ಐಪಿಎಲ್ 2026ರಲ್ಲಿ ಎಂಎಸ್ ಧೋನಿ ಪಂದ್ಯದಲ್ಲಿ ಕಾಣಿಸಿಕೊಳ್ಳುವ ಬಗೆಗಿನ ಅನಿಶ್ಚಿತತೆಯನ್ನು ಉಂಟುಮಾಡಿರುವ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಭಾರತದ ಮಾಜಿ ಆಟಗಾರ ಎಸ್. ಬದ್ರಿನಾಥ್ ವಾಗ್ದಾಳಿ ನಡೆಸಿದ್ದಾರೆ. ಈ ವರ್ಷ ಧೋನಿ ಕಾಲಿನ ಸ್ನಾಯು ಸೆಳೆತದಿಂದ ಬಳಲುತ್ತಿದ್ದ ಕಾರಣ ಈವರೆಗೂ ಒಂದೇ ಒಂದು ಪಂದ್ಯದಲ್ಲಿಯೂ ಕಾಣಿಸಿಕೊಂಡಿಲ್ಲ ಮತ್ತು ಇತ್ತೀಚಿನ ದಿನಗಳಲ್ಲಿ ಅವರು ಹೆಬ್ಬೆರಳಿನ ಗಾಯಕ್ಕೂ ಒಳಗಾಗಿದ್ದರು. ಆದಾಗ್ಯೂ, ಅವರ ಫಿಟ್ನೆಸ್ ಬಗ್ಗೆ ನಿರಂತರ ಊಹಾಪೋಹಗಳು ಕೇಳಿಬರುತ್ತಿವೆ. ಸನ್ರೈಸರ್ಸ್ ಹೈದರಾಬಾದ್ (SRH) ವಿರುದ್ಧದ ಸಿಎಸ್ಕೆಯ ತವರಿನಲ್ಲಿ ನಡೆದ ಕೊನೆಯ ಪಂದ್ಯದ ವೇಳೆ ಧೋನಿ ಮೈದಾನದಲ್ಲಿ ಹಾಜರಿದ್ದರು. ಆದರೆ, ಪಂದ್ಯದಲ್ಲಿ ಕಾಣಿಸಿಕೊಳ್ಳಲಿಲ್ಲ.
'ಪ್ರತಿ ಪಂದ್ಯಕ್ಕೂ ಮುನ್ನ ಅವರು ಆಡುತ್ತಾರೋ ಇಲ್ಲವೋ ಎಂಬ ಪ್ರಶ್ನೆಗಳು ನಿರಂತರವಾಗಿ ಕೇಳಿಬರುತ್ತಿವೆ. ಧೋನಿ ವಿಚಾರದಲ್ಲಿ ಇಡೀ ಪರಿಸ್ಥಿತಿಯನ್ನು ಸರಿಯಾಗಿ ನಿಭಾಯಿಸಿಲ್ಲ. ಯಾರಿಗೂ ಕಾರಣ ತಿಳಿದಿಲ್ಲ. ಇದು ಪಂದ್ಯದ ಬಗ್ಗೆ ಆಸಕ್ತಿ ಮೂಡಿಸುವುದೋ ಅಥವಾ ಇದು ವ್ಯವಹಾರ ನಿರ್ಧಾರವೋ? ಇದು ಕೂಡ ಪ್ರಕ್ರಿಯೆಯ ಭಾಗವೇ?' ಎಂದು ಪ್ರಶ್ನಿಸಿದ್ದಾರೆ.
'ರುತುರಾಜ್ ಗಾಯಕ್ವಾಡ್ ಅವರನ್ನು ನಾಯಕನನ್ನಾಗಿ ಮಾಡಲು ಎಂಎಸ್ ಧೋನಿ ಬಯಸಿದ್ದರು ಎಂಬುದು ನಿಜವೋ ಇಲ್ಲವೋ ಎಂಬುದು ಯಾರಿಗೂ ತಿಳಿದಿಲ್ಲ. ಈ ನಿರ್ಧಾರವು ಯಾವುದೇ ರೀತಿಯಲ್ಲಿ ಧೋನಿ ಮೇಲೆ ಬರಲು ಸಾಧ್ಯವಿಲ್ಲ. ಇದು ಮ್ಯಾನೇಜ್ಮೆಂಟ್ನ ನಿರ್ಧಾರವಾಗಿರಬೇಕು. ಧೋನಿ ಕೇವಲ ಸಲಹೆಯನ್ನು ನೀಡಬಹುದಿತ್ತು. ಆದ್ದರಿಂದ ಮ್ಯಾನೇಜ್ಮೆಂಟ್ ಮಾತ್ರ ಇದಕ್ಕೆ ಜವಾಬ್ದಾರಿ ತೆಗೆದುಕೊಳ್ಳಬೇಕು. ಇದರಲ್ಲಿ ಧೋನಿ ಪಾತ್ರವಿದ್ದಿದ್ದರೆ, ಅವರು ರವೀಂದ್ರ ಜಡೇಜಾ ಅವರನ್ನು ನಾಯಕನನ್ನಾಗಿ ಸೂಚಿಸುತ್ತಿದ್ದರು' ಎಂದು ಬದ್ರಿನಾಥ್ ಹೇಳಿದರು.
2026ನೇ ಐಪಿಎಲ್ ಆವೃತ್ತಿ CSKಗೆ ಉತ್ತಮವಾಗಿಲ್ಲ. ಇದೀಗ ತಂಡವು ಪ್ಲೇಆಫ್ಗೆ ಅರ್ಹತೆ ಪಡೆಯುವ ಸಾಧ್ಯತೆ ಕಡಿಮೆ ಇದೆ. ರುತುರಾಜ್ ಗಾಯಕ್ವಾಡ್ ನಾಯಕತ್ವದಲ್ಲಿ CSK ಯ 'ಪ್ರಕ್ರಿಯೆ'ಯನ್ನು ಬದ್ರಿನಾಥ್ ತೀವ್ರವಾಗಿ ಟೀಕಿಸಿದರು ಮತ್ತು ಅವರ ಸಾಕಷ್ಟು ಆಟಗಾರರ ಪ್ರದರ್ಶನ ನಿರಾಶಾದಾಯಕವಾಗಿವೆ ಎಂದು ಗಮನಸೆಳೆದರು.
'ಡೆವಾಲ್ಡ್ ಬ್ರೆವಿಸ್, ಆಯುಷ್ ಮ್ಹಾತ್ರೆ ಮತ್ತು ಉರ್ವಿಲ್ ಪಟೇಲ್ ಅವರಂತಹ ಆಟಗಾರರು ಬದಲಿ ಆಟಗಾರರಾಗಿ ಸೇರಿಕೊಂಡರು. ಅವರು ಉತ್ತಮ ಪ್ರದರ್ಶನ ನೀಡಿದ್ದು CSK ಪಾಲಿಗೆ ಅದೃಷ್ಟವಾಯಿತು. ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲು ತಂಡ ಯಾವುದೇ ಯೋಜನೆ ಮಾಡಿದಂತೆ ಕಾಣಲಿಲ್ಲ. ಸಂಜು ಸ್ಯಾಮ್ಸನ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳುವುದು ಕೂಡ ಟ್ರೇಡಿಂಗ್ ಮೂಲಕ ಆಯಿತು. ಅದಕ್ಕಾಗಿ CSK ರವೀಂದ್ರ ಜಡೇಜಾ ಮತ್ತು ಸ್ಯಾಮ್ ಕರನ್ ಅವರನ್ನು ಕೈಬಿಡಬೇಕಾಯಿತು. ಹೀಗಾಗಿ, CSKಯ ಯಾವುದೇ ನಿರ್ಧಾರಗಳು ಸ್ವತಂತ್ರವಾಗಿ ಯಶಸ್ವಿಯಾಗಿಲ್ಲ' ಎಂದರು.
Advertisement