

ನವದೆಹಲಿ: ಫೈನಲ್ ನಲ್ಲಿ ನ್ಯೂಜಿಲೆಂಡ್ ತಂಡವನ್ನು ಮಣಿಸಿ ಮೂರನೇ ಬಾರಿಗೆ T20 ವಿಶ್ವಕಪ್ ಟ್ರೋಫಿ ಎತ್ತಿ ಹಿಡಿದ ಭಾರತ ತಂಡದ ವಿರುದ್ಧ ಮಾಜಿ ಕ್ರಿಕೆಟಿಗ ಕೀರ್ತಿ ಅಜಾದ್ ತೀವ್ರ ಕಿಡಿಕಾರಿದ್ದಾರೆ.
ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಟಿ20 ವಿಶ್ವಕಪ್ನ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ 20 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 255 ರನ್ ಕಲೆಹಾಕಿತು.
ಈ ಗುರಿಯನ್ನು ಬೆನ್ನತ್ತಿದ ನ್ಯೂಝಿಲೆಂಡ್ ತಂಡವು 19 ಓವರ್ಗಳಲ್ಲಿ 159 ರನ್ ಬಾರಿಸಿ ಆಲೌಟ್ ಆಯಿತು. ಆ ಮೂಲಕ ಭಾರತ 96 ರನ್ ಗಳ ಅಂತರದಲ್ಲಿ ಭರ್ಜರಿ ಜಯ ದಾಖಲಿಸಿ ಸತತ 2ನೇ ಟಿ20 ವಿಶ್ವಕಪ್ ಮತ್ತು ಒಟ್ಟಾರೆ 3ನೇ ವಿಶ್ವಕಪ್ ಗೆ ಮುತ್ತಿಟ್ಟಿದೆ.
ಇನ್ನು ವಿಶ್ವಕಪ್ ಜಯದ ಬೆನ್ನಲ್ಲೇ ಭಾರತ ತಂಡದ ಕೋಚ್ ಗೌತಮ್ ಗಂಭೀರ್, ನಾಯಕ ಸೂರ್ಯ ಕುಮಾರ್ ಯಾದವ್ ಮತ್ತು ಐಸಿಸಿ ಮುಖ್ಯಸ್ಥ ಜಯ್ ಶಾ ಟ್ರೋಫಿ ಸಹಿತ ಸಮೀಪದ ಇತಿಹಾಸ ಪ್ರಸಿದ್ಧ ಹನುಮಾನ್ ದೇಗುಲಕ್ಕೆ ತೆರಳಿ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದಿದ್ದರು.
ಇದೀಗ ಇದೇ ವಿಚಾರವಾಗಿ ಮಾಜಿ ಕ್ರಿಕೆಟಿಗ ಕೀರ್ತಿ ಅಜಾದ್ ತಂಡದ ವಿರುದ್ಧ ತೀವ್ರ ಕಿಡಿಕಾರಿದ್ದಾರೆ.
ವಿಶ್ವಕಪ್ ಟ್ರೋಫಿ 140 ಕೋಟಿ ಭಾರತೀಯರಿಗೆ ಸೇರಿದ್ದು..
ಅಹಮದಾಬಾದ್ನ ಹನುಮಾನ್ ದೇವಸ್ಥಾನಕ್ಕೆ ಭಾರತ ತಂಡ ಭೇಟಿ ನೀಡಿದ್ದನ್ನು ಮಾಜಿ ಕ್ರಿಕೆಟಿಗ ಹಾಗೂ ಟಿಎಂಸಿ ಸಂಸದ ಕೀರ್ತಿ ಆಜಾದ್ ತೀವ್ರವಾಗಿ ಖಂಡಿಸಿದ್ದಾರೆ. ಸಾಮಾಜಿಕ ಜಾಲತಾಣ 'ಎಕ್ಸ್' (X) ನಲ್ಲಿ ಪೋಸ್ಟ್ ಮಾಡುವ ಮೂಲಕ ತಮ್ಮ ಅಸಮಾಧಾನ ಹೊರಹಾಕಿರುವ ಅವರು, "ಕೇವಲ ದೇವಸ್ಥಾನವೇಕೆ? ಮಸೀದಿ, ಚರ್ಚ್ ಅಥವಾ ಗುರುದ್ವಾರಕ್ಕೆ ಯಾಕೆ ಟ್ರೋಫಿ ಒಯ್ಯಲಿಲ್ಲ? ಈ ತಂಡವು ಇಡೀ ಭಾರತವನ್ನು ಪ್ರತಿನಿಧಿಸುತ್ತದೆಯೇ ಹೊರತು ಸೂರ್ಯಕುಮಾರ್ ಅಥವಾ ಜೈ ಶಾ ಅವರ ಕುಟುಂಬವನ್ನಲ್ಲ!" ಎಂದು ಕಿಡಿಕಾರಿದ್ದಾರೆ.
ಮಸೀದಿ, ಚರ್ಚ್ ಯಾಕಿಲ್ಲ? ಇದು ಒಂದು ಧರ್ಮದ ವಿಜಯೋತ್ಸವವಲ್ಲ'
ಅಂತೆಯೇ ಟೀಮ್ ಇಂಡಿಯಾದ ಈ ನಡೆಯನ್ನು 'ನಾಚಿಕೆಗೇಡು' ಎಂದು ಕರೆದಿರುವ ಆಜಾದ್, 'ಭಾರತದ 140 ಕೋಟಿ ಜನರಿಗೂ ಈ ಟ್ರೋಫಿ ಸೇರಿದ್ದಾಗಿದೆ. ನಾವು 1983ರಲ್ಲಿ ಕಪಿಲ್ ದೇವ್ ನೇತೃತ್ವದಲ್ಲಿ ಕಪ್ ಗೆದ್ದಾಗ ನಮ್ಮ ತಂಡದಲ್ಲಿ ಹಿಂದೂ, ಮುಸ್ಲಿಂ, ಸಿಖ್ ಮತ್ತು ಕ್ರಿಶ್ಚಿಯನ್ ಆಟಗಾರರಿದ್ದರು. ನಾವು ಟ್ರೋಫಿಯನ್ನು ನಮ್ಮ ಮಾತೃಭೂಮಿಗೆ ತಂದಿದ್ದೆವು. ಆದರೆ ಈಗ ಟ್ರೋಫಿಯನ್ನು ಕೇವಲ ಒಂದು ಧರ್ಮದ ಸಂಕೇತದಂತೆ ಎಳೆಯಲಾಗುತ್ತಿದೆ" ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ.
ಸಿರಾಜ್ ಮಸೀದಿಗೆ ಟ್ರೋಫಿ ಒಯ್ದಿಲ್ಲ
ಇದೇ ವೇಳೆ "ಮೊಹಮ್ಮದ್ ಸಿರಾಜ್ ಎಂದಿಗೂ ಟ್ರೋಫಿಯನ್ನು ಮಸೀದಿಗೆ ಒಯ್ಯಲಿಲ್ಲ. ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ನೀಡಿ 'ಪ್ಲೇಯರ್ ಆಫ್ ದ ಟೂರ್ನಮೆಂಟ್' ಆದ ಸಂಜು ಸ್ಯಾಮ್ಸನ್ ಅದನ್ನು ಚರ್ಚ್ಗೆ ಕೊಂಡೊಯ್ಯಲಿಲ್ಲ. ಹೀಗಿರುವಾಗ ಟ್ರೋಫಿಯನ್ನು ಕೇವಲ ದೇವಸ್ಥಾನಕ್ಕೆ ಮಾತ್ರ ಸೀಮಿತಗೊಳಿಸಿದ್ದು ಎಷ್ಟು ಸರಿ?" ಎಂದು ಅವರು ಪ್ರಶ್ನಿಸಿದ್ದಾರೆ.
Advertisement