

ಬೆಂಗಳೂರು: ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಶನಿವಾರ ರಾತ್ರಿ ನಡೆದ ಐಪಿಎಲ್ 2026 ಸೀಸನ್ ಉದ್ಘಾಟನಾ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಆರು ವಿಕೆಟ್ಗಳ ಜಯ ಸಾಧಿಸಿದ ನಂತರ ಆರ್ ಸಿಬಿ ನಾಯಕ ರಜತ್ ಪಾಟಿದಾರ್ ತಮ್ಮ ತಂಡದ ಸಾಮೂಹಿಕ ಪ್ರಯತ್ನವನ್ನು ಶ್ಲಾಘಿಸಿದರು.
ಪಂದ್ಯದ ನಂತರ ಮಾತನಾಡಿದ ಪಾಟಿದಾರ್, ಎಲ್ಲ ಆಟಗಾರರ ಸಾಮೂಹಿಕ ಪ್ರದರ್ಶನವನ್ನು ಕೊಂಡಾಡಿದರು. ಪ್ರತಿಯೊಬ್ಬರು ಸಕಾರಾತ್ಮಕ ಸೂಚನೆಯೊಂದಿಗೆ ಆಡಿದ್ದಾರೆ. ಇದು ನಮಗೆ ಆರಂಭಿಕ ಪಂದ್ಯ ಎಂದರು.
ನಾವು 2025ರ ಟ್ರೋಫಿ ರಕ್ಷಿಸಿಕೊಳ್ಳಬೇಕು ಎಂಬ ಮನಸ್ಥಿತಿ ಹೊಂದಿಲ್ಲ. 2025ರಲ್ಲಿ ನಾವು ಮಾಡಿದ್ದೆಲ್ಲ ಮುಗಿದುಹೋಗಿದೆ. 2026ರಲ್ಲಿ ಏನು ಮಾಡಬೇಕು. ಹೇಗೆ ಟ್ರೋಫಿ ಗೆಲ್ಲಬೇಕು ಎಂಬುದರ ಕಡೆ ಗಮನಹರಿಸಬೇಕು ಎಂದು ಹೇಳಿದರು.
ಇದೇ ವೇಳೆ ಡಫಿ, ವಿರಾಟ್ ಕೊಹ್ಲಿ ಹಾಗೂ ದೇವದತ್ ಪಡಿಕ್ಕಲ್ ಅವರ ಪ್ರದರ್ಶನವನ್ನು ಪಾಟಿದಾರ್ ಮುಕ್ತಕಂಠದಿಂದ ಹೊಗಳಿದರು. ಡಫಿ ತಮ್ಮ ಮೊದಲ ಪಂದ್ಯವನ್ನು ಆಡಿದ ರೀತಿ ಮತ್ತು ಬೌಲಿಂಗ್ ಮಾಡಿದ ರೀತಿ, ನಿಜವಾಗಿಯೂ ಪ್ರಭಾವಶಾಲಿಯಾಗಿತ್ತು. ಟ್ರಾವಿಸ್ ಹೆಡ್ ಮತ್ತು ಅಭಿಷೇಕ್ ಶರ್ಮಾ ವಿಕೆಟ್ ಪಡೆದದ್ದು ನಮಗೆ ಮಹತ್ವದ ತಿರುವು ಎಂದರು.
ವಿರಾಟ್ ಕೊಹ್ಲಿ ಮತ್ತು ದೇವದತ್ ಪಡಿಕ್ಕಲ್ ಅವರ ಆಕ್ರಮಣಕಾರಿ ಆಟದ ಬಗ್ಗೆ ಮಾತನಾಡಿದ ಪಾಟಿದಾರ್, ವಿರಾಟ್ ಕೊಹ್ಲಿ ನಂಬರ್ ಒನ್ ಚೇಸ್ ಮಾಸ್ಟರ್. ಅವರನ್ನು ಹೊಗಳಲು ಪದಗಳೇ ಸಿಗುತ್ತಿಲ್ಲ. ಅವರ ಬ್ಯಾಟಿಂಗ್ ನ್ನು ನಾನು ಯಾವಾಗಲೂ ಇಷ್ಟಪಡುತ್ತೇನೆ. ಅವರು ಆಡುವ ರೀತಿಯನ್ನು ಡಗೌಟ್ ನಲ್ಲಿ ಕುಳಿತು ನೋಡುವುದೇ ಚೆಂದ. ಸಂದರ್ಭಕ್ಕೆ ತಕ್ಕಂತೆ ಅವರು ಆಡುವ ರೀತಿ ನಿಜಕ್ಕೂ ಅನುಕರಣೀಯ ಎಂದು ಹೇಳಿದರು.
ಇಶಾನ್ ಕಿಶನ್ ಹೊಡೆದ ಎಸೆತವನ್ನು ಅದ್ಬುತ ರೀತಿಯಲ್ಲಿ ಫಿಲ್ ಸಾಲ್ಟ್ ಕ್ಯಾಚ್ ಪಡೆದರು. ಇದು ನನಗೂ ಆಶ್ಚರ್ಯವಾಯಿತು! ಅವರೊಬ್ಬ ಒಳ್ಳೆಯ ಫೀಲ್ಡರ್ ಆಗಿದ್ದಾರೆ ಎಂದು ಹೊಗಳಿದರು.
Advertisement