ಯುವರಾಜ್ ಸಿಂಗ್ ಬಹುಶಃ ಭಾರತ ಕಂಡ ಅತ್ಯಂತ ಪ್ರತಿಭಾನ್ವಿತ ವೈಟ್-ಬಾಲ್ ಕ್ರಿಕೆಟಿಗ. ಇದೀಗ ಇಂದು ನಡೆಯಲಿರುವ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಟಿ20 ವಿಶ್ವಕಪ್ 2026ರ ಫೈನಲ್ ಪಂದ್ಯದತ್ತ ಎಲ್ಲರ ಚಿತ್ತ ನೆಟ್ಟಿದೆ. ಅವರು ಈಗಾಗಲೇ ಭಾರತಕ್ಕಾಗಿ ಟಿ20ಐ ಮತ್ತು ಏಕದಿನ ವಿಶ್ವಕಪ್ ಎರಡನ್ನೂ ಗೆದ್ದಿದ್ದಾರೆ. ಇದೀಗ, ವಿಶ್ವಕಪ್ ನಂತರದ ಮುಂಬರುವ ಅತಿದೊಡ್ಡ ಪಂದ್ಯಾವಳಿಗೆ ಪುನರಾಗಮನವನ್ನು ಮಾಡಲು ಸಿದ್ಧವಾಗಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 19ನೇ ಆವೃತ್ತಿ ಮುಂದಿನ 20 ದಿನಗಳಲ್ಲಿ ಪುನರಾರಂಭಗೊಳ್ಳಲಿದೆ. ಇತ್ತೀಚೆಗೆ, ಯುವರಾಜ್ ಸಿಂಗ್ ಲಕ್ನೋ ಸೂಪರ್ ಜೈಂಟ್ಸ್ (ಎಲ್ಎಸ್ಜಿ) ನಾಯಕ ಮತ್ತು ಭಾರತದ ಸದ್ಯದ ಸೂಪರ್ ಸ್ಟಾರ್ ರಿಷಭ್ ಪಂತ್ ಅವರೊಂದಿಗೆ ಕಾಣಿಸಿಕೊಂಡಿದ್ದಾರೆ. ವಾಸ್ತವವಾಗಿ, ತರಬೇತಿ ಪಡೆಯುತ್ತಿರುವಾಗ ಪಂತ್ ಅವರು ಯುವರಾಜ್ ಅವರೊಂದಿಗೆ ಮಾತನಾಡುತ್ತಿರುವ ಚಿತ್ರವನ್ನು ಸ್ವತಃ ಲಕ್ನೋ ಸೂಪರ್ ಜೈಂಟ್ಸ್ ಪೋಸ್ಟ್ ಮಾಡಿದೆ. 'ಐಪಿಎಲ್ 2026, ಸಿದ್ಧರಾಗಿ' ಎಂಬ ಶೀರ್ಷಿಕೆಯೊಂದಿಗೆ ಪೋಸ್ಟ್ ಮಾಡಿದೆ.
ಈ ಪೋಸ್ಟ್ ವಿವಿಧ ಊಹಾಪೋಹಗಳಿಗೆ ಕಾರಣವಾಗಿದೆ. ಯುವರಾಜ್ ಸಿಂಗ್ ಇದೀಗ ಲಕ್ನೋ ಫ್ರಾಂಚೈಸಿಗೆ ಸೇರುವ ಸಾಧ್ಯತೆ ಹೆಚ್ಚಿದೆ. ಟಿ20 ವಿಶ್ವಕಪ್ ಟೂರ್ನಿಗೆ ಮೊದಲು ಸಂಜು ಸ್ಯಾಮ್ಸನ್ರಂತಹ ಆಟಗಾರರಿಗೆ ಮಾರ್ಗದರ್ಶನ ನೀಡಿದ ಅನುಭವವಿರುವುದರಿಂದ, ಯುವರಾಜ್ ಸಿಂಗ್ ಲಕ್ನೋ ಫ್ರಾಂಚೈಸಿಗೆ ಸೇರಿ ಪಂತ್ಗೆ ತರಬೇತಿ ನೀಡುವ ಸಾಧ್ಯತೆ ಇದೆ.
ಆದಾಗ್ಯೂ, ಯುವರಾಜ್ ಎಲ್ಎಸ್ಜಿಗೆ ಸೇರುವ ವದಂತಿಗಳು ಹೊಸದೇನಲ್ಲ. ಕಳೆದ ವರ್ಷ, ಯುವರಾಜ್ ಎಲ್ಎಸ್ಜಿ ಜೊತೆ ಗಂಭೀರ ಮಾತುಕತೆ ನಡೆಸುತ್ತಿದ್ದಾರೆ ಎಂದು ಇನ್ಸೈಡ್ಸ್ಪೋರ್ಟ್ ಬಹಿರಂಗಪಡಿಸಿತು. ಮಾಜಿ ಆಲ್ರೌಂಡರ್ ತಂಡದ ಮುಖ್ಯ ಕೋಚ್ ಆಗಬೇಕೆಂದು ಫ್ರಾಂಚೈಸಿ ಬಯಸಿತ್ತು. ಈ ನಡೆ ಎಂದಿಗೂ ಫಲಪ್ರದವಾಗದಿದ್ದರೂ, ಎಲ್ಎಸ್ಜಿ ತಮ್ಮ ಶಿಬಿರದ ಭಾಗವಾಗಿ ಯುವರಾಜ್ ಅವರನ್ನು ಹೊಂದಬೇಕೆಂಬ ಬಯಕೆ ಇನ್ನೂ ಕಡಿಮೆಯಾಗಿಲ್ಲ.
ಐಪಿಎಲ್ 2025ನೇ ಆವೃತ್ತಿ ಎಲ್ಎಸ್ಜಿ ಪಾಲಿಗೆ ಅಂದುಕೊಂಡಷ್ಟು ಉತ್ತಮವಾಗಿರಲಿಲ್ಲ. ರಿಷಭ್ ಪಂತ್ ನಾಯಕತ್ವದಲ್ಲಿ LSG 14 ಪಂದ್ಯಗಳಲ್ಲಿ ಕೇವಲ 6 ಗೆಲುವುಗಳೊಂದಿಗೆ ಅಂಕಪಟ್ಟಿಯಲ್ಲಿ ಏಳನೇ ಸ್ಥಾನ ಪಡೆಯುವ ಮೂಲಕ ಈ ಆವೃತ್ತಿಯಲ್ಲಿ ಅಭಿಯಾನವನ್ನು ಮುಗಿಸಿತು. ಜಹೀರ್ ಖಾನ್ ಐಪಿಎಲ್ 2025ನೇ ಆವೃತ್ತಿಗಾಗಿ ಒಂದು ವರ್ಷದ ಅವಧಿಗೆ ಒಪ್ಪಂದಕ್ಕೆ ಸಹಿ ಹಾಕಿದ್ದರು. ಐಪಿಎಲ್ 2025ರ ಮೆಗಾ ಹರಾಜಿಗೂ ಮುಂಚಿತವಾಗಿ ಜಹೀರ್ ಖಾನ್ ಅವರನ್ನು ತಂಡದ ಮೆಂಟರ್ ಆಗಿ ನೇಮಿಸಿಕೊಳ್ಳಲಾಗಿತ್ತು. ಕಳಪೆ ಪ್ರದರ್ಶನದ ನಂತರ ಜಹೀರ್ ಖಾನ್ ಅವರನ್ನು ಕೈಬಿಡಲಾಗಿತ್ತು.
ನಂತರ ಈ ಹಿಂದೆ ಟೀಂ ಇಂಡಿಯಾ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ (KKR) ಜೊತೆಗಿದ್ದ ಭರತ್ ಅರುಣ್ ಅವರನ್ನು ಬೌಲಿಂಗ್ ಕೋಚ್ ಆಗಿ ನೇಮಿಸಿಕೊಳ್ಳಲಾಯಿತು. ಈಮಧ್ಯೆ, ಕಾರ್ಲ್ ಕ್ರೋವ್ LSG ತಂಡದ ಸ್ಪಿನ್ ಬೌಲಿಂಗ್ ಕೋಚ್ ಆಗಿ ಸೇರಿಕೊಂಡಿದ್ದಾರೆ.
ಕೇನ್ ವಿಲಿಯಮ್ಸನ್ ಕೂಡ ಕಾರ್ಯತಂತ್ರದ ಸಲಹೆಗಾರರಾಗಿ ಆಯ್ಕೆಯಾಗಿರುವುದರಿಂದ, ರಿಷಭ್ ಪಂತ್ ನೇತೃತ್ವದ ತಂಡವು ಅನುಭವಿ ಮತ್ತು ಕ್ರಿಕೆಟ್ ಪ್ರತಿಭೆಗಳಿಂದ ತುಂಬಿದೆ. ಜಹೀರ್ ಬದಲಿಗೆ ಯುವರಾಜ್ ಅವರಂತಹ ವ್ಯಕ್ತಿಯನ್ನು ತಂಡದ ಮೆಂಟರ್ ಅನ್ನಾಗಿ ಸೇರುವಂತೆ ಎಲ್ಎಸ್ಜಿ ಬಯಸುತ್ತದೆ.
Advertisement