

ಫೆಬ್ರುವರಿ 15 ರಂದು ಭಾರತ ವಿರುದ್ಧದ ಟಿ20 ವಿಶ್ವಕಪ್ 2026ರ ಪಂದ್ಯವನ್ನು ಬಹಿಷ್ಕರಿಸುವ ನಿರ್ಧಾರದಿಂದ ಪಾಕಿಸ್ತಾನ ಯು-ಟರ್ನ್ ತೆಗೆದುಕೊಳ್ಳುತ್ತದೆ ಎಂದು ಬಿಸಿಸಿಐನ ಮಾಜಿ ಆಯ್ಕೆದಾರ ಚೇತನ್ ಶರ್ಮಾ ಭವಿಷ್ಯ ನುಡಿದಿದ್ದಾರೆ. ಪಾಕಿಸ್ತಾನದ ನಿರ್ಧಾರವು ಸಂಪೂರ್ಣವಾಗಿ ರಾಜಕೀಯ ಪ್ರೇರಿತವಾಗಿದೆ ಮತ್ತು ಬಾಂಗ್ಲಾದೇಶ ಚುನಾವಣೆ ಮುಗಿದ ನಂತರ, ಪಾಕಿಸ್ತಾನ ತನ್ನ ನಿಲುವನ್ನು ಬದಲಾಯಿಸುತ್ತದೆ ಎಂದು ಅವರು ಹೇಳಿದ್ದಾರೆ.
ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಬುಧವಾರ, ಭಾರತದ ವಿರುದ್ಧ ಪಂದ್ಯವನ್ನು ಆಡುವುದಿಲ್ಲ. ಬಾಂಗ್ಲಾದೇಶಕ್ಕೆ ಬೆಂಬಲ ಸೂಚಿಸುವ ಸಲುವಾಗಿ ಇದು ನಮ್ಮ ಸ್ಪಷ್ಟ ನಿಲುವು ಎಂದು ದೃಢಪಡಿಸಿದ್ದಾರೆ. ಆಟಗಾರರ ಭದ್ರತೆ ದೃಷ್ಟಿಯಿಂದಾಗಿ ಗುಂಪು ಹಂತದ ಪಂದ್ಯಗಳಿಗಾಗಿ ಭಾರತಕ್ಕೆ ಪ್ರಯಾಣಿಸಲು ನಿರಾಕರಿಸಿದ ನಂತರ ಬಾಂಗ್ಲಾದೇಶವು ಪಂದ್ಯಾವಳಿಯಿಂದಲೇ ಹೊರಗುಳಿದಿದೆ. ಬಳಿಕ ಪಾಕಿಸ್ತಾನ ಬಾಂಗ್ಲಾದೇಶಕ್ಕೆ ಬೆಂಬಲ ಸೂಚಿಸಿದ್ದು, ಪಂದ್ಯಾವಳಿಯಲ್ಲಿ ಭಾಗವಹಿಸಿದರೂ ಭಾರತ ವಿರುದ್ಧದ ಪಂದ್ಯ ಬಹಿಷ್ಕರಿಸುವುದಾಗಿ ಹೇಳಿದೆ. ಈ ಮಧ್ಯೆ, ಚೇತನ್ ಪಾಕಿಸ್ತಾನವು 'ಯು-ಟರ್ನ್' ಹೊಡೆಯಲಿದೆ ಎಂದು ಭವಿಷ್ಯ ನುಡಿದಿದ್ದಾರೆ.
'ಬಾಂಗ್ಲಾದೇಶ ಆಟಗಾರರ ತಪ್ಪೇನು? ಏನೂ ಇಲ್ಲ. ಇದು ರಾಜಕೀಯ ಪ್ರೇರಿತ. ಫೆಬ್ರುವರಿ 12ರಂದು ಬಾಂಗ್ಲಾದೇಶದಲ್ಲಿ ಚುನಾವಣೆ ಇದೆ. ಅದರ ನಂತರ, ನೀವು ಯು-ಟರ್ನ್ ನೋಡುತ್ತೀರಿ. 'ಸಾರ್ವಜನಿಕ ಭಾವನೆಯನ್ನು ಪರಿಗಣಿಸಿ, ಕ್ರಿಕೆಟ್ಗೆ ತೊಂದರೆಯಾಗಬಾರದು ಎಂಬ ದೃಷ್ಟಿಯಿಂದ, ಪಾಕಿಸ್ತಾನವು ಭಾರತದ ವಿರುದ್ಧದ ಪಂದ್ಯವನ್ನು ಆಡುತ್ತದೆ' ಎಂಬ ಹೇಳಿಕೆ ಇರುತ್ತದೆ. ಈ ನಿಲುವು ಇನ್ನೂ ಬಾಂಗ್ಲಾದೇಶ ಚುನಾವಣೆವರೆಗೂ ಮಾತ್ರ ಇರುತ್ತದೆ. ನಾನು ರಾಜಕಾರಣಿ; ನಾನು ಚುನಾವಣೆಗಳಲ್ಲಿ ಸ್ಪರ್ಧಿಸಿದ್ದೇನೆ. ಚುನಾವಣೆಯ ನಂತರ, ಬಹುಶಃ ಸೇನಾ ಮುಖ್ಯಸ್ಥರು ಕೂಡ ಕ್ರೀಡೆಯನ್ನು ರಾಜಕೀಯದಿಂದ ಮುಕ್ತವಾಗಿಡಬೇಕು ಮತ್ತು ಪಂದ್ಯ ಮುಂದುವರಿಯಬೇಕು ಎಂದು ಹೇಳಬಹುದು' ಎಂದು ಅವರು ಇಂಡಿಯಾ ಟುಡೇಗೆ ತಿಳಿಸಿದ್ದಾರೆ.
ಭಾರತ ವಿರುದ್ಧದ ಪಂದ್ಯ 'ಬಹಿಷ್ಕರಿಸುವ' ನಿಲುವಿನ ಬಗ್ಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿಯಿಂದ (ಪಿಸಿಬಿ) ಯಾವುದೇ ಅಧಿಕೃತ ಸಂವಹನ ಬಂದಿಲ್ಲ ಎಂದು ಐಸಿಸಿ ದೃಢಪಡಿಸಿದೆ. ಐಸಿಸಿಗೆ ಅಧಿಕೃತವಾಗಿ ತಿಳಿಸದ ಹೊರತು 'ಈ ಹೇಳಿಕೆಗಳಿಗೆ' ಯಾವುದೇ ಅರ್ಥವಿರುವುದಿಲ್ಲ ಮತ್ತು ಈ ವಿವಾದದಿಂದಾಗಿ ಕ್ರಿಕೆಟಿಗರೇ ಬಳಲುತ್ತಿದ್ದಾರೆ ಎಂದು ಅವರು ಹೇಳಿದರು.
'ಇಲ್ಲಿಯವರೆಗೆ ಪಾಕಿಸ್ತಾನವು ಐಸಿಸಿಗೆ ಔಪಚಾರಿಕವಾಗಿ ಏನನ್ನೂ ತಿಳಿಸಿಲ್ಲ. ಅಧಿಕೃತ ದೃಢೀಕರಣವಿಲ್ಲದೆ ಹೇಳಿಕೆಗಳು ಅರ್ಥಹೀನ. ಯಾರಾದರೂ ನಿವೃತ್ತಿ ಘೋಷಿಸಬಹುದು. ಆದರೆ, ನೀವು ಅದನ್ನು ಅಧಿಕೃತವಾಗಿ ಸಲ್ಲಿಸದ ಹೊರತು, ಏನೂ ಬದಲಾಗುವುದಿಲ್ಲ. ಇಲ್ಲಿ ನಿಜವಾಗಿಯೂ ಬಳಲುತ್ತಿರುವವರು ಯಾರು? ಕ್ರಿಕೆಟ್ ಮತ್ತು ಕ್ರಿಕೆಟಿಗರು' ಎಂದು ಚೇತನ್ ಹೇಳಿದರು.
Advertisement