

ನವದೆಹಲಿ: ದುಲೀಪ್ ಟ್ರೋಫಿ 2026ರ ಆರಂಭದಿಂದಲೂ ಈಸ್ಟ್ ಝೋನ್ ತಂಡದ ಪ್ರಮುಖ ಆಟಗಾರನಾಗಿ ಗುರುತಿಸಿಕೊಂಡಿರುವ ಯುವ ಬ್ಯಾಟರ್ ವೈಭವ್ ಸೂರ್ಯವಂಶಿ, ಇದೀಗ ಮೈದಾನದಲ್ಲಿ ತಮ್ಮ ನಾಯಕತ್ವದ ಗುಣಗಳನ್ನೂ ತೋರಿಸಿ ವ್ಯಾಪಕ ಸುದ್ದಿಗೆ ಗ್ರಾಸವಾಗುತ್ತಿದ್ದಾರೆ.
ದುಲೀಪ್ ಟ್ರೋಫಿ ಸೆಮಿಫೈನಲ್ನಲ್ಲಿ ನಾಯಕ ಇಶಾನ್ ಕಿಶನ್ ಗಾಯಗೊಂಡ ಹಿನ್ನೆಲೆಯಲ್ಲಿ ನಾಯಕತ್ವದ ಜವಾಬ್ದಾರಿ ವಹಿಸಿಕೊಂಡಿದ್ದ ವೈಭವ್ ತಮ್ಮ ಸಾಮರ್ಥ್ಯ ಸಾಬೀತು ಪಡಿಸಿದ್ದರು. ಇದೀಗ ತಂಡದ ಉಪನಾಯಕನಾಗಿಯೂ ತಮ್ಮ ಸಾಮರ್ಥ್ಯ ಸಾಬೀತುಪಡಿಸುತ್ತಿದ್ದಾರೆ.
ದುಲೀಪ್ ಟ್ರೋಫಿ ಫೈನಲ್ನ ಮೂರನೇ ದಿನ ನಡೆದ ಘಟನೆಯೊಂದು ವೈಭವ್ ಅವರ ಕ್ರಿಕೆಟ್ ಬುದ್ಧಿವಂತಿಕೆ ಹಾಗೂ ನಿರ್ಧಾರ ಕೈಗೊಳ್ಳುವ ಸಾಮರ್ಥ್ಯಕ್ಕೆ ಸಾಕ್ಷಿಯಾಗಿದೆ. ಸೌತ್ ಝೋನ್ನ ರಿಕ್ಕಿ ಭುಯಿ ಅವರನ್ನು ಔಟ್ ಮಾಡುವ ಸಂದರ್ಭದಲ್ಲಿ ವೈಭವ್ ನೀಡಿದ ಸಲಹೆಯೇ ಪ್ರಮುಖ ಪಾತ್ರ ವಹಿಸಿತು.
ಆಗಿದ್ದೇನು?
ಅನುಭವಿ ವೇಗಿ ಮುಖೇಶ್ ಕುಮಾರ್ ಲೆಗ್ ಸೈಡ್ನತ್ತ ಎಸೆದ ಚೆಂಡಿಗೆ ರಿಕ್ಕಿ ಭುಯಿ ಬ್ಯಾಟ್ನ ಅಂಚು ತಗುಲಿತ್ತು. ವಿಕೆಟ್ಕೀಪರ್ ಕುಮಾರ್ ಕುಶಾಗ್ರ ಚೆಂಡನ್ನು ಅತ್ಯುತ್ತಮವಾಗಿ ಕ್ಯಾಚ್ ಹಿಡಿದಿದ್ದರು. ಆದರೆ ಮೈದಾನದ ಅಂಪೈರ್ಗೆ ಚೆಂಡು ಬ್ಯಾಟ್ಗೆ ತಾಗಿರುವುದು ಕಾಣಿಸಲಿಲ್ಲ.
ಹೀಗಾಗಿ ಅವರು ಔಟ್ ಮನವಿಯನ್ನು ತಿರಸ್ಕರಿಸಿದರು. ಈ ಸಂದರ್ಭದಲ್ಲಿ ವೈಭವ್ ಸೂರ್ಯವಂಶಿ ನಾಯಕ ಇಶಾನ್ ಕಿಶನ್ ಅವರಿಗೆ DRS ತೆಗೆದುಕೊಳ್ಳುವಂತೆ ಒತ್ತಾಯಿಸಿದರು.
ಸ್ಟಂಪ್ ಮೈಕ್ರೊಫೋನ್ನಲ್ಲಿ ವೈಭವ್ ಅವರ “Take it, take it” ಎಂಬ ಮಾತು ಸ್ಪಷ್ಟವಾಗಿ ಕೇಳಿಸಿತು. ಬಳಿಕ ಇಶಾನ್ ಕಿಶನ್ ರಿವ್ಯೂಗೆ ಮನವಿ ಮಾಡಿದರು. DRSನಲ್ಲಿ ಪರಿಶೀಲನೆ ನಡೆಸಿದಾಗ UltraEdge ಮೂಲಕ ಚೆಂಡು ಬ್ಯಾಟ್ಗೆ ತಾಗಿರುವುದು ಸ್ಪಷ್ಟವಾಯಿತು.
ಹೀಗಾಗಿ ಮೈದಾನದ ಅಂಪೈರ್ ತಮ್ಮ ಮೂಲ ತೀರ್ಪನ್ನು ಬದಲಿಸಿ ರಿಕ್ಕಿ ಭುಯಿ ಅವರನ್ನು ಔಟ್ ಎಂದು ಘೋಷಿಸಿದರು.
‘ವಿಕೆಟ್ಗೆ ವೈಭವ್ಗೂ ಕ್ರೆಡಿಟ್’
ಕುಮಾರ್ ಕುಶಾಗ್ರ ಅವರ ಅದ್ಭುತ ಕ್ಯಾಚ್ ಅನ್ನು ಪಂದ್ಯದ ಕಾಮೆಂಟೇಟರ್ ಪ್ರಶಂಸಿಸಿದರೂ, ಈ ವಿಕೆಟ್ನಲ್ಲಿ ವೈಭವ್ ಸೂರ್ಯವಂಶಿ ವಹಿಸಿದ ಪಾತ್ರವನ್ನೂ ವಿಶೇಷವಾಗಿ ಉಲ್ಲೇಖಿಸಿದರು. “ಕುಮಾರ್ ಕುಶಾಗ್ರ ಅದ್ಭುತ ಕ್ಯಾಚ್ ಪಡೆದಿದ್ದಾರೆ. ಆದರೆ ರಿವ್ಯೂ ತೆಗೆದುಕೊಳ್ಳಬೇಕಾದರೆ ವೈಭವ್ ಸೂರ್ಯವಂಶಿಯ ಮಾತು ಕೇಳಬೇಕು. ಸ್ಟಂಪ್ ಮೈಕ್ನಲ್ಲಿ ವೈಭವ್, ‘ನಾನು ಹೇಳುತ್ತಿದ್ದೇನೆ, ತೆಗೆದುಕೋ. ರಿವ್ಯೂ ತೆಗೆದುಕೋ’ ಎಂದು ಇಶಾನ್ ಕಿಶನ್ಗೆ ಹೇಳಿದ್ದು ಕೇಳಿಸಿತು” ಎಂದು ಕಾಮೆಂಟೇಟರ್ ಹೇಳಿದರು.
ಅಲ್ಲದೆ ಮುಖೇಶ್ ಕುಮಾರ್ಗೆ ವೈಭವ್ ಸೂರ್ಯವಂಶಿಗೆ ಧನ್ಯವಾದ ಹೇಳಬೇಕು ಎಂದು ಹಾಸ್ಯಮಿಶ್ರಿತವಾಗಿ ಹೇಳಿದ ಕಾಮೆಂಟೇಟರ್, “ಅವರು ರಿವ್ಯೂ ತೆಗೆದುಕೊಂಡಿದ್ದೇ ವೈಭವ್ ಕಾರಣದಿಂದ” ಎಂದು ಪ್ರಶಂಸಿಸಿದರು.