ಗಾಯದ ಕಾರಣದಿಂದಾಗಿ ಕೆಲವು ಪಂದ್ಯಗಳಿಂದ ಹೊರಗುಳಿದಿದ್ದ ಹಾರ್ದಿಕ್ ಪಾಂಡ್ಯ ಬುಧವಾರ ಕೋಲ್ಕತ್ತಾ ನೈಟ್ ರೈಡರ್ಸ್ (KKR) ವಿರುದ್ಧದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ (MI) ನಾಯಕನಾಗಿ ಮರಳಿದರು. ಈ ಆವೃತ್ತಿಯ ಉದ್ದಕ್ಕೂ, ಮುಂಬೈ ಸ್ಥಿರ ರನ್ ಗಳಿಸಲು ಹೆಣಗಾಡಿದೆ ಮತ್ತು ಪ್ಲೇಆಫ್ ರೇಸ್ನಿಂದ ಹೊರಗುಳಿದಿದೆ. ಕೆಕೆಆರ್ ವಿರುದ್ಧದ ಪಂದ್ಯದಲ್ಲೂ ಇದು ಭಿನ್ನವಾಗಿರಲಿಲ್ಲ. ಮುಂಬೈ ಬ್ಯಾಟ್ಸ್ಮನ್ಗಳು 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ ಕೇವಲ 147 ರನ್ ಗಳಿಸಲು ಮಾತ್ರ ಸಾಧ್ಯವಾಯಿತು. ಇಷ್ಟು ಕಡಿಮೆ ಮೊತ್ತವನ್ನು ಡಿಫೆಂಡ್ ಮಾಡಿಕೊಳ್ಳಲು ಮುಂಬೈಗೆ ವಿಕೆಟ್ಗಳು ಬೇಕಾಗಿದ್ದವು. ಕಾರ್ಬಿನ್ ಬಾಷ್ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದರೂ, ಕಳಪೆ ಫೀಲ್ಡಿಂಗ್ನಿಂದಾಗಿ ಬಾರಿ ಬೆಲೆತೆರುವಂತಾಯಿತು.
ಹಾರ್ದಿಕ್ ಪಾಂಡ್ಯ ಬೌಲಿಂಗ್ ಮಾಡುತ್ತಿದ್ದ 10 ನೇ ಓವರ್ನಲ್ಲಿ ಅಂತಹ ಒಂದು ಘಟನೆ ಸಂಭವಿಸಿತು. ರೋವ್ಮನ್ ಪೊವೆಲ್ ಅವರ ಶಾಟ್ ಗಾಳಿಯಲ್ಲಿ ಎತ್ತರಕ್ಕೆ ಹೋಯಿತು. ಇಬ್ಬರು ಮುಂಬೈ ಆಟಗಾರರಾದ ರಾಬಿನ್ ಮಿಂಜ್ ಮತ್ತು ದೀಪಕ್ ಚಾಹರ್ ಚೆಂಡನ್ನು ಹಿಡಿಯಲು ಮುಂದೆ ಬಂದರು. ಆದರೆ, ಕೊನೇ ಕ್ಷಣದಲ್ಲಿ ಒಬ್ಬರ ಮುಖನವನ್ನು ಒಬ್ಬರು ನೋಡುತ್ತಾ ನಿಂತರು. ಈ ಘಟನೆಯನ್ನು ಕಂಡ ಪಾಂಡ್ಯ ಚಪ್ಪಾಳೆ ತಟ್ಟಿ ಸುಮ್ಮನಾದರು.
ಬುಧವಾರ ಮಳೆಯಿಂದಾಗಿ ಅಡ್ಡಿಯುಂಟಾದ ಐಪಿಎಲ್ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಮುಂಬೈ ಇಂಡಿಯನ್ಸ್ ತಂಡವನ್ನು ನಾಲ್ಕು ವಿಕೆಟ್ಗಳಿಂದ ಸೋಲಿಸಿ ಪ್ಲೇಆಫ್ ಆಸೆಯನ್ನು ಜೀವಂತವಾಗಿರಿಸಿಕೊಂಡಿತು.
ಟಾಸ್ ಸೋತು ಬ್ಯಾಟಿಂಗ್ ಮಾಡಿದ ಮುಂಬೈ ತಂಡವು, 8 ವಿಕೆಟ್ ನಷ್ಟಕ್ಕೆ 147 ರನ್ಗಳ ಸಾಧಾರಣ ಮೊತ್ತವನ್ನು ಗಳಿಸಲು ಸಹ ಕಷ್ಟಪಟ್ಟಿತು.
ಆರನೇ ಓವರ್ನಲ್ಲಿ ಮುಂಬೈ 41/4ಕ್ಕೆ ಕುಸಿದಿತ್ತು. ಹಾರ್ದಿಕ್ ಪಾಂಡ್ಯ (26) ಮತ್ತು ತಿಲಕ್ ವರ್ಮಾ (20) 49 ಎಸೆತಗಳಲ್ಲಿ 43 ರನ್ಗಳ ಜೊತೆಯಾಟ ನಡೆಸಿ ತಂಡವನ್ನು ಸ್ಥಿರಗೊಳಿಸಲು ಪ್ರಯತ್ನಿಸಿದರು. ನಂತರ ಕಾರ್ಬಿನ್ ಬಾಷ್ ಅವರ 18 ಎಸೆತಗಳಲ್ಲಿ ಔಟಾಗದೆ 32 ರನ್ಗಳು ಮುಂಬೈ ತಂಡವನ್ನು 150ರ ಗಡಿಯ ಹತ್ತಿರಕ್ಕೆ ಕೊಂಡೊಯ್ದವು.
ಕೆಕೆಆರ್ ಪರ, ಸೌರಭ್ ದುಬೆ (2/34), ಕ್ಯಾಮರೂನ್ ಗ್ರೀನ್ (2/23), ಕಾರ್ತಿಕ್ ತ್ಯಾಗಿ (2/37) ಮತ್ತು ಸುನಿಲ್ ನರೈನ್ (1/13) ವಿಕೆಟ್ ಪಡೆದಿದ್ದರು.
ಇದಕ್ಕೆ ಉತ್ತರವಾಗಿ, ಕನ್ನಡಿಗ ಮನೀಶ್ ಪಾಂಡೆ (45) ಮತ್ತು ರೋವ್ಮನ್ ಪೊವೆಲ್ (40) 64 ರನ್ಗಳ ಜೊತೆಯಾಟ ನಡೆಸಿ ಕೆಕೆಆರ್ ತಂಡವನ್ನು ಚೇಸ್ನಲ್ಲಿ ಮುನ್ನಡೆಸಿದರು. ರಿಂಕು ಸಿಂಗ್ (9) ಗೆಲುವಿನ ರನ್ ಗಳಿಸಿದರು.
ಕಾರ್ಬಿನ್ ಬಾಷ್ (3/30) ಮೂರು ವಿಕೆಟ್ ಪಡೆದರೆ, ದೀಪಕ್ ಚಾಹರ್, ಜಸ್ಪ್ರೀತ್ ಬುಮ್ರಾ ಮತ್ತು ಎಎಂ ಗಜನ್ಫರ್ ತಲಾ ಒಂದು ವಿಕೆಟ್ ಪಡೆದರು.
Advertisement