

ರೋಹಿತ್ ಶರ್ಮಾ ಅವರನ್ನು ತಂಡದಿಂದ ಕೈಬಿಡುವ ಯಾವುದೇ ಯೋಜನೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಗೆ (BCCI) ಇರಲಿಲ್ಲ ಎಂದಾದರೆ, ಅವರ ಅಂತರರಾಷ್ಟ್ರೀಯ ಕ್ರಿಕೆಟ್ ನಿವೃತ್ತಿಯ ಕುರಿತಾದ ವರದಿಗಳು ಏಕೆ ಹರಡಲು ಪ್ರಾರಂಭಿಸಿದವು?. ಕಾರ್ಡಿಫ್ನಲ್ಲಿ ರೋಹಿತ್ ಅವರ ಕಳಪೆ ಪ್ರದರ್ಶನದ ನಂತರ, ಒಬ್ಬ ಪತ್ರಕರ್ತರು— ಈ ಹಿಂದೆ 2024-25ರ ಬಾರ್ಡರ್-ಗವಾಸ್ಕರ್ ಟ್ರೋಫಿ ವೇಳೆ ಸಿಡ್ನಿ ಟೆಸ್ಟ್ನಿಂದ ರೋಹಿತ್ ಅವರನ್ನು ಕೈಬಿಟ್ಟಿದ್ದರ ಬಗ್ಗೆ ಮತ್ತು ಮೇ 2025ರಲ್ಲಿ ಅವರ ಟೆಸ್ಟ್ ನಿವೃತ್ತಿಯ ಬಗ್ಗೆ ನಿಖರವಾದ ವರದಿ ನೀಡಿದ್ದರು. ಭಾರತ-ಇಂಗ್ಲೆಂಡ್ ಏಕದಿನ ಸರಣಿಯ ನಂತರ ರೋಹಿತ್ ಅಂತರರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಲಿದ್ದಾರೆ ಎಂದು ಸಹ ಅವರು ಹೇಳಿದ್ದಾರೆ.
ಜುಲೈ 19ರಂದು ಲಾರ್ಡ್ಸ್ನಲ್ಲಿ ನಡೆಯಲಿರುವ ಏಕದಿನ ಪಂದ್ಯಕ್ಕಾಗಿ ರೋಹಿತ್ ಅವರ ಪೋಷಕರು ಲಂಡನ್ಗೆ ಆಗಮಿಸಿದ್ದಾರೆ ಹಾಗೂ ರೋಹಿತ್ ಅವರನ್ನು ತಂಡದಿಂದ ಕೈಬಿಡುವ ಅಥವಾ ಅವರೊಂದಿಗಿನ ಸಂಬಂಧವನ್ನು ಮುಂದುವರಿಸದಿರುವ ನಿರ್ಧಾರದ ಬಗ್ಗೆ ಆಡಳಿತ ಮಂಡಳಿ ಮತ್ತು ಆಯ್ಕೆಗಾರರು ಅವರಿಗೆ ತಿಳಿಸಿದ್ದಾರೆ ಎಂಬ ವರದಿಗಳು ಹೊರಬಂದಿವೆ. ಆದಾಗ್ಯೂ, ರೋಹಿತ್ ನಿವೃತ್ತಿ ಹೊಂದಲಿದ್ದಾರೆ ಎಂಬ ವದಂತಿಗಳನ್ನು ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ತಳ್ಳಿಹಾಕಿದ್ದಾರೆ.
ರೋಹಿತ್ ಶರ್ಮಾ ವಿರುದ್ಧ ಅಜೆಂಡಾ?
ಹಾಗಾದರೆ, ಈ ವಿಷಯ ಹೇಗೆ ಹೊರಬಂತು? ಬೆಂಕಿ ಇಲ್ಲದೆ ಹೊಗೆಯಾಡುವುದಿಲ್ಲ. ಪತ್ರಕರ್ತರು, ಅದರಲ್ಲೂ ವಿಶೇಷವಾಗಿ ಖ್ಯಾತಿ ಮತ್ತು ವಿಶ್ವಾಸಾರ್ಹತೆ ಹೊಂದಿರುವವರು, ಸುಳ್ಳುಗಳ ಜಾಲವನ್ನು ಹೆಣೆಯುವುದಿಲ್ಲ. ರೋಹಿತ್ ವಿರುದ್ಧ ಯಾರಾದರೂ ಅಭಿಯಾನ ನಡೆಸಲು ಪ್ರಯತ್ನಿಸುತ್ತಿದ್ದಾರೆಯೇ ಮತ್ತು ಉದ್ದೇಶಪೂರ್ವಕವಾಗಿ ಇಂತಹ ಕಥೆಗಳನ್ನು ಹಬ್ಬಿಸುತ್ತಿದ್ದಾರೆಯೇ. ಇದರ ಹಿಂದಿನ ಉದ್ದೇಶವೇನು? ಯಾರಾದರೂ ಅವರನ್ನು ಒತ್ತಡಕ್ಕೆ ಸಿಲುಕಿಸಲು ಪ್ರಯತ್ನಿಸುತ್ತಿದ್ದಾರೆಯೇ? ಅಥವಾ ಬಿಸಿಸಿಐ? ಇಲ್ಲವೇ ತಂಡದ ಆಡಳಿತ ಮಂಡಳಿ ಮತ್ತು ಆಯ್ಕೆಗಾರರೇ? ಎಂದು ಭಾರತೀಯ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಪ್ರಶ್ನಿಸಿದ್ದಾರೆ.
'ಯಾರಾದರೂ ಉದ್ದೇಶಪೂರ್ವಕವಾಗಿ ಇಂತಹ ಸುದ್ದಿಗಳನ್ನು ಹಬ್ಬಿಸುತ್ತಿದ್ದಾರೆಯೇ? ಅವರ ವಿರುದ್ಧ ಏನಾದರೂ ಅಭಿಯಾನ ನಡೆಯುತ್ತಿದೆಯೇ? ರೋಹಿತ್ ನಿವೃತ್ತರಾಗುವಂತೆ ಕಾಣುತ್ತಿಲ್ಲ. 2027ರ ಏಕದಿನ ವಿಶ್ವಕಪ್ನಲ್ಲಿ ಆಡಬೇಕೆಂಬ ಬಯಕೆಯನ್ನು ಅವರು ಈಗಾಗಲೇ ವ್ಯಕ್ತಪಡಿಸಿದ್ದರು. 'ನನ್ನ ಫಿಟ್ನೆಸ್, ನಾನು ಹಾಕುತ್ತಿರುವ ಶ್ರಮ ಮತ್ತು ಕಠಿಣ ಪರಿಶ್ರಮವನ್ನು ನೋಡಿ' ಎಂದು ಅವರು ಹೇಳಿದ್ದರು. ಹಾಗಾದರೆ, ಈ ವದಂತಿಗಳನ್ನು ಹುಟ್ಟುಹಾಕುತ್ತಿರುವವರು ಯಾರು? ಆಯ್ಕೆಗಾರರು ಬೇರೆ ದಿಕ್ಕಿನಲ್ಲಿ ಸಾಗಲು ಬಯಸಿದ್ದರಿಂದ 2025ರಲ್ಲಿ ಅವರನ್ನು ನಾಯಕತ್ವದಿಂದ ಕೆಳಗಿಳಿಸಲಾಯಿತು. ರೋಹಿತ್ ರನ್ ಗಳಿಸಿದರೆ ಅವರು ಏಕದಿನ ತಂಡದ ಭಾಗವಾಗಿರುತ್ತಾರೆ ಎಂಬುದು ಸ್ಪಷ್ಟವಾಗಿತ್ತು. ಹಾಗಾದರೆ, ಇಲ್ಲಿ ಏನಾಗುತ್ತಿದೆ? ಯಾರಾದರೂ ಇಂತಹ ಸುದ್ದಿಗಳನ್ನು ಹಬ್ಬಿಸುತ್ತಿದ್ದಾರೆಯೇ?' ಎಂದಿದ್ದಾರೆ.
ರೋಹಿತ್ ಅವರ ಭವಿಷ್ಯದ ಕುರಿತು ಹೇಳುವುದಾದರೆ, ಲಾರ್ಡ್ಸ್ನಲ್ಲಿ ಶತಕ ಸಿಡಿಸುವ ಮೂಲಕ ಈ ಆರಂಭಿಕ ಆಟಗಾರ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಬಹುದು ಎಂದರು. 2025ರ ಏಕದಿನ ಸರಣಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಅರ್ಧಶತಕ ಗಳಿಸಿದ್ದರೂ, ಕೆಲವರು ಅವರನ್ನು ಟೀಕಿಸಿದ್ದರು. ಆದರೆ, ಸಿಡ್ನಿಯಲ್ಲಿ ಅಜೇಯ ಶತಕ ಸಿಡಿಸುವ ಮೂಲಕ ಅವರು ಟೀಕಾಕಾರರ ಬಾಯಿ ಮುಚ್ಚಿಸಿದ್ದರು. ಅವರು ಮತ್ತೊಮ್ಮೆ ಅಂತಹದೇ ಸಾಧನೆ ಮಾಡಿದರೆ, ಎಲ್ಲ ಚರ್ಚೆಗಳಿಗೂ ಮತ್ತೆ ತೆರೆ ಬೀಳಲಿದೆ.
ರೋಹಿತ್ ತಾವು 2027ರ ಏಕದಿನ ವಿಶ್ವಕಪ್ನಲ್ಲಿ ಆಡಲು ಬಯಸುವುದಾಗಿ ಸ್ಪಷ್ಟವಾಗಿ ಹೇಳಿದ್ದಾರೆ. ಹೌದು, ಯಶಸ್ವಿ ಜೈಸ್ವಾಲ್ ಅವರಿಂದ ಅವರಿಗೆ ತೀವ್ರ ಪೈಪೋಟಿ ಎದುರಾಗಿದ್ದರೂ, ದಕ್ಷಿಣ ಆಫ್ರಿಕಾ, ನಮೀಬಿಯಾ ಮತ್ತು ಜಿಂಬಾಬ್ವೆಯಲ್ಲಿ ನಡೆಯಲಿರುವ ಐಸಿಸಿ ಟೂರ್ನಿಯವರೆಗೆ ಭಾರತ ತಂಡವು ಸುಮಾರು 40 ಪಂದ್ಯಗಳನ್ನು ಆಡಲಿರುವುದರಿಂದ, ಆಯ್ಕೆಗಾರರು ಮತ್ತು ಆಡಳಿತ ಮಂಡಳಿಯು ಭಾರತದ ಮಾಜಿ ನಾಯಕನಿಗೆ ಹೆಚ್ಚಿನ ಅವಕಾಶವನ್ನು ನೀಡಬಹುದು ಎಂದು ಆಕಾಶ್ ಅಭಿಪ್ರಾಯಪಡುತ್ತಾರೆ.
'ಕಳೆದ ವರ್ಷ ಆಸ್ಟ್ರೇಲಿಯಾದಲ್ಲಿ ಮಾಡಿದಂತೆ ಅವರು ಲಾರ್ಡ್ಸ್ನಲ್ಲಿ ಶತಕ ಬಾರಿಸಿದರೆ, ಆಗ ಈ ಚರ್ಚೆಗಳಿಗೆ ತೆರೆ ಬೀಳುತ್ತದೆ. ವಿಶ್ವಕಪ್ಗೆ ಇನ್ನೂ ಒಂದೂವರೆ ವರ್ಷ ಬಾಕಿಯಿದೆ. ಸದ್ಯವೇ ನಿರ್ಧಾರ ತೆಗೆದುಕೊಳ್ಳುವ ಯಾವುದೇ ಅವಸರವಿಲ್ಲ. ಇನ್ನೂ ಸುಮಾರು 40 ಏಕದಿನ ಪಂದ್ಯಗಳು ಬಾಕಿ ಇವೆ. ಇದು ಅವರ ಕೊನೆಯ ಅಂತಾರಾಷ್ಟ್ರೀಯ ಪಂದ್ಯವೇನಲ್ಲ' ಎಂದು ಅವರು ಹೇಳಿದರು.