

2021ರಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಸಮಯದಲ್ಲಿ ಕೋವಿಡ್-19 ಪಾಸಿಟಿವ್ ಬಂದ ನಂತರ ಸಾಮಾಜಿಕ ಮಾಧ್ಯಮಗಳಲ್ಲಿ ಎದುರಾದ ನಿಂದನೆಗಳನ್ನು ಭಾರತದ ಸ್ಪಿನ್ನರ್ ವರುಣ್ ಚಕ್ರವರ್ತಿ ತಮ್ಮ ವೃತ್ತಿಜೀವನದ ದೊಡ್ಡ ಬೇಸರ ಎಂದು ಕರೆದಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ವಿರುದ್ಧದ ಪಂದ್ಯಕ್ಕೂ ಮುನ್ನ ಪಾಸಿಟಿವ್ ಬಂದ ಇಬ್ಬರು ಆಟಗಾರರಲ್ಲಿ ಚಕ್ರವರ್ತಿ ಒಬ್ಬರು. ಆದರೆ, ಆರಂಭದಲ್ಲಿ ಪಂದ್ಯವನ್ನು ಮುಂದೂಡಲಾಗಿತ್ತು. ತಂಡಗಳೊಳಗೆ ಕೋವಿಡ್ ಪ್ರಕರಣಗಳ ಹೆಚ್ಚಳದಿಂದಾಗಿ ಬಿಸಿಸಿಐ ಪಂದ್ಯಾವಳಿಯನ್ನು ಸ್ಥಗಿತಗೊಳಿಸಬೇಕಾಯಿತು. ಆ ಆವೃತ್ತಿಯಲ್ಲಿ ಕೇವಲ 29 ಪಂದ್ಯಗಳು ನಡೆದಿವೆ.
ವರುಣ್ ಚಕ್ರವರ್ತಿ ಅವರಲ್ಲದೆ, ವೇಗಿ ಸಂದೀಪ್ ವಾರಿಯರ್ ಅವರಿಗೂ ಕೂಡ ಕೆಕೆಆರ್ನಲ್ಲಿ ಕೋವಿಡ್ ಪಾಸಿಟಿವ್ ಬಂದಿತ್ತು. ಆ ಆಘಾತಕಾರಿ ಕಥೆಯನ್ನು ನೆನಪಿಸಿಕೊಂಡ ಚಕ್ರವರ್ತಿ, ಕೋವಿಡ್-19 ಪಾಸಿಟಿವ್ ಬಂದ ನಂತರ ಸಾಮಾಜಿಕ ಮಾಧ್ಯಮಗಳಲ್ಲಿ ತಮಗೆ ಕೊಲೆ ಬೆದರಿಕೆಗಳು ಬಂದವು ಮತ್ತು ಇದರಿಂದ ಟ್ರೋಲಿಂಗ್ಗೆ ಗುರಿಯಾಗಿದ್ದಾಗಿ ಬಹಿರಂಗಪಡಿಸಿದರು.
'2021ರಲ್ಲಿ ಐಪಿಎಲ್ ನಿಲ್ಲಿಸಿದಾಗ ಅತ್ಯಂತ ಕೆಟ್ಟದಾಗಿತ್ತು. ನನಗೆ ಕೋವಿಡ್ ಬಂದ ಕಾರಣ ಅದನ್ನು ಅರ್ಧಕ್ಕೆ ನಿಲ್ಲಿಸಲಾಯಿತು. ಪಾಸಿಟಿವ್ ಬಂದ ಮೊದಲ ವ್ಯಕ್ತಿ ನಾನೇ. ಆದ್ದರಿಂದ ಇಡೀ ಐಪಿಎಲ್ ನಿಂತುಹೋಯಿತು' ಎಂದು ಚಕ್ರವರ್ತಿ ಯೂಟ್ಯೂಬ್ ಶೋ ಜರ್ನಿ ಟು ಜೆರ್ಸಿಯಲ್ಲಿ ಹೇಳಿದರು.
ವರುಣ್ ಚಕ್ರವರ್ತಿ ತನ್ನ ಭುಜದ ಗಾಯಕ್ಕೆ ಚಿಕಿತ್ಸೆ ಪಡೆಯಲು ತಂಡದ ಸುರಕ್ಷಿತ ಬಯೋ-ಬಬಲ್ (ಸೋಂಕುಗಳನ್ನು ತಡೆಗಟ್ಟಲು ಉದ್ದೇಶಿಸಲಾದ ನಿರ್ಬಂಧಿತ ವಾತಾವರಣ) ವನ್ನು ಅಧಿಕೃತವಾಗಿ ತೊರೆದಿದ್ದರು. ಅಲ್ಲಿ ಅವರು ವೈರಸ್ಗೆ ಒಡ್ಡಿಕೊಂಡಿರುವ ಸಾಧ್ಯತೆಗಳು ಹೆಚ್ಚು ಎಂದು ಮಾಧ್ಯಮ ವರದಿಗಳು ತಿಳಿಸಿವೆ.
'ಜನರು ನನ್ನನ್ನು ನಿಂದಿಸುತ್ತಿದ್ದರು. ಆಗ, ಜನರು ಸಮಯ ಕಳೆಯಲು ಐಪಿಎಲ್ ಮಾತ್ರ ಮಾರ್ಗವಾಗಿತ್ತು. ಅವರು ತುಂಬಾ ಕೋಪಗೊಂಡಿದ್ದರು, ಅದನ್ನು ನಿಲ್ಲಿಸಲಾಯಿತು. ಜನರು, 'ನೀವು ಯಾಕೆ ಸಾಯಬಾರದು' ಎಂದು ಕೇಳುತ್ತಿದ್ದರು. ಅದು ತುಂಬಾ ಕೆಟ್ಟದಾಗಿತ್ತು' ಎಂದು ಅವರು ಹೇಳಿದರು.
ಈಮಧ್ಯೆ, ವರುಣ್ ಚಕ್ರವರ್ತಿ ಕಳೆದ ವರ್ಷ ಐಪಿಎಲ್ನಲ್ಲಿ 22.52 ಸರಾಸರಿಯಲ್ಲಿ 17 ವಿಕೆಟ್ಗಳನ್ನು ಮತ್ತು 7.66 ಎಕಾನಮಿ ರೇಟ್ನೊಂದಿಗೆ ಏಳನೇ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದರು. ಅವರ ಅತ್ಯುತ್ತಮ ಪ್ರದರ್ಶನ 3/22 ಆಗಿತ್ತು. ಕೆಕೆಆರ್ ಪರ 83 ಪಂದ್ಯಗಳಲ್ಲಿ, ವರುಣ್ 23.74 ಸರಾಸರಿಯಲ್ಲಿ 99 ವಿಕೆಟ್ಗಳನ್ನು ಪಡೆದಿದ್ದಾರೆ. ಇದರಲ್ಲಿ ಎರಡು ನಾಲ್ಕು ವಿಕೆಟ್ ಗೊಂಚಲು ಮತ್ತು ಅತ್ಯುತ್ತಮ ಪ್ರದರ್ಶನ 5/20 ಆಗಿದೆ.
ಇತ್ತೀಚೆಗೆ ಮುಕ್ತಾಯಗೊಂಡ ಟಿ20 ವಿಶ್ವಕಪ್ನಲ್ಲಿ, ಅವರು ಜಸ್ಪ್ರೀತ್ ಬುಮ್ರಾ ಜೊತೆಗೆ 14 ವಿಕೆಟ್ಗಳೊಂದಿಗೆ ಮೆಗಾ ಈವೆಂಟ್ನಲ್ಲಿ ಜಂಟಿಯಾಗಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದರು. ಆದರೆ, ಓವರ್ಗೆ 9.25 ರನ್ಗಳನ್ನು ಬಿಟ್ಟುಕೊಟ್ಟಿದ್ದರು.
Advertisement