

ಭಾರತದ ಯುವ ಆಟಗಾರ ವೈಭವ್ ಸೂರ್ಯವಂಶಿ ಇದುವರೆಗಿನ ತಮ್ಮ T20I ಪ್ರದರ್ಶನದಿಂದ ಸಾಕಷ್ಟು ಪ್ರಭಾವ ಬೀರಿದ್ದಾರೆ. ಅವರು ಇಂಗ್ಲೆಂಡ್ ಸರಣಿಯನ್ನು ಸಾಧಾರಣ ರೀತಿಯಲ್ಲಿ ಆರಂಭಿಸಿ 14, 13 ಮತ್ತು 15 ರನ್ ಗಳಿಸಿದರು, ನಂತರ ಜಿಂಬಾಬ್ವೆ ವಿರುದ್ಧದ ಸರಣಿಯಲ್ಲಿ ಪ್ಲೇಯರ್ ಆಫ್ ದ ಸೀರಿಸ್ ಪ್ರಶಸ್ತಿ ಪಡೆದರು. 15 ವರ್ಷದ ಆಟಗಾರ ಮೂರು ಪಂದ್ಯಗಳಲ್ಲಿ ಎರಡು ಅರ್ಧಶತಕ ಸೇರಿದಂತೆ 151 ರನ್ ಗಳಿಸಿದರು. ಸೂರ್ಯವಂಶಿ ಅವರ ವೈಟ್ ಬಾಲ್ ಭವಿಷ್ಯದ ಬಗ್ಗೆ ಈಗ ಯಾರೊಬ್ಬರಿಗೂ ಯಾವುದೇ ಸಂದೇಹ ಇಲ್ಲದಿದ್ದರೂ, ಅನೇಕ ಮಾಜಿ ಆಟಗಾರರು ಮತ್ತು ತಜ್ಞರು ಟೆಸ್ಟ್ ಕ್ರಿಕೆಟ್ಗೆ ಬಂದಾಗ ವ್ಯತಿರಿಕ್ತ ಅಭಿಪ್ರಾಯ ಹೊಂದಿದ್ದಾರೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ರೆಡ್ ಬಾಲ್ನೊಂದಿಗೆ ಸೂರ್ಯವಂಶಿ ಇನ್ನೂ ಆಡಿಲ್ಲ. ಇಂಗ್ಲೆಂಡ್ನ ಮಾಜಿ ಸ್ಪಿನ್ನರ್ ಮಾಂಟಿ ಪನೇಸರ್ ಭಾರತದ ತಾರೆಯ ಭವಿಷ್ಯದ ಬಗ್ಗೆ ಮಾತನಾಡಿದ್ದಾರೆ.
ವೈಭವ್ ಸೂರ್ಯವಂಶಿ ಟೆಸ್ಟ್ ಕ್ರಿಕೆಟ್ನಲ್ಲಿ ಯಶಸ್ವಿಯಾಗುತ್ತಾರೆ ಎಂದು ಪನೇಸರ್ ಭಾವಿಸುವುದಿಲ್ಲ; ಏಕೆಂದರೆ, ಈ ಮಾದರಿಗೆ ಅಗತ್ಯವಿರುವ ತಾಂತ್ರಿಕ ಕೌಶಲ ಆ ಬ್ಯಾಟರ್ಗೆ ಇಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
'ಸೂರ್ಯವಂಶಿ ಟೆಸ್ಟ್ ಕ್ರಿಕೆಟ್ಗೆ ಹೊಂದಿಕೊಳ್ಳುತ್ತಾರೆ ಎಂಬುದನ್ನು ನಾನು ಊಹಿಸಲಾರೆ. ಸದ್ಯಕ್ಕೆ ಟೆಸ್ಟ್ ಮತ್ತು ಟಿ20ಐ (T20I) ಶ್ರೇಯಾಂಕದ ಅಗ್ರ 10ರ ಪಟ್ಟಿಯಲ್ಲಿರುವ ಏಕೈಕ ಆಟಗಾರನೆಂದರೆ ಹ್ಯಾರಿ ಬ್ರೂಕ್. ಆದರೆ, ಸೂರ್ಯವಂಶಿಯಲ್ಲಿ ಅದಕ್ಕೆ ಬೇಕಾದ ತಾಂತ್ರಿಕ ಕೌಶಲವಿದೆ ಎಂದು ನನಗೆ ಅನಿಸುವುದಿಲ್ಲ' ಎಂದು ಇಂಗ್ಲೆಂಡ್ನ ಮಾಜಿ ಸ್ಪಿನ್ನರ್ 'ಬಿಯಾಂಡ್23 ಕ್ರಿಕೆಟ್ ಪಾಡ್ಕಾಸ್ಟ್'ನಲ್ಲಿ ಹೇಳಿದ್ದಾರೆ.
ಆದರೆ, ಆಸ್ಟ್ರೇಲಿಯಾದ ಮಾಜಿ ನಾಯಕ ಮೈಕೆಲ್ ಕ್ಲಾರ್ಕ್ ಭಿನ್ನ ಅಭಿಪ್ರಾಯವನ್ನು ಹೊಂದಿದ್ದರು; ಎಬಿ ಡಿ ವಿಲಿಯರ್ಸ್ ಮತ್ತು ವಿರಾಟ್ ಕೊಹ್ಲಿಯಂತಹ ಆಟಗಾರರ ಉದಾಹರಣೆಗಳನ್ನು ನೀಡುತ್ತಾ, ಸೂರ್ಯವಂಶಿ ಟೆಸ್ಟ್ ಕ್ರಿಕೆಟ್ನಲ್ಲಿಯೂ ಯಶಸ್ವಿಯಾಗಬಲ್ಲರು ಎಂದು ಅವರು ಅಭಿಪ್ರಾಯಪಟ್ಟರು.
'ಒಬ್ಬ ಆಟಗಾರನಾಗಿ ನೀವು ಇನ್ನೂ ಮೂರೂ ಮಾದರಿಗಳಲ್ಲಿ ಆಡಬಹುದು ಎಂದು ನಾನು ಭಾವಿಸುತ್ತೇನೆ. ವಿರಾಟ್ ಕೊಹ್ಲಿ ಮತ್ತು ಎಬಿ ಡಿ ವಿಲಿಯರ್ಸ್ ಇದನ್ನು ಸಾಬೀತುಪಡಿಸಿದ್ದಾರೆ. ಇವರು ಅತ್ಯುತ್ತಮ ಟೆಸ್ಟ್ ಕ್ರಿಕೆಟಿಗರಾಗಿದ್ದಂತೆಯೇ, ಅದ್ಭುತ ಟಿ20 ಕ್ರಿಕೆಟಿಗರೂ ಆಗಿದ್ದರು. ಸೂರ್ಯವಂಶಿಯಂತಹ ಈ ತಲೆಮಾರಿನ ಆಟಗಾರನೊಬ್ಬ ಟೆಸ್ಟ್ ಕ್ರಿಕೆಟ್ಗೆ ಪರಿವರ್ತನೆಗೊಂಡರೆ, ಅದನ್ನು ನೋಡುವುದೇ ಒಂದು ಅದ್ಭುತ ಅನುಭವವಾಗಲಿದೆ. ಆದರೆ, ಅವರಿಗೆ ಟೆಸ್ಟ್ ಕ್ರಿಕೆಟ್ ಆಡುವ ಆಸಕ್ತಿಯಿದೆಯೇ ಎಂಬುದು ಕೂಡ ಒಂದು ಪ್ರಶ್ನೆಯಾಗಿಯೇ ಉಳಿಯುತ್ತದೆ' ಎಂದು ಕ್ಲಾರ್ಕ್ ಹೇಳಿದರು.
ಕಳೆದ ತಿಂಗಳು, ಸೆಂಟ್ರಲ್ ಝೋನ್ ವಿರುದ್ಧದ ದುಲೀಪ್ ಟ್ರೋಫಿ ಸೆಮಿಫೈನಲ್ ಪಂದ್ಯದಲ್ಲಿ ಈಸ್ಟ್ ಝೋನ್ ತಂಡದ ಪರ ಆಡುವಾಗ ಸೂರ್ಯವಂಶಿ ಇತಿಹಾಸ ನಿರ್ಮಿಸಿದರು. 15 ವರ್ಷ ಮತ್ತು 157 ದಿನಗಳ ವಯಸ್ಸಿನಲ್ಲಿ, ರೆಡ್ ಬಾಲ್ನ ಈ ಟೂರ್ನಿಯಲ್ಲಿ ಅರ್ಧಶತಕ ಬಾರಿಸಿದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾದರು.
ಬ್ಯಾಟಿಂಗ್ನಲ್ಲಿ ಸೂರ್ಯವಂಶಿ ಅತ್ಯಂತ ಆಕ್ರಮಣಕಾರಿ ಆಟವನ್ನು ಪ್ರದರ್ಶಿಸಿದರು. ದುಲೀಪ್ ಟ್ರೋಫಿಯಲ್ಲಿ ಶತಕ ಬಾರಿಸಿದ ಅತ್ಯಂತ ಕಿರಿಯ ಆಟಗಾರನಾಗುವ ಸಾಧನೆಯ ಸನಿಹಕ್ಕೆ ಅವರು ಬಂದಿದ್ದರಾದರೂ, ಆ ಮೈಲಿಗಲ್ಲನ್ನು ತಲುಪಲು ಕೇವಲ ಎಂಟು ರನ್ಗಳ ಕೊರತೆಯಿದ್ದಾಗ ಔಟ್ ಆದರು.