಾಗಿ ತಿಳಿಸಿದರು.
ಆರ್ಸಿಬಿ ಗೆಲುವಿಗೆ ಆಸ್ಟ್ರೇಲಿಯಾದ ಜಾರ್ಜಿಯಾ ವಾಲ್ ಅವರೊಂದಿಗೆ ಸ್ಮೃತಿಯವರ ಜೊತೆಯಾಟವು ನೆರವಾಯಿತು. ಇಬ್ಬರು ಆಟಗಾರ್ತಿಯರು ಭರ್ಜರಿ ಅರ್ಧಶತಕದ ಮೂಲಕ ತಂಡಕ್ಕೆ ಅಡಿಪಾಯ ಹಾಕಿಕೊಟ್ಟರು.
'ಅವರು ತನ್ನ ಅತ್ಯುತ್ತಮ ಇನಿಂಗ್ಸ್ಗಳಲ್ಲಿ ಒಂದನ್ನು ಫೈನಲ್ಗಾಗಿಯೇ ಉಳಿಸಿಕೊಂಡಿದ್ದರೆಂದು ನಾನು ಭಾವಿಸುತ್ತೇನೆ. ಅವರು ಬ್ಯಾಟಿಂಗ್ ಮಾಡಿದ ರೀತಿ ಹೇಗಿತ್ತೆಂದರೆ.... ಯಾವ ಪದ ಬಳಸಬೇಕೆಂದು ಸಹ ನನಗೆ ತಿಳಿಯುತ್ತಿಲ್ಲ. ತುಂಬಾ ಕ್ಲಾಸಿ, ತುಂಬಾ ಸೊಗಸಾಗಿತ್ತು... ನೀವು ಅವರನ್ನು ನೋಡಿದಾಗ, ಅವರಿಗೆ ಏನು ಮಾಡಬೇಕೆಂದು ತಿಳಿದಿರುವಂತೆ ಕಾಣಿಸುತ್ತಿತ್ತು. ಅವಪು ಸಮಯಕ್ಕೆ ತಕ್ಕಂತೆ ಚೆಂಡನ್ನು ಬೌಂಡರಿಯತ್ತ ಅಟ್ಟುತ್ತಿದ್ದರು. ಯಾವ ಎಸೆತದಲ್ಲಿ ದಾಳಿ ಮಾಡಬೇಕೆಂದು ಅರಿತಿದ್ದರು' ಎಂದರು.
'ಪಂದ್ಯಕ್ಕೆ ಎರಡು ದಿನಗಳ ಮೊದಲು ಅವರು ಅಭ್ಯಾಸ ಆರಂಭಿಸಿದರು ಮತ್ತು ಅವರ ಬ್ಯಾಟಿಂಗ್, ಅವರ ಭಾವನೆಗಳ ಬಗ್ಗೆ ನಾವು ಸಾಕಷ್ಟು ಮಾತನಾಡಿದ್ದೇವೆ ಮತ್ತು ಬುಧವಾರದ ಅವರ ಕೊನೆಯ ಅಭ್ಯಾಸ ಅವಧಿಯು ಅವರು ಬ್ಯಾಟಿಂಗ್ ಮಾಡಿದ ಅತ್ಯುತ್ತಮ ತರಬೇತಿಗಳಲ್ಲಿ ಒಂದಾಗಿದೆ ಎಂದು ನಾನು ಭಾವಿಸುತ್ತೇನೆ' ಎಂದು ರಂಗರಾಜನ್ ತಿಳಿಸಿದರು.
ಡಬ್ಲ್ಯುಪಿಎಲ್ 2026ನೇ ಆವೃತ್ತಿಯ ಆರಂಭದಿಂದಲೇ ಐದಕ್ಕೆ ಅದು ಪಂದ್ಯಗಳನ್ನು ಗೆದ್ದು ಪ್ಲೇಆಫ್ಗೆ ತಲುಪಿದ್ದ ಆರ್ಸಿಬಿ ಬಳಿಕ ಸತತ ಎರಡು ಪಂದ್ಯಗಳಲ್ಲಿ ಸೋಲು ಕಂಡಿತ್ತು. ಬಳಿಕ ಯುಪಿಡಬ್ಲ್ಯು ವಿರುದ್ಧ ಗೆಲುವು ಸಾಧಿಸುವ ಮೂಲಕ ನೇರವಾಗಿ ಫೈನಲ್ ಪ್ರವೇಶಿಸಿತ್ತು.
'ನಾವು ಈಗ ನಾಲ್ಕು ವರ್ಷಗಳಿಂದ ಒಟ್ಟಿಗೆ ಕೆಲಸ ಮಾಡುತ್ತಿದ್ದೇವೆ. ಸ್ಮೃತಿ ಅವರೊಂದಿಗೆ, ಟೂರ್ನಮೆಂಟ್ನಲ್ಲಿ ನಮ್ಮ ನಮ್ಮ ಪಾತ್ರಗಳು ಏನೆಂದು ನಮ್ಮಿಬ್ಬರಿಗೂ ನಿಖರವಾಗಿ ತಿಳಿದಿದೆ ಎಂದು ನಾನು ಭಾವಿಸುತ್ತೇನೆ. ಆದ್ದರಿಂದ ನಮ್ಮ ನಡುವೆ ಇದು ತುಂಬಾ ಸ್ಪಷ್ಟವಾಗಿದೆ, ಉತ್ತಮ ಸೌಹಾರ್ದತೆ ಎಂದು ನಾನು ಹೇಳುತ್ತೇನೆ. ನಾನು ಅವರೊಂದಿಗೆ ಕೆಲಸ ಮಾಡುವುದನ್ನು ಸಂಪೂರ್ಣವಾಗಿ ಆನಂದಿಸಿದೆ ಮತ್ತು ಅದು ಸ್ವಲ್ಪ ಸಮಯದವರೆಗೆ ಆರ್ಸಿಬಿಗೆ ಮುಂದುವರಿಯುತ್ತದೆ ಎಂದು ಭಾವಿಸುತ್ತೇನೆ. ಅವರು ತಂಡವನ್ನು ಮಾದರಿಯಾಗಿ ಮುನ್ನಡೆಸಿದರು, ಪ್ರತಿ ತರಬೇತಿ ಅವಧಿಯಲ್ಲಿ ಮಾನದಂಡಗಳನ್ನು ಹೊಂದಿಸಿದರು. ಸ್ಮೃತಿ ಎಷ್ಟು ಒಳ್ಳೆಯವರು ಎಂದು ಹೇಳಲು ಪ್ರಯತ್ನಿಸಿದರೂ, ಅದಕ್ಕೆ ಮಾತುಗಳೇ ಬರುವುದಿಲ್ಲ' ಎಂದರು.
Advertisement