

ಜನವರಿ 11 ರಿಂದ ಆರಂಭವಾಗಲಿರುವ ನ್ಯೂಜಿಲೆಂಡ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಶನಿವಾರ 15 ಸದಸ್ಯರ ತಂಡವನ್ನು ಪ್ರಕಟಿಸಿದೆ. ಶುಭಮನ್ ಗಿಲ್ ತಂಡವನ್ನು ಮುನ್ನಡೆಸಲಿದ್ದಾರೆ. ಮಂಡಳಿಯ ಸೆಂಟರ್ ಆಫ್ ಎಕ್ಸಲೆನ್ಸ್ನಿಂದ ಫಿಟ್ನೆಸ್ ಕ್ಲಿಯರೆನ್ಸ್ ಪಡೆದರೆ ಉಪನಾಯಕ ಶ್ರೇಯಸ್ ಅಯ್ಯರ್ ಸರಣಿಯಲ್ಲಿ ಭಾಗವಹಿಸಲಿದ್ದಾರೆ. ಅನುಭವಿ ಆಟಗಾರರಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಕೂಡ ತಂಡದ ಭಾಗವಾಗಿದ್ದಾರೆ. ಈಮಧ್ಯೆ, ಕೆಲಸದ ಹೊರೆ ನಿರ್ವಹಣೆ ಕಾರಣದಿಂದಾಗಿ ಹಾರ್ದಿಕ್ ಪಾಂಡ್ಯ ಅವರಿಗೆ ವಿಶ್ರಾಂತಿ ನೀಡಲಾಗಿದೆ. 'ಹಾರ್ದಿಕ್ ಪಾಂಡ್ಯ ಅವರಿಗೆ ಒಂದು ಪಂದ್ಯದಲ್ಲಿ 10 ಓವರ್ಗಳನ್ನು ಬೌಲಿಂಗ್ ಮಾಡಲು ಬಿಸಿಸಿಐ ಸಿಒಇ ಅನುಮತಿ ನೀಡಿಲ್ಲ ಮತ್ತು ನಂತರ ಐಸಿಸಿ ಪುರುಷರ ಟಿ20 ವಿಶ್ವಕಪ್ ಅನ್ನು ಪರಿಗಣಿಸಿ, ಅವರ ಕೆಲಸದ ಹೊರೆಯನ್ನು ನಿರ್ವಹಿಸಲಾಗುತ್ತಿದೆ' ಎಂದು ಬಿಸಿಸಿಐ ಪ್ರಕಟಣೆಯಲ್ಲಿ ತಿಳಿಸಿದೆ.
ಹಾರ್ದಿಕ್ಗೆ ವಿಶ್ರಾಂತಿ ನೀಡಿರುವುದರಿಂದ, ನಿತೀಶ್ ಕುಮಾರ್ ರೆಡ್ಡಿ ಏಕದಿನ ತಂಡದಲ್ಲಿ ತಮ್ಮ ಸ್ಥಾನವನ್ನು ಉಳಿಸಿಕೊಂಡಿದ್ದಾರೆ.
1983ರ ವಿಶ್ವಕಪ್ ವಿಜೇತ ಮತ್ತು ಭಾರತದ ಮಾಜಿ ಆರಂಭಿಕ ಆಟಗಾರ ಕ್ರಿಸ್ ಶ್ರೀಕಾಂತ್, ನಿತೀಶ್ ಕುಮಾರ್ ರೆಡ್ಡಿ ಅವರ ಆಯ್ಕೆ ವಿರುದ್ಧ ವಾಗ್ದಾಳಿ ನಡೆಸಿದ್ದು, ಆಲ್ರೌಂಡರ್ ಆಗಿ ಅವರ ಅರ್ಹತೆಯನ್ನು ಪ್ರಶ್ನಿಸಿದ್ದಾರೆ. ಸ್ಪೋರ್ಟ್ಸ್ಕೀಡಾ ಉಲ್ಲೇಖಿಸಿದಂತೆ ಅವರು ತಮ್ಮ ಯೂಟ್ಯೂಬ್ ಚಾನೆಲ್ ಚೀಕಿ ಚೀಕಾದಲ್ಲಿ ಈ ಹೇಳಿಕೆ ನೀಡಿದ್ದಾರೆ.
ನಿತೀಶ್ ಕುಮಾರ್ ರೆಡ್ಡಿ ಭಾರತ ಪರ 10 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 396 ರನ್ ಗಳಿಸಿ 8 ವಿಕೆಟ್ ಪಡೆದಿದ್ದಾರೆ. ಅವರು ಎರಡು ಏಕದಿನ ಪಂದ್ಯಗಳಲ್ಲಿ ಆಡಿದ್ದು, 27 ರನ್ ಗಳಿಸಿದ್ದಾರೆ ಮತ್ತು ವಿಕೆಟ್ ಪಡೆಯಲು ವಿಫಲರಾಗಿದ್ದಾರೆ. ನಾಲ್ಕು ಟಿ20 ಪಂದ್ಯಗಳಲ್ಲಿ, ರೆಡ್ಡಿ 90 ರನ್ ಗಳಿಸಿ ಮೂರು ವಿಕೆಟ್ ಪಡೆದಿದ್ದಾರೆ.
'ಆಲ್ರೌಂಡರ್ ಆಗಿ ಆಯ್ಕೆಯಾಗುವಷ್ಟು ಯಾವ ಸಾಧನೆ ಮಾಡಿದ್ದಾರೆ ಎಂದು ನನಗೆ ತಿಳಿದಿಲ್ಲ. ಅವರ ಬೌಲಿಂಗ್ನಲ್ಲಿ ಎದುರಾಳಿಗಳು ಸುಲಭವಾಗಿ ರನ್ ಗಳಿಸುತ್ತಾರೆ. ಆದ್ದರಿಂದ ಅವರು ಬೌಲಿಂಗ್ ಮಾಡುವ ವಿಶ್ವಾಸವೂ ಇರುವುದಿಲ್ಲ. ರೆಡ್ಡಿ ಅವರನ್ನು ತಂಡಕ್ಕೆ ಆಯ್ಕೆ ಮಾಡಿರುವುದರ ಹಿಂದಿನ ತರ್ಕವೇ ನನಗೆ ಅರ್ಥವಾಗುತ್ತಿಲ್ಲ. ಹಾರ್ದಿಕ್ ಪಾಂಡ್ಯ ಅವರ ಬದಲಿಗೆ ರೆಡ್ಡಿ ಹೇಗೆ ಆಯ್ಕೆಯಾಗುತ್ತಾರೆ. ಹಾರ್ದಿಕ್ ಬ್ಯಾಟಿಂಗ್, ಬೌಲಿಂಗ್ ಮತ್ತು ಫೀಲ್ಡಿಂಗ್ ಮೂರು ಕ್ಷೇತ್ರಗಳಲ್ಲಿಯೂ ಕೊಡುಗೆ ನೀಡುತ್ತಾರೆ, ಆದರೆ ರೆಡ್ಡಿ ಹಾಗೆ ಮಾಡುವುದಿಲ್ಲ ಎಂದು ಶ್ರೀಕಾಂತ್ ಹೇಳಿದರು.
'ನಿತೀಶ್ ಕುಮಾರ್ ರೆಡ್ಡಿ ತಂಡಕ್ಕೆ ಶುದ್ಧ ಬೌಲರ್ ಆಗಿ ಹೊಂದಿಕೊಳ್ಳಲು ಸಾಧ್ಯವೇ? ನೀವು ಅವರಿಗೆ ಸತತವಾಗಿ ಮೂರು ಅಥವಾ ನಾಲ್ಕು ಓವರ್ಗಳನ್ನು ನೀಡುತ್ತೀರಾ? ಅವರು ಕೇವಲ ಐದು ಅಥವಾ ಆರು ಓವರ್ಗಳನ್ನು ಬೌಲ್ ಮಾಡಬೇಕಾಗಿದ್ದರೂ, ಅವರು ಅದನ್ನು ಹೇಗೆ ಮಾಡುತ್ತಾರೆ? ಯಾವುದೇ ಅವಕಾಶವಿಲ್ಲ' ಎಂದು ಅವರು ಹೇಳಿದರು.
ನ್ಯೂಜಿಲೆಂಡ್ ವಿರುದ್ಧದ ಏಕದಿನ ಪಂದ್ಯಗಳಿಗೆ ಭಾರತ ತಂಡ
ಶುಭಮನ್ ಗಿಲ್ (ನಾಯಕ), ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಶ್ರೇಯಸ್ ಅಯ್ಯರ್ (ಉಪನಾಯಕ), ವಾಷಿಂಗ್ಟನ್ ಸುಂದರ್, ರವೀಂದ್ರ ಜಡೇಜಾ, ಮೊಹಮ್ಮದ್ ಸಿರಾಜ್, ಹರ್ಷಿತ್ ರಾಣಾ, ಪ್ರಸಿದ್ಧ್ ಕೃಷ್ಣ, ಕುಲದೀಪ್ ಯಾದವ್, ರಿಷಭ್ ಪಂತ್ (ವಿಕೆಟ್ ಕೀಪರ್), ನಿತೀಶ್ ಕುಮಾರ್ ರೆಡ್ಡಿ, ಅರ್ಶದೀಪ್ ಸಿಂಗ್, ಯಶಸ್ವಿ ಜೈಸ್ವಾಲ್.
Advertisement