

ಕೊಲಂಬೋ: ಭಾರತ, ಶ್ರೀಲಂಕಾ ಮತ್ತು ಆಫ್ಘಾನಿಸ್ತಾನ ನಡುವಿನ ತ್ರಿಕೋನ ಏಕದಿನ ಸರಣಿ 2026ರ ಮೊದಲ ಪಂದ್ಯದಲ್ಲೇ ಭಾರತ ಎ ತಂಡ ವಿರೋಚಿತ ಗೆಲುವು ದಾಖಲಿಸಿದೆ.
ದಂಬುಲ್ಲಾದಲ್ಲಿ ಮಂಗಳವಾರ ನಡೆದ ತ್ರಿಕೋನ ಏಕದಿನ ಸರಣಿಯ ಉದ್ಘಾಟನಾ ಪಂದ್ಯದಲ್ಲಿ ಭಾರತ ಎ ತಂಡವು ಅಚ್ಚರಿಯ ರೀತಿಯಲ್ಲಿ ಹೋರಾಡಿ ಶ್ರೀಲಂಕಾ ಎ ವಿರುದ್ಧ 8 ರನ್ಗಳ ರೋಚಕ ಜಯ ಸಾಧಿಸಿತು. ಮೊದಲು ಬ್ಯಾಟಿಂಗ್ ಮಾಡಿದ ಭಾರತ ಎ ತಂಡ 50 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 277 ರನ್ ಗಳಿಸಿತು. ಭಾರತಕ್ಕೆ ಆರಂಭದಲ್ಲೇ ಆಘಾತ ಎದುರಾಯಿತು.
ಆರಂಭಿಕ ಆಟಗಾರರಾದ ವೈಭವ್ ಸೂರ್ಯವಂಶಿ (14) ಮತ್ತು ಪ್ರಭ್ಸಿಮ್ರನ್ ಸಿಂಗ್ (2) ಬೇಗನೇ ಔಟಾದರು. ಆದರೆ ನಾಯಕ ರುತುರಾಜ್ ಗಾಯಕ್ವಾಡ್ (101) ಅವರ ಅದ್ಭುತ ಶತಕ ತಂಡವನ್ನು ಸಂಕಷ್ಟದಿಂದ ಪಾರು ಮಾಡಿತು. ಅವರ ಅಮೋಘ ಇನ್ನಿಂಗ್ಸ್ ನೆರವಿನಿಂದ ಭಾರತ ಎ 50 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 277 ರನ್ ಸವಾಲಿನ ಮೊತ್ತ ಗಳಿಸಿತು.
ಈ ಗುರಿ ಬೆನ್ನತ್ತಿದ ಶ್ರೀಲಂಕಾ ಎ ತಂಡ ಬಹುತೇಕ ಪಂದ್ಯವಿಡೀ ಮೇಲುಗೈ ಸಾಧಿಸಿತ್ತು. ನಾಯಕ ಸಹಾನ್ ಅರಚ್ಚಿಗೆ ಅವರ 74 ರನ್ಗಳ ಹೋರಾಟ ತಂಡವನ್ನು ಗೆಲುವಿನತ್ತ ಕೊಂಡೊಯ್ಯುತ್ತಿತ್ತು. ಶ್ರೀಲಂಕಾದ ಆರಂಭಿಕರಾದ ಡಿಕ್ವೆಲಾ (47)ಮತ್ತು ಅವಿಷ್ಕಾ ಫರ್ನಾಂಡೋ (45) ಮೊದಲ ವಿಕೆಟ್ 93 ರನ್ ಪೇರಿಸಿ ಲಂಕಾಗೆ ಅತ್ಯುತ್ತಮ ಆರಂಭ ನೀಡಿದರು.
ಆದರೆ ಈ ಹಂತದಲ್ಲಿ 6 ರನ್ ಗಳ ಅಂತರದಲ್ಲಿ ಆರಂಭಿಕರಿಬ್ಬರೂ ಪೆವಿಲಿಯನ್ ಸೇರಿಕೊಂಡರು. ಬಳಿಕ ಕ್ರೀಸ್ ಗೆ ಬಂದ ನುವನಿದು ಫರ್ನಾಂಡೋ 8 ರನ್ ಗಳಿ ಔಟಾಗಿದ್ದು ಭಾರತ ಕೊಂಚ ಮೇಲುಗೈ ಸಾಧಿಸುವಂತೆ ಮಾಡಿತು.
ಭಾರತಕ್ಕೆ ಟೆನ್ಷನ್ ಕೊಟ್ಟ ಲಂಕಾ ನಾಯಕ
ಫರ್ನಾಂಡೋ ವಿಕೆಟ್ ಪತನ ಬೆನ್ನಲ್ಲೇ ಕ್ರೀಸ್ ಗೆ ಆಗಮಿಸಿದ ಲಂಕಾ ನಾಯಕ ಸಹಾನ್ ಅರಚ್ಚಿಗೆ ಲಂಕಾಗೆ ಮತ್ತೆ ಇನ್ನಾವುದೇ ಆಘಾತ ಎದುರಾಗದಂತೆ ನೋಡಿಕೊಂಡರು. 72 ಎಸೆತಗಳಲ್ಲಿ 2 ಸಿಕ್ಸರ್ ಮತ್ತು 6 ಬೌಂಡರಿ ನೆರವಿನಿಂದ ಅವರು 74 ರನ್ ಪೇರಿಸಿದರು.
ಅವರಿಗೆ ಸಮರ ವಿಕ್ರಮ ಉತ್ತಮ ಸಾಥ್ ನೀಡಿದರು. ಸಮರ ವಿಕ್ರಮ 51 ಎಸೆತಗಳಲ್ಲಿ 4 ಬೌಂಡರಿ ಸಹಿತ 46 ರನ್ ಪೇರಿಸಿ ಅನುಕುಲ್ ರಾಯ್ ಬೌಲಿಂಗ್ ನಲ್ಲಿ ಔಟಾದರೆ, ಅರಚ್ಚಿಗೆ ಕೂಡ ಅನ್ಷುಲ್ ಕಂಬೋಜ್ ಬೌಲಿಂಗ್ ನಲ್ಲಿ ಬೌಲ್ಡ್ ಆದರು. ಈ ಇಬ್ಬರೂ ಬ್ಯಾಟರ್ ಗಳು ಔಟಾಗುತ್ತಿದ್ದಂತೆಯೇ ಮತ್ತೆ ಭಾರತ ಪಂದ್ಯದಲ್ಲಿ ಮೇಲುಗೈ ಸಾಧಿಸಿತ್ತು.
ಆದರೆ ಕೆಳ ಕ್ರಮಾಂಕದಲ್ಲಿ ವನುಜ ಸಹಾನ್ ಕೇವಲ 16 ಎಸೆತಗಳಲ್ಲಿ 3 ಬೌಂಡರಿ ಸಹಿತ 23 ರನ್ ಗಳಿಸಿ ಮಾರಕವಾಗಿ ಪರಿಣಮಿಸಿದರು.
ಭಾರತ ಎಗೆ ನಾಟಕೀಯ ಜಯ!
ಆದರೆ ಅಂತಿಮ ಹಂತದಲ್ಲಿ ಶ್ರೀಲಂಕಾ ಎ ದಿಢೀರ್ ಕುಸಿತ ಕಂಡಿತು. ಫರ್ನಾಂಡೋ (1), ಕರುಣರತ್ನೆ 9, ವಿಯಸ್ ಕಾಂತ್ 5 ರನ್ ಗಳಿಸಿ ಔಟಾದರು. ಲಂಕಾಗೆ ಗೆಲುವಿನ ಅಂತಿಮ ಭರವಸೆಯಾಗಿದ್ದ ವನುಜ ಸಹಾನ್ ರನ್ನು ಭಾರಕದ ರುತುರಾಜ್ ಗಾಯಕ್ವಾಡ್ ತಮ್ಮ ಅದ್ಭುತ ಫೀಲ್ಡಿಂಗ್ ಮೂಲಕ ರನೌಟ್ ಮಾಡಿದರು. ಅಂತಿಮವಾಗಿ ಮಹಮದ್ ಶಿರಾಜ್ ಕೂಡ ಶೂನ್ಯಕ್ಕೆ ಔಟಾಗುತ್ತಿದ್ದಂತೆಯೇ ಲಂಕಾ ತಂಡ 48.5 ಓವರ್ ನಲ್ಲಿ 269 ರನ್ ಗಳಿಗೆ ಆಲೌಟ್ ಆಯಿತು. ಭಾರತ ಗೆಲುವಿನ ಅಲೆಯನ್ನು ಕಣಿದು ಕುಪ್ಪಳಿಸಿತು.
ಪಂದ್ಯದ ಕೊನೆಯ ಕ್ಷಣಗಳಲ್ಲಿ ರೋಚಕ ತಿರುವು ಕಂಡಿತು. ಕೇವಲ ನಾಲ್ಕು ಎಸೆತಗಳ ಅಂತರದಲ್ಲಿ ಮೂರು ವಿಕೆಟ್ಗಳು ಬಿದ್ದು ಪಂದ್ಯ ಸಂಪೂರ್ಣವಾಗಿ ಭಾರತ ಎ ಕಡೆಗೆ ತಿರುಗಿತು. ಮೊಹಮ್ಮದ್ ಶಿರಾಜ್ ದೊಡ್ಡ ಹೊಡೆತಕ್ಕೆ ಯತ್ನಿಸಿದಾಗ, ಡೀಪ್ ಸ್ಕ್ವೇರ್-ಲೆಗ್ನಲ್ಲಿ ವಿಪ್ರಜ್ ನಿಗಮ್ ಅದ್ಭುತ ಕ್ಯಾಚ್ ಹಿಡಿದು ಭಾರತ ಎಗೆ ಗೆಲುವು ತಂದುಕೊಟ್ಟರು. ಗೆಲುವು ಕೈಯಲ್ಲೇ ಇದ್ದರೂ ಕೊನೆಯ ಕ್ಷಣದಲ್ಲಿ ಶ್ರೀಲಂಕಾ ಎ ಸೋಲಿನ ನೋವು ಅನುಭವಿಸಿತು.
ಭಾರತ ಎ ಪರ ಸ್ಪಿನ್ನರ್ಗಳಾದ ಆಯುಷ್ ಬದೋನಿ, ಅನುಕುಲ್ ರಾಯ್ ಮತ್ತು ವಿಪ್ರಜ್ ನಿಗಮ್ ತಲಾ ಎರಡು ವಿಕೆಟ್ ಪಡೆದರೆ, ವೇಗಿ ಅರ್ಷದ್ ಖಾನ್ ಕೂಡ ಎರಡು ವಿಕೆಟ್ ಕಬಳಿಸಿದರು.
ಅದ್ಭುತ ಪಂದ್ಯ!
ತ್ರಿಕೋನ ಸರಣಿಗೆ ಇದಕ್ಕಿಂತ ಉತ್ತಮ ಆರಂಭ ಸಾಧ್ಯವೇ ಇರಲಿಲ್ಲ. ಶ್ರೀಲಂಕಾ ಎ ತಂಡದ ಆರಂಭಿಕ ಜೋಡಿ 93 ರನ್ಗಳ ಜೊತೆಯಾಟ ಕಟ್ಟಿತು. ನಂತರ ಸದೀರ ಸಮರವಿಕ್ರಮ ಮತ್ತು ಸಹಾನ್ ಅರಚ್ಚಿಗೆ ಕ್ರೀಸ್ನಲ್ಲಿದ್ದಾಗ ತಂಡ 3 ವಿಕೆಟ್ಗೆ 187 ರನ್ ಗಳಿಸಿ ಸುಲಭವಾಗಿ ಗೆಲುವಿನತ್ತ ಸಾಗುತ್ತಿತ್ತು.
ಆದರೆ ಆಯುಷ್ ಬದೋನಿ ಮತ್ತು ಅನುಕುಲ್ ರಾಯ್ ಮಧ್ಯಮ ಓವರ್ಗಳಲ್ಲಿ ಪಂದ್ಯವನ್ನು ತಿರುಗಿಸಿದರೆ, ಅಂತಿಮ ಹಂತದಲ್ಲಿ ವಿಪ್ರಜ್ ನಿಗಮ್, ಅಂಶುಲ್ ಕಂಬೋಜ್ ಮತ್ತು ಅರ್ಷದ್ ಖಾನ್ ಪಂದ್ಯವನ್ನು ಭಾರತ ಎ ಪರ ಮುಗಿಸಿದರು. ಕೊನೆಯ ಎರಡು ಓವರ್ಗಳಲ್ಲಿ ಶ್ರೀಲಂಕಾ ಎಗೆ 10 ರನ್ಗಳು ಬೇಕಾಗಿದ್ದವು ಮತ್ತು ಇನ್ನೂ ಮೂರು ವಿಕೆಟ್ಗಳು ಉಳಿದಿದ್ದವು. ಆದರೆ 49ನೇ ಓವರ್ನಲ್ಲಿ ಪಂದ್ಯ ಸಂಪೂರ್ಣವಾಗಿ ಬದಲಾಗಿಬಿಟ್ಟಿತು.
ರುತುರಾಜ್ ಗಾಯಕ್ವಾಡ್ಗೆ ಪಂದ್ಯಶ್ರೇಷ್ಠ ಪ್ರಶಸ್ತಿ
ಶತಕ ಸಿಡಿಸಿ ಭಾರತ ತಂಡದ ಸವಾಲಿನ ಮೊತ್ತಕ್ಕೆ ಕಾರಣರಾದ ಭಾರತ ಎ ತಂಡದ ನಾಯಕ ರುತುರಾಜ್ ಗಾಯಕ್ವಾಡ್ ಅವರನ್ನು ಪಂದ್ಯಶ್ರೇಷ್ಠ (Player of the Match) ಎಂದು ಘೋಷಿಸಲಾಯಿತು. ಕಷ್ಟದ ಪರಿಸ್ಥಿತಿಯಲ್ಲಿ ಆಡಿದ ಅವರ 101 ರನ್ಗಳ ಅಮೂಲ್ಯ ಇನ್ನಿಂಗ್ಸ್ ಭಾರತ ಎ ತಂಡವನ್ನು ಸ್ಪರ್ಧಾತ್ಮಕ ಮೊತ್ತದತ್ತ ಕೊಂಡೊಯ್ದಿತು.
Advertisement