

ಕೊಲಂಬೋ: ಐಸಿಸಿ ಟಿ20 ವಿಶ್ವಕಪ್ 2026 ಟೂರ್ನಿಯ ವಿವಿಧ ಕಾರಣಗಳಿಂದಾಗಿ ಐಸಿಸಿ ಮತ್ತು ಪಿಸಿಬಿ ನಡುವಿನ ಬಾಂಧವ್ಯ ಹಳಸಿರುವಂತೆಯೇ ಇತ್ತ ಭಾರತ ಮತ್ತು ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಪಂದ್ಯಕ್ಕೆ ಐಸಿಸಿ ಅಧ್ಯಕ್ಷ ಜಯ್ ಶಾ, ಪಿಸಿಬಿ ಮುಖ್ಯಸ್ಥ ಮೊಹ್ಸಿನ್ ನಖ್ವಿ ವೇದಿಕೆ ಹಂಚಿಕೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಭಾರತದ ವಿರುದ್ಧದ ಪಂದ್ಯದ ವಿಚಾರವಾಗಿ ಪಿಸಿಬಿ ಮತ್ತು ಐಸಿಸಿ ನಡುವಿನ ಬಿಕ್ಕಟ್ಟು ಮುಗಿದ ನಂತರ, ಐಸಿಸಿ ಮುಖ್ಯಸ್ಥ ಜಯ್ ಶಾ ಮತ್ತು ಪಿಸಿಬಿ ಮುಖ್ಯಸ್ಥ ಮೊಹ್ಸಿನ್ ನಖ್ವಿ ಸೇರಿದಂತೆ ಹಲವಾರು ಗಣ್ಯರು ಶ್ರೀಲಂಕಾ ರಾಜಧಾನಿಯಲ್ಲಿ ಪಂದ್ಯಕ್ಕಾಗಿ ಹಾಜರಾಗುವ ನಿರೀಕ್ಷೆಯಿದೆ.
ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯ (ಬಿಸಿಬಿ) ಅಧ್ಯಕ್ಷ ಅಮೀನುಲ್ ಇಸ್ಲಾಂ ಬುಲ್ಬುಲ್ ಮತ್ತು ಶ್ರೀಲಂಕಾ ಕ್ರಿಕೆಟ್ (ಎಸ್ಎಲ್ಸಿ) ಮುಖ್ಯಸ್ಥ ಶಮ್ಮಿ ಸಿಲ್ವಾ ಕೂಡ ಈ ಸಮಾರಂಭದಲ್ಲಿ ಭಾಗವಹಿಸಬಹುದು ಎನ್ನಲಾಗಿದೆ.
ಇದೇ ಭಾನುವಾರ ಅಂದರೆ ಫೆಬ್ರವರಿ 15ರಂದು ಶ್ರೀಲಂಕಾದ ಕೊಲಂಬೊದಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಹೈ-ವೋಲ್ಟೇಜ್ ಪಂದ್ಯ ನಡೆಯುತ್ತಿದೆ. ಪಿಸಿಬಿ ಅಧ್ಯಕ್ಷ ನಖ್ವಿ ಮತ್ತು ಐಸಿಸಿ ಮುಖ್ಯಸ್ಥ ಜಯ್ ಶಾ ಅವರು ಫೆಬ್ರವರಿ 15 ರಂದು ಭಾರತ-ಪಾಕಿಸ್ತಾನ ಪಂದ್ಯವನ್ನು ವೀಕ್ಷಿಸಲು ಶ್ರೀಲಂಕಾ ಮತ್ತು ಬಾಂಗ್ಲಾದೇಶ ಮಂಡಳಿಯ ಅಧ್ಯಕ್ಷರೊಂದಿಗೆ ಕೊಲಂಬೊಗೆ ಪ್ರಯಾಣಿಸುವ ಸಾಧ್ಯತೆಯಿದೆ" ಎಂದು ಮೂಲಗಳು ತಿಳಿಸಿವೆ.
ಒಂದು ವೇಳೆ ಜಯ್ ಶಾ ಮತ್ತು ನಖ್ವಿ ಈ ಪಂದ್ಯದಲ್ಲಿ ವೇದಿಕೆ ಹಂಚಿಕೊಂಡರೆ ಪರಿಹರಿಸಬೇಕಾದ ಯಾವುದೇ ವಿಷಯದ ಬಗ್ಗೆ ಅವರು ಚರ್ಚಿಸಬಹುದು ಎಂದು ಹೇಳಲಾಗಿದೆ.
ಮಾಹಿತಿ ಇಲ್ಲ ಎಂದ ಶ್ರೀಲಂಕಾ ಮಂಡಳಿ
ಇನ್ನು ಇದೇ ವಿಚಾರವಾಗಿ ಶ್ರೀಲಂಕಾ ಕ್ರಿಕೆಟ್ ಮಂಡಳಿ ವ್ಯತಿರಿಕ್ತ ಹೇಳಿಕೆ ನೀಡಿದ್ದು, ಈ ಬಗ್ಗೆ ಮಾತನಾಡಿರುವ ಶ್ರೀಲಂಕಾ ಕ್ರಿಕೆಟ್ ಮಂಡಳಿ ಕಾರ್ಯದರ್ಶಿ ಬಂಡುಲ ದಿಸಾನಾಯಕೆ, 'ಈ ಬಗ್ಗೆ ನಮಗೆ ಮಾಹಿತಿ ಇಲ್ಲ.
ಆದರೆ ಒಂದು ವೇಳೆ ಅಂತಹುದೊಂದು ಪರಿಸ್ಥಿತಿ ಬಂದರೆ ಅತಿಥಿಗಳನ್ನು ಸ್ವಾಗತಿಸಲು ನಾವು ಸಂತೋಷಪಡುತ್ತೇವೆ. ಎಲ್ಲಾ ಪಾಲುದಾರರು ತೆಗೆದುಕೊಂಡ ನಿರ್ಧಾರವನ್ನು ನಾವು ಸ್ವಾಗತಿಸುತ್ತೇವೆ ಎಂದರು.
"ಇದು ಒಂದು ದೇಶವಾಗಿ ಶ್ರೀಲಂಕಾ ಕ್ರಿಕೆಟ್ ಮಂಡಳಿ ಮತ್ತು ಶ್ರೀಲಂಕಾ ರಾಷ್ಟ್ರಕ್ಕೆ ಒಳ್ಳೆಯದು. ಅಭಿಮಾನಿಗಳು ಕೊಲಂಬೊದಲ್ಲಿ ಗುಂಪುಗೂಡಿ ಪಂದ್ಯವನ್ನು ವೀಕ್ಷಿಸಲು ಇನ್ನೂ ತಡವಾಗಿಲ್ಲ ಎಂದು ನಾನು ಭಾವಿಸುತ್ತೇನೆ. ಇದು ನಮ್ಮ ಆರ್ಥಿಕತೆಗೆ ದೊಡ್ಡ ಉತ್ತೇಜನ ನೀಡುತ್ತದೆ ಮತ್ತು ನಮ್ಮ ಪ್ರವಾಸೋದ್ಯಮ ಮತ್ತು ಹೋಟೆಲ್ ಉದ್ಯಮದ ಹಿತದೃಷ್ಟಿಯಿಂದ ಸೇವೆ ಸಲ್ಲಿಸುತ್ತದೆ" ಎಂದು ಅವರು ಹೇಳಿದರು.
Advertisement