ಭಾರತ ತಂಡವು ಅಫ್ಘಾನಿಸ್ತಾನ ವಿರುದ್ಧ 3-0 ಅಂತರದಲ್ಲಿ ಏಕದಿನ ಸರಣಿಯನ್ನು ಗೆದ್ದುಕೊಂಡಿತು. ಶುಭಮನ್ ಗಿಲ್ ನೇತೃತ್ವದಲ್ಲಿ ತಂಡದ ಮೊದಲ ಸರಣಿ ಗೆಲುವು ಇದಾಗಿದೆ. ಮೂರು ಪಂದ್ಯಗಳಲ್ಲಿ 238 ರನ್ ಗಳಿಸಿದ ನಂತರ, ನಾಯಕ ಗಿಲ್ ಅವರನ್ನು 'ಸರಣಿ ಶ್ರೇಷ್ಠ ಆಟಗಾರ' ಎಂದು ಹೆಸರಿಸಲಾಯಿತು. ಅಫ್ಘಾನಿಸ್ತಾನ ವಿರುದ್ಧದ ಮೂರು ಪಂದ್ಯಗಳ ಸರಣಿಗೂ ಮುನ್ನ, ಸಾಕಷ್ಟು ಅಭಿಮಾನಿಗಳು ಮತ್ತು ತಜ್ಞರು 50 ಓವರ್ಗಳ ಸ್ವರೂಪದಲ್ಲಿ ಗಿಲ್ ಅವರ ನಾಯಕತ್ವದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು. ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ವಿರುದ್ಧ ಭಾರತ ಸರಣಿಯನ್ನು ಕಳೆದುಕೊಂಡಿದ್ದನ್ನು ಉಲ್ಲೇಖಿಸಿದ್ದರು.
ಕ್ರಿಕ್ಬಜ್ನಲ್ಲಿ ಮಾತನಾಡಿದ ಭಾರತದ ಮಾಜಿ ಬ್ಯಾಟ್ಸ್ಮನ್ ಮನೋಜ್ ತಿವಾರಿ, ಗಿಲ್ 'ಹುಟ್ಟುತ್ತಲೇ ನಾಯಕ' ಅಲ್ಲ. ಅವರು ಹೆಚ್ಚೆಚ್ಚು ತಂಡವನ್ನು ಮುನ್ನಡೆಸಿದರೆ ಅವರು ಉತ್ತಮ ನಾಯಕ ಆಗುತ್ತಾರೆ ಎಂದು ಸೂಚಿಸಿದರು.
'ನಾಯಕನಾಗಿ ಈ ಸರಣಿ ಅವರಿಗೆ ಉತ್ತಮ ಫಲಿತಾಂಶ ನೀಡಿತು. ಅವರು ಹೆಚ್ಚು ಸರಣಿಗಳನ್ನು ಮುನ್ನಡೆಸಿದಷ್ಟೂ ಅವರು ಉತ್ತಮವಾಗುತ್ತಾರೆ. ಅವರು ಇನ್ನೂ 'ಹುಟ್ಟುತ್ತಲೇ ನಾಯಕ' ಅಲ್ಲ, ಆದರೆ ಅವರು ಕಲಿಯುತ್ತಾರೆ. ಹುಟ್ಟುತ್ತಲೇ ನಾಯಕನಾದವರಿಗೆ ಎಲ್ಲವೂ ಸ್ವಾಭಾವಿಕವಾಗಿಯೇ ಬರುತ್ತದೆ. ಆದರೆ, ಶುಭಮನ್ ಗಿಲ್ ಅವರಂತಹವರು ಕಾಲಾನಂತರದಲ್ಲಿ ಕಲಿಯುತ್ತಾರೆ ಮತ್ತು ಅದಕ್ಕಾಗಿಯೇ ರೋಹಿತ್, ವಿರಾಟ್ ಮತ್ತು ಕೆಎಲ್ ರಾಹುಲ್ ಕೂಡ ತಂಡದಲ್ಲಿಯೇ ಇದ್ದು ಅವರಿಗೆ ಸಲಹೆ ನೀಡಬೇಕಾಗಿದೆ' ಎಂದು ತಿವಾರಿ ಹೇಳಿದರು.
ಶುಭಮನ್ ಗಿಲ್ ಅವರ ನಾಯಕತ್ವವು ಖಂಡಿತವಾಗಿಯೂ ಉತ್ತಮಗೊಳ್ಳುತ್ತದೆ. ಏಕೆಂದರೆ, ವಿಶೇಷವಾಗಿ ಮಾಜಿ ನಾಯಕರಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರೊಂದಿಗೆ ಏಕದಿನ ತಂಡದಲ್ಲಿರುವುದರಿಂದ ಇದು ಖಂಡಿತವಾಗಿಯೂ ಸಾಧ್ಯವಾಗುತ್ತದೆ ಎಂದು ತಿವಾರಿ ಹೇಳಿದರು.
'ಅವರು ತಮ್ಮ ನಾಯಕತ್ವದ ಅವಧಿಯಲ್ಲಿ ಮಾಡಿದ ತಪ್ಪುಗಳನ್ನು ಗಿಲ್ ಪುನರಾವರ್ತಿಸಲು ಬಿಡುವುದಿಲ್ಲ. ಅಲ್ಲದೆ, ನೀವು ಅನೇಕ ಉತ್ತಮ ಆಟಗಾರರನ್ನು ಹೊಂದಿರುವಾಗ, ನಾಯಕತ್ವದ ಒತ್ತಡ ಸ್ವಲ್ಪ ಕಡಿಮೆಯಾಗುತ್ತದೆ' ಎಂದರು.
ಈಮಧ್ಯೆ, ಗಾಯದಿಂದಾಗಿ ಕೊಹ್ಲಿ ಅಫ್ಘಾನಿಸ್ತಾನ ವಿರುದ್ಧದ ಸರಣಿಯಿಂದ ಹೊರಗುಳಿದಿದ್ದರು. ಇದೀಗ 37 ವರ್ಷದ ಕೊಹ್ಲಿ ಮುಂದಿನ ತಿಂಗಳು ಇಂಗ್ಲೆಂಡ್ ವಿರುದ್ಧ ನಡೆಯಲಿರುವ ಮೂರು ಪಂದ್ಯಗಳ ಏಕದಿನ ಸರಣಿಗೆ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದು, ಫಿಟ್ನೆಸ್ ಕ್ಲಿಯರೆನ್ಸ್ ಕಡ್ಡಾಯವಾಗಿದೆ.
ಕೊಹ್ಲಿ ಫಿಟ್ನೆಸ್ ಪರೀಕ್ಷೆಗಾಗಿ ಸೋಮವಾರ ಬೆಂಗಳೂರಿನಲ್ಲಿರುವ ಸೆಂಟರ್ ಆಫ್ ಎಕ್ಸಲೆನ್ಸ್ (CoE) ಗೆ ಹಾಜರಾಗಲಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಆಡುವಾಗ ಅವರು ಗಾಯದಿಂದ ಬಳಲುತ್ತಿದ್ದರು. ಇದು ಅವರನ್ನು ಅಫ್ಘಾನಿಸ್ತಾನ ಸರಣಿಯಿಂದ ಹೊರಗುಳಿಸಿತು. ಕೊಹ್ಲಿ ಅವರ ಚೇತರಿಕೆಯ ಮೇಲ್ವಿಚಾರಣೆ ಮಾಡಲು CoE ಕ್ರೀಡಾ ವಿಜ್ಞಾನ ಸಿಬ್ಬಂದಿ ಈ ಹಿಂದೆ ಇಂಗ್ಲೆಂಡ್ನಲ್ಲಿ ಅವರನ್ನು ಭೇಟಿ ಮಾಡಿದ್ದರು.
Advertisement