

2026ರ ಟಿ20 ವಿಶ್ವಕಪ್ ಗೆದ್ದ ನಂತರ ತಮ್ಮ ಕುಟುಂಬದೊಂದಿಗೆ ಮನೆಗೆ ಹಿಂದಿರುಗುವ ರೈಲು ಪ್ರಯಾಣ ರೋಮಾಂಚನಕಾರಿಯಾಗಿತ್ತು. ಆದರೆ, ಸಾಕಷ್ಟು ಕಠಿಣವಾಗಿತ್ತು ಎಂದು ಭಾರತದ ಆಲ್ರೌಂಡರ್ ಶಿವಂ ದುಬೆ ಗುರುವಾರ ಹೇಳಿದ್ದಾರೆ.
ಅಭಿಮಾನಿಗಳ ಕಣ್ತಪ್ಪಿಸಿ ರೈಲಿನಲ್ಲಿ ಮರಳಲು ಅವರು ಹೆಚ್ಚುವರಿ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕಾಗಿತ್ತು. ಐತಿಹಾಸಿಕ ಗೆಲುವಿನ ನಂತರ ಅಹಮದಾಬಾದ್ನಿಂದ ಮನೆಗೆ ಮರಳಲು ದುಬೆ, ಚಾರ್ಟರ್ಡ್ ಅಥವಾ ಖಾಸಗಿ ವಿಮಾನಗಳಲ್ಲಿ ಪ್ರಯಾಣಿಸುವ ಬದಲು ಅಹಮದಾಬಾದ್ನಿಂದ ಮುಂಬೈಗೆ ರೈಲಿನಲ್ಲಿಯೇ ಪ್ರಯಾಣಿಸಲು ನಿರ್ಧರಿಸಿದ್ದರು. ಅದರಂತೆ, ಅವರು ರೈಲಿನ 3ನೇ ಎಸಿ ಕೋಚ್ನಲ್ಲಿ ಪ್ರಯಾಣಿಸಿದರು. ಅಭಿಮಾನಿಗಳು ತಮ್ಮನ್ನು ಗುರುತಿಸುವ ಅಪಾಯವಿದ್ದರೂ, ಅದು ಅತ್ಯಂತ ವೇಗವಾದ ಆಯ್ಕೆ ಎಂದು ಅವರು ಭಾವಿಸಿದರು.
ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ಕೆ) ಎಕ್ಸ್ನಲ್ಲಿ ಹಂಚಿಕೊಂಡ ವಿಡಿಯೋದಲ್ಲಿ, ದುಬೆ ಅವರು ಅಭಿಮಾನಿಗಳಿಂದ ತಪ್ಪಿಸಿಕೊಳ್ಳುವಲ್ಲಿ ಹೇಗೆ ಯಶಸ್ವಿಯಾದರು ಎಂಬುದನ್ನು ವಿವರಿಸಿದ್ದಾರೆ.
'ಇದು ತುಂಬಾ ಕಷ್ಟಕರವಾಗಿತ್ತು. ನಾವು ಬೆಳಿಗ್ಗೆ 5 ಗಂಟೆ ಸುಮಾರಿಗೆ ರೈಲನ್ನು ಹತ್ತಿದೆವು ಮತ್ತು ಅಲ್ಲಿ ಅನೇಕ ಜನರಿದ್ದರು. ಆದರೆ, ವಿಶ್ವಕಪ್ ಮುಗಿದ ಕೂಡಲೇ ಆಗಿದ್ದರಿಂದ, ನಾನು ಅಲ್ಲಿ ಇರುತ್ತೇನೆಂದು ಯಾರೂ ನಿರೀಕ್ಷಿಸಿರಲಿಲ್ಲ. ನಾನು ಮೇಲಿನ ಬರ್ತ್ಗೆ ಹೋಗಿ ಸ್ವಲ್ಪ ಹೊತ್ತು ಮಲಗಿದೆ. ನಾವು ಸುಮಾರು 5.30ಕ್ಕೆ ಮಲಗಿದೆವು ಮತ್ತು 10.30 ಕ್ಕೆ ಎಚ್ಚರವಾಯಿತು' ಎಂದು ಅವರು ಹೇಳಿದರು.
ಕಳೆದ ವರ್ಷ ಬರೋಡಾದಲ್ಲಿ ನಡೆದ ಬಿಪಿಸಿಎಲ್ ಟೂರ್ನಮೆಂಟ್ ಸಮಯದಲ್ಲಿ ತಾನು ಇದೇ ರೀತಿ ರೈಲಿನಲ್ಲಿ ಪ್ರಯಾಣಿಸಿದ್ದೆ ಎಂದರು.
'ನಾನು ಇದಕ್ಕೂ ಮೊದಲು ಮಾಸ್ಕ್ ಧರಿಸಿ ಪ್ರಯಾಣಿಸಿದ್ದೆ. ಕಳೆದ ವರ್ಷ, ಐಪಿಎಲ್ ಮೊದಲು, ನಾನು ಮನೆಗೆ ಬೇಗನೆ ತಲುಪಲು ಬಯಸಿದ್ದರಿಂದ ಬರೋಡಾದಲ್ಲಿ ನಡೆದ ಬಿಪಿಸಿಎಲ್ ಟೂರ್ನಮೆಂಟ್ನಿಂದ ರೈಲಿನಲ್ಲಿ ಪ್ರಯಾಣಿಸಿದೆ. ನಾನು ನನ್ನ ಬರ್ತ್ನಲ್ಲಿ ಮಲಗಿದ್ದೆ ಮತ್ತು ನನ್ನೊಂದಿಗೆ ಕೆಲವು ಸ್ನೇಹಿತರು ಇದ್ದರು' ಎಂದು ಅವರು ಹೇಳಿದರು.
ವಿಶ್ವಕಪ್ ವಿಜೇತ ತಂಡದ ಭಾಗವಾಗಿದ್ದ ಸಂಜು ಸ್ಯಾಮ್ಸನ್, ಮೊದಲ ಬಾರಿಗೆ ಚೆನ್ನೈ ಸೂಪರ್ ಕಿಂಗ್ಸ್ನಲ್ಲಿ ದುಬೆ ಜೊತೆ ಸೇರಿಕೊಳ್ಳಲಿದ್ದಾರೆ. ಚೆನ್ನೈನ ವಾತಾವರಣದ ಬಗ್ಗೆ ಸ್ಯಾಮ್ಸನ್ ನನ್ನನ್ನು ಕೇಳಿದಾಗ, 'ನೀವು ಇದನ್ನು ಇಷ್ಟಪಡುತ್ತೀರಿ. ಇದು ಮನೆಯಂತೆ ಭಾಸವಾಗುತ್ತದೆ. ಯಾವುದೇ ಒತ್ತಡವಿಲ್ಲ- ನೀವು ನಿಮ್ಮ ಅಭ್ಯಾಸ ಮತ್ತು ತರಬೇತಿ ಮೇಲೆ ಮಾತ್ರ ಗಮನಹರಿಸಬಹುದು' ಎಂದು ಹೇಳಿದ್ದಾಗಿ ದುಬೆ ತಿಳಿಸಿದರು.
ಐಪಿಎಲ್ 2026ರಲ್ಲಿ ದುಬೆ ಸಿಎಸ್ಕೆ ಪರ ಪ್ರಮುಖ ಪಾತ್ರ ವಹಿಸುವ ನಿರೀಕ್ಷೆಯಿದೆ. ಐದು ಬಾರಿಯ ಚಾಂಪಿಯನ್ಗಳು ಮಾರ್ಚ್ 30 ರಂದು ಗುವಾಹಟಿಯ ಬರ್ಸಪರ ಕ್ರೀಡಾಂಗಣದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ತಮ್ಮ ಅಭಿಯಾನವನ್ನು ಪ್ರಾರಂಭಿಸಲಿದ್ದಾರೆ.
Advertisement