ಭಾನುವಾರ ಬಾಂಗ್ಲಾದೇಶ ವಿರುದ್ಧ ನಡೆದ ಏಕದಿನ ಸರಣಿ ನಿರ್ಣಾಯಕ ಪಂದ್ಯದಲ್ಲಿ ಪಾಕಿಸ್ತಾನ ಸೋಲು ಕಂಡಿತು. ಈ ಸೋಲಿನ ನಂತರ, ಅಂಪೈರ್ ಕುಮಾರ್ ಧರ್ಮಸೇನ ಅವರ ನಿರ್ಧಾರದ ವಿರುದ್ಧ ಮ್ಯಾಚ್ ರೆಫ್ರಿ ನೀಯಮುರ್ ರಶೀದ್ ಅವರಿಗೆ ಪಾಕಿಸ್ತಾನ ದೂರು ನೀಡಿದೆ. ಸರಣಿ 1-1 ರಲ್ಲಿ ಸಮಬಲ ಸಾಧಿಸಿದ್ದರಿಂದ, ಢಾಕಾದ ಶೇರ್ ಬಾಂಗ್ಲಾ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಗೆಲುವು ಸಾಧಿಸುವುದು ಪಾಕಿಸ್ತಾನಕ್ಕೆ ಮುಖ್ಯವಾಗಿತ್ತು.
ಬಾಂಗ್ಲಾದೇಶ ಪಾಕಿಸ್ತಾನಕ್ಕೆ 291 ರನ್ಗಳ ಗುರಿಯನ್ನು ನಿಗದಿಪಡಿಸಿತು ಮತ್ತು ಸಲ್ಮಾನ್ ಅಲಿ ಅಘಾ ಅವರ 98 ಎಸೆತಗಳಲ್ಲಿ 106 ರನ್ಗಳ ಹೊರತಾಗಿಯೂ ಶಾಹೀನ್ ಅಫ್ರಿದಿ ನೇತೃತ್ವದ ತಂಡವು 11 ರನ್ಗಳಿಂದ ಸೋತಿತು. ರಿಷದ್ ಹೊಸೈನ್ ಎಸೆದ ಕೊನೆಯ ಓವರ್ನಲ್ಲಿ ಪಾಕಿಸ್ತಾನಕ್ಕೆ 14 ರನ್ಗಳು ಬೇಕಾಗಿದ್ದವು. ಮೊದಲ ನಾಲ್ಕು ಎಸೆತಗಳಲ್ಲಿ 2 ರನ್ಗಳು ಬಂದವು, ಕೊನೆಯ ಎರಡು ಎಸೆತಗಳಲ್ಲಿ ಪಾಕಿಸ್ತಾನಕ್ಕೆ 12 ರನ್ಗಳು ಬೇಕಾಗಿದ್ದವು.
ರಿಷದ್ ಹೊಸೈನ್ ಅವರು ಶಾಹೀನ್ ಅಫ್ರಿದಿಗೆ ಎಸೆದ ಕೊನೆಯ ಚೆಂಡನ್ನು ಅಂಪೈರ್ ಕುಮಾರ್ ಧರ್ಮಸೇನ ಅವರು ವೈಡ್ ಎಂದು ಪರಿಗಣಿಸಿದರು. ಆದರೆ, ರಿಷದ್ ಹೊಸೈನ್ ಮತ್ತು ಲಿಟ್ಟನ್ ದಾಸ್ ರಿವ್ಯೂ ತೆಗೆದುಕೊಂಡರು. ಆಗ ಚೆಂಡು ಬ್ಯಾಟ್ಗೆ ಎಡ್ಜ್ ಆಗಿರುವುದು ತೋರಿಸಿತು. ಡಿಆರ್ಎಸ್ ನಿರ್ಧಾರದಿಂದ ಅಫ್ರಿದಿ ಹೆಚ್ಚು ಸಂತೋಷವಾಗಿರಲಿಲ್ಲ.
ಇಎಸ್ಪಿಎನ್ಕ್ರಿಕ್ಇನ್ಫೋ ವರದಿ ಪ್ರಕಾರ, ಮಿರ್ಪುರದಲ್ಲಿ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ತುಂಬಾ ತಡವಾಗಿ ರಿವ್ಯೂ ತೆಗೆದುಕೊಳ್ಳಲು ಬಾಂಗ್ಲಾದೇಶಕ್ಕೆ ಧರ್ಮಸೇನ ಅವಕಾಶ ನೀಡಿದ ನಿರ್ಧಾರದ ಬಗ್ಗೆ ಪಾಕಿಸ್ತಾನ ಮ್ಯಾಚ್ ರೆಫರಿ ನೀಯಮೂರ್ ರಶೀದ್ಗೆ ದೂರು ನೀಡಿದೆ. ದೊಡ್ಡ ಪರದೆ ಮೇಲೆ ಎಸೆತವನ್ನು ಮತ್ತೆ ತೋರಿಸಿದ ಮೇಲೆ ಬಾಂಗ್ಲಾದೇಶ ರಿವ್ಯೂ ತೆಗೆದುಕೊಂಡಿದೆ ಎಂಬ ಆಧಾರದ ಮೇಲೆ ಪಾಕಿಸ್ತಾನ ಆಡಳಿತ ಮಂಡಳಿ ತಮ್ಮ ದೂರನ್ನು ದಾಖಲಿಸಿದೆ.
ಸಾಮಾನ್ಯ ಶಿಷ್ಟಾಚಾರಗಳ ಪ್ರಕಾರ, ಯಾವುದೇ ರೀಪ್ಲೇ ತೋರಿಸುವ ಮೊದಲು ರಿವ್ಯೂ ತೆಗೆದುಕೊಳ್ಳಬೇಕು. 'ಆ ಸಾಮಾನ್ಯ ಶಿಷ್ಟಾಚಾರಗಳನ್ನು ಪಾಲಿಸಿಲ್ಲ ಎಂದು ಪಾಕಿಸ್ತಾನ ವಾದಿಸಿದೆ. ಕ್ರೀಡಾಂಗಣದಲ್ಲಿನ ದೊಡ್ಡ ಪರದೆಯಲ್ಲಿ ಚೆಂಡು ಬ್ಯಾಟ್ ಪಕ್ಕ ಹೋಗಿರುವುದನ್ನು ತೋರಿಸುತ್ತದೆ. ಇದು ಬಾಂಗ್ಲಾದೇಶಕ್ಕೆ ಸಾಕಷ್ಟು ಮಾಹಿತಿ ನೀಡುತ್ತದೆ. ರಿವ್ಯೂವನ್ನು 15 ಸೆಕೆಂಡ್ಗಳ ಒಳಗೆ ತೆಗೆದುಕೊಳ್ಳಬೇಕು. ಆದರೆ, ಬಾಂಗ್ಲಾದೇಶ ತಡ ಮಾಡಿದೆ ಎಂದು ಪಾಕಿಸ್ತಾನವು ಅಸಮಾಧಾನಗೊಂಡಿದೆ ಎಂದು ತಿಳಿದುಬಂದಿದೆ. ಪ್ರಸಾರದಲ್ಲಿ ಯಾವುದೇ ಟೈಮರ್ ಕಾಣಿಸಿಕೊಂಡಿಲ್ಲ. ಅಲ್ಲದೆ, ಬಾಂಗ್ಲಾದೇಶವು ಸಮಯಕ್ಕೆ ರಿವ್ಯೂ ತೆಗೆದುಕೊಂಡಿದೆಯೇ ಎಂಬುದನ್ನು ಸ್ವತಂತ್ರವಾಗಿ ದೃಢೀಕರಿಸಲು ಸಾಧ್ಯವಿಲ್ಲ' ಎಂದು ವರದಿ ಹೇಳಿದೆ.
Advertisement