ಅಸಮರ್ಥ ಸಚಿವರನ್ನು ಕೈಬಿಡಿ

ಕಣ್ಣು, ಕಿವಿ ಇಲ್ಲದಂತಹ ಅಸಮರ್ಥ ಮಂತ್ರಿಗಳನ್ನು ಕೈಬಿಟ್ಟು ಹೊಸಬರಿಗೆ ಅವಕಾಶ ನೀಡಬೇಕು...
ಅಸಮರ್ಥ ಸಚಿವರನ್ನು ಕೈಬಿಡಿ

ಬೆಳಗಾವಿ: ಬೇಜವಾಬ್ದಾರಿಯಿಂದ ನಡೆದುಕೊಳ್ಳುತ್ತಿರುವ ಸಚಿವರನ್ನು ಸಿಎಂ ಸಿದ್ದರಾಮಯ್ಯ ಸಂಪುಟದಿಂದ ಕಿತ್ತು ಹಾಕಬೇಕು ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಆಗ್ರಹಿಸಿದರು.

ಈ ಹಿಂದೆ ಕಾಂಗ್ರೆಸ್ ಶಾಸಕ ಮಲೀಕಯ್ಯ ಗುತ್ತೆದಾರ ಅವರೇ ಕಣ್ಣು, ಕಿವಿ ಇಲ್ಲದಂತಹ ಅಸಮರ್ಥ 10 ರಿಂದ 14 ಮಂತ್ರಿಗಳು ಸರ್ಕಾರದಲ್ಲಿದ್ದು, ಅವರನ್ನು ಕೈಬಿಟ್ಟು ಹೊಸಬರಿಗೆ ಅವಕಾಶ ನೀಡಬೇಕು ಎಂದು ಆಗ್ರಹಿಸಿದ್ದರು. ನಾನೂ ಕೂಡ ಬೇಜವಾಬ್ದಾರಿಯಿಂದ ನಡೆದುಕೊಳ್ಳುತ್ತಿರುವ ಸಚಿವರನ್ನು ಕೈಬಿಡುವಂತೆ ಮುಖ್ಯಮಂತ್ರಿಗಳಲ್ಲಿ ಆಗ್ರಹಿಸುತ್ತೇನೆ ಎಂದು ಹೇಳಿದರು.

ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲ ಅಧಿವೇಶನದ ಬಗ್ಗೆ ಸರ್ಕಾರಕ್ಕೆ ಗಂಭೀರತೆಯಿಲ್ಲ. ಕಾಟಾಚಾರದ ಅಧಿವೇಶನ ನಡೆಸುತ್ತಿದ್ದಾರೆ ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಕಿಡಿಕಾರಿದ ಶೆಟ್ಟರ್, ಅಧಿವೇಶನದ ಉಭಯ ಸದನದಲ್ಲಿ ಶಾಸಕರ ಗೈರು ಹಾಜರಾತಿ ಹೆಚ್ಚಾಗುತ್ತಿರುವುದು ಸರಿಯಲ್ಲ.

ಸದನದ ಚರ್ಚೆಯಲ್ಲಿ ಎಲ್ಲ ಪಕ್ಷದ ಶಾಸಕರು ಹಾಜರಿರಬೇಕು. ಇದರಿಂದ ಸದನಕ್ಕೆ ಗೌರವ ನೀಡಿದಂತಾಗುತ್ತದೆ. ಬಿಜೆಪಿ ಶಾಸಕರಿಗೂ ಸದನಕ್ಕೆ ಹಾಜರಿರುವಂತೆ ಸೂಚಿಸುತ್ತೇನೆ ಎಂದು ಹೇಳಿದರು.

ಉತ್ತರ ಕರ್ನಾಟಕದ ಸಮಸ್ಯೆ ಚರ್ಚಿಸಲು ಎರಡು ದಿನಗಳು ಸಾಲುವುದಿಲ್ಲ. ಈಗ ನೀಡುವ ಅವಧಿಯನ್ನು ನಾವು ಮೊದಲು ಸರಿಯಾಗಿ ಉಪಯೋಗಿಸಿಕೊಳ್ಳೋಣ. ಉತ್ತರ ಕರ್ನಾಟಕದ ಸಮಸ್ಯೆ ಬಗ್ಗೆ ಹೆಚ್ಚಿನ ಚರ್ಚೆ ನಡೆಸಲು ಕಾಲಾವಕಾಶ ನೀಡುವಂತೆ ಸ್ಪೀಕರ್ ಅವರಲ್ಲಿ ಮನವಿ ಮಾಡಿಕೊಳ್ಳುವೆ.

ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಕೂಗಿಗೆ ನನ್ನ ಬೆಂಬಲವಿಲ್ಲ. ಆದರೆ, ಉತ್ತರ ಕರ್ನಾಟಕದ ಅಭಿವೃದ್ದಿಗೆ ಹೋರಾಟ ನಡೆಸುತ್ತೇವೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com