ನಟ ಅಲ್ಲು ಅರ್ಜುನ್ ಪುತ್ರ ಅಯಾನ್'ಗೆ ಸರ್ಪ್ರೈಸ್ ಗಿಫ್ಟ್; ವೆಂಕಟೇಶ್ ಅಯ್ಯರ್ ನಡೆಗೆ ಫ್ಯಾನ್ಸ್ ಫಿದಾ

ಚಿತ್ರಗಳಲ್ಲಿ ವೆಂಕಟೇಶ್ ಅಯ್ಯರ್ ಅವರನ್ನು ಹೂಗುಚ್ಛ ನೀಡಿ ಸ್ವಾಗತಿಸುತ್ತಿರುವ ಅಲ್ಲು ಅರ್ಜುನ್ ಹಾಗೂ ಸಹಿ ಮಾಡಲಾದ ಆರ್‌ಸಿಬಿ ಜರ್ಸಿಯನ್ನು ಹಿಡಿದು ಆಯಾನ್ ಸಂತಸದಿಂದಿರುವುದು ಕಂಡು ಬಂದಿದೆ.
Venkatesh Iyer
ನಟ ಅಲ್ಲು ಅರ್ಜುನ್ ಅವರ ಪುತ್ರ ಆಯಾನ್‌ ಜೊತೆಗೆ ವೆಂಕಟೇಶ್ ಅಯ್ಯರ್
Updated on

ಹೈದರಾಬಾದ್: ಆರ್‌ಸಿಬಿ ಮತ್ತು ವಿರಾಟ್ ಕೊಹ್ಲಿಯ ಕಟ್ಟಾ ಅಭಿಮಾನಿಯಾಗಿರುವ ನಟ ಅಲ್ಲು ಅರ್ಜುನ್ ಅವರ ಪುತ್ರ ಆಯಾನ್‌ಗೆ ವಿಶೇಷ ಉಡುಗೊರೆಯೊಂದು ಸಿಕ್ಕಿದೆ.

ಆರ್‌ಸಿಬಿ ತಂಡದ ಆಲ್‌ರೌಂಡರ್ ವೆಂಕಟೇಶ್ ಅಯ್ಯರ್ ಅವರು ನಟ ಅಲ್ಲು ಅರ್ಜುನ್ ಅವರ ಪುತ್ರ ಆಯಾನ್‌ಗೆ ಸಹಿ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಜರ್ಸಿಯನ್ನು ಉಡುಗೊರೆಯಾಗಿ ನೀಡಿದ್ದಾರೆ.

ಶನಿವಾರ ನಡೆದ ಈ ಭೇಟಿಯ ಫೋಟೋಗಳನ್ನು ಅಲ್ಲು ಅರ್ಜುನ್ ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಚಿತ್ರಗಳಲ್ಲಿ ವೆಂಕಟೇಶ್ ಅಯ್ಯರ್ ಅವರನ್ನು ಹೂಗುಚ್ಛ ನೀಡಿ ಸ್ವಾಗತಿಸುತ್ತಿರುವ ಅಲ್ಲು ಅರ್ಜುನ್ ಹಾಗೂ ಸಹಿ ಮಾಡಲಾದ ಆರ್‌ಸಿಬಿ ಜರ್ಸಿಯನ್ನು ಹಿಡಿದು ಆಯಾನ್ ಸಂತಸದಿಂದಿರುವುದು ಕಂಡು ಬಂದಿದೆ.

ಪೋಸ್ಟ್‌ನಲ್ಲಿ ವೆಂಕಟೇಶ್ ಅಯ್ಯರ್ ಅವರಿಗೆ ಧನ್ಯವಾದ ತಿಳಿಸಿದ ಅಲ್ಲು ಅರ್ಜುನ್, ಅವರ ಮುಂದಿನ ವೃತ್ತಿಜೀವನಕ್ಕೆ ಶುಭ ಹಾರೈಸಿದ್ದಾರೆ.

ಆಯಾನ್‌ಗೆ ಆರ್‌ಸಿಬಿ ಹಾಗೂ ವಿರಾಟ್ ಕೊಹ್ಲಿ ಮೇಲಿರುವ ಅಭಿಮಾನ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

Venkatesh Iyer
RCB ಗೆಲುವಿಗಾಗಿ ಕೈಮುಗಿದು ಪ್ರಾರ್ಥಿಸಿದ ಅನುಷ್ಕಾ: ‘ರಾಧೇ ನಾಮ’ ರಿಂಗ್ ಧರಿಸಿ ಸ್ಟೇಡಿಯಂನಲ್ಲಿ ಜಪ, ವಿಡಿಯೊ ವೈರಲ್..!

ಕಳೆದ ಐಪಿಎಲ್ ಚಾಂಪಿಯನ್‌ಶಿಪ್ ಗೆಲುವಿನ ಬಳಿಕ ಹಂಚಿಕೊಂಡ ವಿಡಿಯೊದಲ್ಲಿ ಆಯಾನ್, ವಿರಾಟ್ ಕೊಹ್ಲಿ ಬಗ್ಗೆ ಅಪಾರ ಅಭಿಮಾನ ವ್ಯಕ್ತಪಡಿಸಿದ್ದಲ್ಲದೆ, ತಂಡದ ಗೆಲುವಿನ ಸಂಭ್ರಮದಲ್ಲಿ ನೆಲದ ಮೇಲೆ ಉರುಳಾಡುತ್ತಾ, ಕೂಗಾಡುತ್ತಾ, ತಲೆಯ ಮೇಲೆ ನೀರು ಸುರಿದು ಸಂಭ್ರಮಿಸಿದ್ದನು. “ಫೈನಲಿ, ವಿ ಡಿಡ್ ಇಟ್” ಎಂದು ಹೇಳಿದ್ದ ಆತನ ವೀಡಿಯೋ ಅಭಿಮಾನಿಗಳ ಮನಗೆದ್ದಿತ್ತು.

ಈಗ ಆರ್‌ಸಿಬಿ ಆಟಗಾರನಿಂದಲೇ ಸಹಿ ಮಾಡಲಾದ ಜರ್ಸಿ ಉಡುಗೊರೆಯಾಗಿ ಸಿಕ್ಕಿರುವುದು ಆಯಾನ್‌ಗೆ ಮತ್ತಷ್ಟು ವಿಶೇಷ ಕ್ಷಣವಾಗಿದ್ದು, ಆತನ ಮುಖದಲ್ಲಿದ್ದ ಸಂತಸ ನೆಟ್ಟಿಗರ ಗಮನ ಸೆಳೆದಿದೆ.

ಈ ಭೇಟಿಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗಿದ್ದು, “ಕ್ರಿಕೆಟ್ ಮತ್ತು ಸಿನಿಮಾದ ಸುಂದರ ಸಂಗಮ”, “ಆಯಾನ್ ಖುಷಿ ನೋಡಿದರೆ ಮನಸ್ಸೇ ತುಂಬುತ್ತದೆ” ಎಂಬ ಕಾಮೆಂಟ್‌ಗಳು ಹರಿದುಬಂದಿವೆ.

ಇನ್ನು ವೆಂಕಟೇಶ್ ಅಯ್ಯರ್ ಈ ಬಾರಿಯ ಐಪಿಎಲ್‌ ಸೀಸನ್‌ನಲ್ಲಿ ಆರ್‌ಸಿಬಿ ತಂಡದ ಪರವಾಗಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಅಜೇಯ 73 ರನ್ ಗಳಿಸಿ ತಂಡವು ಪ್ಲೇ ಆಫ್ ತಲುಪುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಮೈದಾನದೊಳಗಿನ ಪ್ರದರ್ಶನದ ಜೊತೆಗೆ ಮೈದಾನದ ಹೊರಗಿನ ವೆಂಕಟೇಶ್ ಅಯ್ಯರ್ ಅವರ ಈ ನಡೆ ಕೂಡ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ.

X

Advertisement

X
Kannada Prabha
www.kannadaprabha.com