

ಕೋಚ್ ಗೌತಮ್ ಗಂಭೀರ್ ಮತ್ತು ನಾಯಕ ಶ್ರೇಯಸ್ ಅಯ್ಯರ್ ನೇತೃತ್ವದ ಭಾರತದ T20I ತಂಡವು, 2026ರ ಟಿ20 ವಿಶ್ವಕಪ್ ಪ್ರಶಸ್ತಿ ಗೆಲುವಿನ ನಂತರ ಗೆಲುವಿಗಾಗಿ ಹುಡುಕಾಟ ನಡೆಸುತ್ತಿದೆ. ಐರ್ಲೆಂಡ್ ವಿರುದ್ಧ ಸರಣಿ ವೈಟ್ವಾಶ್ ಮತ್ತು ಸದ್ಯ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧ ಎರಡು ಪಂದ್ಯಗಳಲ್ಲಿ ಸೋಲು ಕಾಣುವ ಮೂಲಕ ಸಂಕಷ್ಟಕ್ಕೆ ಸಿಲುಕಿದೆ. ಈ ವರ್ಷದ ಆರಂಭದಲ್ಲಿ ಅಹಮದಾಬಾದ್ನಲ್ಲಿ ತಂಡವನ್ನು ವಿಶ್ವಕಪ್ ಗೆಲುವಿನತ್ತ ಮುನ್ನಡೆಸಿದ ನಾಯಕ ಸೂರ್ಯಕುಮಾರ್ ಯಾದವ್ ಅವರನ್ನು ಕಳಪೆ ಬ್ಯಾಟಿಂಗ್ ಫಾರ್ಮ್ನಿಂದಾಗಿ ತಂಡದಿಂದ ಕೈಬಿಡಲಾಯಿತು. ಶ್ರೇಯಸ್ ಅಯ್ಯರ್ ಅವರನ್ನು ನಾಯಕರನ್ನಾಗಿ ಮಾಡಲಾಯಿತು.
ಈಮಧ್ಯೆ, ಭಾರತವು ಐರ್ಲೆಂಡ್ ವಿರುದ್ಧ 2-0 ಸರಣಿ ವೈಟ್ವಾಶ್ ಅನುಭವಿಸಿತು. ಐದು ಪಂದ್ಯಗಳ ಸರಣಿಯಲ್ಲಿ ಇಂಗ್ಲೆಂಡ್ ವಿರುದ್ಧ 2-0 ಅಂತರದಿಂದ ಹಿನ್ನಡೆ ಅನುಭವಿಸಿದೆ. ಮೊದಲ ಪಂದ್ಯ ಮಳೆಯಿಂದಾಗಿ ರದ್ದಾದರೂ, ತ್ರೀ ಲಯನ್ಸ್ ಮುಂದಿನ ಎರಡು ಪಂದ್ಯದಲ್ಲಿ ಒಂದರಲ್ಲಿ ಗೆದ್ದರೂ ಸರಣಿ ಗೆದ್ದಂತೆ ಆಗುತ್ತದೆ.
ಇಂಗ್ಲೆಂಡ್ ವಿರುದ್ಧದ ಮೊದಲ ಟಿ20ಐ ಪಂದ್ಯದ ನಂತರ, ಭಾರತ ತಂಡವು 2026ರ ಟಿ20 ವಿಶ್ವಕಪ್ನ 'ಪ್ಲೇಯರ್ ಆಫ್ ದಿ ಟೂರ್ನಮೆಂಟ್' ಆಗಿದ್ದ ಸಂಜು ಸ್ಯಾಮ್ಸನ್ ಅವರನ್ನು ಕೈಬಿಟ್ಟಿತು. ಅದರ ನಂತರ ಕ್ರಮವಾಗಿ 5, 0 ಮತ್ತು 1 ರನ್ ಗಳಿಸಿದ್ದ ಸ್ಯಾಮ್ಸನ್ ಅವರ ಬದಲಿಗೆ 15 ವರ್ಷದ ವೈಭವ್ ಸೂರ್ಯವಂಶಿ ಅವರಿಗೆ ತಂಡದ ಪ್ಲೇಯಿಂಗ್ ಇಲೆವೆನ್ನಲ್ಲಿ ಸ್ಥಾನ ಸಿಕ್ಕಿತು.
ಇಂಗ್ಲೆಂಡ್ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ, ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ನ 7 ವಿಕೆಟ್ ನಷ್ಟಕ್ಕೆ 201 ರನ್ ಕಲೆಹಾಕಿತು. ಇದಕ್ಕೆ ಪ್ರತಿಯಾಗಿ ಭಾರತ 74 ರನ್ಗಳಿಗೆ ಆಲೌಟ್ ಆಯಿತು. ಹೀಗಾಗಿ, ಇತ್ತೀಚೆಗೆ ಉತ್ತಮ ಫಾರ್ಮ್ನಲ್ಲಿಲ್ಲದ ತಿಲಕ್ ವರ್ಮಾ ಅವರ ಬದಲಿಗೆ ಸ್ಯಾಮ್ಸನ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಬೇಕು ಎಂದು ಅನೇಕ ತಜ್ಞರು ಮತ್ತು ಅಭಿಮಾನಿಗಳು ಒತ್ತಾಯಿಸುತ್ತಿದ್ದಾರೆ. ಭಾರತ ತಂಡದ ಮಾಜಿ ಸಹಾಯಕ ಕೋಚ್ ಅಭಿಷೇಕ್ ನಾಯರ್ ಕೂಡ ಈ ವಿಷಯದ ಕುರಿತು ಮಾತನಾಡಿದ್ದಾರೆ.
'ಸಂಜು ಸ್ಯಾಮ್ಸನ್ ಅವರನ್ನು ತಂಡಕ್ಕೆ ಮರಳಿ ಕರೆತರುವುದಾದರೆ, ಅವರು ಯಶಸ್ವಿಯಾಗಲು ಸಾಧ್ಯವಿರುವ ಸ್ಥಾನದಲ್ಲೇ ಅವರನ್ನು ಆಡಿಸಬೇಕು ಎಂದು ನನಗೆ ಬಲವಾಗಿ ಅನ್ನಿಸುತ್ತದೆ. ಅವರನ್ನು ತಂಡಕ್ಕೆ ಸೇರಿಸಿಕೊಳ್ಳುವ ಉದ್ದೇಶದಿಂದ ಅವರನ್ನು 4, 5 ಅಥವಾ 6ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಇಳಿಸುವುದು ಸರಿಯಲ್ಲ. ಏಕೆಂದರೆ, ಅವರು ಈ ಕ್ರಮಾಂಕಗಳಲ್ಲಿ ಹೆಚ್ಚಾಗಿ ಬ್ಯಾಟಿಂಗ್ ಮಾಡಿಲ್ಲ ಹಾಗೂ ಇದರಲ್ಲಿ ಯಶಸ್ಸನ್ನೂ ಕಂಡಿಲ್ಲ' ಎಂದು ನಾಯರ್ ಹೇಳಿದರು.
ಸ್ಯಾಮ್ಸನ್ಗೆ ತಂಡದ ಆಡಳಿತ ಮಂಡಳಿಯು ಅಗ್ರ ಮೂರು ಸ್ಥಾನಗಳಲ್ಲಿ ಒಂದನ್ನು ನೀಡಬೇಕು ಅಥವಾ ಅವರನ್ನು ತಂಡದಿಂದ ಹೊರಗಿಡಬೇಕು ಎಂದು ಭಾರತದ ಮಾಜಿ ಬ್ಯಾಟರ್ ಅಭಿಪ್ರಾಯಪಟ್ಟರು.
'ಅವರು ಇನಿಂಗ್ಸ್ ಆರಂಭಿಸಿದಾಗ ಅಥವಾ ಅಗ್ರ ಮೂರು ಕ್ರಮಾಂಕಗಳಲ್ಲಿ ಬ್ಯಾಟಿಂಗ್ ಮಾಡಿದಾಗ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಹಾಗಾಗಿ, ಅವರಿಗೆ ಅಂತಹ ಸ್ಥಾನವನ್ನು ನೀಡಲು ಸಾಧ್ಯವಾಗದಿದ್ದರೆ, ಸಂಜು ಸ್ಯಾಮ್ಸನ್ ಅವರನ್ನು ಆಡಿಸದಿರುವುದೇ ಉತ್ತಮ; ಬದಲಿಗೆ ಭಾರತದ ಈಗಿರುವ ಬ್ಯಾಟಿಂಗ್ ಲೈನ್-ಅಪ್ನ್ನೇ ಮುಂದುವರಿಸುವುದು ಸೂಕ್ತ' ಎಂದು ಹೇಳಿದರು.
'ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳಬಾರದು. ಕೇವಲ ಬದಲಾವಣೆ ಮಾಡಬೇಕೆಂಬ ಕಾರಣಕ್ಕಾಗಿಯೇ ಬದಲಾವಣೆಗಳನ್ನು ಮಾಡಬಾರದು. ಸಂಜು ಸ್ಯಾಮ್ಸನ್ ತಂಡಕ್ಕೆ ಸೇರ್ಪಡೆಗೊಳ್ಳುವುದಾದರೆ, ಆಡಳಿತ ಮಂಡಳಿ ಮಾಡಬೇಕಾದ ಕೆಲಸ ಏನೆಂದರೆ: ಅವರು ಉತ್ತಮವಾಗಿ ಬ್ಯಾಟಿಂಗ್ ಮಾಡಲು ಸಾಧ್ಯವಿರುವ ಕ್ರಮಾಂಕದಲ್ಲಿಯೇ ಅವರನ್ನು ನಿಯೋಜಿಸುವುದು' ಎಂದು ಅಭಿಷೇಕ್ ಹೇಳಿದರು.