ವಿಶ್ವ ಕ್ರಿಕೆಟ್ನಲ್ಲಿ, ಏಷ್ಯನ್ ತಂಡಗಳು ಹೆಚ್ಚು ಪ್ರಮುಖ ಪಾತ್ರ ವಹಿಸುತ್ತಿವೆ. ಭಾರತ, ಪಾಕಿಸ್ತಾನ, ಬಾಂಗ್ಲಾದೇಶ, ಶ್ರೀಲಂಕಾ ಮತ್ತು ಅಫ್ಘಾನಿಸ್ತಾನಗಳು ಇತರ ಕ್ರಿಕೆಟ್ ಆಡುವ ರಾಷ್ಟ್ರಗಳಿಗಿಂತ ಹೆಚ್ಚಿನ ಗಮನ ಸೆಳೆಯುತ್ತವೆ. ಆದರೆ, ಇವೆಲ್ಲವೂ ಒಗ್ಗಟ್ಟಿನಿಂದ ದೂರವಿವೆ. ಭಾರತ ಮತ್ತು ಶ್ರೀಲಂಕಾದಲ್ಲಿ ನಡೆಯುತ್ತಿರುವ 2026ರ ಟಿ20 ವಿಶ್ವಕಪ್ಗೆ ಮುನ್ನ, ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಯೊಂದಿಗೆ ಸಾಕಷ್ಟು ತಿಕ್ಕಾಟ ಕಂಡುಬಂತು. ಬಾಂಗ್ಲಾದೇಶ ಮತ್ತು ಪಾಕಿಸ್ತಾನ ಕೆಲವು ಬೇಡಿಕೆಗಳನ್ನು ಮುಂದಿಟ್ಟವು. ಮೊದಲು, ಬಾಂಗ್ಲಾದೇಶ "ಭದ್ರತಾ ಸಮಸ್ಯೆಗಳನ್ನು" ಉಲ್ಲೇಖಿಸಿ ಭಾರತಕ್ಕೆ ಪ್ರಯಾಣಿಸಲು ನಿರಾಕರಿಸಿತು ಮತ್ತು ನಂತರ ಪಾಕಿಸ್ತಾನವು ಭಾರತದ ಪಂದ್ಯ ಬಹಿಷ್ಕರಿಸುವುದಾಗಿ ಹೇಳಿತು. ಭಾರತಕ್ಕೆ ಪ್ರಯಾಣಿಸಲು ನಿರಾಕರಿಸಿದ್ದಕ್ಕಾಗಿ ಟಿ20 ವಿಶ್ವಕಪ್ನಿಂದ ಹೊರಗುಳಿದ ಬಾಂಗ್ಲಾದೇಶಕ್ಕೆ ಬೆಂಬಲ ಸೂಚಿಸುವ ಸಲುವಾಗಿ ಪಂದ್ಯ ಬಹಿಷ್ಕರಿಸುತ್ತಿದ್ದೇವೆ ಎಂಬುದು ಪಾಕಿಸ್ತಾನದ ತರ್ಕವಾಗಿತ್ತು.
ಏಷ್ಯನ್ ಕ್ರಿಕೆಟ್ ಕೌನ್ಸಿಲ್ನ (ಎಸಿಸಿ) ಮಾಜಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಮತ್ತು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯ (ಬಿಸಿಬಿ) ಮಾಜಿ ಪ್ರಧಾನ ಕಾರ್ಯದರ್ಶಿ ಸೈಯದ್ ಅಶ್ರಫುಲ್ ಹಕ್ ರೇವ್ಸ್ಪೋರ್ಟ್ಸ್ಗೆ ನೀಡಿದ ಸಂದರ್ಶನದಲ್ಲಿ, ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಅಧ್ಯಕ್ಷ ಮೊಹ್ಸಿನ್ ನಖ್ವಿ ಅವರು ಬಿಸಿಬಿ ಮುಖ್ಯಸ್ಥ ಅಮೀನುಲ್ ಇಸ್ಲಾಂ ಅವರನ್ನು ಹೇಗೆ ದಾರಿ ತಪ್ಪಿಸಿದರು ಎಂಬ ಬಗ್ಗೆ ಚರ್ಚಿಸಿದ್ದಾರೆ.
'ಬಾಂಗ್ಲಾದೇಶದ ನಿರ್ಧಾರವನ್ನು ಪ್ರಚೋದಿಸುವಲ್ಲಿ ಪಾಕಿಸ್ತಾನದ ಪಾತ್ರವಿದೆ ಎಂದು ನೀವು ಭಾವಿಸುತ್ತೀರಾ?' ಎಂದು ಅಶ್ರಫುಲ್ ಅವರನ್ನು ಕೇಳಲಾಯಿತು.
'ಬಹುಶಃ, ನಾನು ರಾಜಕೀಯದ ಬಗ್ಗೆ ಚರ್ಚಿಸಲು ಇಷ್ಟಪಡುವುದಿಲ್ಲ. ಕ್ರಿಕೆಟ್ ಆಡಳಿತಗಾರನಾಗಿ, ನಾನು ಪ್ರಾಮಾಣಿಕತೆ ಮತ್ತು ಬದ್ಧತೆಯ ಮೇಲೆ ಗಮನ ಕೇಂದ್ರೀಕರಿಸುತ್ತೇನೆ. ಅಮೀನುಲ್ ಇಸ್ಲಾಂ ಬಹುಶಃ ಮುಗ್ಧರಾಗಿರಬಹುದು. ಸದ್ಯದ ಎಸಿಸಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಅವರಿಂದ ಪ್ರಭಾವಿತರಾಗಿದ್ದರು. ಆದರೆ, ದಿನದ ಕೊನೆಯಲ್ಲಿ, ಯಾರು ಗೆದ್ದರು?' ಎಂದರು.
ಭಾರತ ಪ್ರವಾಸ ಮಾಡದಿರುವ ಬಾಂಗ್ಲಾದೇಶದ ನಿರ್ಧಾರದ ಬಗ್ಗೆಯೂ ಅವರನ್ನು ಕೇಳಲಾಯಿತು.
'ಆ ಸಮಯದಲ್ಲಿ ಬಾಂಗ್ಲಾದೇಶ ಸರ್ಕಾರ ತೆಗೆದುಕೊಂಡ ನಿರ್ಧಾರ, ವಿಶೇಷವಾಗಿ ಆಗಿನ ಕ್ರೀಡಾ ಸಲಹೆಗಾರ (ಆಸಿಫ್ ನಜ್ರುಲ್) ತೆಗೆದುಕೊಂಡ ನಿರ್ಧಾರವು ಅಕಾಲಿಕವಾಗಿತ್ತು ಎಂದು ನಾನು ಯಾವಾಗಲೂ ನಂಬಿದ್ದೆ. ಮುಸ್ತಾಫಿಜುರ್ ರೆಹಮಾನ್ ಅವರಿಗೆ ಭಾರತದಲ್ಲಿ ಐಪಿಎಲ್ನಲ್ಲಿ ಆಡಲು ಅವಕಾಶ ನೀಡದ ಕಾರಣ ಇಂತಹ ಕಠಿಣ ನಿರ್ಧಾರ ತೆಗೆದುಕೊಳ್ಳಲಾಯಿತು. ಆದರೆ, ಅದಕ್ಕೆ ಯಾವುದೇ ಸಮರ್ಥನೆ ಇರಲಿಲ್ಲ' ಎಂದು ಹಕ್ ಹೇಳಿದರು.
'ನಮಗೆ ಬಿಸಿಸಿಐ ಮತ್ತು ಅಗತ್ಯವಿದ್ದರೆ ಭಾರತ ಸರ್ಕಾರದೊಂದಿಗೆ ಮಾತುಕತೆ ನಡೆಸಲು ಸಾಕಷ್ಟು ಸಮಯವಿತ್ತು. ಐಸಿಸಿ ಪಂದ್ಯಾವಳಿಯನ್ನು ಆಯೋಜಿಸಿ ಭದ್ರತೆಯನ್ನು ಒದಗಿಸಿತು. ಅದನ್ನು ಅವರು ಪೂರೈಸಿದರು. ನಮಗೆ ಇನ್ನೂ ಕಾಳಜಿಗಳಿದ್ದರೆ, ಸರ್ಕಾರವು ಆಟಗಾರರ ಸುರಕ್ಷತೆಯ ಬಗ್ಗೆ ಹೆಚ್ಚುವರಿ ಭರವಸೆಗಳನ್ನು ಕೋರಬಹುದಿತ್ತು' ಎಂದರು.
'ಅಂತರರಾಷ್ಟ್ರೀಯ ಕ್ರಿಕೆಟ್ ರಾಜತಾಂತ್ರಿಕತೆಯ ಬಗ್ಗೆ ಅವರಿಗೆ (ಅಮೀನುಲ್) ತಿಳಿವಳಿಕೆ ಇಲ್ಲ. ಅವರು ಬಲೆಗೆ ಸಿಲುಕಿದರು. ದೇಶದ ಶ್ರೇಷ್ಠ ಆಸ್ತಿಯಾಗಿರುವ ತಮ್ಮ ಆಟಗಾರರನ್ನು ರಕ್ಷಿಸುವ ಬದಲು ಸರ್ಕಾರವನ್ನು ಸಂತೋಷಪಡಿಸುವ ಬಗ್ಗೆ ಹೆಚ್ಚು ಕಾಳಜಿ ವಹಿಸಿದರು' ಎಂದು ಹೇಳಿದರು.
'ಲಿಟ್ಟನ್ ದಾಸ್, ಮುಸ್ತಾಫಿಜುರ್ ರೆಹಮಾನ್ ಮತ್ತು ನಜ್ಮುಲ್ ಶಾಂಟೊ ಅವರಂತಹ ಆಟಗಾರರು 30ರ ದಶಕದ ಆರಂಭದಲ್ಲಿದ್ದಾರೆ. ಹೀಗಾಗಿ, ಈ ವಿಶ್ವಕಪ್ ಅನ್ನು ಕಳೆದುಕೊಳ್ಳುವುದು ಅವರಿಗೆ ಮತ್ತು ಬಾಂಗ್ಲಾದೇಶದ ಕ್ರಿಕೆಟ್ ಅಭಿಮಾನಿಗಳಿಗೆ ಆಗುವ ಅನ್ಯಾಯವಾಗಿದೆ. ಭಾರತದ ನಂತರ, ಬಾಂಗ್ಲಾದೇಶ ಬಹುಶಃ ಹೆಚ್ಚು ಕ್ರಿಕೆಟ್ ಗೀಳನ್ನು ಹೊಂದಿರುವ ರಾಷ್ಟ್ರವಾಗಿದೆ ಮತ್ತು ವಿಶ್ವಕಪ್ನಲ್ಲಿ ಅಭಿಮಾನಿಗಳಿಂದ ತಮ್ಮ ತಂಡವನ್ನು ವಂಚಿತಗೊಳಿಸುವುದು ನಾಚಿಕೆಗೇಡಿನ ಮತ್ತು ನಿರಾಶೆಯ ಸಂಗತಿ' ಎಂದು ತಿಳಿಸಿದರು.
Advertisement