ತಂಡವೊಂದು ಸಂಕಷ್ಟಕ್ಕೆ ಸಿಲುಕಿದಾಗಲೆಲ್ಲ ತಂಡದ ನಾಯಕನೇ ಹೆಚ್ಚಿನ ಟೀಕೆಗಳನ್ನು ಎದುರಿಸಬೇಕಾಗುತ್ತದೆ. ಮುಂಬೈ ಇಂಡಿಯನ್ಸ್ (MI) ತಂಡದ ನಾಯಕ ಹಾರ್ದಿಕ್ ಪಾಂಡ್ಯ ಕೂಡ ಇದೀಗ ಅಂತದ್ದೇ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2026ರ ಬಹುತೇಕ ಎಲ್ಲ ಪಂದ್ಯ ನಡೆದ ನಂತರವೂ ಅವರ ವಿರುದ್ಧ ಸಾಕಷ್ಟು ಟೀಕೆ ವ್ಯಕ್ತವಾಗಿದೆ. ಶನಿವಾರ ಚೆಪಾಕ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ಕೆ) ವಿರುದ್ಧ ಸೋತ ನಂತರ, ಹಾರ್ದಿಕ್ ಮತ್ತಷ್ಟು ಟೀಕೆಗೆ ಗುರಿಯಾಗಿದ್ದಾರೆ. ಆದಾಗ್ಯೂ, ಮುಂಬೈ ತಂಡದ ಕಳಪೆ ಪ್ರದರ್ಶನಕ್ಕೆ ಹಾರ್ದಿಕ್ ಪ್ರಮುಖ ಕಾರಣ ಎಂದು ಪರಿಗಣಿಸುವುದು ನ್ಯಾಯಯುತವಲ್ಲ. ಏಕೆಂದರೆ ಅವರು ಬಯಸಿದಷ್ಟು ಬೆಂಬಲ ತಂಡದ ಸಹ ಆಟಗಾರರಿಂದ ಸಿಕ್ಕಿಲ್ಲ ಎಂದು ಭಾರತದ ಮಾಜಿ ಬ್ಯಾಟ್ಸ್ಮನ್ ಮನೋಜ್ ತಿವಾರಿ ಅಭಿಪ್ರಾಯಪಟ್ಟಿದ್ದಾರೆ.
ಕ್ರಿಕ್ಬಜ್ನಲ್ಲಿ ಮಾತನಾಡಿದ ತಿವಾರಿ, ಮುಂಬೈನ ಐಪಿಎಲ್ 2026ರ ಅಭಿಯಾನ ಈಗಾಗಲೇ ಮುಗಿದಿದೆ. ಹಾರ್ದಿಕ್ ಬಗ್ಗೆ ಸಹಾನುಭೂತಿ ವ್ಯಕ್ತಪಡಿಸಿದ ಅವರು, ತಂಡಹ ಸಹ ಆಟಗಾರರ ಯಾವುದೇ ಬೆಂಬಲವಿಲ್ಲದೆ, ಈ ಎಲ್ಲ ಸಮಯದಲ್ಲೂ ಎಂಐ ನಾಯಕ ಏಕಾಂಗಿಯಾಗಿ ನಿಲ್ಲಬೇಕಾಯಿತು ಎಂದು ಹೇಳಿದರು.
'ನನ್ನ ಪ್ರಕಾರ ಎಲ್ಲವೂ ಈಗಾಗಲೇ ಮುಗಿದಿದೆ. ನಾನು ಇಲ್ಲಿ ಕುಳಿತಾಗ, ನಾನು ನೋಡಿದ್ದರ ಬಗ್ಗೆ ಮುಕ್ತವಾಗಿ ಮಾತನಾಡುತ್ತೇನೆ. ನಾನು ಕಂಡ ಕ್ರಿಕೆಟ್ನ ಆಧಾರದ ಮೇಲೆ, ಒಬ್ಬ ನಾಯಕ ಪ್ರತಿಯೊಬ್ಬ ಆಟಗಾರನ ವಿಶ್ವಾಸವನ್ನು ಗೆಲ್ಲಬೇಕು; ನೀವು ನಾಯಕನಾಗಿರಬೇಕು. ಆದಾಗ್ಯೂ, ಯಾರೂ ಹಾರ್ದಿಕ್ ಜೊತೆ ನಿಂತಿಲ್ಲ ಎಂದು ಅನಿಸುತ್ತದೆ. ಅವರಿಗೆ ಅಗತ್ಯವಿರುವ ಬೆಂಬಲ ಇಲ್ಲ' ಎಂದು ತಿವಾರಿ ಹೇಳಿದರು.
'ಹೌದು, ತಂಡದ ಸೋಲು, ಗೆಲುವಿನಲ್ಲಿ ನಾಯಕನ ಪಾತ್ರವಿದೆ. ನನ್ನ ಅಭಿಪ್ರಾಯದಲ್ಲಿ, ಅವರು ಚೆನ್ನಾಗಿ ಆಡುತ್ತಿಲ್ಲ. ಆದರೆ ಅದನ್ನು ಮೀರಿ, ಇತರ ಆಟಗಾರರು ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು. ಉದಾಹರಣೆಗೆ, ಸೂರ್ಯಕುಮಾರ್ ಯಾದವ್ ಸ್ಥಿರವಾಗಿ ಪ್ರದರ್ಶನ ನೀಡುತ್ತಿಲ್ಲ ಮತ್ತು ತಿಲಕ್ ಒಂದು ಉತ್ತಮ ಪಂದ್ಯದ ನಂತರ ತನ್ನ ಫಾರ್ಮ್ ಅನ್ನು ಕಾಯ್ದುಕೊಂಡಿಲ್ಲ. ತಂಡದಿಂದ ಆ ರೀತಿಯ ಅಸಮಂಜಸತೆಯೊಂದಿಗೆ, ನೀವು ಫಲಿತಾಂಶಗಳನ್ನು ಹೇಗೆ ಉತ್ಪಾದಿಸಬಹುದು? ಇದು ತುಂಬಾ ನಿರಾಶಾದಾಯಕವಾಗಿದೆ' ಎಂದು ಹೇಳಿದರು.
ಮುಂಬೈ ಇಂಡಿಯನ್ಸ್ ತಂಡವು ಕಾಗದದ ಮೇಲೆ ಮಾತ್ರ ನೋಡಲು ಅತ್ಯಂತ ಬಲಿಷ್ಠ ತಂಡಗಳಲ್ಲಿ ಒಂದಾಗಿದ್ದು, ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್ ಮತ್ತು ಹಾರ್ದಿಕ್ ಪಾಂಡ್ಯರಂತಹ ಅಂತರರಾಷ್ಟ್ರೀಯ ನಾಯಕರು ತಂಡದಲ್ಲಿದ್ದಾರೆ. ವಾಸ್ತವವಾಗಿ, ಜಸ್ಪ್ರೀತ್ ಬುಮ್ರಾ ಟೆಸ್ಟ್ ಕ್ರಿಕೆಟ್ನಲ್ಲಿ ಭಾರತ ತಂಡವನ್ನು ಮುನ್ನಡೆಸಿದ್ದಾರೆ. ಆದರೂ, ತಂಡವು ಕಾರ್ಯತಂತ್ರದ ವಿಷಯದಲ್ಲಿ ಸಂಪೂರ್ಣವಾಗಿ ಭಿನ್ನವಾಗಿದ್ದು, ಪ್ರತಿಕೂಲ ಪರಿಸ್ಥಿತಿ ಎದುರಾದಾಗ ಪರ್ಯಾಯ ಯೋಜನೆಗಳನ್ನು ರೂಪಿಸುವಲ್ಲಿ ಹೆಣಗಾಡುತ್ತಿದೆ.
ಐಪಿಎಲ್ 2026 ರಲ್ಲಿ ಮುಂಬೈ ತಂಡದ ಉಳಿದ ಅಭಿಯಾನದ ಬಗ್ಗೆ ಕೇಳಿದಾಗ, ಚರ್ಚೆಯ ಸಮಯದಲ್ಲಿ ಪ್ಯಾನೆಲ್ನಲ್ಲಿದ್ದ ಭಾರತದ ಮಾಜಿ ಸ್ಪಿನ್ನರ್ ಮುರಳಿ ಕಾರ್ತಿಕ್, ಐದು ಬಾರಿ ಚಾಂಪಿಯನ್ ಆಗಿರುವ ಮುಂಬೈ ಇಂಡಿಯನ್ಸ್ ತಂಡದ ಈ ಆವೃತ್ತಿಯು ಶೇ 99.9999 ರಷ್ಟು ಮುಗಿದಿದೆ ಎಂದರು.
'ನೋಡಿ, ನಿಮಗೆ ಐದು ಪಂದ್ಯಗಳು ಉಳಿದಿವೆ. ನೀವು ಯಾರ ವಿರುದ್ಧ ಆಡುತ್ತಿದ್ದೀರಿ ಎಂಬುದನ್ನು ಮರೆತುಬಿಡಿ ಎಂದು ನಾನು ಹೇಳುತ್ತಿದ್ದೇನೆ. ಐದರಲ್ಲಿ ಐದು ಗೆದ್ದರೂ ಸಹ, ನೀವು ಕೇವಲ 14 ಅಂಕಗಳನ್ನು ಮಾತ್ರ ತಲುಪುತ್ತೀರಿ. ನೀವು ಈಗ ಟೇಬಲ್ ಅನ್ನು ನೋಡಿದರೆ, ಪಿಬಿಕೆಎಸ್, ಆರ್ಸಿಬಿ, ಎಸ್ಆರ್ಹೆಚ್ ಮತ್ತು ಆರ್ಆರ್ ಎಲ್ಲವೂ 12 ಅಥವಾ 13 ಅಂಕಗಳನ್ನು ಪಡೆದಿವೆ. ಆ ತಂಡಗಳು ಇನ್ನೂ ಎರಡು ಅಥವಾ ಮೂರು ಪಂದ್ಯಗಳನ್ನು ಗೆದ್ದರೂ ಸಹ, ಅವರು ಮುಂದಿರುತ್ತಾರೆ' ಎಂದರು.
'ಮುಂಬೈ ಉಳಿದಿರುವ ಪ್ರತಿಯೊಂದು ಪಂದ್ಯವನ್ನು ಗೆದ್ದರೂ ಸಹ, ಅವರ ಗರಿಷ್ಠ ಮಿತಿ 14. ಈಮಧ್ಯೆ, ಪಂಜಾಬ್ ಕಿಂಗ್ಸ್ಗೆ ಆರು ಪಂದ್ಯಗಳು ಉಳಿದಿವೆ; ಆರ್ಸಿಬಿ ಮತ್ತು ಎಸ್ಆರ್ಎಚ್ಗೆ ಐದು ಪಂದ್ಯಗಳು; ರಾಜಸ್ಥಾನಕ್ಕೆ ನಾಲ್ಕು ಪಂದ್ಯಗಳು ಆಡಬೇಕಾಗಿದೆ. ಮುಂಬೈ ಅರ್ಹತೆ ಪಡೆಯಲು ಭಾರಿ ಬದಲಾವಣೆಯ ಅಗತ್ಯವಿದೆ. ಈಗಿರುವಂತೆ, ಇತರ ತಂಡಗಳು ಸಾಕಷ್ಟು ಮುಂದಿವೆ ಮತ್ತು ಜಿಟಿ ಕೂಡ ಕೆಳಗಿನಿಂದ ಮೇಲೇರಲು ಹೆಣಗಾಡುತ್ತಿದೆ. ಅಭಿಯಾನವು ಶೇ 99.999 ರಷ್ಟು ಮುಗಿದಿದೆ ಎಂದು ನಾನು ಹೇಳುತ್ತೇನೆ' ಎಂದು ಅವರು ತೀರ್ಮಾನಿಸಿದರು.
Advertisement