

ಲಾಹೋರ್: ಟಿ20 ವಿಶ್ವಕಪ್ನಲ್ಲಿ ಭಾರತದ ವಿರುದ್ಧ ಸೋಲಿನ ಬಳಿಕ ಪಾಕಿಸ್ತಾನ ತಂಡದಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿಯಾಗಿದ್ದು, ಪ್ರಮುಖವಾಗಿ ಸ್ಟಾರ್ ಬ್ಯಾಟರ್ ಬಾಬರ್ ಅಜಮ್ ಉಪಸ್ಥಿತಿ ವ್ಯಾಪಕ ಚರ್ಚೆಗೀಡಾಗುತ್ತಿದೆ.
ಹಾಲಿ ನಡೆಯುತ್ತಿರುವ ಟಿ20 ವಿಶ್ವಕಪ್ನಲ್ಲಿ ಪಾಕ್ ಸ್ಟಾರ್ ಬ್ಯಾಟರ್ ಬಾಬರ್ ಅಜಮ್ ಇದುವರೆಗೆ ಮೂರು ಪಂದ್ಯಗಳಿಂದ ಕೇವಲ 66 ರನ್ ಕಲೆಹಾಕಿದ್ದಾರೆ. ಇದು ಅವರ ತಂಡದಲ್ಲಿನ ಉಪಸ್ಥಿತಿ ಕುರಿತು ಮತ್ತೊಮ್ಮೆ ಪರಿಶೀಲನೆಗೆ ಕಾರಣವಾಗಿದೆ.
ಟಿ20 ವಿಶ್ವಕಪ್ನಲ್ಲಿ ಬಾಬರ್ ಅಜಮ್ ಅವರ ನಿರಂತರ ಹೋರಾಟದ ನಡುವೆಯೂ ಪಾಕಿಸ್ತಾನ ಮಾಜಿ ಕ್ರಿಕೆಟಿಗ ಮೊಹಮ್ಮದ್ ಯೂಸುಫ್ ಸಾರ್ವಜನಿಕವಾಗಿ ಅವರನ್ನು ಟೀಕಿಸಿದ್ದಾರೆ.
ಪಾಕಿಸ್ತಾನದ ಮಾಜಿ ನಾಯಕನಿಗೆ ಟಿ20 ಸ್ವರೂಪದಲ್ಲಿ ಉತ್ತಮ ಪ್ರದರ್ಶನ ನೀಡಲು ಅಗತ್ಯವಾದ ಕೌಶಲ್ಯವಿಲ್ಲ ಎಂದು ಯೂಸುಫ್ ಪ್ರತಿಪಾದಿಸಿದ್ದಾರೆ. ಬಾಬರ್ ಮೂರು ಪಂದ್ಯಗಳಲ್ಲಿ ಕೇವಲ 66 ರನ್ ಮಾತ್ರ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದು ಅವರ ಆಯ್ಕೆ ಬಗ್ಗೆ ಮತ್ತೊಮ್ಮೆ ಪರಿಶೀಲನೆಗೆ ಕಾರಣವಾಗಿದೆ.
ನನ್ನ ವಿರುದ್ಧವೇ ತಿರುಗಿಬಿದ್ರು
ಬಾಬರ್ ಆಜಂ ಅವರ ಕಳಪೆ ಫಾರ್ಮ್ ಬಗ್ಗೆ ನಾನು ಈ ಹಿಂದಿನಿಂದಲೂ ಸಾಕಷ್ಟು ವೇದಿಕೆಗಳಲ್ಲಿ ಚರ್ಚೆ ಮಾಡಿದ್ದೇನೆ. ಆದರೆ ಈ ಬಗ್ಗೆ ಪ್ರಸ್ತಾಪಿಸಿದಾಗಲೆಲ್ಲಾ ನನ್ನ ವಿರುದ್ಧವೇ ತಿರುಗಿಬೀಳುತ್ತಿದ್ರು.. ಬಾಬರ್ ಅವರನ್ನು ತಂಡದಿಂದ ಕೈಬಿಡಲು ಪ್ರಸ್ತಾಪಿಸಿದ್ದರಿಂದ ಆಯ್ಕೆದಾರರ ಹುದ್ದೆಗೆ ರಾಜೀನಾಮೆ ನೀಡಬೇಕಾಯಿತು. ಇಡೀ ತಂಡದ ಆಡಳಿತ ಮಂಡಳಿ ನನ್ನ ನಿಲುವನ್ನು ವಿರೋಧಿಸಿದ್ದರಿಂದ ಬಾಬರ್ ಆಜಂರನ್ನು ತಂಡದಿಂದ ಕೈಬಿಡುವ ಶಿಫಾರಸನ್ನು ತಿರಸ್ಕರಿಸಲಾಯಿತು ಎಂದು ಯೂಸುಫ್ ಬಹಿರಂಗಪಡಿಸಿದ್ದಾರೆ.
ಬ್ಯಾಟಿಂಗ್ ತಂತ್ರಗಾರಿಕೆ ಹಳ್ಳ ಹಿಡಿದಿದೆ
"ಬಾಬರ್ ಅವರ ಬ್ಯಾಟಿಂಗ್ ತಂತ್ರಗಾರಿಕೆ ಹಳ್ಳಹಿಡಿದಿದ್ದು, ಈ ಬಗ್ಗೆ ನಾನು 2-3 ವರ್ಷಗಳಿಂದ ಹೇಳುತ್ತಲೇ ಇದ್ದೇನೆ. ಅವರು ಫಾರ್ಮ್ನಲ್ಲಿಲ್ಲ ಎಂದು ನಾನು ಕೇಳುತ್ತಿದ್ದೆ. ಆದರೆ ಅವರು ಇದನ್ನು ಒಪ್ಪುತ್ತಿರಲಿಲ್ಲ. ಒಬ್ಬ ಆಟಗಾರ ಎರಡು ಅಥವಾ ಮೂರು ಸರಣಿಗಳಿಗೆ ಮಾತ್ರ ಕಳಪೆ ಫಾರ್ಮ್ ಎದುರಿಸಬಹುದು.
ಆದರೆ ಬಾಬರ್ ಕಳೆದ ಎರಡು-ಮೂರು ವರ್ಷಗಳಿಂದ ಅವರ ಬ್ಯಾಟ್ ನಿಂದ ರನ್ ಬಂದಿಲ್ಲ. ಬಾಬರ್ಗೆ ವಿಶ್ರಾಂತಿ ನೀಡಲು ನಾನು ಸೂಚಿಸಿದ ಕ್ಷಣ, ಎಲ್ಲರೂ ಇದ್ದಕ್ಕಿದ್ದಂತೆ ನನ್ನ ವಿರುದ್ಧ ತಿರುಗಿಬಿದ್ದರು. ಇದರಿಂದಾಗಿ ನಾನು ನನ್ನ ಆಯ್ಕೆದಾರ ಹುದ್ದಿಗೆ ರಾಜೀನಾಮೆ ನೀಡಬೇಕಾಯಿತು. ಅಂತಿಮವಾಗಿ ಅವರನ್ನು ಒಂದೆರಡು ಸರಣಿಗಳಿಂದ ಕೈಬಿಡಲಾಯಿತು," ಎಂದು ಯೂಸುಫ್ 'ಹೌ ಡಸ್ ಇಟ್ ವರ್ಕ್?' ಪಾಡ್ಕಾಸ್ಟ್ನಲ್ಲಿ ಹೇಳಿದ್ದಾರೆ.
ಕೌಶಲ್ಯವೇ ಇಲ್ಲವೆಂದರೆ ಏನೂ ಮಾಡಲು ಸಾಧ್ಯವಿಲ್ಲ
ಕೌಶಲ್ಯವಿಲ್ಲದವರೆಗೆ, ಮನಸ್ಸು ಏನನ್ನೂ ಮಾಡಲು ಸಾಧ್ಯವಿಲ್ಲ. ನಿಮಗೆ ಕೌಶಲ್ಯವಿಲ್ಲದಿದ್ದರೆ, ಮನಸ್ಸು ತಾನೆ ಏನು ಮಾಡುತ್ತದೆ?" ಎಂದು ಯೂಸುಫ್ ಕಿಡಿಕಾರಿದ್ದಾರೆ.
Advertisement