

ಮುಂಬೈ: ಭಾನುವಾರ ನಡೆದ ಮುಂಬೈ ಇಂಡಿಯನ್ಸ್ ವಿರುದ್ಧದ IPL 2026 ಪಂದ್ಯದಲ್ಲಿ ಕೆಕೆಆರ್ ಸೋತ ಬಳಿಕ 25 ಕೋಟಿ ರೂ. ಬೆಲೆಯ ಕ್ಯಾಮರೂನ್ ಗ್ರೀನ್ ಗೆ ಬೌಲಿಂಗ್ ನೀಡದಿದ್ದು, ಮುಳುವಾಯ್ತಾ? ಎಂಬ ಚರ್ಚೆ ನಡೆಯುತ್ತಿದೆ. ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಆರು ವಿಕೆಟ್ ಗಳಿಂದ ಕೆಕೆಆರ್ ಸೋತಿತು.
ಕೆಕೆಆರ್ ತಂಡವು ಕ್ಯಾಮರೂನ್ ಗ್ರೀನ್ ಅವರನ್ನು ದಾಖಲೆಯ 25.20 ಕೋಟಿ ರೂಪಾಯಿಗೆ (ಸ್ಯಾಲರಿ ಕ್ಯಾಪ್ 18 ಕೋಟಿ ರೂ.) ಖರೀದಿಸಿತ್ತು. ಆದಾಗ್ಯೂ, ಮುಂಬೈ ವಿರುದ್ಧದ ಪಂದ್ಯದಲ್ಲಿ ಗ್ರೀನ್ ಕೇವಲ ಬ್ಯಾಟಿಂಗ್ಗೆ ಸೀಮಿತರಾಗಿದ್ದರು. 10 ಎಸೆತಗಳಲ್ಲಿ 18 ರನ್ ಗಳಿಸಿದರು. ಆದರೆ ಒಂದೇ ಒಂದು ಓವರ್ ಕೂಡ ಬೌಲಿಂಗ್ ಮಾಡಿರಲಿಲ್ಲ. ಇದು ಕೆಕೆಆರ್ ಅಭಿಮಾನಿಗಳಲ್ಲಿ ತೀವ್ರ ಕುತೂಹಲ ಕೆರಳಿಸಿತ್ತು.
ಈ ಕುರಿತ ಪ್ರಶ್ನೆಗೆ ಪಂದ್ಯ ಮುಗಿದ ಬಳಿಕ ಮಾತನಾಡಿದ ಅಜಿಂಕ್ಯ ರಹಾನೆ, ಕ್ಯಾಮರೂನ್ ಗ್ರೀನ್ ಬೌಲಿಂಗ್ ಮಾಡದಿರಲು ಕ್ರಿಕೆಟ್ ಆಸ್ಟ್ರೇಲಿಯಾದ ನಿರ್ಬಂಧವೇ ಕಾರಣ ಎಂದು ಸ್ಪಷ್ಟಪಡಿಸಿದ್ದಾರೆ.
ಕ್ಯಾಮರೂನ್ ಗ್ರೀನ್ ಬೆನ್ನು ನೋವಿನ (Back Injury) ಸಮಸ್ಯೆಯಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಅವರು ಬೌಲಿಂಗ್ ಮಾಡಲು ಕ್ರಿಕೆಟ್ ಆಸ್ಟ್ರೇಲಿಯಾ ಇನ್ನೂ ಸಂಪೂರ್ಣವಾಗಿ ಅನುಮತಿ ನೀಡಿಲ್ಲ. ಈ ಪ್ರಶ್ನೆಯನ್ನು ನೀವು ಕ್ರಿಕೆಟ್ ಆಸ್ಟ್ರೇಲಿಯಾಕ್ಕೇ ಕೇಳಬೇಕು. ಗ್ರೀನ್ ಶೀಘ್ರದಲ್ಲೇ ಬೌಲಿಂಗ್ ಆರಂಭಿಸುತ್ತಾರೆ ಎಂದು ನಾವು ಭಾವಿಸಿದ್ದೇವೆ, ಆಗ ತಂಡದ ಸಮತೋಲನ ಮತ್ತಷ್ಟು ಸುಧಾರಿಸಲಿದೆ ಎಂದು ರಹಾನೆ ತಿಳಿಸಿದರು.
ಇನ್ನೂ ಸೋಲಿನ ಬಗ್ಗೆ ಮಾತನಾಡಿದ ರಹಾನೆ, ನಾವು ಬ್ಯಾಟಿಂಗ್ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದೇವೆ. ಕಾರ್ತಿಕ್ ತ್ಯಾಗಿ ಅವರ ಬೌಲಿಂಗ್ ಗಮನ ಸೆಳೆಯಿತು. ದೀರ್ಘ ಕಾಲದ ನಂತರ ಅವರು ಕಣಕ್ಕಿಳಿದರೂ ಪ್ರಭಾವಿ ಎನಿಸಿದರು.
ಈ ಬಾರಿಯ ಮೊದಲ ಪಂದ್ಯದಲ್ಲಿ ಸಾಕಷ್ಟು ಪಾಸಿಟಿವ್ ಅಂಶಗಳಿದ್ದು, ಮುಂದಿನ ಪಂದ್ಯಗಳಲ್ಲಿ ತಪ್ಪುಗಳನ್ನು ತಿದ್ದಿಕೊಳ್ಳುತ್ತೇವೆ ಎಂದರು.
Advertisement