IPL 2026: ಕೊಹ್ಲಿ ವಿಕೆಟ್ ಪಡೆದದ್ದು ಒಳ್ಳೆಯದಾಯಿತು, ಆದರೆ ಪಂದ್ಯ ಗೆದ್ದಿದ್ದೇ ತುಂಬಾ ಮುಖ್ಯ: LSG ವೇಗಿ ಪ್ರಿನ್ಸ್ ಯಾದವ್

ಈ ಆವೃತ್ತಿಯಲ್ಲಿ ಪ್ರಿನ್ಸ್ 16 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಪರ್ಪಲ್ ಕ್ಯಾಪ್ ಟೇಬಲ್ ಟಾಪರ್‌ಗಳಾದ ಭುವನೇಶ್ವರ್ ಕುಮಾರ್ (17) ಮತ್ತು ಅನ್ಶುಲ್ ಕಾಂಬೋಜ್ (17) ಅವರಿಗಿಂತ ಒಂದು ವಿಕೆಟ್‌ನಿಂದ ಹಿಂದುಳಿದಿದ್ದಾರೆ.
Prince Yadav
ಪ್ರಿನ್ಸ್ ಯಾದವ್
Updated on

ಲಕ್ನೋ: ಲಕ್ನೋ ಸೂಪರ್ ಜೈಂಟ್ಸ್ (LSG) ತಂಡದ ವೇಗಿ ಪ್ರಿನ್ಸ್ ಯಾದವ್, ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಬ್ಯಾಟಿಂಗ್ ದಿಗ್ಗಜ ವಿರಾಟ್ ಕೊಹ್ಲಿಯನ್ನು ಶೂನ್ಯಕ್ಕೆ ನಿರ್ಗಮಿಸುವಂತೆ ಮಾಡಿದರು. ಆದರೆ, ಅದಕ್ಕಿಂತ ಮುಖ್ಯವಾಗಿ ತಮ್ಮ ತಂಡ ಗೆದ್ದಿದ್ದಕ್ಕೆ ಸಂತೋಷವಾಗಿದೆ ಎಂದು ಹೇಳಿದ್ದಾರೆ.

ಆರ್‌ಸಿಬಿ ತಂಡದ 210 ರನ್‌ಗಳ ಚೇಸ್‌ನ ಎರಡನೇ ಓವರ್‌ನಲ್ಲಿ ಪ್ರಿನ್ಸ್ ಯಾದವ್ ರೋಮಾಂಚಕಾರಿ ಎಸೆತವೊಂದನ್ನು ಎಸೆದು ಕೊಹ್ಲಿಯನ್ನು ಔಟ್ ಮಾಡಿದರು. ಗಂಟೆಗೆ 140 ಕಿ.ಮೀ ವೇಗದಲ್ಲಿ ಬಂದ ಚೆಂಡು, ಕೊಹ್ಲಿಯ ಆಫ್ ಸ್ಟಂಪ್‌ಗೆ ಅಪ್ಪಳಿಸಿತು.

2023ರ ಏಪ್ರಿಲ್‌ನಲ್ಲಿ ರಾಜಸ್ಥಾನ ರಾಯಲ್ಸ್ (RR) ವಿರುದ್ಧದ ಪಂದ್ಯದಲ್ಲಿ ಮೊದಲ ಎಸೆತದಲ್ಲೇ ಔಟಾದ ನಂತರ ಕೊಹ್ಲಿ ಮಾಡಿದ ಮೊದಲ ಐಪಿಎಲ್ ಡಕೌಟ್ ಇದು.

ಮಿಚೆಲ್ ಮಾರ್ಷ್ ಅವರ 111 ರನ್‌ಗಳ ನೆರವಿನಿಂದ 3 ವಿಕೆಟ್‌ ನಷ್ಟಕ್ಕೆ 209 ರನ್ ಗಳಿಸಿದ್ದ ಎಲ್‌ಎಸ್‌ಜಿ, ಡಿಎಲ್‌ಎಸ್ ನಿಯಮದಡಿಯಲ್ಲಿ ಒಂಬತ್ತು ರನ್‌ಗಳಿಂದ ಜಯಗಳಿಸಿತು. ಆರ್‌ಸಿಬಿ 19 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 203 ರನ್‌ಗಳಿಸಲಷ್ಟೇ ಸಾಧ್ಯವಾಯಿತು.

'(ಕೊಹ್ಲಿ) ವಿಕೆಟ್ ಪಡೆದ ನಂತರ ನನಗೆ ಸಂತೋಷವಾಯಿತು. ಆದರೆ, ನಾವು ಪಂದ್ಯವನ್ನು ಗೆದ್ದಿದ್ದಕ್ಕೆ ನನಗೆ ತುಂಬಾ ಸಂತೋಷವಾಗಿದೆ. ನಾನು ವಿಕೆಟ್ ಪಡೆದಿದ್ದರೆ ಮತ್ತು ನಾವು ಸೋತಿದ್ದರೆ, ಅದು ಇಷ್ಟೊಂದು ಒಳ್ಳೆಯದಾಗಿರುತ್ತಿರಲಿಲಿಲ್ಲ' ಎಂದು ಕೇವಲ 33 ರನ್‌ ಬಿಟ್ಟುಕೊಟ್ಟು ಮೂರು ವಿಕೆಟ್‌ಗಳನ್ನು ಪಡೆದ ಪ್ರಿನ್ಸ್ ಪಂದ್ಯದ ನಂತರ ಹೇಳಿದರು.

Prince Yadav
IPL 2026: ಸತತ 6 ಸೋಲುಗಳ ನಂತರ RCB ಮಣಿಸಿ ಗೆದ್ದ LSG, 3ನೇ ಸ್ಥಾನಕ್ಕೆ ಕುಸಿದ ಆರ್‌ಸಿಬಿ!

'ಯಾವುದೇ ಬೌಲರ್ ವಿಕೆಟ್ ಪಡೆದಾಗ ಅದು ಒಳ್ಳೆಯದೆನಿಸುತ್ತದೆ. ಆದರೆ ನಾನು ಮೊದಲೇ ಹೇಳಿದಂತೆ, ನಾವು ವಿಕೆಟ್ ಪಡೆದಿದ್ದರೆ ಮಾತ್ರ ಪಂದ್ಯವನ್ನು ಗೆಲ್ಲಬಹುದಿತ್ತು ಎಂಬ ಪರಿಸ್ಥಿತಿ ಇದ್ದಿದ್ದರಿಂದ ಅದು ಸಂಭವಿಸಿತು ಮತ್ತು ನನಗೆ ಸಂತೋಷವಾಗಿದೆ' ಎಂದು ಹೇಳಿದರು.

ಪ್ರಿನ್ಸ್ ಯಾದವ್ ಅವರು ಕೊಹ್ಲಿಯನ್ನು ಔಟ್ ಮಾಡಿದ ಎಸೆತವನ್ನು ಪಂದ್ಯಾವಳಿಯಲ್ಲಿ ಅತ್ಯುತ್ತಮವಾದ ಎಸೆತಗಳಲ್ಲಿ ಒಂದೆಂದು ಕೆಲವು ವ್ಯಾಖ್ಯಾನಕಾರರು ಭಾವಿಸಿದ್ದಾರೆ.

ಈ ಆವೃತ್ತಿಯಲ್ಲಿ ಪ್ರಿನ್ಸ್ 16 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಪರ್ಪಲ್ ಕ್ಯಾಪ್ ಟೇಬಲ್ ಟಾಪರ್‌ಗಳಾದ ಭುವನೇಶ್ವರ್ ಕುಮಾರ್ (17) ಮತ್ತು ಅನ್ಶುಲ್ ಕಾಂಬೋಜ್ (17) ಅವರಿಗಿಂತ ಒಂದು ವಿಕೆಟ್‌ನಿಂದ ಹಿಂದುಳಿದಿದ್ದಾರೆ.

'ಹೊಸ ಚೆಂಡಿನಲ್ಲಿ ಬೌಲಿಂಗ್ ಮಾಡುವ ಬಗ್ಗೆ ನಾನು ಅವರಿಂದ (ಮೊಹಮ್ಮದ್ ಶಮಿ) ಬಹಳಷ್ಟು ಕಲಿತಿದ್ದೇನೆ. ಆದರೆ, ಅವರ ಬಗ್ಗೆ ಅತ್ಯುತ್ತಮವಾದ ವಿಷಯವೆಂದರೆ ಬೌಲರ್ ಬೌಲಿಂಗ್ ಮಾಡುವಾಗಲೆಲ್ಲ ಅವರು ಮಿಡ್-ಆನ್ ಅಥವಾ ಮಿಡ್-ಆಫ್‌ನಲ್ಲಿ ನಿಲ್ಲುತ್ತಾರೆ. ಆದ್ದರಿಂದ, ಅಂತಹ ಅನುಭವಿ ಆಟಗಾರ ನಿಮ್ಮೊಂದಿಗೆ ನಿಂತಿದ್ದರೆ, ವಿಭಿನ್ನ ಮಟ್ಟದ ಆತ್ಮವಿಶ್ವಾಸವಿರುತ್ತದೆ' ಎಂದು ಅವರು ಹೇಳಿದರು.

'ಆದ್ದರಿಂದ, ಡ್ರೆಸ್ಸಿಂಗ್ ರೂಂ ಮೊದಲು ಚೆನ್ನಾಗಿತ್ತು, ಈಗಲೂ ಹಾಗೆಯೇ ಇದೆ. ಕ್ರಿಕೆಟ್‌ನಲ್ಲಿ, ನಾವು ಯಾವಾಗಲೂ ಗೆಲ್ಲುತ್ತೇವೆ ಅಥವಾ ಸೋಲುತ್ತೇವೆ. ಆದರೆ, ನಮ್ಮ ತಂಡವು ನಮ್ಮ ಅತ್ಯುತ್ತಮ ಪ್ರಯತ್ನಗಳನ್ನು ಮಾಡುತ್ತಿದೆ. ನಾವು ಪ್ಲೇಆಫ್‌ಗಳ ಬಗ್ಗೆ ಹೆಚ್ಚು ಯೋಚಿಸುತ್ತಿಲ್ಲ, ಆದರೆ ಪಂದ್ಯದಿಂದ ಪಂದ್ಯಕ್ಕೆ ಹೋಗುವ ಬಗ್ಗೆ ಯೋಚಿಸುತ್ತಿದ್ದೇವೆ' ಎಂದರು.

Prince Yadav
IPL 2026: ಡೆಲ್ಲಿ ಕ್ಯಾಪಿಟಲ್ಸ್‌ಗೆ ಅದೃಷ್ಟ ಕೈಕೊಟ್ಟಿದೆ, ಗೆಲುವಿಗಾಗಿ ಕೆಲವು ಆಚರಣೆಗಳ ಮೊರೆಹೋಗಬೇಕಿದೆ; ಶ್ಯಾಮ್ ಸುಂದರ್ ಶರ್ಮಾ

ಪ್ರಿನ್ಸ್ ಅವರ ಸ್ಪೆಲ್ ಪಂದ್ಯವನ್ನೇ ಬದಲಾಯಿಸಿತು ಎಂದು ಆರ್‌ಸಿಬಿ ನಾಯಕ ರಜತ್ ಪಾಟೀದಾರ್ ಒಪ್ಪಿಕೊಂಡರು.

'ನಾವು ದೆಹಲಿಯಲ್ಲಿ ಪ್ರಿನ್ಸ್ ಅವರೊಂದಿಗೆ ಸಾಕಷ್ಟು ದೇಶೀಯ ಪಂದ್ಯಗಳನ್ನು ಆಡಿದ್ದೇವೆ. ನಾನು ಅವರನ್ನು ಬಹಳ ಸಮಯದಿಂದ ನೋಡಿದ್ದೇನೆ. ಅವರಲ್ಲಿ ಬಹಳಷ್ಟು ವೇರಿಯೇಷನ್ಸ್‌ಗಳಿವೆ. ಅವರಲ್ಲಿ ಪೇಸ್ ಇದೆ. ಅವರಲ್ಲಿ ಸ್ವಿಂಗ್ ಇದೆ. ಅವರು ಸರಿಯಾದ ವೇಗದ ಬೌಲರ್. ಅವರು ಇಂದು ನಿಜವಾಗಿಯೂ ಚೆನ್ನಾಗಿ ಬೌಲಿಂಗ್ ಮಾಡಿದರು. ವಿಶೇಷವಾಗಿ ಅವರು ಪ್ರಯತ್ನಿಸಿದ ಸ್ಲೋವರ್ ಚೆಂಡುಗಳು. ಅದು ಪಂದ್ಯವನ್ನೇ ಬದಲಿಸುವ ಸ್ಪೆಲ್ ಎಂದು ನಾನು ಭಾವಿಸುತ್ತೇನೆ' ಎಂದು ಪಾಟಿದಾರ್ ಹೇಳಿದರು.

ಆರ್‌ಸಿಬಿ ಸದ್ಯ ಆಡಿರುವ 10 ಪಂದ್ಯಗಳಲ್ಲಿ ಆರು ಗೆಲುವುಗಳೊಂದಿಗೆ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com