

ಟಿ20 ವಿಶ್ವಕಪ್ 2026ರ ಮುಖಾಮುಖಿಯಲ್ಲಿ ಪಾಕಿಸ್ತಾನದ ವಿರುದ್ಧ ಭಾರತ 61 ರನ್ಗಳ ಭರ್ಜರಿ ಜಯ ಸಾಧಿಸಿದ ನಂತರ, ಪಾಕಿಸ್ತಾನದ ಮಾಜಿ ವೇಗಿ ಶೋಯೆಬ್ ಅಖ್ತರ್, ಪ್ರಶಸ್ತಿಯನ್ನು ರಕ್ಷಿಸಿಕೊಳ್ಳಲು ಸೂರ್ಯಕುಮಾರ್ ಯಾದವ್ ನೇತೃತ್ವದ ತಂಡವಿದೆ ಎಂದು ಹೇಳಿದರು. ಐಸಿಸಿ ಪುರುಷರ ಟಿ20 ವಿಶ್ವಕಪ್ ಹಣಾಹಣಿಯಲ್ಲಿ ತಮ್ಮ ಸಾಂಪ್ರದಾಯಿಕ ಎದುರಾಳಿಗಳ ವಿರುದ್ಧ ಭರ್ಜರಿ ಜಯ ಸಾಧಿಸುವ ಮೂಲಕ ಭಾರತ ಈಗ 8-1 ಮುನ್ನಡೆ ಸಾಧಿಸಿದೆ.
'ನಾವು ಪಂದ್ಯದಲ್ಲಿ ಎಲ್ಲಿಯೂ ಇರಲಿಲ್ಲ. ಶಾಹೀನ್ ಗಂಟೆಗೆ 125 ಕಿಮೀ ವೇಗದಲ್ಲಿ ಬೌಲಿಂಗ್ ಮಾಡಿದರು. ಆಧುನಿಕ ಕ್ರಿಕೆಟ್ಗೆ ಇದು ಅಗತ್ಯವಲ್ಲ. ಇಂದಿನ ಆಟವು ಹೆಚ್ಚಿನ ವೇಗ ಮತ್ತು ತೀವ್ರತೆಯನ್ನು ಬಯಸುತ್ತದೆ. ಇವರಿಗೆ ಒತ್ತಡವನ್ನು ನಿಭಾಯಿಸುವುದು ಗೊತ್ತಿಲ್ಲ. ಕಳೆದ 15-20 ವರ್ಷಗಳಿಂದ, ಯಾವುದೇ ಹೂಡಿಕೆ ಇಲ್ಲ. ಪಾಕಿಸ್ತಾನ ಕ್ರಿಕೆಟ್ ಹಲವು ವರ್ಷಗಳಿಂದ ಯುವ ಆಟಗಾರರು, ಮೂಲಸೌಕರ್ಯ ಅಥವಾ ವ್ಯವಸ್ಥೆಗಳನ್ನು ಸರಿಯಾಗಿ ಅಭಿವೃದ್ಧಿಪಡಿಸಿಲ್ಲ. ಅತ್ಯಂತ ದುಃಖದ ವಾಸ್ತವವೆಂದರೆ ಈಗಿರುವ ತಂಡವನ್ನು ಭಾರತದೊಂದಿಗೆ ಹೋಲಿಕೆ ಮಾಡಲು ಸಹ ಆಗುವುದಿಲ್ಲ' ಎಂದು ಶೋಯೆಬ್ ಎಬಿಪಿ ನ್ಯೂಸ್ಗೆ ಹೇಳಿದ್ದಾರೆ.
'ಏನೂ ಗೊತ್ತಿಲ್ಲದ ಒಬ್ಬ ವ್ಯಕ್ತಿ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಅಧ್ಯಕ್ಷ (ಮೊಹ್ಸಿನ್ ನಖ್ವಿ) ಆಗಿದ್ದಾನೆ. ನೀವು ಏನು ಮಾಡುತ್ತೀರಿ? ತಂಡವು ಹೇಗೆ ಬೆಳವಣಿಗೆ ಕಾಣುತ್ತದೆ? ನಿರ್ಣಾಯಕ ಪಂದ್ಯಗಳಲ್ಲಿ ಪಂದ್ಯ ಗೆಲ್ಲುವ ಪ್ರದರ್ಶನವನ್ನೇ ನೀಡದ ಆಟಗಾರನನ್ನು (ಬಾಬರ್ ಆಜಮ್) ಸೂಪರ್ಸ್ಟಾರ್ ಮಾಡಿದ್ದೀರಿ. ಅಸಮರ್ಥರಿಗೆ ನಿರ್ದಿಷ್ಟ ಕೆಲಸವನ್ನು ನೀಡುವುದು ವಿಶ್ವದ ದೊಡ್ಡ ಅಪರಾಧ' ಎಂದು ಅವರು ಹೇಳಿದರು.
ಅಲ್ಲದೆ, ಮೊಹ್ಸಿನ್ ನಖ್ವಿ ಅವರನ್ನು 'ಅಸಮರ್ಥ ಮತ್ತು 'ಜಾಹಿಲ್'' ಎಂದು ಕರೆದ ಅಖ್ತರ್, ಅವರು ಪಿಸಿಬಿ ಅಧ್ಯಕ್ಷರಾಗಲು ಯೋಗ್ಯರಲ್ಲ ಎಂದು ಹೇಳಿದರು.
ಟಾಸ್ ಗೆದ್ದ ಪಾಕಿಸ್ತಾನ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ನಂತರ ಆರಂಭಿಕರಾಗಿ ಕಣಕ್ಕಿಳಿದ ಅಭಿಷೇಕ್ ಶರ್ಮಾ ಡಕೌಟ್ ಆದರೂ, ಇಶಾನ್ ಕಿಶನ್ (40 ಎಸೆತಗಳಲ್ಲಿ 77) ಅವರ ಮಾಸ್ಟರ್ಕ್ಲಾಸ್ ನಾಕ್ ಮತ್ತು ನಾಯಕ ಸೂರ್ಯಕುಮಾರ್ ಯಾದವ್ (29 ಎಸೆತಗಳಲ್ಲಿ 3 ಬೌಂಡರಿ ಸಹಿತ 32) ಮತ್ತು ಶಿವಂ ದುಬೆ (17 ಎಸೆತಗಳಲ್ಲಿ 3 ಬೌಂಡರಿ ಮತ್ತು ಸಿಕ್ಸರ್ನೊಂದಿಗೆ 27) ಅವರ ನಿರ್ಣಾಯಕ ನಾಕ್ಗಳು ಭಾರತವನ್ನು 175/7 ರ ಸ್ಪರ್ಧಾತ್ಮಕ ಮೊತ್ತಕ್ಕೆ ಕೊಂಡೊಯ್ದವು.
ಈ ಗುರಿ ಬೆನ್ನತ್ತಿದ ಪಾಕಿಸ್ತಾನ ಆರಂಭದಲ್ಲಿಯೇ ಪ್ರಮುಖ ಬ್ಯಾಟರ್ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. 10 ಓವರ್ಗಳ ಅಂತ್ಯಕ್ಕೆ ಪಾಕಿಸ್ತಾನ 71/4 ಗಳಿಸಿತು. 44 ರನ್ ಗಳಿಸಿದ್ದ ಉಸ್ಮಾನ್ ಔಟ್ ಆದ ಬಳಿಕ ಯಾರೊಬ್ಬರ ಬ್ಯಾಟ್ನಿಂದಲೂ ರನ್ ಬರಲಿಲ್ಲ. ಅಂತಿಮವಾಗಿ ಪಾಕಿಸ್ತಾನ 18 ಓವರ್ಗಳಲ್ಲಿಯೇ ತನ್ನೆಲ್ಲ ವಿಕೆಟ್ ಕಳೆದುಕೊಂಡು ಕೇವಲ 114 ರನ್ ಗಳಿಸುವ ಮೂಲಕ ಭಾರತದ ವಿರುದ್ಧ ಸೋಲು ಕಂಡಿತು.
Advertisement