

2026ರ ಟಿ20 ವಿಶ್ವಕಪ್ ಅನ್ನು 96 ರನ್ಗಳ ಬೃಹತ್ ಅಂತರದಿಂದ ಗೆದ್ದು ಟೀಂ ಇಂಡಿಯಾ ಹೊಸ ಇತಿಹಾಸ ನಿರ್ಮಿಸಿತು. ಇದರೊಂದಿಗೆ, ಭಾರತ ಮೂರು ಬಾರಿ ಟ್ರೋಫಿ ಗೆದ್ದ ಮೊದಲ ತಂಡ, ಪ್ರಶಸ್ತಿಯನ್ನು ಉಳಿಸಿಕೊಂಡ ಏಕೈಕ ತಂಡ ಮತ್ತು ಆಥಿತೇಯ ರಾಷ್ಟ್ರ ಪ್ರಶಸ್ತಿ ಗೆದ್ದ ಏಕೈಕ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಭಾನುವಾರ ಅಹಮದಾಬಾದಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನ್ಯೂಜಿಲೆಂಡ್ ವಿರುದ್ಧ ನಡೆದ ಫೈನಲ್ ಪಂದ್ಯದಲ್ಲಿ ಸಂಜು ಸ್ಯಾಮ್ಸನ್, ಇಶಾನ್ ಕಿಶನ್ ಮತ್ತು ಅಭಿಷೇಕ್ ಶರ್ಮಾ ಅವರ ಭರ್ಜರಿ ಬ್ಯಾಟಿಂಗ್ ಪ್ರದರ್ಶನದಿಂದಾಗಿ ಭಾರತವು ಜಯ ಗಳಿಸಿತು.
ಬೌಲಿಂಗ್ನಲ್ಲಿ ಅಕ್ಷರ್ ಪಟೇಲ್ ಮೂರು ವಿಕೆಟ್ಗಳನ್ನು ಕಬಳಿಸಿದರೆ, ಜಸ್ಪ್ರೀತ್ ಬುಮ್ರಾ ನಾಲ್ಕು ವಿಕೆಟ್ಗಳನ್ನು ಕಬಳಿಸಿದರು. ಅರ್ಶದೀಪ್ ಸಿಂಗ್ ಒಂದು ವಿಕೆಟ್ ಪಡೆಯದಿದ್ದರೂ, ಅವರು ತಂಡದ ಗೆಲುವಿಗೆ ಕೊಡುಗೆ ನೀಡಿದರು. ಆದರೆ, ಕಿವೀಸ್ ಬ್ಯಾಟ್ಸ್ಮನ್ ಡೆರಿಲ್ ಮಿಚೆಲ್ ಅವರೊಂದಿಗೆ ಜಗಳವಾಡಿದರು. ಚೇಸ್ನ 11ನೇ ಓವರ್ನಲ್ಲಿ ಅರ್ಶದೀಪ್ ಬ್ಯಾಟರ್ಗೆ ಥ್ರೋ ಬ್ಯಾಕ್ ಹೊಡೆದಾಗ ಈ ಘಟನೆ ಸಂಭವಿಸಿತು. ಆಗ ಚೆಂಡು ಮಿಚೆಲ್ ಅವರ ಕಾಲಿಗೆ ಬಡಿಯಿತು. ಇದು ನೋಡಲು ಅರ್ಶದೀಪ್ ಸಿಂಗ್ ಅವರು ಉದ್ದೇಶಪೂರ್ವಕವಾಗಿಯೇ ಬ್ಯಾಟರ್ನತ್ತ ಬಾಲ್ ಎಸೆದಂತೆ ಕಾಣುತ್ತಿತ್ತು.
ಅರ್ಶದೀಪ್ ಅವರ ಈ ನಡೆ ಮಿಚೆಲ್ಗೆ ಇಷ್ಟವಾಗಲಿಲ್ಲ. ಇದರಿಂದ ಕೋಪಗೊಂಡ ಅವರು ಬೌಲರ್ ಕಡೆಗೆ ವಾಗ್ದಾಳಿ ನಡೆಸಿದರು. ಕೂಡಲೇ ಅಂಪೈರ್ ಮತ್ತು ಸೂರ್ಯಕುಮಾರ್ ಯಾದವ್ ಮಧ್ಯ ಪ್ರವೇಶದಿಂದ ಪರಿಸ್ಥಿತಿ ತಣ್ಣಗಾಯಿತು. ಪಂದ್ಯ ಮುಗಿದ ನಂತರ, 'ನಾನು ಮಿಚೆಲ್ಗೆ ಕ್ಷಮೆಯಾಚಿಸಲು ಹೋದೆ. ನಾನು ಎಸೆದ ಚೆಂಡು ರಿವರ್ಸ್-ಸ್ವಿಂಗ್ ಆಗಿ ಅವರಿಗೆ ಬಡಿಯಿತು' ಎಂದು ಅವರು ಹೇಳಿದರು.
ಬೌಲರ್ ಆಗಿ ಅವರ ಪಾತ್ರದ ಬಗ್ಗೆ ಕೇಳಿದಾಗ, 'ಒಬ್ಬ ಬೌಲರ್ ಆಗಿ, ನಾವು 250 ರನ್ ಗಳಿಸಿದರೆ ಅವರನ್ನು 250 ಕ್ಕಿಂತ ಕಡಿಮೆ ರನ್ಗಳಿಗೆ ಸೀಮಿತಗೊಳಿಸುವುದು ನಮ್ಮ ಪಾತ್ರವಾಗಿತ್ತು. ನಾವು ಮೊದಲು ಬೌಲಿಂಗ್ ಮಾಡುತ್ತಿದ್ದರೆ, ಅವರನ್ನು ಸಾಧ್ಯವಾದಷ್ಟು ಕಡಿಮೆ ಮೊತ್ತಕ್ಕೆ ಕಟ್ಟಿಹಾಕುವುದು ನಮ್ಮ ಕೆಲಸವಾಗಿತ್ತು' ಎಂದರು.
ಟಾಸ್ ಗೆದ್ದ ನ್ಯೂಜಿಲೆಂಡ್ ಫೀಲ್ಡಿಂಗ್ ಆಯ್ಕೆಮಾಡಿಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಭಾರತ ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್ ಮತ್ತು ಇಶಾನ್ ಕಿಶನ್ ಅವರ ಅರ್ಧಶತಕಗಳ ನೆರವಿನಿಂದ ಐದು ವಿಕೆಟ್ ನಷ್ಟಕ್ಕೆ 255 ರನ್ ಕಲೆಹಾಕಿತು. ಮತ್ತು ಇದಕ್ಕೆ ಪ್ರತಿಯಾಗಿ, ಕಿವೀಸ್ ಕೇವಲ 159 ರನ್ಗಳನ್ನು ಮಾತ್ರ ಗಳಿಸಲು ಸಾಧ್ಯವಾಯಿತು. ಟೂರ್ನಮೆಂಟ್ನಾದ್ಯಂತ, ಭಾರತವು ದಕ್ಷಿಣ ಆಫ್ರಿಕಾ ವಿರುದ್ಧ ಸೂಪರ್ 8 ಹಂತದಲ್ಲಿ ಕೇವಲ ಒಂದು ಪಂದ್ಯವನ್ನು ಮಾತ್ರ ಸೋತಿತು. ನಂತರ ಸೆಮಿಫೈನಲ್ನಲ್ಲಿ ಇಂಗ್ಲೆಂಡ್ ಮತ್ತು ಫೈನಲ್ನಲ್ಲಿ ನ್ಯೂಜಿಲೆಂಡ್ ವಿರುದ್ಧ ಗೆಲುವು ಸಾಧಿಸಿ ದಾಖಲೆಯ ಮೂರನೇ ಬಾರಿಗೆ ಟಿ20 ವಿಶ್ವಕಪ್ ಟ್ರೋಫಿಯನ್ನು ಮುಡಿಗೇರಿಸಿಕೊಂಡರು.
Advertisement