

2026ರ ಟಿ20 ವಿಶ್ವಕಪ್ ಗ್ರೂಪ್ ಹಂತದಲ್ಲಿ ಅದ್ಭುತ ಪ್ರದರ್ಶನ ನೀಡುವ ಮೂಲಕ ಅಜೇಯ ಓಟವನ್ನು ಮುಂದುವರಿಸಿದ್ದ ಭಾರತವನ್ನು ದಕ್ಷಿಣ ಆಫ್ರಿಕಾ ತಂಡ ಸೂಪರ್ 8 ಹಂತದಲ್ಲಿ ಸೋಲಿಸಿತು. ಈ ಮೂಲಕ ಭಾರತ 76 ರನ್ ಅಂತರದಿಂದ ಹೀನಾಯ ಸೋಲು ಕಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಪ್ರೋಟಿಯಸ್ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 187 ರನ್ ಕಲೆಹಾಕಿತು. ವರುಣ್ ಚಕ್ರವರ್ತಿ ನಾಲ್ಕು ಓವರ್ಗಳಲ್ಲಿ 47 ರನ್ಗಳನ್ನು ಬಿಟ್ಟುಕೊಟ್ಟರೆ, ಹಾರ್ದಿಕ್ ಪಾಂಡ್ಯ 45 ರನ್ಗಳನ್ನು ಬಿಟ್ಟುಕೊಟ್ಟರು. ನಂತರ ಭಾರತ 18.5 ಓವರ್ಗಳಲ್ಲಿಯೇ 111 ರನ್ಗಳಿಗೆ ಆಲೌಟ್ ಆಯಿತು. ಇದು ಟಿ20 ವಿಶ್ವಕಪ್ನಲ್ಲಿಯೇ ಅತಿದೊಡ್ಡ ಸೋಲಾಯಿತು. ವಿಶ್ವಕಪ್ ಟೂರ್ನಿಯಲ್ಲಿ 13 ಪಂದ್ಯಗಳ ಅಜೇಯ ಓಟಕ್ಕೆ ಬ್ರೇಕ್ ಹಾಕಿತು. ಪಾಕಿಸ್ತಾನದ ಮಾಜಿ ವೇಗಿ ಶೋಯೆಬ್ ಅಖ್ತರ್ ಇದೀಗ ಭಾರತದ ಬೌಲಿಂಗ್ ಪಡೆಯ ಸಾಮರ್ಥ್ಯವನ್ನು ದಕ್ಷಿಣ ಆಫ್ರಿಕಾ ಬಹಿರಂಗಪಡಿಸಿದೆ ಎಂದು ಹೇಳಿದ್ದಾರೆ.
'ಭಾರತೀಯ ಬೌಲಿಂಗ್ ಸಾಮರ್ಥ್ಯವನ್ನು ಬಹಿರಂಗಪಡಿಸಲಾಗಿದೆ. ಸಾಮಾನ್ಯವಾಗಿ 97–98 ಕಿಮೀ. ವೇಗದಲ್ಲಿ ಬೌಲಿಂಗ್ ಮಾಡುವ ವರುಣ್ ಚಕ್ರವರ್ತಿ 94 ಕಿಮೀ. ವೇಗದಲ್ಲಿ ನಿಧಾನವಾಗಿ ಬೌಲಿಂಗ್ ಮಾಡುತ್ತಿದ್ದರಿಂದ ಪರಿಣಾಮಕಾರಿತ್ವದಲ್ಲಿ ಕುಸಿತ ಕಂಡುಬಂದಿದೆ. ಅವರ ಎಸೆತದಲ್ಲಿ ಡೆವಾಲ್ಡ್ ಬ್ರೆವಿಸ್ 'ನೋ-ಲುಕ್ ಸಿಕ್ಸ್' ಹೊಡೆದರು. ಬ್ರೆವಿಸ್ ಎಷ್ಟು ಆತ್ಮವಿಶ್ವಾಸದಿಂದ ಮತ್ತು ಸಲೀಸಾಗಿ ಸಿಕ್ಸ್ ಹೊಡೆದರು ಎಂಬುದನ್ನು ಇದು ತೋರಿಸುತ್ತದೆ. ಅವರು ಚೆಂಡನ್ನು ಹತ್ತಿರದಿಂದ ನೋಡುವ ಅಗತ್ಯವೂ ಇರಲಿಲ್ಲ' ಎಂದು ಅಖ್ತರ್ ಟ್ಯಾಪ್ಮ್ಯಾಡ್ನಲ್ಲಿ ಹೇಳಿದರು.
'ಇಂದು ಭಾರತದ ಬೌಲಿಂಗ್ ಪಡೆ ಏನೆಂಬುದು ಬಹಿರಂಗವಾಯಿತು. ಹಾರ್ದಿಕ್ ಪಾಂಡ್ಯ ಮತ್ತು ಶಿವಂ ದುಬೆ ಸುಮಾರು 120 ಕಿಮೀ. ವೇಗದಲ್ಲಿ ಬೌಲಿಂಗ್ ಮಾಡುತ್ತಿದ್ದರು. ನಿಮ್ಮನ್ನು ಬೆದರಿಸಲು ಅವರಿಬ್ಬರೂ ಮಾಲ್ಕಮ್ ಮಾರ್ಷಲ್ ಅಲ್ಲ. ನೀವು ಅವರನ್ನು ಡೆತ್ ಓವರ್ಗಳಲ್ಲಿ ಅವರನ್ನು ಕಳುಹಿಸಿದರೆ, ಪ್ರೋಟಿಯಸ್ನಿಂದ ಅಂತಹ ಪ್ರತಿದಾಳಿ ಅನಿವಾರ್ಯವಾಗಿರುತ್ತದೆ. ಪಾಂಡ್ಯ ಇಂದು 45 ರನ್ಗಳನ್ನು ಬಿಟ್ಟುಕೊಟ್ಟರು' ಎಂದರು.
ಅಕ್ಷರ್ ಪಟೇಲ್ ಅವರನ್ನು ಕೈಬಿಟ್ಟು ವಾಷಿಂಗ್ಟನ್ ಸುಂದರ್ ಅವರನ್ನು ತಂಡದ ಪ್ಲೇಯಿಂಗ್ ಇಲೆವೆನ್ನಲ್ಲಿ ಸೇರಿಸಿಕೊಳ್ಳುವ ಭಾರತ ತಂಡದ ಆಡಳಿತ ಮಂಡಳಿಯ ನಿರ್ಧಾರವು ಇದೀಗ ಟೀಕೆಗೆ ಗುರಿಯಾಗಿದೆ.
'ಐಪಿಎಲ್ ಪಂದ್ಯಗಳಿಗೆ ಒಳ್ಳೆಯದು ಎಂದು ನಾನು ಒಪ್ಪುತ್ತೇನೆ. ನೀವು 14 ಪಂದ್ಯಗಳನ್ನು ಆಡಲಿರುವುದರಿಂದ ತಂಡವನ್ನು ಬದಲಿಸಬೇಕು. ಆದರೆ, ಐಸಿಸಿ ಅಭಿಯಾನಗಳಲ್ಲಿ, ನೀವು ತಂಡವನ್ನು ಹೆಚ್ಚು ಸ್ಥಿರವಾಗಿ ಇರಿಸಿಕೊಳ್ಳಲು ಸಾಧ್ಯವಾದರೆ ಉತ್ತಮ. ಎಡಗೈ ಆಟಗಾರರ ವಿರುದ್ಧ ನೀವು ವಾಷಿಂಗ್ಟನ್ ಸುಂದರ್ ಅವರನ್ನು ಬಳಸಬೇಕು ಎಂಬುದನ್ನು ನಾನು ಶೇ 100ಕ್ಕೆ ನೂರಷ್ಟು ಒಪ್ಪುತ್ತೇನೆ; ನೀವು ಅವರನ್ನು ಆಡಿಸಬೇಕು, ನಾನು ಅದನ್ನೆಲ್ಲ ಒಪ್ಪುತ್ತೇನೆ. ಆದರೆ, ಅಕ್ಷರ್ ಪಟೇಲ್ ಟಿ20 ಕ್ರಿಕೆಟ್ನಲ್ಲಿ ನಿಮ್ಮ ಎಂವಿಪಿ ಆಗಿದ್ದಾರೆ. ಅಕ್ಷರ್ ಪಟೇಲ್ ಮಾಡಿದ್ದನ್ನು ನಾವು ಮರೆಯಬಾರದು' ಎಂದು ಭಾರತದ ಮಾಜಿ ತಾರೆ ರವಿಚಂದ್ರನ್ ಅಶ್ವಿನ್ ತಮ್ಮ ಯೂಟ್ಯೂಬ್ ಚಾನೆಲ್ ವಿಡಿಯೋದಲ್ಲಿ ಹೇಳಿದ್ದಾರೆ.
Advertisement