'ಅವರನ್ನು ಕೂಡಲೇ ಭೂಮಿಗೆ ಕರೆತನ್ನಿ, ಇಲ್ಲಿ ಅಡಗಿಕೊಳ್ಳಲು ಜಾಗವಿಲ್ಲ': ಗೌತಮ್ ಗಂಭೀರ್‌ಗೆ ಎಬಿ ಡಿವಿಲಿಯರ್ಸ್ ಸಲಹೆ!

'ಆತಂಕಪಡಲು ಸಾಕಷ್ಟು ವಿಷಯಗಳಿವೆ. ಗೌತಮ್ ಗಂಭೀರ್ ಅವರತ್ತ ಅನೇಕರ ದೃಷ್ಟಿ ನೆಟ್ಟಿರುತ್ತದೆ ಮತ್ತು ಅವರತ್ತಲೇ ಎಲ್ಲರು ಬೆರಳು (ಟೀಕೆಗಳು) ತೋರಿಸುತ್ತಾರೆ' ಎಂದು ಡಿ ವಿಲಿಯರ್ಸ್ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹೇಳಿದರು.
AB de Villiers
ಎಬಿ ಡಿವಿಲಿಯರ್ಸ್
Updated on

ಸತತ ಎರಡು ಬಾರಿ ಟಿ20 ವಿಶ್ವಕಪ್‌ ಗೆದ್ದ ನಂತರ, ಭಾರತದ ಟಿ20 ತಂಡವು ಇತ್ತೀಚಿನ ಐರ್ಲೆಂಡ್ ಮತ್ತು ಇಂಗ್ಲೆಂಡ್ ಪ್ರವಾಸಗಳಲ್ಲಿ ಹೀನಾಯ ಸೋಲು ಕಂಡಿತು. ಅಲ್ಲಿ ತಂಡವು ಕ್ರಮವಾಗಿ 0-2 ಮತ್ತು 0-4 ಅಂತರದಿಂದ ಸರಣಿ ವೈಟ್‌ವಾಶ್ ಅನುಭವಿಸಿತು. ದಕ್ಷಿಣ ಆಫ್ರಿಕಾದ ದಿಗ್ಗಜ ಎಬಿ ಡಿ ವಿಲಿಯರ್ಸ್, ಈ ಸೋಲು ಭಾರತಕ್ಕೆ ಎಚ್ಚರಿಕೆಯ ಕರೆ ನೀಡುವಂತಿದ್ದರೂ, ಅದು ಕೆಟ್ಟದ್ದೇನಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

ಐಪಿಎಲ್‌ನಲ್ಲಿ ಭಾರಿ ಪ್ರಮಾಣದ ರನ್‌ಗಳನ್ನು ಗಳಿಸಲು ಒಗ್ಗಿಕೊಂಡಿದ್ದ ಆಟಗಾರರನ್ನು ಮತ್ತೆ ವಾಸ್ತವಕ್ಕೆ (ನೆಲಕ್ಕೆ) ಮರಳುವಂತೆ ಮಾಡುವ ಅಗತ್ಯವಿದೆ ಎಂದು ಡಿ ವಿಲಿಯರ್ಸ್ ಭಾರತದ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರಿಗೆ ಸಲಹೆ ನೀಡಿದ್ದಾರೆ.

'ಆತಂಕಪಡಲು ಸಾಕಷ್ಟು ವಿಷಯಗಳಿವೆ. ಗೌತಮ್ ಗಂಭೀರ್ ಅವರತ್ತ ಅನೇಕರ ದೃಷ್ಟಿ ನೆಟ್ಟಿರುತ್ತದೆ ಮತ್ತು ಅವರತ್ತಲೇ ಎಲ್ಲರು ಬೆರಳು (ಟೀಕೆಗಳು) ತೋರಿಸುತ್ತಾರೆ' ಎಂದು ಡಿ ವಿಲಿಯರ್ಸ್ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹೇಳಿದರು.

'ಈ ತಂಡವು ಮುಂದೆ ಹೇಗೆ ಸಾಗಬೇಕು ಎಂಬುದರ ಕುರಿತು ಅವರು ನಾಯಕತ್ವ ವಹಿಸಿಕೊಳ್ಳಬೇಕು ಮತ್ತು ಜವಾಬ್ದಾರಿಯನ್ನು ಹೊರಬೇಕು. ಹಾಗೆ ಮಾಡಲು ಅವರಿಗೆ ಅಗತ್ಯವಿರುವ ಎಲ್ಲ ಅರ್ಹತೆಗಳೂ ಇವೆ. ಬಹುಶಃ, ಇದು ಎಚ್ಚೆತ್ತುಕೊಳ್ಳಬೇಕಾದ ಸಂದರ್ಭವಾಗಿದೆ. ಆದರೆ ಕೆಟ್ಟದ್ದೇನಲ್ಲ; ಐಪಿಎಲ್‌ನಲ್ಲಿ ಭಾರಿ ರನ್ ಗಳಿಸಿದ ಆಟಗಾರರನ್ನು ಮತ್ತೆ ವಾಸ್ತವಕ್ಕೆ ಮರಳುವಂತೆ ಮಾಡಲು ಇದು ಸಹಕಾರಿ' ಎಂದು ಹೇಳಿದರು.

'ಇದು ಅಂತಾರಾಷ್ಟ್ರೀಯ ಕ್ರಿಕೆಟ್ ಎಂಬುದನ್ನು ಅವರು ಅರ್ಥಮಾಡಿಕೊಳ್ಳಲಿ; ಇಲ್ಲಿ ಯಾವುದೇ ದೌರ್ಬಲ್ಯಕ್ಕೆ ಅವಕಾಶವಿಲ್ಲ. ಐಪಿಎಲ್‌ನಲ್ಲಿ, ಎದುರಾಳಿ ತಂಡದಲ್ಲಿ ಒಬ್ಬಿಬ್ಬರು ಬೌಲರ್‌ಗಳಾದರೂ ಇರುತ್ತಾರೆ. ಅವರ ವಿರುದ್ಧ ರನ್ ಗಳಿಸಬಹುದು ಎಂದು ನಮಗೆ ಅನ್ನಿಸುತ್ತದೆ. ಆದರೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅಡಗಿಕೊಳ್ಳಲು ಎಲ್ಲಿಯೂ ಜಾಗವಿರುವುದಿಲ್ಲ, ಹಾಗಾಗಿ ನೀವು ಕೇವಲ ಒಂದೆರಡು ವೇಗಗಳಿಗೆ (ಗೇರ್‌ಗಳಿಗೆ) ಸೀಮಿತವಾಗದೆ, ಅದಕ್ಕೂ ಹೆಚ್ಚಿನ ಸಾಮರ್ಥ್ಯವನ್ನು ಹೊಂದಿರಬೇಕಾಗುತ್ತದೆ. ನೀವು ಯಾವಾಗಲೂ 'ಐದನೇ ಗೇರ್'ನಲ್ಲಿಯೇ ಬ್ಯಾಟಿಂಗ್ ಮಾಡಲು ಸಾಧ್ಯವಿಲ್ಲ' ಎಂದು ಅವರು ಹೇಳಿದರು.

AB de Villiers
'ಅವಕಾಶ ಸಿಗದಿರುವುದು ದುರದೃಷ್ಟಕರ': ಟೀಂ ಇಂಡಿಯಾ ನಿಲುವಿಗೆ RCB ಮಾಜಿ ಆಟಗಾರ ಎಬಿ ಡಿ ವಿಲಿಯರ್ಸ್ ಕಿಡಿ

ವೈಭವ್ ಸೂರ್ಯವಂಶಿ, ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್ ಮತ್ತು ತಿಲಕ್ ವರ್ಮಾ ಅವರಂತಹ ಆಟಗಾರರು ಐಪಿಎಲ್ 2026ರಲ್ಲಿ ತಮ್ಮ ತಂಡಗಳ ಪರವಾಗಿ ಯಶಸ್ವಿ ಪ್ರದರ್ಶನ ನೀಡಿದ್ದರು. ಆದರೆ, ಐರ್ಲೆಂಡ್ ಮತ್ತು ಇಂಗ್ಲೆಂಡ್ ಪ್ರವಾಸದಲ್ಲಿ ಅವರ ಪ್ರದರ್ಶನವು ಬಹುತೇಕ ವೈಫಲ್ಯದಿಂದ ಕೂಡಿತ್ತು.

ಸಂಜು ಸ್ಯಾಮ್ಸನ್ ಆಡಿದ ನಾಲ್ಕು ಇನಿಂಗ್ಸ್‌ಗಳ ಪೈಕಿ ಮೂರರಲ್ಲಿ ಅವರು ಒಂದಂಕಿಗೆ ಔಟಾದರು; ಹಾಗೆಯೇ, ಕೆಲವೇ ವಾರಗಳ ಹಿಂದೆ ಐಪಿಎಲ್‌ನಲ್ಲಿ 776 ರನ್‌ಗಳನ್ನು ಸಿಡಿಸಿದ್ದ ಸೂರ್ಯವಂಶಿ, ಈ ಪ್ರವಾಸದ ಯಾವುದೇ ಇನಿಂಗ್ಸ್‌ನಲ್ಲಿ 15 ರನ್‌ಗಳ ಗಡಿಯನ್ನು ದಾಟಲು ಸಾಧ್ಯವಾಗಲಿಲ್ಲ.

'ಭಾರತ ತಂಡ 4-0 ಅಂತರದಲ್ಲಿ ಸೋಲನುಭವಿಸುವುದನ್ನು ನೋಡುವುದು ಕಷ್ಟಕರವಾಗಿತ್ತು. ಇಂತಹ ಫಲಿತಾಂಶವನ್ನು ನಾನು ನಿರೀಕ್ಷಿಸಿರಲಿಲ್ಲ. ಆದರೆ, ತಂಡದಲ್ಲಿನ ಅನುಭವದ ಕೊರತೆಯಿಂದಾಗಿ ಇದು ಸಂಪೂರ್ಣ ಅನಿರೀಕ್ಷಿತವೇನೂ ಆಗಿರಲಿಲ್ಲ; 'ಅನುಭವದ ಕೊರತೆ' ಎಂಬ ಪದವೇ ಇಲ್ಲಿ ಪ್ರಮುಖವಾಗಿ ನೆನಪಿಗೆ ಬರುತ್ತದೆ. ಇಂತಹ ಸಂದರ್ಭದಲ್ಲಿ ನಾಯಕತ್ವವು ಅತ್ಯಂತ ಮಹತ್ವದ್ದಾಗುತ್ತದೆ. ಗೌತಮ್ ಗಂಭೀರ್ ಅವರತ್ತ ಅನೇಕರು ಬೆಟ್ಟು ಮಾಡುತ್ತಿದ್ದಾರೆ ಎಂಬುದು ನನಗೆ ತಿಳಿದಿದೆ. ಆದರೆ, ಇದರಲ್ಲಿ ಅವರ ಪಾತ್ರವಷ್ಟೇ ಇಲ್ಲ; ಅವರು ದೊಡ್ಡ ಜವಾಬ್ದಾರಿಯನ್ನು ಹೊಂದಿದ್ದರೂ, ತಂಡದ ರಚನೆ ಮತ್ತು ಸಂಯೋಜನೆಯ ವಿಷಯದಲ್ಲಿ ಸ್ವಲ್ಪ ತಾಳ್ಮೆ ವಹಿಸಬೇಕಾಗುತ್ತದೆ' ಎಂದು ಡಿ ವಿಲಿಯರ್ಸ್ ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com